Ambati Rayudu: ಸಂಜು ಸ್ಯಾಮ್ಸನ್ ಏನ್ ಅನ್ಯಾಯ ಮಾಡಿದ್ರು?: ಅಂಬಟಿ ರಾಯುಡು
India vs England T20I: ಮ್ಯಾಂಚೆಸ್ಟರ್ನಲ್ಲಿ ಶನಿವಾರ ನಡೆದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ತಂವು ಟೀಮ್ ಇಂಡಿಯಾ ವಿರುದ್ಧ 4 ವಿಕೆಟ್ಗಳಿಂದ ಭರ್ಜರಿ ಗೆಲುವು ಸಾಧಿಸಿತು. ಈ ಮ್ಯಾಚ್ನಲ್ಲಿ ಭಾರತದ ಪ್ಲೇಯಿಂಗ್ 11ನಿಂದ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟು ವೈಭವ್ ಸೂರ್ಯವಂಶಿಗೆ ಅವಕಾಶ ನೀಡಲಾಗಿತ್ತು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಗಳು ಭುಗಿಲೆದ್ದಿದ್ದವು. ಇದರ ಬೆನ್ನಲ್ಲೇ ಇದೀಗ ಮಾಜಿ ಕ್ರಿಕೆಟರ್ ಅಂಬಟಿ ರಾಯುಡು ಪ್ರಕ್ರಿಯಿಸಿ ಅಸಮಾಧಾನ ವ್ಯಕ್ತಪಡಿಸಿದ್ದು, ಸಂಜು ಪರ ಬ್ಯಾಟ್ ಬೀಸಿದ್ದಾರೆ.
ಭಾರತ ತಂಡದ ಇಂಗ್ಲೆಂಡ್ ಪ್ರವಾಸದ ಟಿ20 ಸರಣಿಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರನ್ನು ಪ್ಲೇಯಿಂಗ್ ಇಲೆವೆನ್ನಿಂದ ಕೈಬಿಟ್ಟಿರುವುದು ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಟಗಾರನಿಗೆ ಸತತವಾಗಿ ಅವಕಾಶ ನಿರಾಕರಿಸುತ್ತಿರುವುದರ ವಿರುದ್ಧ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಶ್ವಕಪ್ ಹೀರೋ ಹೊರಗಿಟ್ಟಿರುವ ಬಗ್ಗೆ ಆಕ್ರೋಶ
ಭಾರತ ತಂಡವು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸತತ ಸೋಲುಗಳನ್ನು ಅನುಭವಿಸುತ್ತಿರುವ ಬೆನ್ನಲ್ಲೇ ತಂಡದ ಆಯ್ಕೆ ಪ್ರಕ್ರಿಯೆಯ ಬಗ್ಗೆ ತೀವ್ರ ಟೀಕೆಗಳು ಕೇಳಿಬರುತ್ತಿವೆ. ವಿಶೇಷವಾಗಿ ಇತ್ತೀಚಿನ ಪಂದ್ಯಗಳಲ್ಲಿ ತಂಡದ ಬ್ಯಾಟಿಂಗ್ ವೈಫಲ್ಯ ಎದ್ದುಕಾಣುತ್ತಿದ್ದರೂ ಫಾರ್ಮ್ನಲ್ಲಿರುವ ಸಂಜು ಸ್ಯಾಮ್ಸನ್ ಅವರನ್ನು ಬೆಂಚ್ ಕಾಯಿಸಿರುವ ನಿರ್ಧಾರದ ವಿರುದ್ಧ ಮಾಜಿ ಆಟಗಾರರು ಧ್ವನಿ ಎತ್ತಿದ್ದಾರೆ.
ಅಂಬಟಿ ರಾಯುಡು ಹೇಳಿದ್ದೇನು?
ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು, 'ನಾವು ಸಂಜು ಸ್ಯಾಮ್ಸನ್ ಅವರ ಪರಿಸ್ಥಿತಿಯ ಬಗ್ಗೆ ಸ್ವಲ್ಪ ಯೋಚಿಸಬೇಕಾಗಿದೆ. ಕೇವಲ ಕೆಲವು ತಿಂಗಳುಗಳ ಹಿಂದಷ್ಟೇ ವಿಶ್ವಕಪ್ ಗೆಲುವಿನ ಸಂಭ್ರಮದಲ್ಲಿದ್ದ ಆಟಗಾರನಿಗೆ ಪ್ರಸ್ತುತ ಸರಣಿಯಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುತ್ತಿಲ್ಲ ಎಂಬುದನ್ನ ನಂಬಲು ಸಾಧ್ಯವಾಗುತ್ತಿಲ್ಲ. ಭಾರತ ತಂಡವು ಸತತವಾಗಿ ಬ್ಯಾಟಿಂಗ್ ಸಂಯೋಜನೆಯಲ್ಲಿ ಪ್ರಯೋಗಗಳನ್ನು ಮಾಡುತ್ತಿದ್ದರೂ, ಸ್ಯಾಮ್ಸನ್ಗೆ ಮಾತ್ರ ನಿರಂತರವಾಗಿ ಅನ್ಯಾಯವಾಗುತ್ತಿದೆ,' ಎಂದು ಬೇಸರ ಹೊರಹಾಕಿದ್ದಾರೆ.
ಎಡಗೈ ಬ್ಯಾಟರ್ಗಳಿಗೆ ಆದ್ಯತೆ ಆರೋಪ
ಸಂಜು ಸ್ಯಾಮ್ಸನ್ ಕಳೆದ ಕೆಲವು ಸರಣಿಗಳಲ್ಲಿ ಹಾಗೂ ದೇಶಿ ಟಿ20 ಕ್ರಿಕೆಟ್ ಮತ್ತು ಐಪಿಎಲ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬಂದು ಸ್ಫೋಟಕವಾಗಿ ಬ್ಯಾಟಿಂಗ್ ಮಾಡಬಲ್ಲ ಸಾಮರ್ಥ್ಯ ಅವರಲ್ಲಿದೆ. ಆದರೆ ಭಾರತೀಯ ಟೀಮ್ ಮ್ಯಾನೇಜ್ಮೆಂಟ್ ಇಶಾನ್ ಕಿಶನ್ ಅಥವಾ ಇತರ ಎಡಗೈ ಬ್ಯಾಟಿಂಗ್ ಆಯ್ಕೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಸ್ಯಾಮ್ಸನ್ ತಂಡದಿಂದ ಹೊರಗುಳಿಯಬೇಕಾಗಿ ಬಂದಿದೆ.
ಮ್ಯಾನೇಜ್ಮೆಂಟ್ ನಿರ್ಧಾರದ ವಿರುದ್ಧ ಆಕ್ರೋಶ
'ಒಬ್ಬ ಆಟಗಾರ ಅತ್ಯುತ್ತಮ ಫಾರ್ಮ್ನಲ್ಲಿದ್ದಾಗಲೂ ಮತ್ತು ತಂಡವು ಸತತವಾಗಿ ಸೋಲನ್ನು ಅನುಭವಿಸುತ್ತಿರುವಾಗಲೂ ಆತನಿಗೆ ಅವಕಾಶ ನೀಡದಿರುವುದು ಆತನ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಸಂಜು ಸ್ಯಾಮ್ಸನ್ ಭಾರತ ತಂಡಕ್ಕಾಗಿ ತಮಗೆ ಸಿಕ್ಕ ಕಡಿಮೆ ಅವಕಾಶಗಳಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಆದರೂ ಅವರನ್ನು ಪದೇ ಪದೇ ನಿರ್ಲಕ್ಷಿಸುತ್ತಿರುವುದು ಸರಿಯಾದ ಕ್ರಮವಲ್ಲ,' ಎಂದು ಮ್ಯಾನೇಜ್ಮೆಂಟ್ ನಿರ್ಧಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸಂಜು ಪರ ನಿಂತ ನೆಟ್ಟಿಗರು, ಅಭಿಮಾನಿಗಳು
ಸಾಮಾಜಿಕ ಜಾಲತಾಣಗಳಲ್ಲೂ ಸಂಜು ಸ್ಯಾಮ್ಸನ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. 'ಭಾರತ ತಂಡದ ಇತ್ತೀಚಿನ ಬ್ಯಾಟಿಂಗ್ ವೈಫಲ್ಯಕ್ಕೆ ಮಧ್ಯಮ ಕ್ರಮಾಂಕದಲ್ಲಿ ಸ್ಥಿರತೆ ಇಲ್ಲದಿರುವುದೇ ಕಾರಣ. ಹಾಗಾಗಿ ಸ್ಯಾಮ್ಸನ್ ಅವರಂತಹ ಅನುಭವವಿರುವ ಮತ್ತು ಸ್ಪಿನ್ನರ್ಗಳನ್ನು ಸಮರ್ಥವಾಗಿ ಎದುರಿಸಬಲ್ಲ ಬ್ಯಾಟರ್ ತಂಡಕ್ಕೆ ಅತ್ಯಗತ್ಯ,' ಎಂದು ನೆಟ್ಟಿಗರ ವಾದವಾಗಿದೆ.
ಇಂಗ್ಲೆಂಡ್ ವಿರುದ್ಧದ ಸರಣಿ ಕೈಜಾರುವ ಭೀತಿಯಲ್ಲಿರುವ ಭಾರತ ತಂಡವು ಮುಂಬರುವ ಪಂದ್ಯಗಳಲ್ಲಾದರೂ ಸಂಜು ಸ್ಯಾಮ್ಸನ್ ಅವರಿಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಕಲ್ಪಿಸುತ್ತದೆಯೇ ಅಥವಾ ಹಳೆಯ ಬ್ಯಾಟಿಂಗ್ ಸಂಯೋಜನೆಯನ್ನೇ ಮುಂದುವರಿಸುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ. ಒಟ್ಟಿನಲ್ಲಿ ಇದೀಗ ಆಟಗಾರರ ಆಯ್ಕೆಯೇ ಇದೀಗ ಮ್ಯಾನೇಜ್ಮೆಂಟ್ಗೆ ದೊಡ್ಡ ತಲೆನೋವಾಗಿರುವುದಂತೂ ನಿಜ.












Click it and Unblock the Notifications