SIR ಪ್ರಕ್ರಿಯೆ: ನಮ್ಮದೂ ಪ್ರತಿಭಟನೆ ಇದೆ: ವಿಪಕ್ಷಗಳಿಗೆ ಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ
ಬೆಂಗಳೂರು, ಜು 05: ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಮನೆ ಮನೆಗೆ ತೆರಳದೇ ಎಲ್ಲೋ ಒಂದು ಕಡೆ ಕುಳಿತು ಈ ಕೆಲಸ ಮಾಡಲಾಗುತ್ತಿದೆ ಎಂದು ವಿಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದವು. ಈ ಕುರಿತು ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ ತಿರುಗೇಟು ನೀಡುವ ಕೆಲಸವನ್ನು ಮಾಡಿದ್ದಾರೆ.
'ವಿರೋಧ ಪಕ್ಷದವರಿಗೆ ಅರೋಪ ಮಾಡುವುದೇ ಕೆಲಸ' ಎಂದು ಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ರಾಜ್ಯಸಭೆ ವಿರೋಧ ಪಕ್ಷದ ನಾಯಕರು ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಭಾನುವಾರ (ಜುಲೈ 05) ಪ್ರತಿಕ್ರಿಯೆ ನೀಡಿದರು.

ನಮ್ಮದೂ ಪ್ರತಿಭಟನೆ ಇದೆ ಎಂದ ಸಿಎಂ
ಎಸ್ಐಆರ್ ಪ್ರಕ್ರಿಯೆಯನ್ನು ನಿಯಮಾನುಸಾರ ಮನೆ ಮನೆಗೆ ಹೋಗಿ ನಡೆಸದೇ, ಒಂದೇ ಕಡೆ ಕುಳಿತು ಮಾಡಲಾಗುತ್ತಿದೆ ಎಂದು ವಿಪಕ್ಷಗಳು ಮಾಡುತ್ತಿರುವ ಆರೋಪದ ಕುರಿತು ಮಾಧ್ಯಮದವರು ಪ್ರಶ್ನಿಸಿದಾಗ ಡಿ.ಕೆ. ಶಿವಕುಮಾರ್ ಅವರು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದರು.
'ವಿರೋಧ ಪಕ್ಷಗಳ ಕೆಲಸವೇ ಆರೋಪ ಮಾಡುವುದು. ನಮ್ಮ ಸರ್ಕಾರದ ವತಿಯಿಂದ ನಾವು ಎಲ್ಲರಿಗೂ ನ್ಯಾಯ ಒದಗಿಸಿಕೊಡಬೇಕು ಹಾಗೂ ಎಲ್ಲರೂ ತಮ್ಮ ಮತದಾನದ ಹಕ್ಕು ಉಳಿಸಿಕೊಳ್ಳಿ ಎಂದು ಮನವಿ ಮಾಡಿದ್ದೇವೆ. ನಮ್ಮದೂ ಪ್ರತಿಭಟನೆ ಇದೆ. ಅದನ್ನು ನ್ಯಾಯಬದ್ಧವಾಗಿ ಪ್ರತಿಭಟಿಸಬೇಕೋ ಪ್ರತಿಭಟಿಸುತ್ತೇವೆ,' ಎಂದು ತಿಳಿಸಿದರು.
ನ್ಯಾಯಬದ್ಧ ಪ್ರತಿಭಟನೆಯ ಎಚ್ಚರಿಕೆ
ಇದೇ ಸಂದರ್ಭದಲ್ಲಿ ವಿರೋಧ ಪಕ್ಷಗಳ ನಡೆ ಹಾಗೂ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಮಾತನಾಡಿದ ಅವರು, 'ನಮ್ಮದೂ ಕೂಡ ಪ್ರತಿಭಟನೆ ಹಾಗೂ ಆಕ್ಷೇಪಣೆಗಳು ಇವೆ. ನಮ್ಮ ಹಕ್ಕುಗಳಿಗಾಗಿ ನಾವು ಎಲ್ಲೇ ಆದರೂ ನ್ಯಾಯಬದ್ಧವಾಗಿಯೇ ಪ್ರತಿಭಟಿಸುತ್ತೇವೆ. ಅದನ್ನು ಹೇಗೆ ಮತ್ತು ಎಲ್ಲಿ ಪ್ರತಿಭಟಿಸಬೇಕೋ ಹಾಗೆ ಪ್ರತಿಭಟಿಸಿ ನಮ್ಮ ನಿಲುವನ್ನು ಸ್ಪಷ್ಟಪಡಿಸುತ್ತೇವೆ,' ಎಂದು ವಿಪಕ್ಷಗಳಿಗೆ ಎಚ್ಚರಿಕೆ ನೀಡಿದರು.
ಎಸ್ಐಆರ್ ಪ್ರಕ್ರಿಯೆ ವಿವರ
ಕರ್ನಾಟಕ ಚುನಾವಣೆ ಆಯೋಗವು ಮತದಾರರ ಪಟ್ಟಿಯ ಪರಿಷ್ಕರಣೆಗಾಗಿ ಎಸ್ಐಆರ್ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಪ್ರಕ್ರಿಯೆಯ ಭಾಗವಾಗಿ ಪ್ರತಿಯೊಬ್ಬ ಮತದಾರರು ತಮ್ಮ 'ಎನ್ಯುಮರೇಷನ್ ಫಾರ್ಮ್' ಅನ್ನು ಭರ್ತಿ ಮಾಡುವುದು ಕಡ್ಡಾಯವಾಗಿದೆ. ಹಾಗಾದ್ರೆ ಆನ್ಲೈನ್ ಅಥವಾ ಆಫ್ಲೈನ್ನಲ್ಲಿ ಈ ಫಾರ್ಮ್ ಅನ್ನು ಹೇಗೆ ಭರ್ತಿ ಮಾಡಬೇಕು ಎಂಬುದನ್ನ ಇಲ್ಲಿ ತಿಳಿಯಿರಿ.
ಆನ್ಲೈನ್ನಲ್ಲಿ ಫಾರ್ಮ್ ಭರ್ತಿ ಮಾಡುವುದು ಹೇಗೆ?
* ಆನ್ಲೈನ್ನಲ್ಲಿ ಫಾರ್ಮ್ ಸಲ್ಲಿಸಲು ನಿಮ್ಮ ಮತದಾರರ ಗುರುತಿನ ಚೀಟಿಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವುದು ಮತ್ತು ಆಧಾರ್ ಕಾರ್ಡ್ನಲ್ಲಿರುವ ಹೆಸರು ಹಾಗೂ ವೋಟರ್ ಐಡಿಯಲ್ಲಿರುವ ಹೆಸರು ಒಂದಕ್ಕೊಂದು ಹೊಂದಾಣಿಕೆಯಾಗುವುದು ಕಡ್ಡಾಯವಾಗಿದೆ.
* ಮೊದಲು ಭಾರತೀಯ ಚುನಾವಣೆ ಆಯೋಗದ ಅಧಿಕೃತ ನಾಗರಿಕ ಸೇವ ಪೋರ್ಟಲ್ (https://voters.eci.gov.in/) ವೆಬ್ಸೈಟ್ಗೆ ಭೇಟಿ ನೀಡಿ.
* ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ನಂತರ ಒಟಿಪಿ ಸಹಾಯದಿಂದ ಲಾಗಿನ್ ಅಥವಾ ಸೈನ್-ಅಪ್ ಪ್ರಕ್ರಿಯೆ ಪೂರ್ಣಗೊಳಿಸಿ.
* ಹೋಮ್ ಪೇಜ್ನಲ್ಲಿ ಕಾಣಿಸುವ 'Fill Enumeration Form' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿ, ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ನಮೂದಿಸಿ ಸರ್ಚ್ ಮಾಡಿ. ಆಗ ನಿಮ್ಮ ಹಳೆಯ ವಿವರಗಳು ಕಾಣಿಸುತ್ತವೆ.
* ಕಳೆದ ಎಸ್ಐಆರ್ (2002-2004) ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಮೊದಲ ಆಯ್ಕೆ ಮಾಡಿ.
* ನಿಮ್ಮ ಹೆಸರು ಇಲ್ಲದೆ ಹೆತ್ತವರ ಹೆಸರು ಇದ್ದರೆ ಆ ವಿವರಗಳನ್ನು ನೀಡಿ.
* ನಿಮ್ಮ ಅಥವಾ ಹೆತ್ತವರ ಇಬ್ಬರ ಹೆಸರೂ ಹಳೆಯ ಪಟ್ಟಿಯಲ್ಲಿ ಇಲ್ಲದಿದ್ದರೆ ಮೂರನೇ ಆಯ್ಕೆಯನ್ನು ಗುರುತಿಸಿ.
* ವಿವರಗಳನ್ನು ಪರಿಶೀಲಿಸಿದ ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ. ಆಧಾರ್ಗೆ ಲಿಂಕ್ ಆಗಿರುವ ಮೊಬೈಲ್ಗೆ ಬರುವ ಒಟಿಪಿ ಮೂಲಕ ಇ-ಸೈನ್ ದೃಢೀಕರಣ ಮಾಡಿ.
* ಕೊನೆಯದಾಗಿ ಡಿಕ್ಲೆರೇಷನ್ ಬಾಕ್ಸ್ ಕ್ಲಿಕ್ ಮಾಡಿ ಫಾರ್ಮ್ ಸಬ್ಮಿಟ್ ಮಾಡಿ. ನಂತರ ಬರುವ 'ರೆಫರೆನ್ಸ್ ಸಂಖ್ಯೆ'ಯನ್ನು ಭವಿಷ್ಯದ ಟ್ರ್ಯಾಕಿಂಗ್ಗಾಗಿ ಸೇವ್ ಮಾಡಿಟ್ಟುಕೊಳ್ಳಿ.
* ನಿಮ್ಮ ವೋಟರ್ ಐಡಿಗೆ ಮೊಬೈಲ್ ಲಿಂಕ್ ಇಲ್ಲದಿದ್ದರೆ, ಮೊದಲು ಅದೇ ಪೋರ್ಟಲ್ನಲ್ಲಿರುವ 'Form 8' ಭರ್ತಿ ಮಾಡಿ ಮೊಬೈಲ್ ಸಂಖ್ಯೆಯನ್ನು ನವೀಕರಿಸಿಕೊಳ್ಳಬೇಕು.
ಆಫ್ಲೈನ್ನಲ್ಲಿ ಫಾರ್ಮ್ ಭರ್ತಿ ಮಾಡುವುದು ಹೇಗೆ?
* ಆನ್ಲೈನ್ನಲ್ಲಿ ತಾಂತ್ರಿಕ ತೊಂದರೆ ಎದುರಾದರೆ ಅಥವಾ ಆಧಾರ್-ವೋಟರ್ ಐಡಿ ಹೆಸರು ಮ್ಯಾಚ್ ಆಗದಿದ್ದರೆ ಆಫ್ಲೈನ್ನಲ್ಲಿ ಸುಲಭವಾಗಿ ಸಲ್ಲಿಸಬಹುದು.
* ಚುನಾವಣೆ ಆಯೋಗ ನಿಯೋಜಿಸಿರುವ ಬಿಎಲ್ಒ ಅಧಿಕಾರಿಗಳು ನಿಮ್ಮ ಮನೆ ಮನೆಗೆ ಭೇಟಿ ನೀಡಿ ಫಿಸಿಕಲ್ 'ಎನ್ಯುಮರೇಷನ್ ಫಾರ್ಮ್' ಅನ್ನು ನೀಡುತ್ತಾರೆ.
* ಫಾರ್ಮ್ನಲ್ಲಿ ನಿಮ್ಮ ಹೆಸರು, ವೋಟರ್ ಐಡಿ ಸಂಖ್ಯೆ, ಭಾಗದ ಸಂಖ್ಯೆ, ಕ್ರಮ ಸಂಖ್ಯೆ ಮತ್ತು ಕುಟುಂಬದ ಹಳೆಯ ವಿವರಗಳನ್ನು ಸ್ಪಷ್ಟವಾಗಿ ಬರೆಯಿರಿ.
* ಫಾರ್ಮ್ ಜೊತೆಗೆ ನಿಮ್ಮ ಆಧಾರ್ ಕಾರ್ಡ್, ವೋಟರ್ ಐಡಿ ನಕಲು (ಝೆರಾಕ್ಸ್) ಹಾಗೂ ಇಲಾಖೆ ಸೂಚಿಸಿದ ನಿಗದಿತ ದಾಖಲೆಗಳನ್ನು ಒದಗಿಸಿ.
* ಭರ್ತಿ ಮಾಡಿದ ಫಾರ್ಮ್ ಅನ್ನು ನಿಮ್ಮ ಭಾಗದ ಬಿಎಲ್ಒ ಅಧಿಕಾರಿಗೆ ಹಸ್ತಾಂತರಿಸಿ ಅವರಿಂದ ರಸೀದಿ ಪಡೆದುಕೊಳ್ಳಿ.
ನಿಮ್ಮ ಭಾಗದ ಬಿಎಲ್ಒ ಯಾರು ಎಂದು ತಿಳಿಯಲು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ವೆಬ್ಸೈಟ್ಗೆ (CEO Karnataka) ಭೇಟಿ ನೀಡಿ ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡುವ ಮೂಲಕ ಅಧಿಕಾರಿಗಳ ಸಂಪರ್ಕ ಸಂಖ್ಯೆಯನ್ನು ಪಡೆಯಬಹುದು. ಕಳಪೆ ಅಥವಾ ನಕಲಿ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲು ಈ ಪ್ರಕ್ರಿಯೆ ಅತ್ಯಗತ್ಯವಾಗಿದೆ.












Click it and Unblock the Notifications