ಮಳೆ ಅವಾಂತರ- ಮದುವೆ ಹೆಣ್ಣಿಗೆ ದೋಣಿ ಆಸರೆ, ಶವಸಂಸ್ಕಾರಕ್ಕೆ ಟಾರ್ಪಾಲ್ ಆಸರೆ
ದೇಶದ ಹಲವೆಡೆ ಮಹಾಮಳೆ ಆರ್ಭಟ ನಡೆಸುತ್ತಿದೆ. ಕರ್ನಾಟಕ, ಆಂಧ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆಯಾಗುತ್ತಿದೆ. ಆಂಧ್ರದಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವಿಸಿದೆ.
ಆಂಧ್ರ ಪ್ರದೇಶದಲ್ಲಿ ಗೋದಾವರಿ ನದಿ ಉಕ್ಕೇರಿ ಹರಿಯುತ್ತಿದೆ. ಆಂಧ್ರದ ಕೋನಸೀಮಾ, ಎಳೂರು, ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಪ್ರವಾಹಸೃಷ್ಟಿಯಾಗಿದೆ. ಅನೇಕ ಗ್ರಾಮಗಳು ನೀರಿನಿಂದ ಆವೃತವಾಗಿವೆ.
ಒಂದು ಅಂದಾಜು ಪ್ರಕಾರ ಈ ನಾಲ್ಕು ಜಿಲ್ಲೆಗಳಲ್ಲಿ 30 ಸಾವಿರಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಹಲವು ಜನರು ರಾತ್ರೋರಾತ್ರಿ ಊರುಗಳನ್ನು ತೊರೆದು ಸುರಕ್ಷಿತ ಪ್ರದೇಶಗಳಿಗೆ ತೆರಳಬೇಕಾದ ಪರಿಸ್ಥಿತಿ ಉದ್ಭವಿಸಿದೆ.
ಕರ್ನಾಟದಲ್ಲೂ ಮಳೆಯಿಂದಾಗಿ ಕೆರೆ ಕಟ್ಟೆ ನದಿ ತೊರೆಗಳು ತುಂಬಿ ಹೋಗುತ್ತಿವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಇಲ್ಲಿಯೂ ಪ್ರವಾಹ ಉದ್ಭವಿಸುವುದರಲ್ಲಿ ಅನುಮಾನವಿಲ್ಲ. ಶಿವಮೊಗ್ಗದ ಕೆಲವೆಡೆ ಗುಡ್ಡ ಕುಸಿತದ ಅಪಾಯ ಎದುರಾಗಿದೆ.
ದೋಣಿ ಏರಿದ ವಧು
ಆಂಧ್ರದ ಡಾ. ಬಿ. ಆರ್. ಅಂಬೇಡ್ಕರ್ ಕೋನಸೀಮಾ ಜಿಲ್ಲೆಯಲ್ಲಿ ಭೀಕರ ಮಳೆ ಮತ್ತು ಪ್ರವಾಹ ಸೃಷ್ಟಿಯಾಗಿದೆ. ಕಳೆದ ಕೆಲ ದಿನಗಳಿಂದ ಇಲ್ಲಿ ಎಡೆಬಿಡದೆ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳು ಈಗಾಗಲೇ ಮುಳುಗಡೆಯಾಗಿವೆ.
ಈ ವೇಳೆ, ಕೋನಸೀಮಾ ಜಿಲ್ಲೆಯಲ್ಲಿ ವಧು ಹಾಗೂ ಅವರ ಕುಟುಂಬದವರು ಮದುವೆ ಗಂಡಿನ ಮನೆ ತಲುಪಲು ದೋಣಿ ಬಳಸಿಕೊಂಡು ಹೋಗುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೃದ್ಧರು, ಗರ್ಭಿಣಿಯರ ರಕ್ಷಣೆ
ಆಂಧ್ರದಲ್ಲಿ ಪ್ರವಾಹ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿರುವ ಜನರನ್ನು ರಕ್ಷಿಸಲು ಎನ್ಡಿಆರ್ಎಫ್ ತಂಡಗಳು ಸೇರಿದಂತೆ ಹಲವರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ನೂರಾರು ತೆಪ್ಪ, ದೋಣಿಗಳನ್ನು ಬಳಸಲಾಗುತ್ತಿದೆ. ಐದು ಸಾವಿರಕ್ಕೂ ಹೆಚ್ಚು ಮಂದಿಯನ್ನು ದೋಣಿಗಳ ಮೂಲಕ ಪ್ರವಾಹ ಸ್ಥಳದಿಂದ ಸುರಕ್ಷಿತ ಪ್ರದೇಶಗಳಿಗೆ ಕಳುಹಿಸಲಾಗಿದೆ. 2 ಸಾವಿರಕ್ಕೂ ಹೆಚ್ಚು ವೃದ್ಧರು ಮತ್ತು 350ಕ್ಕೂ ಹೆಚ್ಚು ಗರ್ಭಿಣಿಯರನ್ನು ರಕ್ಷಿಸಲಾಗಿದೆ.
ಕೋನಸೀಮಾ ಜಿಲ್ಲೆಯಾದ್ಯಂತ ಪ್ರವಾಹ ಸ್ಥಿತಿ ಇರುವುದರಿಂದ ನದಿ ದಂಡೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಲಾಗುತ್ತಿದೆ. ದುರ್ಬಲವಾಗಿರುವ ದಂಡೆಗಳನ್ನು ಗುರುತಿಸಿ ಅದನ್ನು ಗಟ್ಟಿಗೊಳಿಸುವ ಕೆಲಸವಾಗುತ್ತಿದೆ.

ತೀರ್ಥಹಳ್ಳಿಯಲ್ಲಿ ಮಳೆಯಲ್ಲೇ ಶವಸಂಸ್ಕಾರ
ಇನ್ನು, ಕರ್ನಾಟಕದ ಶಿವಮೊಗ್ಗದಲ್ಲೂ ಸತತವಾಗಿ ಮಳೆಯಾಗುತ್ತಿದೆ. ಇದೇ ಸಮಯದಲ್ಲಿ ತೀರ್ಥಹಳ್ಳಿಯಲ್ಲಿ ವರುಣನ ಸಮ್ಮುಖದಲ್ಲೇ ಅಮಾನವೀಯ ಘಟನೆಯೊಂದು ನಡೆದುಹೋಗಿದೆ. ಸ್ಮಶಾನದಲ್ಲಿ ಶವ ಸಂಸ್ಕಾರಕ್ಕೆ ಸ್ಥಳ ಸಿಗದೆ ಮಳೆಯಲ್ಲೇ ಅಂತ್ಯಸಂಸ್ಕಾರ ಮಾಡಿದ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.
ಜುಲೈ 4ರಂದು ತೀರ್ಥಹಳ್ಳಿಯ ತದೂರು ಗ್ರಾಪಂ ವ್ಯಾಪ್ತಿಯ ಬೇಗುವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ಹಿಂದುಳಿದ ಸಮುದಾಯಕ್ಕೆ ಸೇರಿದ 70 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಅವರ ಶವ ಸಂಸ್ಕಾರಕ್ಕೆ ಸ್ಮಶಾನದಲ್ಲಿ ಜಾಗ ಇಲ್ಲದೇ ಯಾವುದೋ ಹಳ್ಳದ ದಂಡೆಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.

ಅಸ್ಥಿಯೂ ಸಿಗಲಿಲ್ಲ
ಮಳೆಯಲ್ಲೇ ಚಿತೆಗೆ ಬೆಂಕಿ ಇಡಲಾಯಿತು. ಮಾರನೆಯ ದಿನ ಚಿತೆಯಲ್ಲಿರುವ ಅಸ್ಥಿಯನ್ನು ಸಂಗ್ರಹಿಸಲು ಹೋದಾಗ ಎಲ್ಲವೂ ಮಳೆ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಮೃತ ವ್ಯಕ್ತಿಯ ಕುಟುಂಬ ಸದಸ್ಯರಿಗೆ ಅಸ್ಥಿ ಸಿಗದೇ ಪಟ್ಟ ಸಂಕಟ ಊರಿನವರಿಗೆ ಕಾಣಿಸದೇ ಹೋಯಿತು.
ಬೇಗುವಳ್ಳಿಯಲ್ಲಿ ಸ್ಮಶಾನ ಇದೆಯಾದರೂ ಅದು ಮೇಲ್ವರ್ಗ ಸಮುದಾಯಕ್ಕೆ ಮಾತ್ರ ಮೀಸಲಾಗಿದೆ. ಹಿಂದುಳಿದವರು ಬೇರೆಲ್ಲಿಯಾದರೂ ಅಂತ್ಯ ಸಂಸ್ಕಾರ ಮಾಡಿಕೊಳ್ಳಬೇಕಾದ ಸ್ಥಿತಿ ಇದೆ. ಇದು ಬೇಗುವಳ್ಳಿ ಗ್ರಾಮವೊಂದರ ಕಥೆ ಮಾತ್ರವಲ್ಲ ರಾಜ್ಯ ಹಲವು ಗ್ರಾಮಗಳಲ್ಲಿ ಇಂಥದ್ದೇ ಶೋಷಣೆಯ ವ್ಯವಸ್ಥೆ ಇದೆ.
ಒಂದು ಅಂದಾಜು ಪ್ರಕಾರ ರಾಜ್ಯದ ಶೇ. 40ರಷ್ಟು ಗ್ರಾಮಗಳಲ್ಲಿ ಸ್ಮಶಾನ ಜಾಗ ಇಲ್ಲ. ದಲಿತರು ಸೇರಿ ಹಿಂದುಳಿದವರಿಗೆ ಇರುವ ಸ್ಮಶಾನ ಇನ್ನೂ ಕಡಿಮೆಯೇ. ಸ್ಮಶಾನಗಳ ಅಭಿವೃದ್ಧಿಗೆ ಸರಕಾರ ಮೀಸಲಿರಿಸಿರುವ ೪೦ ಕೋಟಿ ರೂ ಅನುದಾನ ಸುಖಾಸುಮ್ಮನೆ ಕೊಳೆಯುತ್ತಾ ಬಂದಿದೆ.
ಈ ಅನುದಾನ ಉಪಯೋಗಿಸಿ ಸ್ಮಶಾನ ಅಭಿವೃದ್ಧಿ ಮಾಡಿದ್ದರೆ ಬೇಗುವಳ್ಳಿಯಲ್ಲಿ ಅಸ್ಥಿ ಕಳೆದುಕೊಂಡು ಜನರು ಕಣ್ಣೀರು ಹಾಕುವಂಥ ಘಟನೆಗಳು ನಡೆಯುತ್ತಿರಲಿಲ್ಲ.
(ಒನ್ಇಂಡಿಯಾ ಸುದ್ದಿ)












Click it and Unblock the Notifications