ಚಾಲಕರ ಮೇಲಿನ ಒತ್ತಡವೇ BMTC ಅಪಘಾತಗಳಿಗೆ ಕಾರಣ, ರಜೆಗೂ ಲಂಚ ಕೊಡಬೇಕು; ಆರ್ ಅಶೋಕ್
ಬೆಂಗಳೂರು: ಬೆಂಗಳೂರು ರಸ್ತೆಗುಂಡಿ, ರಸ್ತೆ ಮೂಲಸೌಕರ್ಯ ಸಮಸ್ಯೆ, ಸಂಚಾರ ದಟ್ಟಣೆ ನಿತ್ಯವು ಅನುಭವಿಸುವಂತಾಗಿದೆ. ಇದರ ಮಧ್ಯೆ ಜನರ ಸಂಚಾರ ಸೇವೆ ನೀಡುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ಗಳು ಕಳೆದ ಮೂರು ವರ್ಷಗಳಲ್ಲಿ ಸುಮಾರು 150 ಅಮಾಯಕರ ಜೀವ ಬಲಿ ಪಡೆದಿವೆ. ಇದು ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ದೂರಿರುವ ವಿಪಕ್ಷ ನಾಯಕ ಆರ್.ಅಶೋಕ್ ಚಾಲಕ ಪರಿಸ್ಥಿತಿ, ರಜೆ ಬೇಕಾದರೆ ನೌಕರರು ಲಂಚ ಕೊಡಬೇಕು ಎಂದೆಲ್ಲ ಗಂಭೀರ ಆರೋಪ ಮಾಡಿ ಸರ್ಕಾರದ ಆಡಳಿತ ಟೀಕಿಸಿದ್ದಾರೆ.
ಎಕ್ಸ್ ಖಾತೆಯಲ್ಲಿ ಬಿಎಂಟಿಸಿ ಅಪಘಾತ ವರದಿ ಪೋಸ್ಟ್ ಮಾಡಿರುವ ಆರ್.ಅಶೋಕ್, 'ಜನಸಾಮಾನ್ಯರ ಜೀವಕ್ಕೆ ಬೆಲೆಯೇ ಇಲ್ಲವೇ? 3 ವರ್ಷಗಳಲ್ಲಿ ಬಿಎಂಟಿಸಿ ಬಸ್ಗಳಿಗೆ 150 ಅಮಾಯಕರು ಬಲಿ! ಇದು ಕಾಂಗ್ರೆಸ್ ಸರ್ಕಾರದ ಸಾಧನೆ?' ಎಂದು ಶಿರ್ಷಿಕೆ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ರಾಜ್ಯ ಸಾರಿಗೆ ಸಚಿವ ಬೈರತಿ ಸುರೇಶ್ ಅವರನ್ನು ಟ್ಯಾಗ್ ಮಾಡಿ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುವ ಬಿಎಂಟಿಸಿ ಬಸ್ಸುಗಳು ಈಗ ಸಾರ್ವಜನಿಕರ ಪಾಲಿಗೆ ಯಮಸ್ವರೂಪಿಯಾಗಿ ಬದಲಾಗಿವೆ. ಬರೋಬ್ಬರಿ 150 ಕ್ಕೂ ಹೆಚ್ಚು ಅಮಾಯಕ ಜೀವಗಳು ಕಳೆದ ಕೇವಲ 3 ವರ್ಷಗಳಲ್ಲಿ ಬಸ್ ಅಪಘಾತಗಳಲ್ಲಿ ಉರಿಸುಚೆಲ್ಲಿವೆ. ಸರ್ಕಾರಕ್ಕೆ ಈ ಬಗ್ಗೆ ಕನಿಷ್ಠ ನೈತಿಕ ಜವಾಬ್ದಾರಿ ಇಲ್ಲವೇ?. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸಾರಿಗೆ ಸಚಿವ ಬೈರತಿ ಸುರೇಶ್ ಅವರೇ, ಇಷ್ಟೊಂದು ದೊಡ್ಡ ಪ್ರಮಾಣದ ಸಾವು-ನೋವುಗಳಿಗೆ ಯಾರು ಹೊಣೆ? ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಚಾಲಕರ ಮೇಲೆ ಅತಿಯಾದ ಒತ್ತಡವೇ ಕಾರಣ
ಬೆಂಗಳೂರಿನಲ್ಲಿ ನಿತ್ಯವು ಟ್ರಾಫಿಕ್ ಕಿರಿಕಿರಿ ಹೆಚ್ಚಿರುತ್ತದೆ. ಇದರ ಮಧ್ಯೆ 10 ಕಿಲೋ ಮೀಟರ್ ಕ್ರಮಿಸಲು 1 ಗಂಟೆ ಬೇಕಿರುವಾಗ, ಇಲಾಖೆಯ ಅಧಿಕಾರಿಗಳು ಕೇವಲ 30 ನಿಮಿಷದ ಗಡುವು ನೀಡಿ ಚಾಲಕರನ್ನು ಜೀವದ ಹಂಗು ತೊರೆದು ಓಡಿಸುವಂತೆ ಒತ್ತಡ ಹೇರುತ್ತಿದ್ದಾರೆ. ನಿಮ್ಮ ಈ ಅವೈಜ್ಞಾನಿಕ ನಿಯಮಗಳಿಂದಾಗಿ ಚಾಲಕರು ಚಾಲಕರು ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ. ಈ ಒತ್ತಡವೇ ಬಿಎಂಟಿಸಿ ರಸ್ತೆ ಅಪಘಾತಗಳಿಗೆ ಕಾರಣವಾಗಿದೆ ಎಂದು ಅವರು ದೂರಿದರು.
ಭ್ರಷ್ಟಾಚಾರ: ನೌಕರರು ರಜೆಗೂ ಲಂಚ ನೀಡಬೇಕು!
ಬಿಎಂಟಿಸಿ ಸಂಸ್ಥೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಯಾವ ಮಟ್ಟಕ್ಕೆ ಎಂದರೆ, ನೌಕರರು ಅನಾರೋಗ್ಯದ ಕಾರಣಕ್ಕೆ ಒಂದು ದಿನ ರಜೆ ಕೇಳಿದರೂ ಡಿಪೋ ಮ್ಯಾನೇಜರ್ಗಳಿಗೆ 500 ರೂಪಾಯಿ ಲಂಚ ಕೊಡಬೇಕಾದ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಲಂಚದ ದಂಧೆಯಲ್ಲಿ ಮುಳುಗಿರುವ ಅಧಿಕಾರಿಗಳಿಗೆ ಚಾಲಕರ ಮಾನಸಿಕ ಸ್ಥಿತಿಯಾಗಲಿ, ಸಾರ್ವಜನಿಕರ ಜೀವದ ರಕ್ಷಣೆಯಾಗಲಿ ಬೇಕಾಗಿಲ್ಲ ಎಂದು ಅವರು ಗಂಭೀರ ಆರೋಪ ಮಾಡಿದರು.
ಬಿಎಂಟಿಸಿ ದಿವಾಳಿ..?
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಪ್ರಚಾರದ ಆರ್ಭಟದಲ್ಲಿ ಬಿಎಂಟಿಸಿ ಸಂಸ್ಥೆ ಸಂಪೂರ್ಣವಾಗಿ ದಿವಾಳಿಯಾಗಿದೆ. ಸಾರಿಗೆ ಸಚಿವರು, ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಎಂಡಿ ಯಾರು ಕೂಡ ಡಿಪೋಗಳಿಗೆ ಭೇಟಿ ನೀಡಿ ವಾಸ್ತವ ಪರಿಶೀಲಿಸುತ್ತಿಲ್ಲ. ಕೇವಲ ಕಮಿಷನ್ ದಂಧೆ ಮತ್ತು ವಸೂಲಾತಿಯಲ್ಲೇ ಇಡೀ ಇಲಾಖೆ ಮುಳುಗಿದೆ ಎಂದು ದೂರಿದರು.
ರಸ್ತೆಗೆ ಇಳಿದರೆ ಮನೆಗೆ ಜೀವಂತವಾಗಿ ಮರಳುತ್ತೇವೋ ಇಲ್ಲವೋ ಎಂಬ ಭಯದಲ್ಲಿ ಸಾರ್ವಜನಿಕರು ಬದುಕುತ್ತಿದ್ದಾರೆ. ತಕ್ಷಣವೇ ಈ ಅವೈಜ್ಞಾನಿಕ ನಿಯಮಗಳನ್ನು ಕೈಬಿಟ್ಟು, ಚಾಲಕರ ಮೇಲಿನ ಒತ್ತಡ ಕಡಿಮೆ ಮಾಡಿ ಸಾರ್ವಜನಿಕರ ಜೀವ ರಕ್ಷಣೆಗೆ ಕ್ರಮ ಕೈಗೊಳ್ಳದಿದ್ದರೆ, ಕನ್ನಡಿಗರ ಜೀವ ಕಸಿದುಕೊಳ್ಳುತ್ತಿರುವ ಈ ಸರ್ಕಾರದ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಬಿಎಂಟಿಸಿ ಬಸ್ ಅಪಘಾತಕ್ಕೆ 1,142 ಮಂದಿ ಸಾವು:ಎಎಪಿ
ಬೆಂಗಳೂರು ನಗರದಲ್ಲಿ ಬಿಎಂಟಿಸಿ ಮತ್ತು ಟಾಟಾ ಸಂಸ್ಥೆಯ ನಡುವಿನ 921 ಎಲೆಕ್ಟ್ರಿಕ್ ಬಸ್ಗಳ ಒಪ್ಪಂದದಲ್ಲಿ ಚಾಲಕರನ್ನು ಖಾಸಗಿ ಸಂಸ್ಥೆಯೇ ನೇಮಿಸುತ್ತಿರುವುದು ಸಾರ್ವಜನಿಕ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕಳೆದ 18 ವರ್ಷಗಳಲ್ಲಿ ಬಿಎಂಟಿಸಿ ಬಸ್ ಅಪಘಾತಗಳಲ್ಲಿ 1,142 ಮಂದಿ ಮೃತಪಟ್ಟಿದ್ದಾರೆ. ಟಾಟಾ ಸಂಸ್ಥೆಯ ಒಪ್ಪಂದದ ನಂತರ ಕಳೆದ ಮೂರು ವರ್ಷಗಳಲ್ಲಿ 150 ಜನ ಅಪಘಾತಗಳಲ್ಲಿ ಬಲಿಯಾಗಿದ್ದಾರೆ. ಈ ಎಲ್ಲಾ ಸಾವುಗಳಿಗೆ ಸಂಸ್ಥೆ ಹಾಗೂ ಸರ್ಕಾರವೇ ಹೊಣೆ ಎಂದು ಆಮ್ ಆದ್ಮಿ ಪಕ್ಷ ದೂರಿದೆ.
ಮಾತ್ರವಲ್ಲದೇ ಪ್ರತಿ ಕಿಲೋಮೀಟರ್ಗೆ ಪಾವತಿ ಮಾಡುವ ವ್ಯವಸ್ಥೆಯಿಂದ ಅನವಶ್ಯಕವಾಗಿ ಹೆಚ್ಚು ಟ್ರಿಪ್ಗಳನ್ನು ಮಾಡಿ ಹಣ ಮಾಡುವ ದುರುದ್ದೇಶ ಹೊಂದಿರುವ ಟಾಟಾ ಸಂಸ್ಥೆಯು ಅನನುಭವಿ ಚಾಲಕರುಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದರಿಂದಾಗಿ ಚಾಲಕರುಗಳು ನಗರದಲ್ಲಿ ಅಡ್ಡಾದಿಡ್ಡಿ , ಅಪಾಯಕಾರಿ ಸಂಚಾರ ಮಾಡುತ್ತ ಸಾರ್ವಜನಿಕರ ಜೀವದ ಮೇಲೆ ಚೆಲ್ಲಾಟವಾಡುತ್ತಿದ್ದಾರೆ. ಟಾಟಾ ಸಂಸ್ಥೆಯು ನೇಮಿಸಿಕೊಂಡಿರುವ ಚಾಲಕರ ನೇಮಕಾತಿ, ತರಬೇತಿ ಹಾಗೂ ಕಾರ್ಯನಿರ್ವಹಣೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಎಎಪಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಆಗ್ರಹಿಸಿದ್ದಾರೆ.














Click it and Unblock the Notifications