ಆಂಧ್ರದ ಕರ್ನೂಲ್ನಲ್ಲಿ ಮಿತಿ ಮೀರಿದ ಆರ್ಸಿಬಿ ಗೆಲುವಿನ ಸಂಭ್ರಮಾಚರಣೆ; ಬಿಸಿ ಮುಟ್ಟಿಸಿದ ಪೊಲೀಸರು
RCB Fans: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2026ರ ಟ್ರೋಫಿ ಗೆದ್ದ ಸಂಭ್ರಮವು ಕೆಲವು ಕಡೆಗಳಲ್ಲಿ ವಿಕೋಪಕ್ಕೆ ತಿರುಗಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಆರ್ಸಿಬಿ ಗೆಲುವು ಸಾಧಿಸುತ್ತಿದ್ದಂತೆ ದೇಶದ ವಿವಿಧ ಭಾಗಗಳಲ್ಲಿ ಅಭಿಮಾನಿಗಳು ರಸ್ತೆಗಿಳಿದು ವಿಜಯೋತ್ಸವ ಆಚರಿಸಿದ್ದರು. ಆದರೆ ಆಂಧ್ರಪ್ರದೇಶದ ಕರ್ನೂಲ್ನಲ್ಲಿ ಈ ಸಂಭ್ರಮಾಚರಣೆಯು ಗಲಭೆಯಾಗಿ ಮಾರ್ಪಟ್ಟಿತ್ತು. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿ, ಬಸ್ಗಳ ಮೇಲೆ ಕಲ್ಲು ತೂರಾಟ ನಡೆಸಿದ ಅಭಿಮಾನಿಗಳಿಗೆ ಕರ್ನೂಲ್ ಪೊಲೀಸರು ಬಿಸಿ ಮುಟ್ಟಿಸುವ ಕೆಲಸವನ್ನು ಮಾಡಿದ್ದಾರೆ.
ಸಾರ್ವಜನಿಕ ಶಾಂತಿಗೆ ಭಂಗ ತಂದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಷ್ಟೇ ಅಲ್ಲದೆ, ಅವರಿಗೆ ಸಾರ್ವಜನಿಕವಾಗಿಯೇ ತಕ್ಕ ಶಿಕ್ಷೆ ನೀಡಿದ್ದಾರೆ. ಪ್ರಸ್ತುತ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಆರ್ಸಿಬಿ ಗೆಲುವಿನ ಬಳಿಕ ಕರ್ನೂಲ್ನಲ್ಲಿ ಸಾರಿಗೆ ಬಸ್ಗಳ ಗಾಜುಗಳನ್ನು ಪುಡಿ ಮಾಡಿ, ರಸ್ತೆಯಲ್ಲಿ ದಾಂಧಲೆ ಸೃಷ್ಟಿಸಿದ್ದ ಕಿಡಿಗೇಡಿಗಳನ್ನು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತಕ್ಷಣವೇ ಗುರುತಿಸಿ ಬಂಧಿಸಿದ್ದರು.

ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸಿದ ಪೊಲೀಸರು
ಕೃತ್ಯ ಎಸಗಿದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಕರ್ನೂಲ್ ಪೊಲೀಸರು ಅವರನ್ನು ಪೊಲೀಸ್ ಠಾಣೆಯಿಂದ ಕೋರ್ಟ್ವರೆಗೆ ನಡುರಸ್ತೆಯಲ್ಲೇ ಬರಿಗಾಲಿನಲ್ಲಿ ನಡೆಸಿ ಕರೆದುಕೊಂಡು ಹೋಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸಾರ್ವಜನಿಕ ಆಸ್ತಿಯನ್ನು ಧ್ವಂಸಗೊಳಿಸಿದರೆ ಮತ್ತು ಕಾನೂನನ್ನು ಕೈಗೆತ್ತಿಕೊಂಡರೆ ಪರಿಸ್ಥಿತಿ ಏನಾಗುತ್ತದೆ ಎಂಬುದಕ್ಕೆ ಈ ಖಡಕ್ ಸಂದೇಶವೇ ಪ್ರಮುಖ ಸಾಕ್ಷಿಯಾಗಿದೆ.
ಸರ್ಕಾರಿ ಬಸ್ಗಳ ಮೇಲೆ ಕಲ್ಲು ತೂರಾಟ
ಭಾನುವಾರ ರಾತ್ರಿ ಆರ್ಸಿಬಿ ತಂಡವು ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿ ಚಾಂಪಿಯನ್ ಆಗುತ್ತಿದ್ದಂತೆ ಕರ್ನೂಲ್ ನಗರದ ಪ್ರಮುಖ ರಸ್ತೆಗಳಲ್ಲಿ ನೂರಾರು ಅಭಿಮಾನಿಗಳು ಜಮಾಯಿಸಿದ್ದರು. ಆರಂಭದಲ್ಲಿ ಸಾಧಾರಣವಾಗಿದ್ದ ಸಂಭ್ರಮಾಚರಣೆ ತಡರಾತ್ರಿ ಆಗುತ್ತಿದ್ದಂತೆ ಹದ್ದುಮೀರಿತು. ಈ ವೇಳೆ ಕೆಲ ಕಿಡಿಗೇಡಿಗಳ ಗುಂಪು ರಸ್ತೆಯಲ್ಲಿ ಸಂಚರಿಸುತ್ತಿದ್ದ ಸರ್ಕಾರಿ ಬಸ್ಗಳನ್ನು ತಡೆದು ಕಲ್ಲು ತೂರಾಟ ನಡೆಸಿದ್ದರು.
ಇದರ ಪರಿಣಾಮ ಬಸ್ನಲ್ಲಿದ್ದ ಪ್ರಯಾಣಿಕರು ಮತ್ತು ಸಾರ್ವಜನಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು. ಅಲ್ಲದೆ ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸಿ ಅವರನ್ನು ವಶಕ್ಕೆ ಪಡೆದಿದ್ದರು. ಪೊಲೀಸರ ಈ ನಡೆಗೆ ಸಾರ್ವಜನಿಕರಿಂದ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.
'ಅಭಿಮಾನ ಎನ್ನುವುದು ಕ್ರೀಡಾಂಗಣಕ್ಕೆ ಸೀಮಿತವಾಗಿರಬೇಕು. ಅದನ್ನು ಬಿಟ್ಟು ರಸ್ತೆಯಲ್ಲಿ ಸಾರ್ವಜನಿಕರ ವಾಹನಗಳನ್ನು ಜಖಂಗೊಳಿಸುವುದು ಸರಿಯಲ್ಲ,' ಎಂದು ನೆಟ್ಟಿಗರು ಅಂಧಾಭಿಮಾನಿಗಳ ವಿರುದ್ಧ ಕೆಂಡಕಾರಿದ್ದಾರೆ. ಅಲ್ಲದೆ, 'ಕ್ರಿಕೆಟ್ ಮೇಲಿನ ಪ್ರೀತಿ ಅಥವಾ ನೆಚ್ಚಿನ ತಂಡದ ಗೆಲುವಿನ ಸಂಭ್ರಮವು ಎಂದಿಗೂ ಸಾರ್ವಜನಿಕರ ನೆಮ್ಮದಿಗೆ ಭಂಗ ತರಬಾರದು,' ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಪೊಲೀಸರ ಈ ಕಠಿಣ ಕ್ರಮವು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಮುನ್ನೆಚ್ಚರಿಕೆಯಾಗಿದೆ ಎಂದರೆ ತಪ್ಪಾಗಲಾರದು.












Click it and Unblock the Notifications