ಮುದ್ದೇಬಿಹಾಳ-ಮಂತ್ರಾಲಯ ನಡುವೆ ಕೆಕೆಆರ್ಟಿಸಿ ಬಸ್ ಸೇವೆ, ಇಲ್ಲಿದೆ ಮಾರ್ಗಗಳ ವಿವರ
KKRTC: ಕೆಎಸ್ಆರ್ಟಿಸಿಯು ಪ್ರಯಾಣಿಕರ ಬೇಡಿಕೆ ಹಾಗೂ ಅನುಕೂಲಕ್ಕೆ ತಕ್ಕಂತೆ ಹೆಚ್ಚುವರಿ ಬಸ್ಗಳನ್ನು ಒದಗಿಸುತ್ತಲಿರುತ್ತದೆ. ಹಾಗೆಯೇ ಇದೀಗ ಕಲ್ಯಾಣ ಕರ್ನಾಟಕ ಸಾರಿಗೆಯಾದ ಕೆಕೆಆರ್ಟಿಸಿ ಮುದ್ದೇಬಿಹಾಳ - ಮಂತ್ರಾಲಯಕ್ಕೆ ಬಸ್ ವ್ಯವಸ್ಥೆಯನ್ನು ಕಲ್ಪಿಸಿದೆ. ಹಾಗಾದ್ರೆ ಯಾವೆಲ್ಲಾ ಮಾರ್ಗಗಳಲ್ಲಿ ಈ ಬಸ್ ಸಂಚರಿಸಲಿದೆ ಎನ್ನುವ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಮತ್ತು ಸುತ್ತಮುತ್ತಲಿನ ಗ್ರಾಮೀಣ ಭಾಗದ ಸಾರ್ವಜನಿಕರ ಬಹುದಿನಗಳ ಕನಸು ಈಡೇರಿದೆ. ಈ ಭಾಗದ ಜನರ ಬಹುಬೇಡಿಕೆಯಾಗಿದ್ದ ಮುದ್ದೇಬಿಹಾಳ-ರಾಯಚೂರು-ಮಂತ್ರಾಲಯ ನಡುವಿನ ನೂತನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಸೇವೆಗೆ ಅಧಿಕೃತವಾಗಿ ಚಾಲನೆ ದೊರೆತಿದೆ.

ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಅಭಿನಂದನೆ
ನೂತನ ಮಾರ್ಗದಲ್ಲಿ ಸಂಚಾರ ಆರಂಭಿಸಿ ಕಕ್ಕೇರಾ ಪಟ್ಟಣಕ್ಕೆ ಪ್ರಥಮ ಬಾರಿಗೆ ಆಗಮಿಸಿದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಗೆ ಸ್ಥಳೀಯರು ಭವ್ಯ ಸ್ವಾಗತ ಕೋರಿದರು. ಶನಿವಾರ ಬೆಳಗ್ಗೆ ಪಟ್ಟಣಕ್ಕೆ ಆಗಮಿಸಿದ ನೂತನ ಬಸ್ನ ಚಾಲಕ ಮತ್ತು ನಿರ್ವಾಹಕರನ್ನು ವಿವಿಧ ಸಾಮಾಜಿಕ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೂಮಾಲೆ ಹಾಕಿ, ಸಿಹಿ ಹಂಚಿ ಅತ್ಯಂತ ಆತ್ಮೀಯವಾಗಿ ಸನ್ಮಾನಿಸಿದರು. ಗ್ರಾಮೀಣ ಭಾಗದ ಸಾರಿಗೆ ಅಗತ್ಯತೆಯನ್ನು ಮನಗಂಡು ಹೊಸ ಬಸ್ ಸೌಕರ್ಯ ಕಲ್ಪಿಸಿದ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಮುಖಂಡರು ಅಭಿನಂದನೆ ಸಲ್ಲಿಸಿದರು ಎಂದು ಸುವರ್ಣ ನ್ಯೂಸ್ ವರದಿ ಮಾಡಿದೆ.
ಬಸ್ ಸಂಚರಿಸುವ ಪ್ರಮುಖ ಮಾರ್ಗಗಳು
* ಮುದ್ದೇಬಿಹಾಳ
* ತಾಳಿಕೋಟಿ
* ಹುಣಸಗಿ
* ಕಕ್ಕೇರಾ
* ತಿಂಥಣಿ
* ಜಾಲಹಳ್ಳಿ
* ದೇವದುರ್ಗ ಮಾರ್ಗವಾಗಿ ರಾಯಚೂರು ಹಾಗೂ ಪ್ರಸಿದ್ಧ ಪುಣ್ಯಕ್ಷೇತ್ರವಾದ ಮಂತ್ರಾಲಯಕ್ಕೆ ತಲುಪಲಿದೆ.
ಸಾರಿಗೆ ಸಂಸ್ಥೆಯ ಈ ಮಹತ್ವದ ನಿರ್ಧಾರಕ್ಕೆ ಮೆಚ್ಚುಗೆ
ಈ ಸಂದರ್ಭದಲ್ಲಿ ಮಾತನಾಡಿದ ಮಖಂಡರೊಬ್ಬರು, 'ಮುದ್ದೇಬಿಹಾಳ ಮತ್ತು ಮಂತ್ರಾಲಯ ನಡುವೆ ನಿರಂತರವಾಗಿ ಸಂಚರಿಸುವ ಕಾಲೇಜು ವಿದ್ಯಾರ್ಥಿಗಳು, ದಿನಗೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಮಹಿಳಾ ಉದ್ಯೋಗಿಗಳು ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವ ಭಕ್ತಾದಿಗಳಿಗೆ ಈ ಹೊಸ ಬಸ್ ಸೌಲಭ್ಯದಿಂದಾಗಿ ಅಲೆದಾಟ ತಪ್ಪಲಿದ್ದು, ಹೆಚ್ಚಿನ ಅನುಕೂಲ ಆಗಲಿದೆ. ಸಾರಿಗೆ ಸಂಸ್ಥೆಯ ಈ ಮಹತ್ವದ ನಿರ್ಧಾರ ನಿಜಕ್ಕೂ ಶ್ಲಾಘನೀಯ,' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸುರಕ್ಷಿತ ಹಾಗೂ ಸುಲಭ ಪ್ರಯಾಣಕ್ಕಾಗಿ ಕಕ್ಕೇರಾ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಹಾಗೂ ಪ್ರಯಾಣಿಕರು ಈ ನೂತನ ಬಸ್ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕಾಗಿ ಸ್ಥಳೀಯ ಮುಖಂಡರು ಹಾಗೂ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಸಾರಿಗೆ ಸಂಸ್ಥೆಯು ಒದಗಿಸಿರುವ ಈ ಸೌಲಭ್ಯವನ್ನು ಕಕ್ಕೇರಾ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಗರಿಷ್ಠ ಪ್ರಮಾಣದಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಪ್ರತಿಕ್ರಿಯೆಯನ್ನು ಆಧರಿಸಿ ಈ ಮಾರ್ಗದಲ್ಲಿ ಹೆಚ್ಚಿನ ಬಸ್ಗಳನ್ನು ಬಿಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.












Click it and Unblock the Notifications