ಬೀದರ್; ಡಿಸಿ ಸ್ಪಂದನೆ, ಮಾನಸಿಕ ಅಸ್ವಸ್ಥ ಮಹಿಳೆಗೆ ಚಿಕಿತ್ಸೆ
ಬೀದರ್, ಏಪ್ರಿಲ್ 20; ಬೀದರ್ ಜಿಲ್ಲಾಧಿಕಾರಿ ರಾಮಚಂದ್ರನ್. ಆರ್ ಸ್ಪಂದನೆಯಿಂದಾಗಿ ಬೀದರ್ ನಗರದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಚಿಕಿತ್ಸೆಗಾಗಿ ಧಾರವಾಡದ ಮಾನಸಿಕ ರೋಗಿಗಳ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಏಪ್ರಿಲ್ 17ರಂದು ಬಸವಕಲ್ಯಾಣ ಉಪ ಚುನಾವಣೆ ದಿನ ಜಿಲ್ಲಾಧಿಕಾರಿಗಳು ಮತಗಟ್ಟೆಗಳಿಗೆ ಭೇಟಿ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಚಿದ್ರಿ ರಸ್ತೆ ಮುಖಾಂತರ ತೆರಳುವಾಗ ನ್ಯೂ ಆದರ್ಶ ಕಾಲೋನಿಯ ಸುಮಾರು 35 ವರ್ಷದ ಮಾನಸಿಕ ಅಸ್ವಸ್ಥ ಮಹಿಳೆ ಮಾಧುರಿ ಎನ್ನುವವರು ರಸ್ತೆಯ ಬದಿಯಲ್ಲಿ ಓಡಾಡುತ್ತಿದ್ದರು.
ಇದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಿಗೆ ಮಹಿಳೆಯ ಬಗ್ಗೆ ಮಾಹಿತಿ ನೀಡಿದ್ದರು. ತುರ್ತಾಗಿ ಮಹಿಳೆಗೆ ಸಹಾಯ ಮಾಡಿ, ವರದಿ ನೀಡುವಂತೆ ಸೂಚನೆಯನ್ನು ನೀಡಿದ್ದರು.

ಮಹಿಳಾ ಶಕ್ತಿ ಕೇಂದ್ರದ ಕಲ್ಯಾಣ ಅಧಿಕಾರಿ ಶಾರದಾ, ಜಿಲ್ಲಾ ಸಂಯೋಜಕರಾದ ಗೀತಾಂಜಲಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಾದ ಗೌರಿಶಂಕರ ಪರತಾಪೂರೆ ಅವರು ಮಹಿಳೆಯನ್ನು ರಕ್ಷಣೆ ಮಾಡಿದ್ದರು.
ಮಹಿಳೆಗೆ ಬೀದರ ನಗರದ ಬಸವಕಾರ್ಯ ಸಮಿತಿ ಸ್ವಧಾರ ಗೃಹದಲ್ಲಿ ಆಶ್ರಯ ನೀಡಿ, ಸ್ನಾನ ಮಾಡಿಸಿ, ಹೊಸ ಬಟ್ಟೆ ಕೊಡಿಸಿ, ಊಟೋಪಚಾರ ಮಾಡಿಸಿದ್ದರು. ನಂತರ ಜಿಲ್ಲಾ ಬ್ರಿಮ್ಸ್ ಆಸ್ಪತ್ರೆಯ ಮನೋರೋಗ ವಿಭಾಗಕ್ಕೆ ಕರೆದೊಯ್ದು ಅಲ್ಲಿನ ಮನೋವೈದ್ಯಾಧಿಕಾರಿಗಳ ಹತ್ತಿರ ವೈದ್ಯಕೀಯ ತಪಾಸಣೆ ಮಾಡಿಸಿದ್ದರು.
ತಪಾಸಣೆ ಬಳಿಕ ಮಹಿಳೆಯು ಸ್ಕಿಜೋಫ್ರೇನಿಯ ಕಾಯಿಲೆಗೆ ಒಳಗಾಗಿದ್ದಾರೆ ಎಂದು ವೈದ್ಯರು ವರದಿ ನೀಡಿದ್ದು, ಮಹಿಳೆಗೆ ದೀರ್ಘಾವಧಿಯ ಮಾನಸಿಕ ಆರೈಕೆ ಬೇಕಾಗಿದ್ದು, ಧಾರವಾಡದ ಆಸ್ಪತ್ರೆಗೆ ದಾಖಲಿಸುವಂತೆ ವರದಿ ನೀಡಿದ್ದರು.
ವೈದ್ಯಾಧಿಕಾರಿಗಳ ವರದಿಯನ್ವಯ ಮಹಿಳೆಯನ್ನು ಧಾರವಾಡಕ್ಕೆ ಕಳಹಿಸಿಕೊಡಲಾಗಿದೆ. ಮಹಿಳೆಯ ಕೋವಿಡ್ ಪರೀಕ್ಷೆ ಮಾಡಿಸಲಾಗಿದ್ದು, ವರದಿ ನೆಗೆಟೀವ್ ವರದಿ ಬಂದಿದೆ.












Click it and Unblock the Notifications