ಎಷ್ಟೋ ಮಕ್ಕಳ ಹೂವಿನಂಥ ಬದುಕು, ಹೃದಯ ಹಿಂಡುವ ರೋಗಗಳಿಂದಾಗಿ ಮತ್ತು ಹಣಕಾಸಿನ ಮುಗ್ಗಟ್ಟಿನಿಂದಾಗಿ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೆ ಮುರುಟಿ ಹೋಗಿರುತ್ತದೆ. ಆದರೆ, ಕೆಲ ಅದೃಷ್ಟವಂತ ಮಕ್ಕಳು ದಾನಿಗಳ ಸಕಾಲಿಕ ಸಹಾಯದಿಂದಾಗಿ ಮತ್ತೆ ಬದುಕಿನಲ್ಲಿ ಮುಖ ಮಾಡಿ ನಿಲ್ಲುತ್ತವೆ.
ಅಂಥ ಅದೃಷ್ಟವಂತ ಮಕ್ಕಳಲ್ಲಿ ಒಬ್ಬಳು ಪುಟಾಣಿ ಕನಿಶ್ರೀ. ಸಾವಿನ ಬಲೆಯಲ್ಲಿ ಸಿಲುಕಿದ್ದ ಕನಿಶ್ರೀ, ಸಾವನ್ನು ಗೆದ್ದು ಚೈತನ್ಯದ ಚಿಲುಮೆಯಂತಾಗಲು, ಆಕೆ ಮಾತ್ರವಲ್ಲ ಆಕೆಯ ಕುಟುಂಬದಲ್ಲಿ ಸಂತೋಷ ಉಕ್ಕುವಂತಾಗಲು ಕಾರಣರಾದವರು ಹೃದಯವಂತ ಒನ್ಇಂಡಿಯಾ ಓದುಗರು.
ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದಕ್ಕೆ ಕನಿಶ್ರೀಯ ತಂದೆ ರಾಜೇಶ್ ಅವರು ಒನ್ಇಂಡಿಯಾದ ಓದುಗ ದೊರೆಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇಷ್ಟೇ ಅಲ್ಲ, ಓದುಗರೆ, ಇನ್ನೂ ಇಬ್ಬರು ಮಕ್ಕಳು ಸಾವುಬದುಕಿನ ಹೋರಾಟ ನಡೆಸಿದ್ದು, ಅವರಿಗೂ ನಿಮ್ಮ ಹಣ ಸಹಾಯ ಬೇಕಿದೆ. ಮಾಡ್ತೀರಲ್ಲ?
ಕನಿಶ್ರೀ ಸಾವು ಗೆದ್ದು ಬಂದ ಕಥೆ : "ಕನಿಶ್ರೀಯ ಜನನದ ಬಳಿಕ ನನ್ನ ಇಬ್ಬರೂ ಹೆಣ್ಣುಮಕ್ಕಳು ನಗುತ್ತಿರುವುದು ಮತ್ತು ಮೊದಲ ಬಾರಿಗೆ ಒಟ್ಟಿಗೆ ಆಡುತ್ತಿರುವುದನ್ನು ನಾನು ಕೊನೆಗೂ ನೋಡುವಂತಾಗಿದೆ. ಪ್ರತಿಯೊಬ್ಬ ದಾನಿಗೂ ನಾವು ತುಂಬಾ ಕೃತಜ್ಞರಾಗಿದ್ದೇವೆ."
ಇದು ಸಾವು ಬದುಕಿನ ನಡುವೆ ತೀವ್ರ ಹೋರಾಟ ನಡೆಸಿ, ಕೊನೆಗೂ ಸಾವನ್ನು ಜಯಿಸಿದ ಒಂದು ವರ್ಷದ ಪುಟ್ಟ ಕಂದಮ್ಮ ಕನಿಶ್ರೀಯ ತಂದೆ ರಾಜೇಶ್, ಆನಂದದ ಕಣ್ಣೀರು ಮತ್ತು ಹೃದಯವನ್ನು ತುಂಬಿಕೊಂಡು ಹೇಳಿದ ಮಾತು.
ಮಗಳಲ್ಲಿನ ಅನಾರೋಗ್ಯದ ಸಮಸ್ಯೆ ಪತ್ತೆಯಾದ ಒಂದು ವರ್ಷವಿಡೀ ರಾಜೇಶ್ ಅಸಹಾಯಕರಾಗಿದ್ದರು, ಅವರಿಗೆ ದಿಕ್ಕೇ ತೋಚದಂತಾಗಿತ್ತು. ಕನಿಶ್ರೀ ಜನಿಸಿದ ಕೆಲವು ದಿನಗಳಲ್ಲಿಯೇ ಆಕೆ ಹೃದಯದ ಸಮಸ್ಯೆಗೆ ಒಳಗಾಗಿರುವುದು ಪತ್ತೆಯಾಗಿತ್ತು. ಅದಕ್ಕೆ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿತ್ತು.
ಆದರೆ ಇದಕ್ಕೆ ತಗುಲುವ ದೊಡ್ಡ ಮೊತ್ತದ ವೆಚ್ಚವನ್ನು ಭರಿಸಲು ರಾಜೇಶ್ಗೆ ಸಿಗುತ್ತಿದ್ದ ಅಲ್ಪ ಆದಾಯದಿಂದ ಸಾಧ್ಯವಾಗುತ್ತಿರಲಿಲ್ಲ. ಅವರು ತಮ್ಮ ಮಗಳನ್ನು ಉಳಿಸಿಕೊಳ್ಳಲು ನೆರವಾದವರು ನೀವು ಓದುಗರು. ನಿಮ್ಮೆಲ್ಲರ ಉದಾರತೆಗೆ ಧನ್ಯವಾದಗಳು. ಈಗ ಖುಷಿ ಖುಷಿಯಾಗಿರುವ ಕನಿಶ್ರೀ ತನ್ನ ತಾಯಿಯ ಪ್ರೀತಿಯ ತೋಳ್ತೆಕ್ಕೆಗಳಲ್ಲಿ ನಲಿದಾಡುತ್ತಿದ್ದಾಳೆ.
ಕನಿಶ್ರೀ ಹೃದಯ ಕಾಯಿಲೆಗೆ ತುತ್ತಾಗಿರುವುದು ತಿಳಿದ ಸಂದರ್ಭದಲ್ಲಿ ರಾಜೇಶ್ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದರು. ಆದರೆ, ಹೃದಯವಂತ ದಾನಿಗಳ ಸಹಾಯದಿಂದ ಸಕಾಲದಲ್ಲಿ ಅವರಿಗೆ ಆರ್ಥಿಕ ಸಹಾಯ ಲಭಿಸಿದೆ. ಅದಕ್ಕಾಗಿ ದಾನಿಗಳಿಗೆ ಹೃದಯತುಂಬಿ ಧನ್ಯವಾದ ಹೇಳಿದ್ದಾರೆ ರಾಜೇಶ್.
ಇನ್ನೂ ಇಬ್ಬರು ಮಕ್ಕಳಿಗೆ ಸಹಾಯ ಬೇಕಿದೆ : ನಿಮ್ಮ ಸಹಾಯ ಮತ್ತು ದೇವರ ದಯೆಯಿಂದ, ಅತ್ಯಂತ ಸಂಕಷ್ಟಮಯ ಸಮಯದಲ್ಲಿಯೂ ರಾಜೇಶ್ ಅವರ ಇಬ್ಬರು ಮಕ್ಕಳು ಬದುಕಿನೊಂದಿಗೆ ಹೋರಾಟ ನಡೆಸಿ ಗೆದ್ದಿವೆ. ಆದರೆ, ನೆನಪಿಡಿ, ವೀರ್ ಮತ್ತು ಧನಶ್ರೀ ಎಂಬಿಬ್ಬರು ನತದೃಷ್ಟ ಮಕ್ಕಳು ಅವರು ಬದುಕಲು ನಿಮ್ಮ ಸಹಾಯ ಬೇಕಿದೆ. ಈ ಇಬ್ಬರು ಮಕ್ಕಳು ಬದುಕುಳಿದರೆ ಕನಿಶ್ರೀಯಂತೆಯೇ ಸಹಜವಾದ ಬಾಳನ್ನು ಬಾಳಬಹುದು.
ಕನಿಶ್ರೀ ಬದುಕಿಗೆ ಮರಳಿ ಬಂದಿದ್ದು ಹೇಗೆ? : ರಾಜೇಶ್ ದಂಪತಿಗೆ 2017ರ ಮೇ ತಿಂಗಳಿನಲ್ಲಿ ಕನಿಶ್ರೀ ಜನಿಸಿದಳು. ಅದು ಅವರ ಎರಡನೆಯ ಮಗಳು. ಮತ್ತೆ ಮಗುವಿನ ಪೋಷಣೆಯ ಅವಕಾಶ ಈ ದಂಪತಿಗೆ ಅಪಾರ ಸಂತಸ ತಂದಿತ್ತು. ಆದರೆ, ಆ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. ಆಕೆಗೆ ಪೋಲಿಯೋ ಲಸಿಕೆ ಹಾಕಿಸುವ ಸಲುವಾಗಿ ಕರೆದೊಯ್ದ ಸಂದರ್ಭದಲ್ಲಿ, ಆಕೆಯ ಹೃದಯದ ಕಾರ್ಯಾಚರಣೆಯಲ್ಲಿ ಏನೋ ಸಮಸ್ಯೆ ಇದೆ ಎನ್ನುವುದನ್ನು ವೈದ್ಯರು ಗಮನಿಸಿದರು.
ಚೆನ್ನೈನಲ್ಲಿ ಅಪೋಲೊ ಆಸ್ಪತ್ರೆಯವರು ಆಯೋಜಿಸಿದ್ದ ಆರೋಗ್ಯ ಶಿಬಿರಕ್ಕೆ ಕನಿಶ್ರೀಯನ್ನು ಕರೆದೊಯ್ದು ತಪಾಸಣೆಗೆ ಒಳಪಡಿಸುವಂತೆ ಅವರು ಸಲಹೆ ನೀಡಿದ್ದರು. ಆ ಶಿಬಿರ ಉಚಿತವಾಗಿತ್ತು. ಇದರಿಂದಾಗಿ ರೋಗ ಪತ್ತೆಗೆ ತಗುಲುವ ಭಾರಿ ಮೊತ್ತದ ಹಣವನ್ನು ತೆರುವುದು ಉಳಿದಿತ್ತು. ಆದರೆ, ಅಲ್ಲಿ ದೊರೆತ ಫಲಿತಾಂಶ ಆಘಾತಕಾರಿಯಾಗಿತ್ತು. ಇನ್ನೂ 22 ದಿನಗಳ ಹಸುಗೂಸಿಗೆ ಗಂಭೀರ ಹೃದಯ ಕಾಯಿಲೆ (ಹೈಪೊಪ್ಲಾಸ್ಟಿಕ್ ಪಿವಿ) ಇರುವುದು ಪತ್ತೆಯಾಗಿತ್ತು.
ಆಕೆಯ ಜೀವ ಉಳಿಸಲು 5 ಲಕ್ಷ ವೆಚ್ಚ ತಗಲುವ ಶಸ್ತ್ರಚಿಕಿತ್ಸೆಗೆ ಒಳಪಡಿಸುವುದು ಅನಿವಾರ್ಯವಾಗಿತ್ತು. ತನ್ನ ಪುಟಾಣಿ ಮಗು ಕನಿಶ್ರೀಯನ್ನು ಉಳಿಸಿಕೊಳ್ಳಲು ಶಸ್ತ್ರಚಿಕಿತ್ಸೆಗೆ ಅಗತ್ಯವಾದ ಹಣವನ್ನು ಸಂಗ್ರಹಿಸಲು ರಾಜೇಶ್ ಮಾರ್ಗಗಳನ್ನು ಹುಡುಕತೊಡಗಿದರು.
ಸಂತಸದ ಬುಗ್ಗೆಯಂತಿದ್ದ ಮಗುವೀಗ ಆಸ್ಪತ್ರೆಯ ಐಸಿಯುನಲ್ಲಿ
ಸಾಲಗಳಿಗಾಗಿ ಸಲ್ಲಿಸಿದ್ದ ಅರ್ಜಿಗಳು ತಿರಸ್ಕೃತವಾದವು. ಹಣ ಹೊಂದಿಸಲು ಕುಟುಂಬಕ್ಕೆ ಯಾವುದೇ ವಿಮಾ ಸೌಲಭ್ಯ ಇರಲಿಲ್ಲ. ಅಷ್ಟು ದೊಡ್ಡ ಮೊತ್ತವನ್ನು ಒದಗಿಸಲು ರಾಜೇಶ್ ಅವರ ಸಂಬಂಧಿಕರೂ ಶಕ್ತರಾಗಿರಲಿಲ್ಲ.
ಒಂದು ವರ್ಷ ಕಳೆಯಿತು. ಆದರೆ, ಇನ್ನೂ ಅದಕ್ಕೆ ಪರಿಹಾರ ಸಿಕ್ಕಿರಲಿಲ್ಲ. ರಾಜೇಶ್ ಅವರ ಅಲ್ಪ ಪ್ರಮಾಣದ ಆದಾಯದ ಮೂಲಕವೇ ಹೇಗೋ ಹೊಂದಿಸಿಕೊಂಡು ಕನಿಶ್ರೀಗೆ ತೀವ್ರ ಪ್ರಮಾಣದ ಔಷಧೋಪಚಾರ ನೀಡಿ ಆಕೆಯನ್ನು ಉಳಿಸಿಕೊಳ್ಳಲಾಗಿತ್ತು.
ಎಷ್ಟು ದಿನ ಹೀಗೆ ಔಷಧಗಳ ಮೂಲಕ ಜೀವ ಉಳಿಸಲು ಸಾಧ್ಯ? ಕನಿಶ್ರೀಯ ಹೃದಯ ಸಮಸ್ಯೆಯಿಂದಾಗಿ ಆಕೆಯ ದೇಹದ ಭಾಗಗಳೆಲ್ಲ ನೀಲಿಗಟ್ಟುವ ಮೂಲಕ ಅಪಾಯದ ಸೂಚನೆ ನೀಡತೊಡಗಿತು. ಕಂಗಾಲಾದ ರಾಜೇಶ್, ತಮ್ಮಿಂದ ಸಾಧ್ಯವಿಲ್ಲ ಎಂಬಂತೆ ಸೋತು ಹೋದರು. ತಮ್ಮ ಎಲ್ಲ ಭರವಸೆಗಳನ್ನು ಕಳೆದುಕೊಳ್ಳತೊಡಗಿದರು.
ಆಗ ಕ್ರೌಡ್ಫಂಡಿಂಗ್ ಅಸ್ತಿತ್ವಕ್ಕೆ ಬಂದಿತು. ನೀಡಿದ ಹಣವನ್ನು ಮರಳಿ ಕೇಳದೆ ನೂರಾರು ಅಪರಿಚಿತರಿಂದ ರಾಜೇಶ್ ಮಗಳ ಚಿಕಿತ್ಸೆಗಾಗಿ ಹಣ ಸಂಗ್ರಹಿಸುವ ಯೋಜನೆ ಇದು. ಅದಕ್ಕೆ ಅಪಾರ ಪ್ರಮಾಣದ ಹಣ ಹರಿದುಬಂದಿತು. ನಿಮ್ಮಂತಹ 262 ಮಂದಿಯ ಉದಾರತೆಯ ಕಾರಣ ರಾಜೇಶ್ಗೆ 4 ಲಕ್ಷ ರೂ. ಹೊಂದಿಸಲು ಸಾಧ್ಯವಾಯಿತು.
2 ವಾರದೊಳಗೆ ಹೊಂದಿಸಬೇಕಿದ್ದ ಹಣವನ್ನು ಸಂಗ್ರಹಿಸಲು ರಾಜೇಶ್ಗೆ ಸಾಧ್ಯವಾಯಿತು. ಜೂನ್ 25ರಂದು ಕನಿಶ್ರೀ ಕೊನೆಗೂ ಶಸ್ತ್ರಚಿಕಿತ್ಸೆಗೆ ಒಳಗಾದಳು. ಆಕೆಯ ಪರಿಸ್ಥಿತಿಯನ್ನು ಗಮನಿಸುವ ಸಲುವಾಗಿ ಶಸ್ತ್ರಚಿಕಿತ್ಸಾ ನಂತರದ ನಿಗಾ ಘಟಕದಲ್ಲಿ ಮತ್ತೆ ಐದು ದಿನ ಇರಿಸಲಾಯಿತು. ಅದೃಷ್ಟವಶಾತ್ ಆಕೆ ಯಾವುದೇ ಅಲರ್ಜಿಗಳಿಗೆ ತುತ್ತಾಗಲಿಲ್ಲ. ಮುಖ್ಯವಾಗಿ, ಅಂದಿನಿಂದ ಆಕೆಯ ಆರೋಗ್ಯ ಸ್ಥಿತಿ ಗಮನಾರ್ಹ ರೀತಿಯಲ್ಲಿ ಸುಧಾರಣೆಯಾಗುತ್ತಿದೆ.
"ಕನಿಶ್ರೀಯ ಜನನದ ಬಳಿಕ ನನ್ನ ಇಬ್ಬರೂ ಹೆಣ್ಣುಮಕ್ಕಳು ನಗುತ್ತಿರುವುದು ಮತ್ತು ಮೊದಲ ಬಾರಿಗೆ ಒಟ್ಟಿಗೆ ಆಡುತ್ತಿರುವುದನ್ನು ನೋಡಲು ನನಗೆ ಕೊನೆಗೂ ಅವಕಾಶ ಸಿಕ್ಕಿತು. ಕನಿಶ್ರೀ ಶಸ್ತ್ರಚಿಕಿತ್ಸೆ ಪಡೆದುಕೊಳ್ಳಲು ನೆರವಾದ ಪ್ರತಿಯೊಬ್ಬ ದಾನಿಗೂ ನಾವು ತುಂಬಾ ಕೃತಜ್ಞರಾಗಿದ್ದೇವೆ. ನೀವುಗಳು ಇಲ್ಲದಿದ್ದರೆ ಈ ವೇಳೆಗೆ ನಾವು ಎಲ್ಲಿರುತ್ತಿದ್ದೆವೋ ನಮಗೆ ಗೊತ್ತಿಲ್ಲ" ಎಂದು ರಾಜೇಶ್ ಭಾವಪರವಶತೆಯಿಂದ ಹೇಳಿಕೊಂಡಿದ್ದಾರೆ.
ತನ್ನ ಮೊದಲ ಮಗನನ್ನು ಕಳೆದುಕೊಂಡಿರುವ ಬಡಕಾರ್ಮಿಕ ಎರಡನೇಯವನ ಉಳಿವಿಗೂ ಪರದಾಡುತ್ತಿದ್ದಾರೆ
RECOMMENDED STORIES