ಹೃದಯಸ್ಪರ್ಶಿ ಸಂಗತಿ; 14 ವರ್ಷದ ಬಾಲಕನನ್ನು ದತ್ತು ಪಡೆದ ಪೊಲೀಸ್ ಠಾಣೆ
ಮೀರತ್, ಫೆಬ್ರುವರಿ 16: ಎರಡು ವರ್ಷದ ಹಿಂದೆ ರಸ್ತೆ ಅಪಘಾತವೊಂದರಲ್ಲಿ ಅಪ್ಪ ತೀರಿಹೋಗಿದ್ದರು. ಅಮ್ಮನಿಗೆ ಮಾನಸಿಕ ಕಾಯಿಲೆ, ಆಸ್ಪತ್ರೆಯಲ್ಲೇ ಅವರ ವಾಸ. ಈ ನಡುವೆ ದಿಕ್ಕಾಪಾಲಾಗಿದ್ದ 14 ವರ್ಷದ ಅನ್ಮೋಲ್ ಎಂಬ ಬಾಲಕ. ಆದರೆ ಗೊತ್ತು ಗುರಿ ಇಲ್ಲದೇ ಅಲೆಯುತ್ತಿದ್ದ ಈ ಬಾಲಕನಿಗೆ ಪೊಲೀಸರೇ ದಾರಿ ದೀಪವಾಗಿದ್ದಾರೆ. ಆತನಿಗೆ ಉಜ್ವಲ ಭವಿಷ್ಯ ಕಟ್ಟಿಕೊಡಲು ಮುಂದಾಗಿದ್ದಾರೆ.
ಇಂಥ ಹೃದಯಸ್ಪರ್ಶಿ ಸಂಗತಿ ಬೆಳಕಿಗೆ ಬಂದಿರುವುದು ಉತ್ತರ ಪ್ರದೇಶದ ಮೀರತ್ ಎಂಬಲ್ಲಿ. ಅಪ್ಪ ಅಮ್ಮನಿಲ್ಲದೇ ಕೊರಗುತ್ತಿದ್ದ ಈ ಹುಡುನನ್ನು ರಕ್ಷಣೆ ಮಾಡಿದ್ದಲ್ಲದೇ ಮೀರತ್ ಪೊಲೀಸರೇ ಆತನನ್ನು ದತ್ತು ತೆಗೆದುಕೊಂಡಿದ್ದಾರೆ.
ಬಾಲಕನ ಕಷ್ಟ ಕಂಡ ಕನ್ಕೆರ್ಕೆರಾ ಪೊಲೀಸ್ ಠಾಣೆ ಠಾಣಾಧಿಕಾರಿ ಸಾಗರ್ ಈ ಹುಡುಗನನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದ್ದರು. ಇದಕ್ಕೆ ಇಡೀ ಠಾಣೆ ಸಿಬ್ಬಂದಿಯೂ ಕೈಜೋಡಿಸಿದರು. ಇದೀಗ ಅನ್ಮೋಲ್ ಪೊಲೀಸ್ ಸಿಬ್ಬಂದಿ ಆರೈಕೆಯಲ್ಲಿ ಬೆಳೆಯುತ್ತಿದ್ದಾನೆ.

"ಅನ್ಮೋಲ್ ನಿಗೆ ಓದಿ ಜೀವನದಲ್ಲಿ ಏನಾದರೂ ಸಾಧಿಸುವ ಹಂಬಲವಿದೆ. ನಾವು ಕೆಲವು ಶಾಲೆಗಳೊಂದಿಗೆ ಮಾತನಾಡಿದ್ದೇವೆ. ಶೀಘ್ರವೇ ಆತ ಶಾಲೆಗೆ ಹೋಗುತ್ತಾನೆ. ಆತನನ್ನು ನಾವು ನೋಡಿಕೊಳ್ಳುತ್ತೇವೆ. ಅವರ ಭವಿಷ್ಯ ಚೆನ್ನಾಗಿರಬೇಕು" ಎಂದು ಠಾಣಾಧಿಕಾರಿ ಸಾಗರ್ ಬೆಂಬಲ ನೀಡುತ್ತಾರೆ. "ಮೂರು ತಿಂಗಳ ಹಿಂದೆ ಒಂದು ದೂರು ನೀಡಲು ಇವನ ತಾಯಿ ಬಂದಿದ್ದರು. ಅದೇ ಮೊದಲ ಬಾರಿ ಅವರನ್ನು ನೋಡಿದ್ದು. ಅವರ ಆರೋಗ್ಯ ಸರಿಯಿರಲಿಲ್ಲ. ಅವರನ್ನು ಜಿಲ್ಲಾಸ್ಪತ್ರೆಗೆ ಸೇರಿಸಿದೆವು. ಈ ಹುಡುಗ ಆನಂತರ ಒಂಟಿಯಾದ. ಆದ್ದರಿಂದ ಇವನನ್ನು ನಾವೆಲ್ಲಾ ಸೇರಿ ಸಾಕಲು ನಿರ್ಧರಿಸಿದೆವು" ಎಂದು ಹೇಳುತ್ತಾರೆ ಮತ್ತೊಬ್ಬ ಸಿಬ್ಬಂದಿ.
ಈಚೆಗೆ ಅನ್ಮೋಲ್ ತನ್ನ ಹುಟ್ಟು ಹಬ್ಬವನ್ನು ಪೊಲೀಸ್ ಠಾಣೆಯಲ್ಲಿ ಆಚರಿಸಿಕೊಂಡಿದ್ದಾನೆ. ಸಿಬ್ಬಂದಿ ಜೊತೆ ಅನ್ಮೋಲ್ ಕೇಕ್ ಕತ್ತರಿಸಿ ಸಂಭ್ರಮಿಸಿದ ವಿಡಿಯೋ ವೈರಲ್ ಆಗಿದ್ದು, ಆನಂತರ ಈ ಸಂಗತಿ ಬೆಳಕಿಗೆ ಬಂದಿದೆ.












Click it and Unblock the Notifications