Get Updates
Get notified of breaking news, exclusive insights, and must-see stories!

ಸಾಮಾನ್ಯ ಮನಸ್ಸಿನಾಚೆಗೆ-ಉಪನಿಷತ್‌ ದೃಷ್ಟಿಕೋನ: ಬೆಂಗಳೂರಿನಲ್ಲಿ ಶ್ರೀ ಎಂ ವಿಶೇಷ ಉಪನ್ಯಾಸ

ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಗಮನ ಸೆಳೆದಿರುವ ಹೆಸರುಗಳಲ್ಲಿ ಶ್ರೀ ಎಂ ಅವರದು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಕಳೆದ ಎರಡು ದಶಕಗಳಿಂದ ಅವರು ಮಾನವಕುಲದ ಒಳಿತು ಮತ್ತು ಆಧ್ಯಾತ್ಮಿಕ ಜಾಗೃತಿಗಾಗಿ ತಮ್ಮ ಜೀವನವನ್ನು ಸಮರ್ಪಿಸಿಕೊಂಡಿದ್ದಾರೆ. ಕೇವಲ ಉಪನ್ಯಾಸಗಳ ಮೂಲಕವೇ ಅಲ್ಲದೆ, ಶಿಕ್ಷಣ, ಆಹಾರ ಹಾಗೂ ವೈದ್ಯಕೀಯ ನೆರವಿನ ಮೂಲಕ ಬಡವರು ಮತ್ತು ಆದಿವಾಸಿ ಸಮುದಾಯಗಳಿಗೆ ಸಹಾಯ ಮಾಡುತ್ತಾ ಸೇವಾಕಾರ್ಯಗಳ ಮೂಲಕ ತಮ್ಮ ಬದುಕಿನ ಸಂದೇಶ ಸಾರುತ್ತಿದ್ದಾರೆ.

ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಇತ್ತೀಚೆಗೆ (ಮಾರ್ಚ್ 9) ನಡೆದ ಅವರ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಆ ಕಾರ್ಯಕ್ರಮದಲ್ಲಿ ಅನುಭವಿಸಿದ ಕೆಲವು ಕ್ಷಣಗಳು ಸಾಮಾನ್ಯ ಉಪನ್ಯಾಸದ ಅನುಭವಕ್ಕಿಂತ ವಿಭಿನ್ನವಾಗಿದ್ದವು.

Spiritual Wisdom

ಅಪರೂಪದ ಆಧ್ಯಾತ್ಮಿಕ ಮಾರ್ಗದರ್ಶಕರಾದ ಶ್ರೀ ಎಂ ಅವರ ಮಾತುಗಳು ಕೇವಲ ಉಪನ್ಯಾಸಗಳಲ್ಲ; ಅವು ಮನಸ್ಸಿನ ಮಿತಿಗಳನ್ನು ಮೀರಿ ಅದರಾಚೆಯ ಮೌನದ ಅಥವಾ ಸತ್ಯದ ಅಥವಾ ದೈವತ್ವದ ಅನುಭವದತ್ತ ಕರೆದೊಯ್ಯುವಂತಿದ್ದವು. ಭಾರತದ ಆಧ್ಯಾತ್ಮಿಕ ಪರಂಪರೆಯಲ್ಲಿ ಅನೇಕ ಗುರುಗಳು ಇದ್ದರೂ, ಕೆಲವರು ಮಾತ್ರ ತಮ್ಮ ಸರಳತೆಯಿಂದಲೇ ಜನಮನದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆಯುತ್ತಾರೆ. ಶ್ರೀ ಎಂ ಅವರ ವ್ಯಕ್ತಿತ್ವದಲ್ಲಿ ಕಾಣಿಸುವುದು ಅಂಥದೇ ಸರಳತೆ. ಯಾವುದೇ ಆಡಂಬರವಿಲ್ಲದೆ, ಸರಳ ವಸ್ತ್ರಧಾರಣೆ, ಸೌಮ್ಯ ನಗು ಮತ್ತು ಕರುಣೆಯಿಂದ ತುಂಬಿದ ಕಣ್ಣೋಟದೊಂದಿಗೆ ಅವರು ಶ್ರೋತೃಗಳನ್ನು ಮತ್ತೊಂದು ಲೋಕಕ್ಕೆ ಕರೆದೊಯ್ದರು.

ಯುಗಾದಿ 2026: ಭಾರತೀಯ ಪಂಚಾಂಗ ಪದ್ಧತಿಯ ಬಗ್ಗೆ ನೀವು ತಿಳಿಯಬೇಕಾದ 50 ಅಪರೂಪದ ಮಾಹಿತಿ ಇಲ್ಲಿದೆ -ಸಂವತ್ಸರ, ಮಾಸ, ತಿಥಿ
ಮೊದಲ ಬಾರಿಗೆ ಅವರನ್ನು ನೋಡುವಾಗಲೇ ಅವರ ಕಣ್ಣಿನಲ್ಲಿ ಆಳವಾದ ಮೌನದ ಪ್ರತಿಧ್ವನಿ ಕಂಡಂತೆ ಅನಿಸುತ್ತದೆ. ಅವರ ಮಾತುಗಳಲ್ಲಿ ಪಾಂಡಿತ್ಯವಿದ್ದರೂ ಅದು ಎಂದಿಗೂ ಗಂಭೀರ ದಾರ್ಶನಿಕ ಭಾಷೆಯಲ್ಲ; ಬದಲಾಗಿ ಎಲ್ಲರಿಗೂ ಅರ್ಥವಾಗುವಷ್ಟು ಸರಳವಾಗಿರುತ್ತದೆ. ಹೀಗಾಗಿ ಎಂತಹುದೇ ಕಠಿಣ ಉಪನಿಷತ್, ವೇದಾಂತ ಹಾಗೂ ಶ್ಲೋಕಗಳಿದ್ದರೂ ಅವುಗಳನ್ನು ಚಿಕ್ಕಮಗುವಿಗೆ ವಿವರಿಸುವಂತೆ ಹೇಳುವುದು ಅವರ ಉಪನ್ಯಾಸದ ವಿಶೇಷ.

ಸಾಮಾನ್ಯ ಮನಸ್ಸಿನಾಚೆಗೆ - ಉಪನಿಷತ್ ದೃಷ್ಟಿಕೋನ

ಭಾರತದ ಆಧ್ಯಾತ್ಮಿಕ ಶ್ರೀಮಂತಿಕೆಯ ಮೂಲವೆಂದರೆ ಉಪನಿಷತ್ತುಗಳು. ಅವು ಕೇವಲ ದಾರ್ಶನಿಕ ಗ್ರಂಥಗಳಲ್ಲ; ಮನುಷ್ಯನು ತನ್ನ ಮನಸ್ಸಿನ ಮಿತಿಗಳನ್ನು ಮೀರಿ ಸತ್ಯವನ್ನು ಅಥವಾ ಆತ್ಮನ್‌ ಅಥವಾ ದೈವತ್ವವನ್ನು ಅರಿಯುವ ದಾರಿಯನ್ನು ತೋರಿಸುವ ಜ್ಞಾನಸಂಪತ್ತು. ಹೀಗಾಗಿ ಉಪನಿಷತ್‌ಗಳು ಕತ್ತಲೆಯ ಬದುಕಿನಲ್ಲಿ ಬೆಳಕಾಗಿ ಕಂಡು ಬರುತ್ತವೆ. ಇದೇ ಕಾರಣಕ್ಕೆ ಬಹುತೇಕ ಆಧ್ಯಾತ್ಮಿಕ ಗುರುಗಳು ಅಥವಾ ಜ್ಞಾನೋದಯವನ್ನು ಹೊಂದಿದವರು ಮತ್ತೆ ಮತ್ತೆ ಉಪನಿಷತ್‌ಗಳ ಕಡೆಗೆ ನಮ್ಮನ್ನು ಕರೆದುಕೊಂಡು ಹೋಗುವರರ ಹಿಂದಿನ ರಹಸ್ಯ.

ಅದೇ ರೀತಿ ಶ್ರೀ ಎಂ ಅವರು ಸಹ ಸಾಮಾನ್ಯ ಮನಸ್ಸಿನಾಚೆಗೆ ಉಪನಿಷತ್‌ ದೃಷ್ಟಿಕೋನ ಏನಿದೆ ಎನ್ನುವುದನ್ನು ತುಂಬಾ ಸರಳ ಭಾಷೆಯಲ್ಲಿ ಹಾಗೂ ದೃಷ್ಟಾಂತಗಳ ಮೂಲಕ ತಿಳಿಸಲು ಪ್ರಯತ್ನಿಸಿದರು.

ಉಪನ್ಯಾಸ ಆರಂಭಿಸುವ ಮೊದಲು ಶ್ರೀ ಎಂ ಅವರು ತಮ್ಮ ಎರಡು ಪುಸ್ತಕಗಳ ಕನ್ನಡ ಅನುವಾದ ಬಿಡುಗಡೆಯಾಯಿತು. 'ಯೋಗ - ನಾಸ್ತಿಕರಿಗೂ ಸಹ' ಮತ್ತು 'ಪದ್ಮಸ್ಥಿತ ಅಮೂಲ್ಯ ಮಣಿ' ಎಂಬ ಈ ಕೃತಿಗಳ ಅನುವಾದ ಕಾರ್ಯದಲ್ಲಿ ಮಹಮ್ಮದ್ ರಫಿಕ್ ಸೇರಿದಂತೆ ಇನ್ನೂ ಮೂವರು ಶ್ರೀ ಎಂ ಅನುಯಾಯಿಗಳು/ಸಾಹಿತ್ಯಾಸಕ್ತರು ತಮ್ಮ ಸೇವೆಯನ್ನು ಸಲ್ಲಿಸಿರುವುದು ಗಮನಾರ್ಹ.

ಪುಸ್ತಕ ಬಿಡುಗಡೆ ನಂತರ ಶಾಂತಿ ಮಂತ್ರದೊಂದಿಗೆ ಉಪನ್ಯಾಸ ಆರಂಭವಾಯಿತು.

ಓಂ ಪೂರ್ಣಮದಃ ಪೂರ್ಣಮಿದಂ
ಪೂರ್ಣಾತ್ ಪೂರ್ಣಮುದಚ್ಯತೇ
ಪೂರ್ಣಸ್ಯ ಪೂರ್ಣಮಾದಾಯ
ಪೂರ್ಣಮೇವಾವಶಿಷ್ಯತೇ
ಓಂ ಶಾಂತಿಃ ಶಾಂತಿಃ ಶಾಂತಿಃ

ಈ ಮಂತ್ರದ ಅರ್ಥವನ್ನು ವಿವರಿಸುತ್ತಾ, "ಈ ಸೃಷ್ಟಿಯ ಮೂಲವೂ ಪೂರ್ಣ; ಈ ಜಗತ್ತೂ ಪೂರ್ಣ. ಪೂರ್ಣದಿಂದ ಏನನ್ನೇ ತೆಗೆದುಕೊಂಡರೂ ಉಳಿಯುವುದೂ ಪೂರ್ಣವೇ" ಎಂದು ಅವರು ಸರಳವಾಗಿ ತಿಳಿಸಿದರು.

ಸಾಮಾನ್ಯವಾಗಿ ನಮ್ಮ ಮನಸ್ಸು ಕಾಣುವುದನ್ನೇ ಸತ್ಯವೆಂದು ನಂಬುತ್ತದೆ. ತಿಳಿದಿರುವುದನ್ನೇ ಅಂತಿಮವೆಂದು ಭಾವಿಸುತ್ತದೆ. ಮೂರು ಆಯಾಮಗಳೊಳಗೆ ಸೀಮಿತವಾಗಿರುವ ಈ ಮನಸ್ಸು ಅದರಾಚೆಯ ಸಾಧ್ಯತೆಗಳನ್ನು ಕಾಣಲು ಹಿಂಜರಿಯುತ್ತದೆ. "ನನಗೆ ತಿಳಿದಿರುವುದಕ್ಕಿಂತ ಹೊರತಾಗಿ ಇನ್ನೂ ಅನೇಕ ಆಯಾಮಗಳು ಇರಬಹುದು" ಎಂಬ ಅರಿವು ಮೂಡುವ ಕ್ಷಣದಲ್ಲೇ ಆಧ್ಯಾತ್ಮಿಕ ಪಯಣ ಆರಂಭವಾಗುತ್ತದೆ ಎಂದು ಅವರು ಹೇಳಿದರು.

ಮಾತಿನ ಮಧ್ಯೆ ಅವರು ಭಗವದ್ಗೀತೆಯ ಸಂವಾದವನ್ನು ಉಲ್ಲೇಖಿಸಿ ಶ್ರೀಕೃಷ್ಣ ಮತ್ತು ಅರ್ಜುನನ ನಡುವಿನ ಉಪದೇಶವನ್ನು ವಿವರಿಸಿದರು. ಕರ್ಮಯೋಗ, ಜ್ಞಾನಯೋಗ, ಭಕ್ತಿಯೋಗ ಮತ್ತು ರಾಜಯೋಗ ಈ ನಾಲ್ಕು ಮಾರ್ಗಗಳ ಮೂಲಕ ಮನುಷ್ಯನು ತನ್ನ ಮನಸ್ಸಿನ ಬಂಧನಗಳಿಂದ ಮುಕ್ತನಾಗಿ ಆತ್ಮಸತ್ಯದತ್ತ ಸಾಗಬಹುದು ಎಂಬ ಗೀತೆಯ ಸಾರವನ್ನು ಅವರು ಸುಲಭವಾಗಿ ವಿವರಿಸಿದರು.

ಸತ್ಸಂಗದ ನಡುವೆ ಅವರು ಉಪನಿಷತ್ತುಗಳ ಕೆಲವು ಮಂತ್ರಗಳನ್ನು ಉಚ್ಚರಿಸಿದಾಗ ಸಭಾಂಗಣದಲ್ಲಿ ಒಂದು ವಿಶಿಷ್ಟ ಮೌನ ಆವರಿಸಿತು. ಆ ಮಂತ್ರಗಳು ಕೇವಲ ಪಠಣವಾಗಿರಲಿಲ್ಲ; ಅವು ಅನುಭವದ ನಾದದಂತೆ ಶ್ರೋತೃಗಳ ಮನಸ್ಸಿನಲ್ಲಿ ಪ್ರತಿಧ್ವನಿಸಿದವು.

ಕೊನೆಯಲ್ಲಿ ಅವರು
ಸರ್ವೇ ಭವಂತು ಸುಖಿನಃ
ಸರ್ವೇ ಸಂತು ನಿರಾಮಯಾಃ
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿತ್ ದುಃಖಭಾಗ್ಭವೇತ್
ಓಂ ಶಾಂತಿಃ ಶಾಂತಿಃ ಶಾಂತಿಃ

ಎಂಬ ಮಂತ್ರವನ್ನು ಉಚ್ಚರಿಸಿ ಅದರ ಅರ್ಥವನ್ನು ವಿವರಿಸಿದರು.
"ಎಲ್ಲರೂ ಸುಖಿಯಾಗಿರಲಿ, ಎಲ್ಲರೂ ಆರೋಗ್ಯವಾಗಿರಲಿ, ಎಲ್ಲರಿಗೂ ಶುಭವಾಗಲಿ, ಯಾರಿಗೂ ದುಃಖ ಬಾರದಿರಲಿ."

ಕಂಬಳ ಕ್ರೀಡೆ ಆಯೋಜನೆ ಬಗ್ಗೆ ಸುಪ್ರೀಂಕೋರ್ಟ್ ಮಹತ್ವದ ಆದೇಶ... Kambala Race
ಕಂಬಳ ಕ್ರೀಡೆ ಆಯೋಜನೆ ಬಗ್ಗೆ ಸುಪ್ರೀಂಕೋರ್ಟ್ ಮಹತ್ವದ ಆದೇಶ... Kambala Race

ಈ ವಿಶ್ವಮಾನವೀಯ ಆಶಯದೊಂದಿಗೆ ಅವರ ಉಪನ್ಯಾಸ ಮುಕ್ತಾಯವಾಯಿತು.
ಉಪನಿಷತ್ತುಗಳು ಕೇವಲ ಪುಸ್ತಕಗಳಲ್ಲಿ ಉಳಿಯುವ ಜ್ಞಾನವಲ್ಲ; ಅವು ಬದುಕಿನೊಳಗೆ ಅನುಭವವಾಗಬೇಕಾದ ಸತ್ಯ. ಅದಕ್ಕಾಗಿ ಸಾಧಕನು ಸಾಮಾನ್ಯ ಮನಸ್ಸಿನ ಮಿತಿಗಳನ್ನು ಮೀರಿ ತನ್ನ ಆಂತರಿಕ ಪಯಣವನ್ನು ಆರಂಭಿಸಬೇಕು ಎಂಬ ಸಂದೇಶವೇ ಆ ಉಪನ್ಯಾಸದ ಸಾರ.

ಉಪನ್ಯಾಸ ಮುಗಿದಾಗ, ಅದು ಇಷ್ಟು ಬೇಗ ಮುಗಿದಿತೇ ಎಂಬ ಭಾವನೆ ಮೂಡಿತು. ಏನೋ ಅಪೂರ್ಣ ಉಳಿದಂತೆ ಅನಿಸಿತು. "ಮನಸ್ಸಿನಾಚೆಯ ಪಯಣ ಆರಂಭವಾದಾಗಲೇ ಅದು ಪೂರ್ಣವಾಗುತ್ತದೆ" ಎನ್ನುವ ಚಿಂತನೆ ಅದಕ್ಕೆ ಉತ್ತರ ನೀಡಿತು.

ಬರಹ: ವಿಶ್ವನಾಥ್ ಬಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+