ಮಹದಾಯಿ ವಿವಾದ: ಗೋವಾ ಸಿಎಂಗೆ ಮತ್ತೊಮ್ಮೆ ಸಿದ್ದು ಪತ್ರ
ಬೆಂಗಳೂರು, ಡಿಸೆಂಬರ್ 23 : ರಾಜ್ಯದಲ್ಲಿ ಮಹದಾಯಿ ನದಿ ನೀರಿನ ವಿವಾದ ತಾರಕ್ಕೇರಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರಿಗೆ ಪತ್ರ ಬರೆದಿದ್ದಾರೆ.
ಮಹದಾಯಿ ವಿವಾದ : ಮಹಾರಾಷ್ಟ್ರ, ಗೋವಾ ಸಿಎಂಗೆ ಸಿದ್ದು ಪತ್ರ
ಶುಕ್ರವಾರ ಮನೋಹರ್ ಪರಿಕ್ಕರ್ ಗೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ, ಮಹದಾಯಿ ವಿವಾದ ಕುರಿತು ಶೀಘ್ರವೇ ಮಾತುಕತೆಗೆ ದಿನಾಂಕ ಹಾಗೂ ಸ್ಥಳ ನಿಗದಿ ಮಾಡುವಂತೆ ಕೋರಿದ್ದಾರೆ. ಈ ಹಿಂದೆ ನಾನು ಬರೆದಿದ್ದ ಪತ್ರಕ್ಕೆ ತಾವು ಈವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ನೀಡಿಲ್ಲ ಎಂದು ಸಿದ್ದರಾಮಯ್ಯ ಅವರು ಈ ಹಿಂದೆ ಬರೆದಿದ್ದ ಪತ್ರದ ಬಗ್ಗೆ ಪರಿಕ್ಕರ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಪತ್ರಕ್ಕೆ ತಾವು ಪ್ರತಿಕ್ರಿಯೆ ನೀಡಿದ್ದೀರಿ. ಇದನ್ನು ಮಾಧ್ಯಮಗಳ ಮೂಲಕ ನಾನು ಗಮನಿಸಿದ್ದೇನೆ. ಫೆಬ್ರವರಿಯಲ್ಲಿ ಮತ್ತೆ ಟ್ರಿಬ್ಯುನಲ್ ಮುಂದೆ ವಿಚಾರಣೆ ಇದೆ. ಅಷ್ಟರೊಳಗೆ ಸಭೆ ಕರೆಯಿರಿ ಎಂದು ಪತ್ರದ ಮೂಲಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಭೆ ಕರೆಯುವ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಅವರಿಗೂ ಪತ್ರ ಬರೆದಿರವ ಬಗ್ಗೆ ಸಿದ್ದರಾಮಯ್ಯ ಅವರು ಇಂದಿನ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.