Annamalai: ಬಿಜೆಪಿಗೆ ಅಣ್ಣಾಮಲೈ ದಿಢೀರ್ ರಾಜೀನಾಮೆ; ಮಾಜಿ ಐಪಿಎಸ್ ಸಿಂಗಂ ಮುಂದಿನ ನಡೆ ಏನು?
ದಕ್ಷಿಣ ಭಾರತದ ರಾಜಕಾರಣದಲ್ಲಿ, ಅದರಲ್ಲೂ ಮುಖ್ಯವಾಗಿ ತಮಿಳುನಾಡಿನಲ್ಲಿ ಬಿಜೆಪಿಯ ಪ್ರಬಲ ಮುಖವಾಗಿದ್ದ ಮಾಜಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರು ಪಕ್ಷಕ್ಕೆ ರಾಜೀನಾಮೆ ನೀಡುವ ಮೂಲಕ ಭಾರಿ ಸಂಚಲನ ಮೂಡಿಸಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿಯಾದ ಅಣ್ಣಾಮಲೈ, ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಕಳೆದ ಕೆಲವು ತಿಂಗಳುಗಳಿಂದ ಪಕ್ಷದ ಹೈಕಮಾಂಡ್ ನಿಲುವುಗಳ ವಿರುದ್ಧ ಅಸಮಾಧಾನಗೊಂಡಿದ್ದ ಅಣ್ಣಾಮಲೈ, ಅಂತಿಮವಾಗಿ ಕಮಲ ಪಾಳಯದಿಂದ ಹೊರನಡೆಯುವ ಗಟ್ಟಿ ನಿರ್ಧಾರ ಕೈಗೊಂಡಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಅಣ್ಣಾಮಲೈ ಅವರು 2020ರಲ್ಲಿ ಬಿಜೆಪಿ ಸೇರಿದ್ದರು ಮತ್ತು 2021ರಿಂದ 2025ರವರೆಗೆ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷರಾಗಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಪಕ್ಷದ ಕೇಂದ್ರ ನಾಯಕತ್ವದೊಂದಿಗೆ ಅವರಿಗೆ ಗಂಭೀರ ಭಿನ್ನಾಭಿಪ್ರಾಯಗಳು ಮೂಡಿದ್ದವು ಎನ್ನಲಾಗಿದೆ.

ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ವಿರುದ್ಧ ಸ್ವತಂತ್ರವಾಗಿ ಬಿಜೆಪಿ ಶಕ್ತಿ ವೃದ್ಧಿಸಬೇಕು ಎಂಬುದು ಅಣ್ಣಾಮಲೈ ಅವರ ವಾದವಾಗಿತ್ತು. ಆದರೆ, ಕೇಂದ್ರ ನಾಯಕರು ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳಲು ಒಲವು ತೋರಿದ್ದು ಅಣ್ಣಾಮಲೈ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರದ ಭಾಷಾ ನೀತಿಯನ್ನು ಅವರು ಬಹಿರಂಗವಾಗಿ ಟೀಕಿಸಿದ್ದು ಹೈಕಮಾಂಡ್ ಕೆಂಗಣ್ಣಿಗೆ ಕಾರಣವಾಗಿತ್ತು. 2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ ಈ ಅಂತರ ಇನ್ನಷ್ಟು ಹೆಚ್ಚಾಗಿತ್ತು.
ಹೊಸ ಪಕ್ಷ ಕಟ್ಟಲಿದ್ದಾರಾ ಅಣ್ಣಾಮಲೈ?
ಅಣ್ಣಾಮಲೈ ಅವರ ರಾಜೀನಾಮೆಯ ಬೆನ್ನಲ್ಲೇ ತಮಿಳುನಾಡಿನ ಕೊಯಮತ್ತೂರು ಸೇರಿದಂತೆ ಹಲವೆಡೆ ಅವರ ಬೆಂಬಲಿಗರು ಬೃಹತ್ ಪೋಸ್ಟರ್ಗಳನ್ನು ಅಳವಡಿಸಿದ್ದು, "ನಮ್ಮ ನಾಯಕನೇ ಬನ್ನಿ, ನಮ್ಮನ್ನು ಮುನ್ನಡೆಸಿ" ಎಂಬ ಘೋಷಣೆಗಳನ್ನು ಹಾಕಿದ್ದಾರೆ. ಮೂಲಗಳ ಪ್ರಕಾರ, ಅಣ್ಣಾಮಲೈ ಅವರು ತಮಿಳುನಾಡಿನಲ್ಲಿ ಹೊಸ ಪ್ರಾದೇಶಿಕ ರಾಜಕೀಯ ಪಕ್ಷವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಿದ್ದಾರೆ. ಆದರೆ, ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲು ಇನ್ನೂ ಕೆಲವು ದಿನಗಳು ಕಾಯಬೇಕಿದೆ. ನಟ ವಿಜಯ್ ಅವರ ರಾಜಕೀಯ ಪ್ರವೇಶದ ಬಳಿಕ ತಮಿಳುನಾಡು ರಾಜಕಾರಣದ ಚಿತ್ರಣ ಬದಲಾಗುತ್ತಿದ್ದು, ಈಗ ಅಣ್ಣಾಮಲೈ ಅವರ ಈ ನಡೆ ದಕ್ಷಿಣ ಭಾರತದ ರಾಜಕೀಯ ಲೆಕ್ಕಾಚಾರಗಳನ್ನು ಸಂಪೂರ್ಣವಾಗಿ ತಲೆಕೆಳಗಾಗುವಂತೆ ಮಾಡಿದೆ.
ಮಂಗಳವಾರ ಬೆಳಗ್ಗೆ ದೆಹಲಿಯಲ್ಲಿ ಬಿಜೆಪಿಯ ಉನ್ನತ ನಾಯಕರಾದ ಗೃಹ ಸಚಿವ ಅಮಿತ್ ಶಾ, ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮತ್ತು ಪಕ್ಷದ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಅಣ್ಣಾಮಲೈ ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ, ಅಣ್ಣಾಮಲೈ ಅವರು ಬಿಜೆಪಿಗೆ ಇನ್ನು ಅಧಿಕೃತವಾಗಿ ರಾಜೀನಾಮೆ ಪತ್ರವನ್ನು ನೀಡಿಲ್ಲ. ಆದರೆ, ತಾವು ಪಕ್ಷದಿಂದ ಸೌಹಾರ್ದಯುತವಾಗಿ ಹೊರನಡೆಯಲು ಬಯಸುತ್ತಿರುವುದಾಗಿ ಮತ್ತು ಸ್ವತಂತ್ರವಾಗಿ ತಮ್ಮದೇ ಆದ ರಾಜಕೀಯ ಹಾದಿಯನ್ನು ಕಂಡುಕೊಳ್ಳಲು ನಿರ್ಧರಿಸಿರುವುದಾಗಿ ಪಕ್ಷದ ಹಿರಿಯ ನಾಯಕರಿಗೆ ಸ್ಪಷ್ಟಪಡಿಸಿದ್ದಾರೆ. ಅಣ್ಣಾಮಲೈ ಅವರ ನಿರ್ಧಾರದ ಹಿಂದಿನ ಕಾರಣಗಳನ್ನು ಆಲಿಸಿರುವ ಬಿಜೆಪಿ ಹೈಕಮಾಂಡ್, ಈ ಬಗ್ಗೆ ಮರುಚಿಂತನೆ ನಡೆಸಲು ಅವರಿಗೆ ಸ್ವಲ್ಪ ಸಮಯಾವಕಾಶ ಕೇಳಿದೆ ಎನ್ನಲಾಗಿದೆ. ಬುಧವಾರದವರೆಗೆ ಅಣ್ಣಾಮಲೈ ದೆಹಲಿಯಲ್ಲೇ ಉಳಿಯುವ ಸಾಧ್ಯತೆಯಿದೆ.
ರಾಜ್ಯಸಭಾ ಸ್ಥಾನದ ಆಫರ್ ತಿರಸ್ಕರಿಸಿದ ಅಣ್ಣಾಮಲೈ
ಅಣ್ಣಾಮಲೈ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಬಿಜೆಪಿ ನಾಯಕತ್ವವು ಅವರಿಗೆ 'ರಾಜ್ಯಸಭಾ' ಸದಸ್ಯ ಸ್ಥಾನದ ಆಫರ್ ನೀಡಿತ್ತು ಎನ್ನಲಾಗಿದೆ. ಆದರೆ, ತಮಗೆ ಬಿಜೆಪಿಯಲ್ಲಿ ಯಾವುದೇ ಭವಿಷ್ಯ ಕಾಣಿಸುತ್ತಿಲ್ಲ ಎಂದು ಭಾವಿಸಿರುವ ಅಣ್ಣಾಮಲೈ, ಹೈಕಮಾಂಡ್ ನೀಡಿದ ಈ ದೊಡ್ಡ ಆಫರ್ ಅನ್ನು ನೇರವಾಗಿಯೇ ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ. ಅಣ್ಣಾಮಲೈ ಅವರು ತಕ್ಷಣವೇ ಯಾವುದೇ ಹೊಸ ರಾಜಕೀಯ ಪಕ್ಷವನ್ನು ಘೋಷಿಸುತ್ತಿಲ್ಲ. ಬದಲಿಗೆ, ಸದ್ಯ ತಾವು ನಡೆಸುತ್ತಿರುವ "ವಿ ದಿ ಲೀಡರ್ಸ್" (We The Leaders) ಎಂಬ ಸ್ವಯಂಸೇವಾ ಸಂಸ್ಥೆಯನ್ನು ತಳಪಾಯವಾಗಿ ಬಳಸಿಕೊಂಡು, ರಾಜ್ಯಾದ್ಯಂತ ದೊಡ್ಡ ಮಟ್ಟದ ಸ್ವಯಂಸೇವಕರ ಜಾಲವನ್ನು ಹೊಂದಿರುವ ಬೃಹತ್ ಚಳವಳಿಯೊಂದನ್ನು ಆರಂಭಿಸಲಿದ್ದಾರೆ.
ವಿವಿಧ ವೃತ್ತಿಪರ ಹಾಗೂ ಸಾಮಾಜಿಕ ಹಿನ್ನೆಲೆಯುಳ್ಳ ಸಮಾನ ಮನಸ್ಕರನ್ನು ಒಗ್ಗೂಡಿಸಿ ಈ ಆಂದೋಲನವನ್ನು ಬಲಪಡಿಸಿದ ನಂತರವಷ್ಟೇ ಅವರು ಹೊಸ ರಾಜಕೀಯ ಪಕ್ಷವನ್ನು ಅಧಿಕೃತವಾಗಿ ಲಾಂಚ್ ಮಾಡಲಿದ್ದಾರೆ. ಈ ಹೊಸ ಪಕ್ಷವು ತಮಿಳುನಾಡಿನಲ್ಲಿ ಮುಂಬರುವ ವಿಧಾನಸಭಾ ಉಪಚುನಾವಣೆಗಳ ಮೂಲಕ ತನ್ನ ಮೊದಲ ರಾಜಕೀಯ ಪರೀಕ್ಷೆ ಎದುರಿಸಲಿದೆ ಎಂದು ಮೂಲಗಳು ತಿಳಿಸಿವೆ. ಅಣ್ಣಾಮಲೈ 2026ರ ಚುನಾವಣಾ ಕಣದಿಂದಲೂ ದೂರ ಉಳಿದು ಸೈಡ್ಲೈನ್ ಆಗಿದ್ದರು. ಇದೇ ಅಸಮಾಧಾನ ಈಗ ಅವರು ಪಕ್ಷವನ್ನೇ ತೊರೆಯುವ ಹಂತಕ್ಕೆ ತಂದು ನಿಲ್ಲಿಸಿದೆ ಎನ್ನಲಾಗಿದೆ.













Click it and Unblock the Notifications