ಕರ್ಣ ನಿಧಿಗೆ ಶುರುವಾಗಿದೆ ಹೊಸ ಸೀರಿಯಸ್ ಸಮಸ್ಯೆ, ಇದಕ್ಕೆಲ್ಲ ಕಾರಣ ಆಷಾಢವಂತೆ!
ಕರ್ಣ ಸೀರಿಯಲ್ನಲ್ಲಿ ಮುದ್ದಾದ ಜೋಡಿ ಕರ್ಣ ಮತ್ತು ನಿಧಿಗೆ ಹೊಸದೊಂದು ಸಮಸ್ಯೆ ಶುರುವಾಗಿದೆ. ಹಾಗೆ ನೋಡಿದರೆ ಈ ಜೋಡಿ ಲವ್ ಮಾಡಲು ಶುರುವಾದಾಗಿನಿಂದ ಒಂದಲ್ಲ ಒಂದು ಸಮಸ್ಯೆ ಬರುತ್ತಲೇ ಇದೆ. ಸೀರಿಯಲ್ ಅಂದ್ರೇ ಸಮಸ್ಯೆ ಅಲ್ವಾ, ಅದರಲ್ಲೂ ನಾಯಕ ಮತ್ತು ನಾಯಕಿಗೆ ಒಂದಲ್ಲ ಒಂದು ಸಮಸ್ಯೆ ಬರುತ್ತಲೇ ಇರಬೇಕು. ಅವರಿಬ್ಬರೂ ಅದರಿಂದ ಹೊರಬರಲು ಒದ್ದಾಡುತ್ತಲೇ ಇರಬೇಕು, ಅದರ ನಡುವೆ ತೀರಾ ಅಪರೂಪಕ್ಕೆ ಬೇಸಿಗೆಯಲ್ಲಿ ಬರೋ ತಂಗಾಳಿಯ ಹಾಗೆ ಲೈಫನ್ನೂ ಎನ್ಜಾಯ್ ಮಾಡಬೇಕು. ಅವರ ನೋವನ್ನು ನೋಡಿ ಸೀರಿಯಲ್ ನೋಡುವ ಹೆಂಗಸರು ಸೆರಗಿನಲ್ಲಿ ಕಣ್ಣೀರು ಒರೆಸಿಕೊಳ್ಳಬೇಕು. ಇದು ಜಮಾನಾದಿಂದ ನಡೆದುಕೊಂಡು ಬಂದಿರುವ ಪದ್ಧತಿ.
ಕರ್ಣ ನಿಧಿ ಬಾಳಲ್ಲಿ ಏನಾಯ್ತು!
ಸದ್ಯಕ್ಕೀಗ ʼಕರ್ಣʼ ಸೀರಿಯಲ್ ಹೀರೋ ಕರ್ಣನಿಗೂ, ಇದರ ನಾಯಕಿಯಾದ ನಿಧಿಗೂ ಮಧ್ಯೆ ಸಮಸ್ಯೆಯೊಂದು ಬಾಯ್ತೆರೆದು ನಿಂತಿದೆ. ಇದು ಅಂತಿಂಥಾ ಸಮಸ್ಯೆ ಅಲ್ಲ. ಒಂದು ತಿಂಗಳಿಗಂತೂ ಈ ಇಬ್ಬರೂ ಇದರಿಂದ ಪಾರಾಗುವ ಪ್ರಶ್ನೆಯೇ ಇಲ್ಲ. ಈ ಸಮಸ್ಯೆಗೆಲ್ಲ ಕಾರಣ ಆಷಾಢ ಮಾಸ. ಆಷಾಢ ಮಾಸದಲ್ಲಿ ಗಂಡ ಹೆಂಡತಿ ಜೊತೆಗಿರುವಂತಿಲ್ಲ ಅನ್ನುವುದು ಅಂದಕಾಲದಿಂದ ರೂಢಿಯಲ್ಲಿರುವ ಆಚರಣೆ. ಅದರಲ್ಲೂ ಆಗಷ್ಟೇ ಮದುವೆಯಾದ ನವ ದಂಪತಿಗಳನ್ನು ಕಟ್ಟುನಿಟ್ಟಾಗಿ ದೂರ ಇಡುತ್ತಾರೆ. ಕರ್ಣನ ಬಂಗಾರಿ ಅಜ್ಜಿಯೂ ಇದನ್ನು ನವದಂಪತಿಗೆ ಹೇಳುತ್ತಾರೆ.

ಡಾಕ್ಟ್ರಿಗೇ ಅಜ್ಜಿಯ ಪಾಠ
ಆಗಷ್ಟೇ ದಾಂಪತ್ಯದ ಸವಿ ಆರಂಭಿಸಿದ ಈ ದಂಪತಿಗೆ ಇದನ್ನು ಕೇಳಿ ಶಾಕ್ ಮೇಲೆ ಶಾಕ್. ಆಷಾಡ ಬಂತು ಅಂದರೆ ನಾವ್ಯಾಕೆ ದೂರ ಇರಬೇಕು ಅಂತ ಕರ್ಣ ಪ್ರಶ್ನೆ ಮಾಡುತ್ತಾನೆ. ಅಜ್ಜಿ ಬಂಗಾರಿ ಆಗ ಆಷಾಢ ಮಾಸದಲ್ಲಿ ಗಂಡ ಹೆಂಡತಿ ಜೊತೆಗಿರಬಾರದು ಅನ್ನುವ ಓಬಿರಾಯನ ಕಾಲದ ಕಥೆಯನ್ನೇ ಹೇಳುತ್ತಾರೆ. ಇದನ್ನು ಕೇಳಿ ಕರ್ಣನಿಗೂ ನಿಧಿಗೂ ಅಳಬೇಕೋ ನಗಬೇಕೋ ಗೊತ್ತಾಗೋದಿಲ್ಲ. ಕಾರಣ ಇವರಿಬ್ಬರೂ ಡಾಕ್ಟರ್ಸ್. ಅದಕ್ಕೂ ಜಾಸ್ತಿ ಇಬ್ಬರೂ ಗೈನಕಾಲಜಿಸ್ಟ್.
ಘಟವಾಣಿ ಅಜ್ಜಿ ಮುಂದೆ ಡಾಕ್ಟರ್ ಕೈ ಕಟ್ ಬಾಯ್ಮುಚ್!
ಅಜ್ಜಿ ಆಷಾಢದಲ್ಲಿ ಗಂಡ ಹೆಂಡತಿ ಜೊತೆಗಿದ್ದರೆ ಬಿರುಬೇಸಗೆಯಲ್ಲಿ ಮಕ್ಕಳಾಗ್ತಾರೆ, ಅದರಿಂದ ಸಮಸ್ಯೆ ಆಗುತ್ತೆ ಅಂತ ಕಥೆ ಹೇಳ್ತಾರೆ. ಅರೇ, ನಾವಿಬ್ಬರೂ ಡಾಕ್ಟರ್ಸ್. ಹಾಗೆಲ್ಲ ಆಗದ ಹಾಗೆ ಏನು ಮಾಡಬೇಕು ಅಂತ ನಮಗೊತ್ತು ಅಂತ ಕರ್ಣ ಹೇಳಿದ್ರೂ ಬಂಗಾರಿ ಅಜ್ಜಿ ಅದನ್ನೆಲ್ಲ ಕೇಳಲಿಕ್ಕೆ ರೆಡಿ ಇಲ್ಲ. ತಾನು ಬಿಟ್ಟರೂ ನಿಧಿಯ ಅಜ್ಜಿ ಬಂದು ಕರ್ಕೊಂಡು ಹೋಗಿಯೇ ಹೋಗ್ತಾರೆ. ಬರ್ಲಿಲ್ಲ ಅಂದರೆ ಕೋಲು ತಗೊಂಡು ಬರ್ತಾರೆ ಅಂತ ಬೆದರಿಸ್ತಾರೆ. ಇಬ್ಬರು ಡಾಕ್ಟರ್ಗಳದೂ ಸದ್ಯ ಕೈ ಕಟ್ ಬಾಯ್ಮುಚ್ ಸ್ಥಿತಿ. ಅಜ್ಜಿಯ ಬೆದರಿಕೆಗೆ ಇಬ್ಬರೂ ಮಣಿಯಲೇ ಬೇಕಲ್ವಾ..
ವಿರಹ ನೂರು ನೂರು ತರಹ
ಅಜ್ಜಿ ಮಾತು ಕೇಳಿ ನಿಧಿ ತವರಿಗೆ ಹೋಗಿದ್ದಾಳೆ. ಅವಳು ಹೋಗಿದ್ದೇ ಕರ್ಣನ ವಿರಹ ವೇದನೆ ತೀವ್ರವಾಗಿದೆ. ಎಲ್ಲೆಲ್ಲೂ ನಿಧಿಯೇ ಕಾಣೋದಕ್ಕೆ ಶುರುವಾಗಿದೆ. ಸಿಕ್ಕಾಪಟ್ಟೆ ಕನ್ಫ್ಯೂಶನ್. ಇದರಿಂದ ಪಾರಾಗೋದು ಹೇಗೆ ಅಂತ ಗೊತ್ತಾಗದೇ ಒದ್ದಾಡುತ್ತಾನೆ. ಕಡೆಗೂ ನಿಧಿಗೆ ಕಾಲ್ ಮಾಡಿದರೆ ಅವಳದೂ ಅದೇ ಸ್ಥಿತಿ. ಇವರಿಬ್ಬರ ಕಳ್ಳಾಟಕ್ಕೆ ಅಜ್ಜಿಯರಿಬ್ಬರೂ ನಾಕಾಬಂಧಿ ಹಾಕಿದ್ದಾರೆ.
ವೀಡಿಯೋ ಕಾಲ್ ಮೊರೆ
ಇಬ್ಬರೂ ಬೇರೆ ದಾರಿ ಕಾಣದೆ ವೀಡಿಯೋ ಕಾಲ್ಗೆ ಶರಣಾಗಿದ್ದಾರೆ. ವೀಡಿಯೋ ಕಾಲ್ನಲ್ಲಿ ಮಾತನಾಡುವ ಮೂಲಕ ಸದ್ಯ ವಿರಹದ ತೀವ್ರತೆಯಿಂದ ಪಾರಾಗುವ ಪ್ರಯತ್ನದಲ್ಲಿದ್ದಾರೆ. ಇವರ ವಿರಹ ಕಂಡು ಇವರ ಅಭಿಮಾನಿಗಳೂ ಈ ಜೋಡಿ ಬೇಗ ಒಂದಾಗಲಿ ಅಂತ ಹಾರೈಸುತ್ತಿದ್ದಾರೆ. ಇವರ ವಿರಹದ ಎಪಿಸೋಡ್ಗೆ ಉತ್ತಮ ವೀಕ್ಷಣೆಯೂ ಸಿಗುತ್ತಿದೆ. 10 ಲಕ್ಷಕ್ಕೂ ಅಧಿಕ ಜನ ಇದರ ಪ್ರೋಮೋ ನೋಡಿ ಮೆಚ್ಚಿಕೊಂಡಿದ್ದಾರೆ. ಒಟ್ಟಿನಲ್ಲಿ ಕರ್ಣ ನಿಧಿಯ ಲವ್ಸ್ಟೋರಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಆಗಿದೆ. ಜೀ ಕನ್ನಡದಲ್ಲಿ ಪ್ರೈಮ್ ಟೈಮ್ನಲ್ಲಿ ಪ್ರಸಾರವಾಗ್ತಿರೋ ಈ ಸೀರಿಯಲ್ನಲ್ಲಿ ಕರ್ಣ ಮತ್ತು ನಿಧಿಯಾಗಿ ಕಿರಣ್ರಾಜ್ ಮತ್ತು ಭವ್ಯಾ ಗೌಡ ನಟಿಸಿದ್ದು ಎಲ್ಲರೂ ಮುದ್ದು ಜೋಡಿ ಅಂತಿದ್ದಾರೆ.
(ಬರಹ: ಭವಾನಿ ಭಟ್)














Click it and Unblock the Notifications