ಜೋರಾಗಿ ಮಳೆ ಬರುತ್ತಿದ್ದಾಗ ಈ ಐದು ಮನೆಕೆಲಸಗಳನ್ನು ಮಾಡಲೇಬಾರದು : ಕಾರಣ ಇಲ್ಲಿದೆ
ಮಳೆಗಾಲವು ಶಾಖದಿಂದ ಪರಿಹಾರ ನೀಡುತ್ತದೆ ನಿಜ. ಆದರೆ ಕೆಲವೊಂದು ಕೆಲಸಗಳನ್ನು ಬಹಳ ಕಷ್ಟವಾಗಿಸಿ ಬಿಡುತ್ತದೆ. ಅವುಗಳಲ್ಲಿ ಒಂದು ಮನೆಯನ್ನು ಸ್ವಚ್ಛಗೊಳಿಸುವ ಕಾರ್ಯ. ಅನೇಕ ಜನರು ರಜೆಯ ದಿನ ಅಥವಾ ಮಳೆಗಾಲದ ದಿನದಂದು ಬಾಕಿ ಇರುವ ಎಲ್ಲಾ ಮನೆಕೆಲಸಗಳನ್ನು ಮುಗಿಸಬೇಕು ಎಂದು ಅಂದುಕೊಳ್ಳುತ್ತಾರೆ. ಯಾಕೆಂದರೆ ಬಿಡದೇ ಬರುವ ಮಳೆಯ ಸಮಯದಲ್ಲಿ ಹೊರಗೆ ಹೋಗಿ ಯಾವ ಕೆಲಸ ಮಾಡುವುದು ಕೂಡಾ ಸಾಧ್ಯವಾಗುವುದಿಲ್ಲ. ಹೀಗಿರುವಾಗ ಮನೆಯಲ್ಲಿ ಸುಮ್ಮನೆ ಕೂರುವ ಬದಲು ಕೆಲವೊಂದು ಕೆಲಸಗಳನ್ನು ಮಾಡಿ ಮುಗಿಸುವುದು ಒಳ್ಳೆಯದು ಎನ್ನುವ ಲೆಕ್ಕಾಚಾರ ಇರುತ್ತದೆ. ಆದರೆ, ಮಳೆಗಾಲದಲ್ಲಿ ಕೆಲವೊಂದು ಕೆಲಸಗಳನ್ನು ಮಾಡಿದರೆ ಪ್ರಯೋಜನಕ್ಕಿಂತ ಹಾನಿಯೇ ಹೆಚ್ಚು.
ಮಳೆಗಾಲದಲ್ಲಿ ಅಥವಾ ಜೋರಾಗಿ ಮಳೆ ಬರುತ್ತಿರುವ ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡದೇ ಇರುವುದು ಒಳ್ಳೆಯದು.

ವಾಸ್ತವವಾಗಿ, ಈ ಋತುವಿನಲ್ಲಿ ತೇವಾಂಶ ಹೆಚ್ಚಾಗಿರುತ್ತದೆ. ಬಟ್ಟೆ, ನೆಲ, ಕಾರ್ಪೆಟ್ ಮತ್ತು ಪೀಠೋಪಕರಣಗಳು ಸುಲಭವಾಗಿ ಒಣಗುವುದಿಲ್ಲ. ಇದಲ್ಲದೆ, ಹೆಚ್ಚಿನ ಆರ್ದ್ರತೆಯು ಮನೆಯಲ್ಲಿ ತೇವ, ವಾಸನೆ ಮುಂತಾದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ, ಮಳೆಗಾಲದಲ್ಲಿ ಶುಚಿಗೊಳಿಸುವ ಕಾರ್ಯಗಳನ್ನು ಮುಂದೂಡುವುದೇ ಬುದ್ಧಿವಂತಿಕೆ. ಸರಿಯಾದ ಋತುವಿನಲ್ಲಿ ಕೆಲಸಗಳನ್ನು ನಿರ್ವಹಿಸುವುದರಿಂದ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಮಾನ್ಸೂನ್ನಲ್ಲಿ ಶುಚಿಗೊಳಿಸುವ ಕೆಲಸವನ್ನು ಆಯೋಜಿಸುತ್ತಿದ್ದರೆ, ಮಳೆಗಾಲದಲ್ಲಿ ಯಾವ ಕೆಲಸಗಳನ್ನು ಮಾಡಬೇಕು ಮಾಡಬಾರದು ಎನ್ನುವುದು ತಿಳಿಯಬೇಕು.
ಈ ಕೆಲಸವನ್ನು ಮಳೆಯಲ್ಲಿ ಮಾಡಲೇಬಾರದು
ಬಟ್ಟೆ ಒಗೆಯುವುದನ್ನು ತಪ್ಪಿಸಬೇಕು
ಜೋರು ಮಳೆ ಬರುವ ಸಮಯದಲ್ಲಿ ಬಟ್ಟೆ ಒಗೆಯುವುದನ್ನು ತಪ್ಪಿಸಬೇಕು. ಈ ಋತುವಿನಲ್ಲಿ ಬಟ್ಟೆಗಳು ಒಣಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೆ, ಬಟ್ಟೆ ಸರಿಯಾಗಿ ಒಣಗದೇ ಹೋದರೆ ವಾಸನೆ ಬರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಒದ್ದೆ ಬಟ್ಟೆಯಲ್ಲಿ ಶಿಲೀಂದ್ರಗಳು ಬೆಳೆಯುವ ಅಪಾಯ ಇರುತ್ತದೆ. ಇದು ಆರೋಗ್ಯಕ್ಕೂ ಅಪಾಯಕಾರಿಯಾಗಿದೆ. ಹಲವಾರು ದಿನಗಳವರೆಗೆ ನಿರಂತರವಾಗಿ ಮಳೆ ಬಂದರೆ ಈ ಸಮಸ್ಯೆ ಉಲ್ಬಣಗೊಳ್ಳಬಹುದು.
ಹಗಲು ಹೊತ್ತಿನಲ್ಲಿ ನೆಲ ಒರೆಸಬಾರದು
ಮಳೆ ಬರುವ ಸಮಯದಲ್ಲಿ ಹಗಲಿನಲ್ಲಿ ನೆಲ ಒರೆಸಬಾರದು. ಮಳೆಯ ಸಮಯದಲ್ಲಿ ನೆಲ ಬೇಗನೆ ಒಣಗುವುದಿಲ್ಲ. ಅಲ್ಲದೆ, ಹಗಲಿನ ವೇಳೆಯಲ್ಲಿ ಇಡೀ ಮನೆಯಲ್ಲಿರುವವರು ಓಡಾಟ ನಡೆಸುತ್ತಲೇ ಇರುತ್ತಾರೆ. ಮೊದಲೇ ಮಳೆಗಾಲದಲ್ಲಿ ನೆಲ ಒಣಗುವುದು ವಿಳಂಬವಾಗುತ್ತದೆ. ಒದ್ದೆ ನೆಲದ ಮೇಲೆ ಮತ್ತೆ ಮತ್ತೆ ನಡೆದಾಡುವುದರಿಂದ ನೆಲ ಕೊಳಕಾಗುವುದು. ಆದ್ದರಿಂದ, ಮಳೆ ಬರುತ್ತಿರುವ ವೇಳೆ ನೆಲ ಒಡೆಸುವ ಬದಲು ಹವಾಮಾನ ಸ್ಪಷ್ಟವಾದಾಗ ಒರೆಸುವುದು ಅಥವಾ ಸಂಜೆ ಈ ಕೆಲಸವನ್ನು ಪೂರ್ಣಗೊಳಿಸುವುದು ಉತ್ತಮ.
ಫರ್ನಿಚರ್ ಡಸ್ಟಿಂಗ್ ಕೂಡಾ ಸರಿಯಲ್ಲ
ಮಳೆಗಾಲದಲ್ಲಿ ಪೀಠೋಪಕರಣಗಳಿಂದ ಧೂಳು ತೆಗೆಯುವುದು ಕೂಡಾ ಅಷ್ಟು ಪರಿಣಾಮಕಾರಿಯಲ್ಲ. ಗಾಳಿಯಲ್ಲಿನ ತೇವಾಂಶವು ಧೂಳನ್ನು ಸುಲಭವಾಗಿ ತೆಗೆದುಹಾಕುವ ಬದಲು ಮೇಲ್ಮೈಗಳಿಗೆ ಅಂಟಿಕೊಳ್ಳುವಂತೆ ಮಾಡುತ್ತದೆ. ಆದ್ದರಿಂದ, ಸ್ವಲ್ಪ ಸಮಯದವರೆಗೆ ಈ ಕೆಲಸವನ್ನು ಬಿಟ್ಟುಬಿಡುವುದು ಉತ್ತಮ.
ಬಚ್ಚಲು ಮನೆಯನ್ನು ಡೀಪ್ ಕ್ಲೀನ್ ಮಾಡಬಾರದು
ಮಳೆಗಾಲದಲ್ಲಿ ಬಚ್ಚಲು ಮನೆಯನ್ನು ಡೀಪ್ ಕ್ಲೀನ್ ಮಾಡುವುದನ್ನು ತಪ್ಪಿಸಬೇಕು. ಈ ಸಮಯದಲ್ಲಿ ಹೆಚ್ಚಿನ ಆರ್ದ್ರತೆಯಿಂದಾಗಿ, ಕನ್ನಡಿ ಮತ್ತು ಗೋಡೆಗಳು ಹೆಚ್ಚು ಕಾಲದವರೆಗೆ ಒದ್ದೆಯಾಗಿಯೇ ಇರುತ್ತವೆ. ಇದು ಶುಚಿಗೊಳಿಸುವ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಸ್ನಾನಗೃಹವು ದೀರ್ಘಕಾಲದವರೆಗೆ ಒದ್ದೆಯಾಗಿದ್ದರೆ, ಅದರಿಂದ ವಿಚಿತ್ರವಾದ ವಾಸನೆಯನ್ನು ಉಂಟುಮಾಡಬಹುದು. ಹೀಗಾದಾಗ ಆ ಬಚ್ಚಲು ಮನೆಯನ್ನು ಬಳಸಲು ಕಷ್ಟಕರವಾಗಿರುತ್ತದೆ.
ಈ ಕೆಲಸಗಳಿಂದಲೂ ದೂರವಿರಿ
ಹೆಚ್ಚುವರಿಯಾಗಿ, ಮಳೆಗಾಲದಲ್ಲಿ ಕಾರ್ಪೆಟ್ಗಳು, ಹಾಸಿಗೆಗಳು, ಸೋಫಾಗಳನ್ನು ಸ್ವಚ್ಛಗೊಳಿಸುವುದನ್ನು ತಪ್ಪಿಸಬೇಕು. ಅತಿಯಾದ ಆರ್ದ್ರತೆಯು ಈ ವಸ್ತುಗಳನ್ನು ಬೇಗನೆ ಒಣಗಲು ಬಿಡುವುದಿಲ್ಲ. ಇದರ ಬದಲು ಶುಷ್ಕ, ಕಡಿಮೆ ಆರ್ದ್ರತೆಯ ವಾತಾವರಣದಲ್ಲಿ ಇಂತಹ ಕೆಲಸಗಳನ್ನು ನಿರ್ವಹಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ.












Click it and Unblock the Notifications