ಇಂದು ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕಾರ: 10 ಸಚಿವರು, ಒಬ್ಬರಿಗೆ ಡಿಸಿಎಂ ಹುದ್ದೆ, ಇಲ್ಲಿದೆ ಸಂಪೂರ್ಣ ಮಾಹಿತಿ
ಕನಕಪುರ ಬಂಡೆ ಖ್ಯಾತಿಯ ಡಿ.ಕೆ ಶಿವಕುಮಾರ್ ಅವರು ಜೂನ್ 3ರ ಬುಧವಾರ ಸಂಜೆ 4:05ಕ್ಕೆ ಬೆಂಗಳೂರಿನ ಲೋಕಭವನದಲ್ಲಿ ಗಾಜಿನಮನೆಯಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಡಿ.ಕೆ ಶಿವಕುಮಾರ್ ಅವರೊಂದಿಗೆ 11 ಜನ ಕಾಂಗ್ರೆಸ್ ನಾಯಕರು ಸಹ ಸಚಿವ ಸಂಪುಟ ಸೇರಲಿದ್ದಾರೆ. ಮೊದಲ ಹಂತದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ 11 ಜನರೂ ಸಹ ಸಿದ್ದರಾಮಯ್ಯ ಅವರ ಆಪ್ತರಾಗಿದ್ದಾರೆ. ಇದರೊಂದಿಗೆ ಉಪ ಮುಖ್ಯಮಂತ್ರಿಯಾಗಿಯೂ ಕಾಂಗ್ರೆಸ್ನ ಪ್ರಭಾವಿ ನಾಯಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಚಿವ ಸಂಪುಟಕ್ಕೆ 11 ಶಾಸಕರ ಪಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಹಸಿರು ನಿಶಾನೆ ತೋರಿಸಿದೆ. ಹಲವು ಕಸರತ್ತಿನ ನಂತರ ಸಚಿವ ಸಂಪುಟದ ಮೊದಲ ಪಟ್ಟಿ ಅಂತಿಮವಾಗಿದೆ.
ಸರಳ ಪ್ರಮಾಣವಚನ ಸಮಾರಂಭ
ಬೇರೆ ಬೇರೆ ಸಮಸ್ಯೆಗಳು ಇರುವ ಕಾರಣಕ್ಕೆ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಸರಳವಾಗಿ ಮಾಡಲಾಗುತ್ತಿದೆ ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ವಿಧಾನಸೌಧದ ಮುಂಭಾಗದಲ್ಲಿ ಡಿ.ಕೆ ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿ, ಶಕ್ತಿ ಪ್ರದರ್ಶನ ಮಾಡಲಿದ್ದಾರೆ ಎಂದೇ ಹಲವರು ಅಂದಾಜಿಸಿದ್ದರು. ಆದರೆ ಡಿ.ಕೆ ಶಿವಕುಮಾರ್ ಅವರು ಸಂಯಮ ಕಾಪಾಡಿಕೊಂಡಿದ್ದಾರೆ. ಅಲ್ಲದೆ ರಾಜಕೀಯ ತಂತ್ರಗಾರಿಕೆ ಅನುಸರಿಸಿದ್ದಾರೆ.

ಸಿದ್ದರಾಮಯ್ಯ ಆಪ್ತರಿಗೆ ಮಣೆ
ಡಿಕೆ ಶಿವಕುಮಾರ್ ಸಚಿವ ಸಂಪುಟದಲ್ಲಿ ಮೊದಲ ಹಂತದಲ್ಲಿ ಸಿದ್ದರಾಮಯ್ಯ ಅವರ ಆಪ್ತರಿಗೆ ಮಣೆ ಹಾಕಲಾಗಿದೆ. ಸಿದ್ದರಾಮಯ್ಯ ಅವರು ತಮ್ಮ ಆಪ್ತರಿಗೆ ಡಿಕೆ ಶಿವಕುಮಾರ್ ಅವರೊಂದಿಗೆ ಪ್ರಮಾಣವಚನ ಸ್ವೀಕಾರಕ್ಕೆ ಅವಕಾಶ ಮಾಡಿಕೊಡಬೇಕು ಹಾಗೂ ಎಲ್ಲರಿಗೂ ಈ ಹಿಂದೆ ನೀಡಲಾಗಿದ್ದ ಖಾತೆಗಳನ್ನೇ ನೀಡಬೇಕು ಎಂದು ಹೈಕಮಾಂಡ್ಗೆ ಒತ್ತಡ ಹೇರಿದ್ದರು ಎನ್ನಲಾಗಿದೆ. ಪ್ರಮಾಣವಚನ ಸ್ವೀಕರಿಸುತ್ತಿರುವವರಲ್ಲಿ 10 ಜನ ಈಗಾಗಲೇ ಸಚಿವರಾಗಿದ್ದವರು.
ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ
ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಸಹ ಡಿ.ಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಮಂತ್ರಿಯಾಗಲಿದ್ದಾರೆ. ಈಗಾಗಲೇ ಯತೀಂದ್ರ ಸಿದ್ದರಾಮಯ್ಯ ಅವರು ಮಂತ್ರಿ ಆಗುವುದು ಬಹುತೇಕ ಅಂತಿಮವಾಗಿದೆ. ಯಾವ ಖಾತೆ ಸಿಗಲಿದೆ ಎನ್ನುವುದಷ್ಟೇ ಸದ್ಯ ಉಳಿದಿರುವ ಕುತೂಹಲವಾಗಿದೆ.
ಯಾರೆಲ್ಲ ಭಾಗಿಯಾಗಲಿದ್ದಾರೆ
ಡಿ.ಕೆ ಶಿವಕುಮಾರ್ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಹೈಕಮಾಂಡ್ನ ಹಲವು ನಾಯಕರು ಸಾಕ್ಷಿಯಾಗಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ ವೇಣುಗೋಪಾಲ್, ಸುರ್ಜೆವಾಲ, ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರುಗಳು, ಸಂಸದರು ಸರ್ವಧರ್ಮ ಗುರುಗಳು, ಕನಕಪುರ ದೊಡ್ಡಾಲಹಳ್ಳಿ ಸರಕಾರಿ ಶಾಲೆ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಹಲವರು ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ.
ಯಾರೆಲ್ಲ ಆಗಲಿದ್ದಾರೆ ನೂತನ ಸಚಿವರು - ಉಪ ಮುಖ್ಯಮಂತ್ರಿ
ಮೊದಲ ಹಂತದಲ್ಲಿ 11 ಜನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಚಿವ ಸಂಪುಟಕ್ಕೆ ಮೊದಲ ಬಾರಿ ಯತೀಂದ್ರ ಸಿದ್ದರಾಮಯ್ಯ ಅವರು ಸೇರ್ಪಡೆಯಾಗಲಿದ್ದಾರೆ. ಜಿ ಪರಮೇಶ್ವರ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗಿದ್ದು, ಇಬ್ಬರಿಗೂ ಸಚಿವಗಿರಿ ಸಿಗುವುದು ಬಹುತೇಕ ಅಂತಿಮವಾಗಿದೆ. ಈಗಾಗಲೇ ಸಚಿವರಾಗಿದ್ದವರಿಗೆ ಡಿ.ಕೆ ಶಿವಕುಮಾರ್ ಅವರ ಸಚಿವ ಸಂಪುಟದಲ್ಲೂ ಅದೇ ಖಾತೆಗಳನ್ನು ನೀಡಲಾಗುತ್ತಿದೆ.
1) ಯತೀಂದ್ರ ಸಿದ್ದರಾಮಯ್ಯ
2) ಜಿ. ಪರಮೇಶ್ವರ್
3) ಕೆ.ಎಚ್.ಮುನಿಯಪ್ಪ
4) ಯು.ಟಿ.ಖಾದರ್
5) ಕೆ.ಜೆ.ಜಾರ್ಜ್
6) ಕೃಷ್ಣ ಬೈರೇಗೌಡ
7) ಎಂ.ಬಿ ಪಾಟೀಲ್
8) ಪ್ರಿಯಾಂಕ್ ಖರ್ಗೆ
9) ಸತೀಶ್ ಜಾರಕಿಹೊಳಿ
10) ರಾಮಲಿಂಗಾರೆಡ್ಡಿ
11) ದಿನೇಶ್ ಗುಂಡೂರಾವ್












Click it and Unblock the Notifications