ನೂತನ ಸಿಎಂ ಪ್ರಮಾಣ ವಚನ ಹಿನ್ನೆಲೆ: ಜೂ. 3ರಂದು ವಿಧಾನಸೌಧ, ವಿಕಾಸಸೌಧ ಸಿಬ್ಬಂದಿಗೆ ರಜೆ ಘೋಷಣೆ
ಬೆಂಗಳೂರು: ಕರ್ನಾಟಕದ ರಾಜಕೀಯದಲ್ಲಿ ಹೊಸ ಅಧ್ಯಾಯ ಶುರುವಾಗುತ್ತಿದ್ದು, ಡಿಕೆ ಶಿವಕುಮಾರ್ ಅವರು ಸರ್ಕಾರದ ನೂತನ ಮುಖ್ಯಮಂತ್ರಿಯಾಗಿ ಜೂನ್ 3, 2026 ರಂದು ಪ್ರಮಾಣ ವಚನ ಸ್ವೀಕರಿಸುವ ಸಮಾರಂಭ ನಡೆಯಲಿದೆ. ಈ ಸಂದರ್ಭಕ್ಕೆ ಸಾಕ್ಷಿಯಾಗಲು ರಾಜ್ಯಾದ್ಯಂತ ಅಪಾರ ಸಂಖ್ಯೆಯಲ್ಲಿ ಜನಸಾಗರ ಹರಿದುಬರುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಭದ್ರತಾ ಲೋಪ ಉಂಟಾಗದಿರಲು ಮತ್ತು ಟ್ರಾಫಿಕ್ ಸಮಸ್ಯೆಯನ್ನು ನಿಭಾಯಿಸಲು ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಮಹತ್ವದ ನಿರ್ಧಾರ ಕೈಗೊಂಡಿದೆ.
ಇದರ ಭಾಗವಾಗಿ, ರಾಜ್ಯದ ಆಡಳಿತ ಶಕ್ತಿಕೇಂದ್ರವಾದ ವಿಧಾನ ಸೌಧ, ವಿಕಾಸ ಸೌಧ ಹಾಗೂ ಬಹುಮಹಡಿಗಳ ಕಟ್ಟಡದಲ್ಲಿ (ಎಂ.ಎಸ್ ಬಿಲ್ಡಿಂಗ್) ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ದಿನಾಂಕ ಜೂನ್ 03ರಂದು ಮಧ್ಯಾಹ್ನದ ನಂತರ ರಜೆ ಘೋಷಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ.

ಕರ್ನಾಟಕ ಸರ್ಕಾರದ ನಿಯೋಜಿತ ಮುಖ್ಯಮಂತ್ರಿಯವರ ಪ್ರಮಾಣ ವಚನ ಸಮಾರಂಭವು ಜೂನ್ 3ರ ಬುಧವಾರದಂದು ಸಂಜೆ 4.05 ಗಂಟೆಗೆ ನಡೆಯಲಿದೆ. ಈ ಸಮಾರಂಭವನ್ನು ಕರ್ನಾಟಕ ಲೋಕಭವನದಲ್ಲಿ ಆಯೋಜಿಸಲು ನಿಗದಿಪಡಿಸಲಾಗಿದೆ. ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಆಗಮಿಸಲಿದ್ದಾರೆ. ಹೀಗಾಗಿ, ಕರ್ನಾಟಕ ಲೋಕಭವನ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಜನಸಂದಣಿ ಸೇರುವ ಸಾಧ್ಯತೆ ದಟ್ಟವಾಗಿದೆ.
ವಿಐಪಿಗಳು, ಗಣ್ಯರು, ಜನಪ್ರತಿನಿಧಿಗಳು ಹಾಗೂ ಉನ್ನತ ಅಧಿಕಾರಿಗಳ ವಾಹನಗಳ ಓಡಾಟ ಹೆಚ್ಚಾಗುವುದರಿಂದ ಸಹಜವಾಗಿಯೇ ಅಂಬೇಡ್ಕರ್ ಬೀದಿಯ ಸುತ್ತಮುತ್ತ ವಾಹನ ಸಂಚಾರ ದಟ್ಟಣೆ ಕೂಡ ಉಂಟಾಗುವ ಸಂಭವನೀಯತೆ ಇದೆ. ಹೀಗಾಗಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಆಡಳಿತ ಯಂತ್ರ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದೆ.
ನಾಳೆ (ಜೂನ್ 3) ಮಧ್ಯಾಹ್ನ ವಿಧಾನಸೌಧ, ವಿಕಾಸಸೌಧ ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ ಘೋಷಣೆ: ಹೊಸ ಸಿಎಂ ಪ್ರಮಾಣ ವಚನ ಹಿನ್ನೆಲೆ ಸರ್ಕಾರದ ಆದೇಶ
— oneindiakannada (@OneindiaKannada) June 2, 2026
.
.#VidhanaSoudha #VikasaSoudha #GovernmentHoliday #NewCM #OneindiaKannada pic.twitter.com/B9Y7fAFEu9
ಸರ್ಕಾರಿ ನೌಕರರು ಬುಧವಾರ ಮಧ್ಯಾಹ್ನದವರೆಗೆ ಮಾತ್ರ ಕಚೇರಿ ಕೆಲಸ ಮಾಡಲಿದ್ದು, ನಂತರ ಅವರಿಗೆ ತೆರಳಲು ಬಿಡುವು ನೀಡಲಾಗಿದೆ. ಈ ಮಹತ್ವದ ಆದೇಶವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಕಾರ್ಯಕಾರಿ) ಸರ್ಕಾರದ ಅಧೀನ ಕಾರ್ಯದರ್ಶಿಯವರಾದ ಆರ್. ಯದು ಕುಮಾರ್ ಅವರು ಹೊರಡಿಸಿದ್ದಾರೆ.












Click it and Unblock the Notifications