30 ವರ್ಷಗಳಲ್ಲಿ 3 ಲಕ್ಷ ಗಿಡ ನೆಟ್ಟ ಪರಿಸರ ಪ್ರೇಮಿ ಕಂಡಕ್ಟರ್ಗೊಂದು ಸಲಾಂ
ಚೆನ್ನೈ, ಮಾರ್ಚ್ 07: ತನ್ನೊಂದಿಗಿರುವ ಸಮಾಜಕ್ಕೆ, ನಮ್ಮನ್ನು ಹೊತ್ತಿರುವ ಭೂಮಿಗೆ, ಈ ಪರಿಸರಕ್ಕೆ ನಮ್ಮ ಕೈಯಲ್ಲಾದ ಕೊಡುಗೆ ನೀಡಬೇಕು ಎಂದು ಬಯಸುವ ಕೆಲವೇ ಕೆಲವು ಮಂದಿಯಲ್ಲಿ ತಮಿಳುನಾಡಿನ ಈ ಬಸ್ ಕಂಡಕ್ಟರ್ ಮಾರಿಮುತ್ತು ಯೋಗಾನಾಥನ್ ಕೂಡ ಒಬ್ಬರು.
ಮಾರಿಮುತ್ತು ಯೋಗಾನಾಥನ್ ಅವರದ್ದು ತಮಿಳುನಾಡು ರಾಜ್ಯ ಸಾರಿಗೆ ಇಲಾಖೆಯಲ್ಲಿ ಕಂಡಕ್ಟರ್ ವೃತ್ತಿ. ಆದರೆ ಗಿಡಗಳನ್ನು ಬೆಳೆಸುವುದು ಇವರ ನೆಚ್ಚಿನ ಪ್ರವೃತ್ತಿ. ಇಲ್ಲಿ ಇವರು "ಟ್ರೀ ಮ್ಯಾನ್ ಆಫ್ ಕೊಯಮತ್ತೂರ್" ಎಂದೇ ಪ್ರಸಿದ್ಧಿ. ಗಿಡಗಳನ್ನು ಬೆಳೆಸುತ್ತಾ, ಜನರಿಗೂ ಗಿಡ ಬೆಳೆಸುವುದರ ಮಹತ್ವದ ಕುರಿತು ತಿಳಿವಳಿಕೆ ನೀಡುತ್ತಾ ಸಮಾಜಕ್ಕೆ ಈ ಮೂಲಕ ಕೊಡುಗೆ ನೀಡುತ್ತಿದ್ದಾರೆ. ಅವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಯೋಗಾನಾಥನ್ ಬಗ್ಗೆ ಇನ್ನಷ್ಟು ವಿವರ ಮುಂದಿದೆ...

30 ವರ್ಷಗಳಿಂದ 3 ಲಕ್ಷ ಗಿಡ ನೆಟ್ಟ ಕಂಡಕ್ಟರ್
ಯೋಗಾನಾಥನ್ ಅವರಿಗೆ ಮೊದಲಿನಿಂದಲೂ ಪರಿಸರದತ್ತ ಕಾಳಜಿ ಹೆಚ್ಚು. ಸುಮಾರು ಮೂವತ್ತು ವರ್ಷಗಳಿಂದಲೂ ಗಿಡ ನೆಡುವ ಕಾಯಕವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಇದುವರೆಗು ತಮಿಳುನಾಡಿನಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿದ್ದಾರೆ. ತಾವು ಗಿಡ ಬೆಳೆಸುತ್ತಾ, ಇತರರಿಗೂ ಪರಿಸರ ಕಾಪಾಡುವ ತಿಳಿವಳಿಕೆ ಹಂಚುತ್ತಿದ್ದಾರೆ.

"ಇನ್ನಷ್ಟು ಯೋಗಾನಾಥನ್ಗಳನ್ನು ಸೃಷ್ಟಿಸಬೇಕು"
ತಮ್ಮ ಈ ಪರಿಸರ ಕಾರ್ಯದ ಬಗ್ಗೆ ಯೋಗಾನಾಥನ್ ಅವರನ್ನು ಮಾತನಾಡಿಸಿದಾಗ ಅವರು ಹೇಳಿದ್ದು ಒಂದೇ. "ನನಗೆ ಪ್ರಶಸ್ತಿ ಪುರಸ್ಕಾರಗಳು ಬೇಕಿಲ್ಲ. ಅದಕ್ಕಾಗಿ ನಾನು ಈ ಕಾರ್ಯವನ್ನು ಮಾಡಿಲ್ಲ. ಆದರೆ ಈ ಸಮಾಜದಲ್ಲಿ ಪರಿಸರಕ್ಕೆ ನೆರವಾಗುವ ಇನ್ನಷ್ಟು ಯೋಗಾನಾಥನ್ಗಳನ್ನು ಸೃಷ್ಟಿಯಾಗಬೇಕು ಎಂಬುದಷ್ಟೇ ನನ್ನ ಆಸೆ" ಎಂದು ಹೇಳಿಕೊಂಡಿದ್ದಾರೆ.
"ಒಂದು ಮನೆಗೆ ಐದು ಮರ" ಎಂಬ ಪರಿಕಲ್ಪನೆ ನನ್ನ ಗುರಿಯಾಗಿದೆ. ಆದರೆ ಈ ಕಾರ್ಯಕ್ಕೆ ರಾಜ್ಯ ಸರ್ಕಾರದಿಂದಾಗಲೀ ಕೇಂದ್ರ ಸರ್ಕಾರದಿಂದಾಗಲೀ ಬೆಂಬಲ ದೊರೆತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತಮ್ಮ ಸಂಬಳದಲ್ಲಿ 40% ಹಣ ಗಿಡಗಳಿಗೆ ಮೀಸಲು
ಯೋಗಾನಾಥನ್ ಕೈಗೊಂಡಿದ್ದ ಪರಿಸರ ಕಾರ್ಯಕ್ಕೆ ಹಲವು ಅಡ್ಡಿ ಆತಂಕಗಳೂ ಎದುರಾದವು. ಯೋಗಾನಾಥನ್ ಇದಕ್ಕಾಗಿ ಯಾರ ಬಳಿಯೂ ಹೋಗದೇ ತಮ್ಮ ಸಂಬಳದ 40% ರಷ್ಟು ಹಣವನ್ನು ಪರಿಸರಕಾರ್ಯಕ್ಕೆ ಮೀಸಲಿಟ್ಟರು. ಬೀಜ ಹಾಗೂ ಸಸಿಗಳನ್ನು ಖರೀದಿಸಲು ಇದನ್ನು ಬಳಸಿಕೊಳ್ಳುತ್ತಾರೆ. ಇವರ ಕಾರ್ಯ ಮೆಚ್ಚಿ, ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರೊಬ್ಬರು ಇವರಿಗೆ ಇಲ್ಲಿ ಭೂಮಿ ನೀಡಿದ್ದಾರೆ.
ವಿಶೇಷ ಸಂದರ್ಭಗಳಲ್ಲಿ ತಮ್ಮ ಬಸ್ನಲ್ಲಿ ಪ್ರಯಾಣಿಸುವವರಿಗೆ ಯೋಗಾನಾಥನ್ ಸಸಿಗಳನ್ನೂ ಉಚಿತವಾಗಿ ನೀಡುತ್ತಾರೆ.

ಯೋಗಾನಾಥನ್ ಬೆನ್ನು ತಟ್ಟಿದವರು
ಯೋಗಾನಾಥನ್ ಅವರ ಈ ಪರಿಸರಪರ ಕಾರ್ಯಕ್ಕೆ ಭಾರತ ಸರ್ಕಾರ "ಎಕೊ ವಾರಿಯರ್" ಪ್ರಶಸ್ತಿ ನೀಡಿದೆ. ವನ್ಯಜೀವಿ ಸಿನಿಮಾ ನಿರ್ದೇಶಕ ಮೈಕ್ ಪಾಂಡೇ ಅವರ "ಅನ್ಸಂಗ್ ಹೀರೊ" ಪ್ರಶಸ್ತಿ ಕೂಡ ದೊರತಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ನನ್ನ ಹುಟ್ಟುಹಬ್ಬದಂದು ಯೋಗಾನಾಥನ್ ಅವರ ಕಾರ್ಯ ಪ್ರೇರಣೆ ನೀಡಿದೆ" ಎಂದು ಹೇಳಿಕೊಂಡಿದ್ದಾರೆ.
ಇದುವರೆಗೂ ಯೋಗಾನಾಥನ್ 3,743 ವಿಶ್ವವಿದ್ಯಾಲಯಗಳಿಗೆ, ಶಾಲೆಗಳಿಗೆ ಹಾಗೂ ಕೈಗಾರಿಕೆಗಳಿಗೆ ಭೇಟಿ ನೀಡಿ ಪರಿಸರ ಜಾಗೃತಿ ತರಗತಿಗಳನ್ನು ನಡೆಸಿದ್ದಾರೆ.












Click it and Unblock the Notifications