ಸುಳ್ಳೇ ಯಡಿಯೂರಪ್ಪನ ಮನೆ ದೇವ್ರು: ಸಿದ್ದರಾಮಯ್ಯ
ಹಾವೇರಿ, ಡಿಸೆಂಬರ್ 23: 'ಮಹದಾಯಿ ವಿಚಾರದಲ್ಲಿ ಯಡಿಯೂರಪ್ಪ ರೈತರಿಗೆ ಟೋಪಿ ಹಾಕುತ್ತಿದ್ದಾರೆ, ಪರಿವರ್ತನಾ ಯಾತ್ರೆಯಲ್ಲಿ ಪರಿಕ್ಕರ್ ಪತ್ರ ಓದಿ ರೈತರನ್ನು ಮೂರ್ಖರನ್ನಾಗಿಸುವ ಪ್ರಯತ್ನ ಮಾಡಿದ್ದಾರೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದರು.
ನಗರದಲ್ಲಿ ಶನಿವಾರ ಆಯೋಜಿಸಿದ್ದ ನವಕರ್ನಾಟಕ ನಿರ್ಮಾಣ ಸಮಾವೇಶದಲ್ಲಿ ಬಿಜೆಪಿ ಮೇಲೆ ಹರಿಹಾಯ್ದ ಮುಖ್ಯಮಂತ್ರಿಗಳು 'ಕಳೆದ ವರ್ಷ ಸೆಪ್ಟೆಂಬರ್ ನಲ್ಲೆ ಮಹದಾಯಿ ವಿವಾದದ ಇಥ್ಯರ್ತಕ್ಕಾಗಿ ಮನವಿ ಮಾಡಲಾಗಿತ್ತು, ಆದರೆ ಬಿಜೆಪಿಯವರಿಗೆ ಈಗ ಚುನಾವಣೆ ಸಂದರ್ಭದಲ್ಲಿ ಮಹದಾಯಿ ನೆನಪಾಗಿದೆ ಎಂದರು.
ಯಡಿಯೂರಪ್ಪ ಸುಳ್ಳು ಹೇಳುತ್ತಾ ತಿರುಗುತ್ತಿದ್ದಾರೆ. ಸುಳ್ಳೇ ಯಡಿಯೂರಪ್ಪನ ಮನೆ ದೇವರು ಎಂದು ವ್ಯಂಗ್ಯವಾಡಿದ ಸಿಎಂ. ಮಹದಾಯಿ ರಾಜಕೀಯದ ವಿಚಾರವಲ್ಲ ಅದು ಎರಡು ರಾಜ್ಯಗಳ ಜನರ ಹಿತದ ವಿಚಾರ ಎಂದರು.

ಎಲ್ಲರನ್ನೂ ಕರೆದುಕೊಂಡು ಹೋಗಿದ್ದೆ
ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ರೈತರು, ಮಠಾಧೀಶರು, ಬಿಜೆಪಿ ಮುಖಂಡರೊಂದಿಗೆ ಹೋಗಿದ್ದೆ, ನಮಗೆ ಕುಡಿಯುವ ನೀರು ಕೊಡಿಸಲು ಮಹಾರಾಷ್ಟ್ರ ಹಾಗೂ ಗೋವಾ ಸಿಎಂರ ಮನವೊಲಿಸಿ ಅಂತಾ ಮನವಿ ಮಾಡಿದ್ದೆ, ಪ್ರಧಾನಿಗಳಿಗೆ ಮಧ್ಯಸ್ಥಿಕೆ ವಹಿಸುವಂತೆ ನಾನೇ ಕೇಳಿಕೊಂಡಿದ್ದೆ, ಆದರೆ ನಮ್ಮ ಪ್ರಧಾನಿಗೆ ಈ ಬಗ್ಗೆ ಇಚ್ಚಾಶಕ್ತಿಯೇ ಇರಲಿಲ್ಲ ಎಂದು ದೂರಿದರು.

ಆಜಾನ್ ಕೇಳಿ ಮಾತು ನಿಲ್ಲಿಸಿದ ಸಿಎಂ
ಸಿದ್ದರಾಮಯ್ಯ ಅವರು ಭಾಷಣ ಮಾಡುತ್ತಿದ್ದ ವೇಳೆ ಆಜಾನ್ ಮೊಳಗಿದ ಕಾರಣ ಭಾಷಣ ನಿಲ್ಲಿಸಿ ಕೆಲ ಕಾಲ ಮೌನವಾಗಿ ನಿಂತರು, ಆ ಸಮಯದಲ್ಲಿ ಕರತಾಡನ ಮಾಡಿದ ಜನರನ್ನು ಸುಮ್ಮನಿರುವಂತೆ ಹೇಳಿ, ಆಜಾನ್ ಗೆ ಗೌರವ ಸಲ್ಲಿಸಿ ನಂತರ ಮಾತು ಮುಂದುವರೆಸಿದರು. ಮೋದಿಯವರು ಕೂಡ ಭಾಷಣದ ನಡುವೆ ಮೊಳಗಿದ ಆಜಾನ್ ಗೆ ಗೌರವ ಸಲ್ಲಿಸಿದ್ದು, ಇತ್ತೀಚೆಗೆ ಭಾರಿ ಸುದ್ದಿಯಾಗಿತ್ತು, ಈಗ ಮುಖ್ಯಮಂತ್ರಿಗಳೂ ಅದನ್ನೇ ಮುಂದುವರೆಸಿದ್ದಾರೆ.

ಉತ್ತರವೇ ಬರೊಲ್ಲ
ಮಹದಾಯಿ ವಿಚಾರವಾಗಿ ಮೇ ತಿಂಗಳಲ್ಲೇ ಗೋವಾ ಸಿಎಂ ಗೆ ಪತ್ರ ಬರೆದಿದ್ದೆ, ಆದರೆ ಅವತ್ತು ಗೋವಾ ಸಿಎಂ ಉತ್ತರ ಕೊಡಲಿಲ್ಲ. ಅಲ್ಲಿನ ನೀರಾವರಿ ಮಂತ್ರಿ ಪತ್ರ ಬರೆದು 'ನಾವು ಮಾತುಕತೆಗೆ ಸಿದ್ದರಿಲ್ಲ' ಅಂತ ಉದ್ಧಟತನದಿಂದ ಪತ್ರ ಬರೆದಿದ್ದರು ಎಂದು ಮುಖ್ಯಮಂತ್ರಿಗಳು ನೆನಪಿಸಿದರು.

ಗೋವಾ ಮುಖ್ಯಮಂತ್ರಿಯಿಂದ ಅವಮಾನ
ಯಡಿಯೂರಪ್ಪ ಅವರು ಮಹದಾಯಿ ವಿವಾದ ಬಗೆಹರಿಸುವುದಾಗಿ ರಕ್ತದಲ್ಲಿ ಬರೆದುಕೊಡ್ತಿನಿ ಅಂತಾ ಹೇಳಿದ್ದನ್ನು ನೆನಪಿಸಿದ ಸಿದ್ದರಾಮಯ್ಯ ಅವರು 'ಯುಡಿಯೂರಪ್ಪ ಅವರು ಒಂದು ತಿಂಗಳಲ್ಲೇ ವಿವಾದ ಬಗೆಹರಿಸುತ್ತೀನಿ ಅಂತಾ ಹೇಳಿದ್ದರು, ರಕ್ತದಲ್ಲಿ ಬೇರೆ ಬರೆದುಕೊಡ್ತಾರಂತೆ, ಯಡಿಯೂರಪ್ಪನವರ ಮೈಯಲ್ಲಿ ಅದೇಷ್ಟು ರಕ್ತವಿದೆಯೊ ಗೊತ್ತಿಲ್ಲ ಎಂದು ಕಿಚಾಯಿಸಿದರು.
ಯಡಿಯೂರಪ್ಪ ಅವರಿಗೆ ಪತ್ರ ಬರೆದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಗೋವಾ ಸಿಎಂ ನನಗೆ ಪತ್ರ ಬರೆಯಬೇಕಿತ್ತು, ಆದ್ರೆ ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ. ನನಗೆ ಪತ್ರ ಬರೆಯದೇ ಯಡಿಯೂರಪ್ಪ ಅವರಿಗೆ ಬರೆದು ನನಗೆ ಅವಮಾನ ಮಾಡಿದ್ದಾರೆ ಎಂದರು.

ಕೋಮುವಾದಿಗಳನ್ನು ಸೋಲಿಸುವುದೇ ಗುರಿ
ಹುಬ್ಬಳ್ಳಿಗೆ ಬಂದು ಭಾಷಣ ಮಾಡಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಟಾಂಗ್ ನೀಡಿದ ಸಿದ್ದರಾಮಯ್ಯ ಅವರು 'ಯೋಗಿ ಅವರೇ ನೀವು ಎಷ್ಟೇ ಬಾರಿ ಇಲ್ಲಿ ಬಂದರೂ ಏನೂ ವರ್ಕೌಟ್ ಆಗಲ್ಲ, ಕರ್ನಾಟಕದಲ್ಲಿ ಕಾಂಗ್ರೆಸ್ಸೇ ಮತ್ತೆ ಅಧಿಕಾರಕ್ಕೆ ಬರೋದು' ಎಂದರು. ನಮ್ಮ ಮುಂದಿನ ಗುರಿ ಕೋಮುವಾದಿಗಳನ್ನು ಸೋಲಿಸಿ ಪ್ರಜಾಪ್ರಭುತ್ವವನ್ನು ಗೆಲ್ಲಿಸುವುದೇ ಆಗಿದೆ ಎಂದು ಅವರು ಹೇಳಿದರು.












Click it and Unblock the Notifications