ಮಹಾದಾಯಿ ವಿಚಾರದಲ್ಲಿ ಬಿಜೆಪಿ, ಪರಿಕ್ಕರ್ ನಾಟಕ: ಸಿದ್ದರಾಮಯ್ಯ
ಹಾವೇರಿ, ಡಿಸೆಂಬರ್ 25: ಮಹಾದಾಯಿ ನೀರಾವರಿ ವಿವಾದಕ್ಕೆ ಸಂಬಂಧಿಸಿದಂತೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ನಾಟಕವಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
"...ಚುನಾವಣೆ ಕಾರಣಕ್ಕೆ ಪರಿಕ್ಕರ್ ಮತ್ತು ಯಡಿಯೂರಪ್ಪ ನಾಟಕವಾಡುತ್ತಿದ್ದಾರೆ," ಎಂದು ಭಾನುವಾರ ಹಾವೇರಿಯಲ್ಲಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಇದೀಗ ಉತ್ತರ ಕರ್ನಾಟಕದಿಂದ ಬಂದ ಪ್ರತಿಭಟನಾಕಾರರು ಮಲ್ಲೇಶ್ವರಂ ರಾಜ್ಯ ಬಿಜೆಪಿ ಕಚೇರಿ ಮುಂದೆ ಸತತ ಮೂರು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಡಿಸೆಂಬರ್ 15ರೊಳಗೆ ಮಹಾದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಲಿಖಿತ ಒಪ್ಪಂದ ನಡೆಯಲಿದೆ ಎಂದು ಯಡಿಯೂರಪ್ಪ ವಾಗ್ದಾನ ನೀಡಿದ್ದರು. ಇದೀಗ ಯಡಿಯೂರಪ್ಪ ಮಾತು ತಪ್ಪಿದ್ದು ಜನರು ತಿರುಗಿ ಬಿದ್ದಿದ್ದಾರೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, 'ಸುಳ್ಳು ಹೇಳಿ ಯಡಿಯೂರಪ್ಪ ಸಿಕ್ಕಿ ಬಿದ್ದಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ರೈತರ ಜತೆ ಯಡಿಯೂರಪ್ಪ ನಾಟಕ ಆಡಲು ಹೊರಟರು. ಇದೀಗ ಸಿಕ್ಕಿ ಬಿದ್ದಿದ್ದಾರೆ,' ಎಂದು ಹೇಳಿದ್ದಾರೆ.
ಇದೇ ವೇಳೆ ಭಾನುವಾರ ಹಾವೇರಿಯಲ್ಲಿ ಮಾತನಾಡಿರುವ ಯಡಿಯೂರಪ್ಪ ನಾನು ಮತ್ತು ಪಕ್ಷದವರು ಈ ವಿಚಾರದಲ್ಲಿ ಪ್ರಾಮಾಣಿಕ ಪ್ರಯತ್ನ ಪಟ್ಟಿದ್ದೇವೆ. ತಕ್ಷಣ ಬಿಜೆಪಿ ಕಚೇರಿ ಮುಂಭಾಗದಿಂದ ಜಾಗ ಖಾಲಿ ಮಾಡಿ ಮುಖ್ಯಮಂತ್ರಿ ನಿವಾದ ಮುಂದೆ ಧರಣಿ ನಡೆಸಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. ಆದರೆ ಪ್ರತಿಭಟನಾಕಾರರು ಬಿಜೆಪಿ ಕಚೇರಿ ಎದುರಿನಿಂದ ಜಾಗ ಖಾಲಿ ಮಾಡುತ್ತಿಲ್ಲ.












Click it and Unblock the Notifications