Haveri lok Sabha: ಹಾವೇರಿಯಲ್ಲಿ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳು ಬದಲಾವಣೆ? ಶೆಟ್ಟರ್ಗೆ ಒಲಿಯುತ್ತಾ ಅದೃಷ್ಟ?
ಹಾವೇರಿ, ಮಾರ್ಚ್ 21: ಮಧ್ಯ ಕರ್ನಾಟಕದ ಜಿಲ್ಲೆಯಾದ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಘೋಷಣೆ ಆಗಿದೆ. ಆಭ್ಯರ್ಥಿಗಳು ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಇದೀಗ ಎರಡು ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಬದಲಾವಣೆ ಮಾಡುವ ಸಾಧ್ಯತೆಗಳು ಇವೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಚುನಾವಣೆ ವೇಳೆ ಏನು ಬೇಕಾದರೂ ನಡೆಯಬಹುದು ಎಂಬುದಕ್ಕೆ ಈ ಬಾರಿ ಹಾವೇರಿ ಲೋಕಸಭಾ ಕ್ಷೇತ್ರ ಸಾಕ್ಷಿ ಆಗಬಹುದು. ಅಭ್ಯರ್ಥಿಗಳು ಯಾರಿದ್ದಾರೆ ಎಂಬುದರ ಮೇಲೆ ಜಾತಿ ಮತ್ತು ಗೆಲುವಿನ ಲೆಕ್ಕಾಚಾರದ ಆಧಾರದಲ್ಲಿ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳು ಬದಲಾಗಬಹುದು ಎಂದು ಹೇಳಲಾಗುತ್ತಿದೆ.

ವರಿಷ್ಠರ ಒತ್ತಡಕ್ಕೆ ಮಣಿದು ಬೊಮ್ಮಾಯಿ ಸ್ಪರ್ಧೆ?
ಬಿಜೆಪಿಯಿಂದ ಕಣಕ್ಕಿಳಿದಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ತಾವು ಈ ಟಿಕೆಟ್ ಆಕಾಂಕ್ಷಿಯಾಗಿರಲಿಲ್ಲ. ಕೇಂದ್ರ ವರಿಷ್ಠರು ತೀರ್ಮಾನಿಸಿದ್ದಾರೆ. ಕೇಂದ್ರ ನಾಯಕರ ಮಾತಿನಂತೆ ನಡೆಯಬೇಕಾಗಿದೆ ಎಂದು ಪ್ರಚಾರ ವೇಳೆ ಸುದ್ದಿಗಾರರಿಗೆ ಬೊಮ್ಮಾಯಿಯವರು ತಿಳಿಸಿದ್ದರು. ಮೇಲ್ನೋಟಕ್ಕೆ ಬೊಮ್ಮಾಯಿಯವರು ಒತ್ತಡಕ್ಕೆ ಒಳಗಾಗಿ ಸ್ಪರ್ಧೆಗೆ ಇಳಿದರೇ ಎಂಬ ಅನುಮಾನ ವ್ಯಕ್ತವಾಗಿದೆ.
ಇನ್ನೂ ಹಾವೇರಿ ಕ್ಷೇತ್ರಕ್ಕೂ ಪಟ್ಟು ಹಿಡಿದಿದ್ದ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ವಿಚಾರದಲ್ಲಿ ನಿರಾಸೆಯಾಗುತ್ತಿದ್ದಂತೆ ಅವರು ಬೆಳಗಾವಿಯತ್ತ ಮುಖ ಮಾಡಿದರು. ಅಲ್ಲಿ ಇನ್ನೇನು ಬಿಜೆಪಿಯಿಂದ ಜಗದೀಶ್ ಶೆಟ್ಟರ್ ಸ್ಪರ್ಧೆ ಎಂದು ಅಧಿಕೃತಗೊಳ್ಳುವ ಮೂದಲೇ ಅವರು 'ಗೋ ಬ್ಯಾಕ್ ಅಭಿಯಾನ' ಎದುರಿಸಬೇಕಾಯಿತು.
ಜಗದೀಶ್ ಶೆಟ್ಟರ್ಗೆ ಒಲಿಯಲಿದೇ ಅದೃಷ್ಟ
ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಸ್ಪರ್ಧೆಗೆ ಸ್ಥಳೀಯ ಬಿಜೆಪಿ ಕೆಲ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು. ಇವರು ಲಿಂಗಾಯತ ನಾಯಕರು ಆಗಿರುವ ಕಾರಣ, ಹಾವೇರಿಯಲ್ಲಿ ಅಭ್ಯರ್ಥಿ ಬದಲಾವಣೆ ಮಾಡಲೇಬೇಕಾದಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿಯು ಪರಿಗಣಿಸಿ ಟಿಕೆಟ್ ನೀಡಬಹುದು. ಹಾಲಿ ಅಭ್ಯರ್ಥಿ ಬೊಮ್ಮಾಯಿಯವರ ಬದಲಾಗಿ ಶೆಟ್ಟರ್ ಅವರಿಗೆ ಅದೃಷ್ಟ ಒಲಿಯುವ ನಿರೀಕ್ಷೆಗಳು ಇವೆ.
ಬಿಜೆಪಿ ಮುಂದೆ ಕಾಂಗ್ರೆಸ್ ಅಭ್ಯರ್ಥಿ ಸಮವಾಗಿವಿಲ್ಲ?
ಕಾಂಗ್ರೆಸ್ ತನ್ನ ಶಾಸಕ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಕಣಕ್ಕಿಳಿಸಿದೆ. ಇವರ ಪ್ರಭಾವವು ಲೋಕಸಭಾ ಕ್ಷೇತ್ರದ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ಸೀಮಿತವಾಗಿದೆ. ಜಾತಿ ಲೆಕ್ಕಾಚಾರವೇನೋ ಸರಿಯಾಗಿದೆ. ಆದರೆ ವರ್ಚಸ್ಸು, ಪ್ರಭಾವವು ಬಿಜೆಪಿಯ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮುಂದೆ ಸಮವಾಗಿಲ್ಲ ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.

ಎಚ್ಕೆ ಪಾಟೀಲ್ಗೆ ಹಾವೇರಿ ಟಿಕೆಟ್?
ಹೀಗಾಗಿ ಈ ಭಾಗದ ಮತ್ತೊಬ್ಬ ಲಿಂಗಾಯತ ನಾಯಕರಾದ ಗದಗ ಜಿಲ್ಲೆಯಲ್ಲಿ ವರ್ಚಸ್ಸು ಹೊಂದಿರುವ ಕಾಂಗ್ರೆಸ್ನ ಮಾಜಿ ಸಚಿವ ಎಚ್ಕೆ ಪಾಟೀಲ್ ಅವರಿಗೆ ಕಾಂಗ್ರೆಸ್ ಮಣೆ ಹಾಕಲಿದೆ. ಹಾವೇರಿಯಿಂದ ಸ್ಪರ್ಧಿಸುವಂತೆ ಅವರ ಮನವೊಲಿಕೆಗೆ ಕಾಂಗ್ರೆಸ್ ನಾಯಕರು ಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಎಚ್ಕೆ ಪಾಟೀಲ್ ಅವರು ಬಸವರಾಜ ಬೊಮ್ಮಾಯಿ ಅವರ ಮುಂದೆ ಸಮವಾಗಿ ನಿಲ್ಲಬಲ್ಲ ನಾಯಕ ಎಂದು ಕಾಂಗ್ರೆಸ್ ಭಾವಿಸಿದೆ. ಹೀಗಾಗಿ ಜಾತಿ ಸಮೀಕರಣ ಆಧಾರದಲ್ಲಿ ಎಲ್ಲ ತಾಲೂಕು, ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸಮೀಕ್ಷೆ ಮೂಲಕ ಮಾಹಿತಿ ಸಂಗ್ರಹಿಸುತ್ತಿದೆ.
ಹಾವೇರಿ ಬಿಜೆಪಿಯ ಭದ್ರಕೋಟೆ: ಕಾಂಗ್ರೆಸ್ ಪ್ಲಾನ್ ಏನು?
ಮುಖ್ಯವಾಗಿ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಟ್ಟು 08 ಕ್ಷೇತ್ರಗಳ ಪೈಕಿ 07ರಲ್ಲಿ ಜಯ ಸಾಧಿಸಿದೆ. ಪ್ರತಿ ಬಾರಿಯು ಹಾವೇರಿ ಲೋಕಸಭಾ ಚುನಾವಣೆಯಲ್ಲಿ ಸೋಲುವ ಕಾಂಗ್ರೆಸ್ಗೆ ಈ ಭಾರಿ ಅದೃಷ್ಟ ಒಲಿಯಲಿದೆ ಎಂಬ ವಿಶ್ವಾಸದಲ್ಲಿ ಸ್ಥಳೀಯ ಮುಖಂಡರಿದ್ದಾರೆ. ಇದೆಲ್ಲ ಕಾರಣದಿಂದ ಎಚ್ಕೆ ಪಾಟೀಲ್ ಅವರನ್ನು ಹಾವೇರಿಗೆ ಕರೆತರಲು ಕಾಂಗ್ರೆಸ್ ನಾಯಕರು ಪ್ಲಾನ್ ನಡೆಸಿದ್ದಾರೆ ಎನ್ನಲಾಗಿದೆ.
ಲಿಂಗಾಯತರೇ ಹೆಚ್ಚಿರುವ ಹಾವೇರಿ ಕ್ಷೇತ್ರ
ಬಿಜೆಪಿ ಭದ್ರಕೋಟೆಯಾಗಿರುವ ಹಾವೇರಿಯಲ್ಲಿ 6.5 ಲಕ್ಷ ಲಿಂಗಾಯರು, ಅಲ್ಪಸಂಖ್ಯಾತರು, ಕುರುಬರು, ಮುಸ್ಲಿಮರು ತಲಾ ಮೂರು ಲಕ್ಷದಷ್ಟು ಇದ್ದಾರೆ. ಇಲ್ಲಿ ಲಿಂಗಾಯತ ಮತಗಳು ಹೆಚ್ಚಿರುವ ಕಾರಣ ಬಿಜೆಪಿಯಿಂದ ಯಾರೇ ಸ್ಪರ್ಧಿಸಿದರೂ ಗೆಲ್ಲಬಹುದೆಂಬ ಲೆಕ್ಕಾಚಾರದ ಜೊತೆಗೆ ಪ್ರಧಾನಿ ಮೋದಿ ಪ್ರಭಾವ ಇಲ್ಲಿ ವರ್ಕೌಟ್ ಆಗಲಿದೆ ಎಂಬ ನಂಬಿಕೆ ಬಿಜೆಪಿಗೆ ಇದೆ.
ಸದ್ಯ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಆರಂಭಿಸಿದ್ದಾರೆ. ಅಭ್ಯರ್ಥಿಗಳ ಬದಲಾವಣೆ ಕುರಿತು ಸ್ಥಳೀಯ ನಾಯಕರಿಗೆ ಮಾಹಿತಿ ಇಲ್ಲದಾಗಿದೆ. ಅವರೆಲ್ಲರು ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ರಾಜ್ಯಮಟ್ಟದಲ್ಲಿ ಅಭ್ಯರ್ಥಿಗಳ ಬದಲಾವಣೆಯ ಗುಸು ಗುಸು ನಡೆದಿದೆ.
ಆದಷ್ಟು ಶೀಘ್ರವೇ ಕರ್ನಾಟಕ ಬಿಜೆಪಿ ಹಾಗೂ ಕಾಂಗ್ರೆಸ್ನಿಂದ ಅಭ್ಯರ್ಥಿಗಳ ಬದಲಾವಣೆ ಕುರಿತು ಮಾಹಿತಿ ಹೊರ ಬೀಳುವ ಸಾಧ್ಯತೆ ಇದೆ.












Click it and Unblock the Notifications