ಅಂತ್ಯಸಂಸ್ಕಾರಕ್ಕೂ ಅಸಹಾಯಕತೆ; ಸಮಾಜಸೇವಕರ ಮಾನವೀಯತೆ
ಉಡುಪಿ, ಫೆಬ್ರವರಿ 08; ಉಡುಪಿ ಜಿಲ್ಲೆಯಲ್ಲಿ ಸಮಾಜ ಸೇವಾ ಕಾರ್ಯಕ್ಕೆ ಮುಂಚೂಣಿಯಲ್ಲಿರುವ ಇರುವ ಹೆಸರು ಜಿಲ್ಲಾ ನಾಗರಿಕ ಸಮಿತಿ. ಸಮಿತಿಯ ಸದಸ್ಯರಾದ ನಿತ್ಯಾನಂದ ಒಳಕಾಡು ಮತ್ತು ತಾರಾನಾಥ್ ಮೇಸ್ತ ದಿನದ 24 ಗಂಟೆಯೂ ಬಡಜನರ, ಶೋಷಿತರ, ನಿರ್ಗತಿಕರ ಮತ್ತು ರೋಗಿಗಳ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಜಿಲ್ಲಾ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು ಮತ್ತು ತಾರಾನಾಥ ಮೇಸ್ತ ಉಡುಪಿಯಲ್ಲಿ ಈ ತನಕ ನೂರಕ್ಕೂ ಹೆಚ್ಚು ಅಸಹಾಯಕರ, ನಿರ್ಗತಿಕರ ಶವಸಂಸ್ಕಾರ ಮಾಡಿದ್ದಾರೆ.
ಬೇರೆ-ಬೇರೆ ರೀತಿಯಲ್ಲಿ ಸಮಾಜ ಸೇವೆ ಮಾಡಿ ಪ್ರಚಾರ ಬಯಸುವ ಮಂದಿ ನಮ್ಮಲ್ಲಿದ್ದಾರೆ. ಆದರೆ ಒಂದು ಜೀವಕ್ಕೆ ಗೌರವಯುತ ಅಂತ್ಯಸಂಸ್ಕಾರ ಮಾಡುವುದು ನಿಜವಾದ ಸಮಾಜ ಸೇವೆ. ಇದನ್ನು ಎಲ್ಲರಿಂದಲೂ ಮಾಡಲು ಸಾಧ್ಯವಿಲ್ಲ. ಇಂತಹದ್ದೊಂದು ಕಾರ್ಯವನ್ನು ಅತ್ಯಂತ ಶ್ರದ್ಧೆಯಿಂದ ಮಾಡಿ ಅನೇಕರ ಕಣ್ಣೀರು ಒರೆಸಿದೆ ಈ ಜೋಡಿ.

ನಿನ್ನೆ ಹೆದ್ದಾರಿ ಬದಿಯ ವಿಭಾಜಕದಲ್ಲಿ ಮೃತಪಟ್ಟು ಅಸಹಾಯಕ ಸ್ಥಿತಿಯಲ್ಲಿದ್ದ ಮೃತದೇಹವನ್ನು ಇಂದು ಈ ಜೋಡಿ ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದೆ. ಮೃತ ಯುವಕ ಅಕ್ಷತ್ (28) ನಗರಸಭೆ ವಾರ್ಡುಗಳಲ್ಲಿ ಮನೆಯಿಂದ ಕಸ ಸಂಗ್ರಹಿಸುವ ಗುತ್ತಿಗೆದಾರರ ಸಂಗಡ ಕೆಲಸ ನಿರ್ವಹಿಸುತ್ತಿದ್ದ.
ಮೃತ ಯುವಕನ ಪರಿಸರ ಸ್ವಚ್ಛತಾ ಪ್ರಾಮಾಣಿಕ ಕಾರ್ಯವು ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ, ಮಗನ ಅಂತ್ಯಸಂಸ್ಕಾರ ನಡೆಸಲು ಹೆತ್ತವರಿಗೆ ಅಸಹಾಯಕತೆ ಎದುರಾಗಿತ್ತು. ಇದನ್ನು ಅರಿತ ನಿತ್ಯಾನಂದ ಒಳಕಾಡು ಮತ್ತು ತಾರಾನಾಥ ಮೇಸ್ತ ಅಂತಿಮ ಸಂಸ್ಕಾರ ನಡೆಸಿಕೊಟ್ಟರು.
ನಿಟ್ಟೂರು ರಾಷ್ಟ್ರೀಯ ಹೆದ್ದಾರಿ ವಿಭಾಜಕದ ದಂಡೆಯ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಈ ಯುವಕನನ್ನು ಇವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ಅದಗಾಲೇ ಯುವಕ ಮೃತಪಟ್ಟಿದ್ದ. ಶವವನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿ ಇಡಲಾಗಿತ್ತು.
ಸಮಾಜಸೇವಕರು ಅಪರಿಚಿತ ಯುವಕನ ಸಂಬಂಧಿಕರನ್ನು ಪತ್ತೆ ಹಚ್ಚಲು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ವಿಷಯ ತಿಳಿದು ಯುವಕನ ಹೆತ್ತವರಾದ ಕಾರ್ಕಳ ರಂಗನಪಲ್ಕೆ ಭೋಜ ಪೂಜಾರಿ, ಲೀಲಾ ಪೂಜಾರಿ ಅವರು ಸಂಬಂಧಿಕರೊಂದಿಗೆ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಿ ಶವ ನೋಡಿ ಗುರುತಿಸಿದರು.
ಕಾನೂನು ಪ್ರಕ್ರಿಯೆಗಳು ನಡೆದು ಮಗನ ಶವ ಪಡೆದುಕೊಂಡಿರುವ ಹೆತ್ತವರಿಗೆ, ಅಂತ್ಯಸಂಸ್ಕಾರ ನಡೆಸಲು ಅಸಹಾಯಕ ಪರಿಸ್ಥಿತಿ ಎದುರಾಯಿತು. ತಕ್ಷಣ ಸ್ಪಂದಿಸಿದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಬೀಡಿನಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲು ನೆರವಾದರು. ಇವರಿಗೆ ಅಣ್ಣಪ್ಪ ಪೂಜಾರಿ ಕರಂಬಳ್ಳಿ, ಸುಶೀಲಾ ರಾವ್ ಉಡುಪಿ ಆರ್ಥಿಕ ನೆರವು ನೀಡಿ ಸಹಕರಿಸಿದರು.











Click it and Unblock the Notifications