KRSನಲ್ಲಿ ನೀರಿನ ಮಟ್ಟ ಕುಸಿತ: ಬೆಂಗಳೂರಿಗೆ ಕುಡಿಯುವ ನೀರಿನ ಬಿಕ್ಕಟ್ಟು ಭೀತಿ, ಕಬಿನಿ-ಹೇಮಾವತಿ ಕಡೆ BWSSB ಚಿತ್ತ
ಬೆಂಗಳೂರು: ಕರ್ನಾಟಕಕ್ಕೆ ಬರಗಾಲದ ಛಾಯೆ ಆವರಿಸಿದೆ. ನಿರೀಕ್ಷಿತ ಮಳೆ ಆಗದೇ, ಕೊರತೆ ಉಂಟಾಗಿದೆ. ಇದರಿಂದ ಜಲಾಶಯಗಳ ಒಳಹರಿವು ಹೆಚ್ಚಾಗುವುದು ಅನುಮಾನ. ಬೆಂಗಳೂರಿಗೆ ಕಾವೇರಿ ನೀರೇ ಆಸರೆಯಾಗಿದೆ. ಆದರೆ ಮಳೆ ಬಾರದ ಹಿನ್ನೆಲೆ ಕೃಷ್ಣ ರಾಜ ಸಾಗರ (KRS) ಜಲಾಶಯದಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಕುಸಿಯುತ್ತಿದೆ. ಬೇಸಿಗೆಯನ್ನು ನಿಶ್ಚಿಂತೆಯಿಂದ ಕಳೆದಿದ್ದ ಬೆಂಗಳೂರಿಗರಿಗೆ ಮಳೆಗಾಲದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ. ಈ ಸಂಬಂಧ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಅಗತ್ಯ ಸಿದ್ಧತೆ ನಡೆಸಿದೆ.
ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಆಗಿಲ್ಲ, ಮುಂಬರುವ ದಿನಗಳಲ್ಲಿ ಬೆಂಗಳೂರು ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದೆಂದು ಸ್ವತಃ ಜಲಮಂಡಳಿ ಒಪ್ಪಿಕೊಂಡಿದೆ. ಈ ಸಂಬಂಧ BWSSB ಅಧ್ಯಕ್ಷೆ ಡಾ. ಎನ್. ಮಂಜುಳಾ ಅವರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಒಂದು ವೇಳೆ ಮಳೆ ಬಾರದಿದ್ದರೆ ಬೆಂಗಳೂರಿಗರಿಗೆ ಕುಡಿಯಲು ನೀರಿನ ಸಮಸ್ಯೆ ಎದುರಾಗುತ್ತಾ?, ಮಳೆಗಾಲದಲ್ಲೇ ಈ ಸ್ಥಿತಿ, ಇನ್ನು ಮುಂದಿನ 2027 ಬೇಸಿಗೆಯಲ್ಲಿ ಏನೆಲ್ಲ ಸಮಸ್ಯೆ ಆಗಬಹುದು?.

ಜಲಮಂಡಳಿಯ ಕಚೇರಿಯಲ್ಲಿ ಮಂಗಳವಾರ ವಲಯವಾರು ಮುಖ್ಯ ಇಂಜಿನಿಯರ್ಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಮಳೆ ಕೊರತೆಯಿಂದ ಭವಿಷ್ಯದಲ್ಲಿ ಉಂಟಾಗಬಹುದಾದ ನೀರಿನ ಅಭಾವವನ್ನು ಎದುರಿಸುವ ಸಿದ್ಧತೆಗಳ ಕುರಿತು ಪರಿಶೀಲಿಸಿದರು. ಸದ್ಯ ಕೆಆರ್ಎಸ್ (KRS) ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣ ಹಾಗೂ ಅದನ್ನು ಅತ್ಯಂತ ಎಚ್ಚರಿಕೆಯಿಂದ ಬಳಕೆ ಮಾಡುವ ಕುರಿತು ಚರ್ಚಿಸಿದರು.
ರಾಜಧಾನಿಗೆ ಭವಿಷ್ಯದಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆ, ಸಂಪೂರ್ಣ ಬರಗಾಲ ಉಂಟಾದ ನಿಜಕ್ಕೂ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವುದು ಹೇಗೆ? ಎಂಬೆಲ್ಲ ನಿಟ್ಟಿನಲ್ಲಿ ಈಗಿನಿಂದಲೇ ಅಗತ್ಯವಿರುವ ಎಲ್ಲ ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದರು.
ರಾಜಧಾನಿಗೆ ಹೇಮಾವತಿ, ಕಬಿನಿ ಆಸರೆಯಾಗುತ್ತಾ?
ಮಳೆ ಅಭಾವದಿಂದಾಗಿ ನೀರಿನ ಕೊರತೆ ಮತ್ತಷ್ಟು ಹೆಚ್ಚಾದರೆ, ನಗರಕ್ಕೆ ಪೂರೈಸುವ ದೈನಂದಿನ ನೀರಿನ ಪ್ರಮಾಣದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಅಲ್ಲದೆ, ಪರ್ಯಾಯ ವ್ಯವಸ್ಥೆಯಾಗಿ ಹೇಮಾವತಿ ಮತ್ತು ಕಬಿನಿ ಜಲಾಶಯಗಳಿಂದ ನಗರಕ್ಕೆ ನೀರು ಸರಬರಾಜು ಮಾಡುವ ಸಾಧ್ಯಾಸಾಧ್ಯತೆಗಳ ಬಗ್ಗೆಯೂ ಚಿಂತಿಸಲಾಗುತ್ತಿದೆ.
ಬೆಂಗಳೂರಿನ ಅಂತರ್ಜಲ ಮಟ್ಟ ಹಾಗೂ ಪ್ರಸ್ತುತ ಬಳಕೆಯಲ್ಲಿರುವ ಕೊಳವೆಬಾವಿಗಳ (Borewells) ವಾಸ್ತವಿಕ ಸ್ಥಿತಿಗತಿಗಳ ಕುರಿತು ಭಾರತೀಯ ವಿಜ್ಞಾನ ಸಂಸ್ಥೆ (IISc) ಯಿಂದ ಸಮಗ್ರ ವರದಿ ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಬಿಕ್ಕಟ್ಟು ಎದುರಾಗದಂತೆ ಎಚ್ಚರಿಕೆ ವಹಿಸುವಂತೆ ಜಲಮಂಡಳಿ ಪ್ರಧಾನ ಮುಖ್ಯ ಇಂಜಿನೀಯರ್ ಆದ ಬಿ.ಎಸ್ ದಲಾಯತ್, ಮುಖ್ಯ ಇಂಜಿನೀಯರ್ಗಳಾದ ಎಸ್ ವಿ ವೆಂಕಟೇಶ್, ದೇವರಾಜು, ಗಂಗಾಧರ್, ರಾಜಶೇಖರ್ ಹಾಗೂ ಮಹದೇವೇಗೌಡ ಸೇರಿದಂತೆ ಪ್ರಮುಖ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಬರಿದಾದ KRS ಒಡಲು..! ಮುಂದೇನು?
ಕಳೆದ ಬಾರಿ ಮಳೆಗಾಲದಲ್ಲಿ ಒಟ್ಟು ಮೂರು ಬಾರಿ ಕೃಷ್ಣ ರಾಜ ಸಾಗರ ಅಣೆಕಟ್ಟು ತುಂಬಿ ಹರಿದಿತ್ತು. ಅಂದು ಉತ್ತಮ ಮಳೆ ಆದ ಪರಿಣಾಮದಿಂದ ಬೇಸಿಗೆಯಲ್ಲಿ ನೀರಿನ ಅಭಾವದ ಬಿಸಿ ತಟ್ಟಲಿಲ್ಲ. ಇದೀಗ ಮಳೆಗಾಲ ಆರಂಭವಾಗಿ ತಿಂಗಳು ಕಳೆಯುತ್ತಾ ಬಂದರೂ ಅಣೆಕಟ್ಟುಗಳ ಒದಲು ಬರಿದಾಗಿವೆ. ಕೆ ಆರ್ ಎಸ್ ಜಲಾಶದಲ್ಲಿ 2025ರ ಜೂನ್ 23ರಂದು 43 ಟಿಎಂಸಿ ನೀರಿತ್ತು. 2026 ಜೂನ್ 23ಕ್ಕೆ ಕೇವಲ 11 ಟಿಎಂಸಿ ನೀರು ಮಾತ್ರವಿದೆ. ಮಳೆ ಬಂದು ನೀರಿನ ಒಳಹರಿವು ಹೆಚ್ಚಾದರೆ ಮಳೆಗಾಲ ಹೇಗೆ ದಾಟಬಹುದು. ಇಲ್ಲವಾದರೆ ಈ ಮಳೆಗಾದಲ್ಲಿ ಸಮಸ್ಯೆ ಆಗುವುದಲ್ಲಿ ಮುಂದಿನ ವರ್ಷ ಜೂನ್ 2027ರವರೆಗೂ ನೀರಿನ ನಿರ್ವಹಣೆ ಸವಾಲು ಜಲಮಂಡಳಿ ಮುಂದಿದೆ. ಇದನ್ನು ಹೇಗೆ ನಿರ್ವಹಿಸುತ್ತದೆ ಎಂಬ ಕುತೂಹಲವಿದೆ.
ಮುಂದಿನ ಬೇಸಿಗೆಗೆ ಬೆಂಗಳೂರಲ್ಲಿ ಅತ್ಯಂತ ಕೆಟ್ಟ ಸ್ಥಿತಿ?
ಕೃಷಿ, ಕುಡಿಯಲು, ತಮಿಳುನಾಡಿಗೆ ಬಿಡಲು ಕಾವೇರಿ ನೀರೇ ಆಧಾರವಾಗಿತ್ತು. ಸದ್ಯ ಈ ಅಲ್ಪ ನೀರಿನಲ್ಲಿ ಬೆಂಗಳೂರಿಗೆ ಮಳೆಗಾಲದಲ್ಲಿ ಸರಬರಾಜು ಮಾಡುವುದೇ ಕಷ್ಟಕರವಾಗಿದೆ. ಇನ್ನು ಮುಂದಿನ ವರ್ಷ ಬೇಸಿಗೆಯಲ್ಲಿ ಜಲಾಶಯದ ಜಲಾನಯನ ಪ್ರದೇಶಗಳ ಸ್ಥಿತಿ, ಬೆಂಗಳೂರಿಗರ ಸ್ಥಿತಿ ಅತ್ಯಂತ್ಯ ಕಷ್ಟದಿಂದ ಕೂಡಿರಲಿದೆ ಎಂಬ ಮುನ್ಸೂಚನೆ ಈಗಾಗಲೇ ಸಿಕ್ಕಿದೆ. ಮಳೆ ಕಡಿಮೆ ಆದರೆ ಅಂತರ್ಜಲ ಪ್ರಮಾಣ ಸಹ ಕುಸಿಯಲಿದೆ. ಇದರಿಂದ ತಿಂಗಳುಗಟ್ಟಲೇ ಬೆಂಗಳೂರಿಗೆ ಟ್ಯಾಂಕರ್ ನೀರು ಸರಬರಾಜಿಗೆ ಮುಂದಾದರೂ ಸಹಿತ ತೊಂದರೆ ಒಡ್ಡಲಿದೆ. ಈ ಸಂಬಂಧ ನೀರಿನ ಮಿತ ಬಳಕೆ, ಮುಂದಿನ ಮುನ್ನೆಚ್ಚರಕೆ ಕುರಿತು ಜಲಮಂಡಳಿ ಸಿದ್ಧವಾಗುತ್ತಿದೆ. ಈ ಮೂಲಕ ಬರಗಾಲವನ್ನು ಅಧಿಕಾರಿಗಳು ಒಪ್ಪಿಕೊಂಡು ಕಾರ್ಯೋನ್ಮುಖರಾಗಿದ್ದಾರೆ.













Click it and Unblock the Notifications