ಹಾವೇರಿ: ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ; 300 ಕ್ಕೂ ಹೆಚ್ಚು ಜನರ ಮೇಲೆ ದೂರು
ಹಾವೇರಿ, ಸೆಪ್ಟೆಂಬರ್ 21: ರಾಣೇಬೆನ್ನೂರು ನಗರದಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡುವ ವೇಳೆ 300ರಿಂದ 500 ಜನರ ಅನ್ಯಕೋಮಿನ ಗುಂಪು ಹಿಂದೂ ಕಾರ್ಯಕರ್ತರ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.
ಮಂಗಳವಾರ ತಡರಾತ್ರಿ ಕಾಕಿ ಗಲ್ಲಿಯ ಗಣಪತಿ ವಿಸರ್ಜನಾ ಮೆರವಣಿಗೆ ನಡೆದಿದ್ದು, ದರ್ಗಾ ಸರ್ಕಲ್ಗೆ ಬಂದಾಗ ಅನ್ಯಕೋಮಿನ ಗುಂಪು ದಾಳಿ ಮಾಡಿದ್ದಾರೆ. ಘಟನೆಯಲ್ಲಿ ಹಲವು ಯುವಕರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ನಿಲ್ಲದ ಔಷಧಿ ದಂಧೆ; ಇಬ್ಬರು ಅಮಾನತು
ಘಟನೆ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ದರ್ಗಾ ಸರ್ಕಲ್ನಲ್ಲಿ ಸೇರಿದ್ದ ನೂರಾರು ಜನರನ್ನು ಚದುರಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ಹನುಮಂತರಾಯ, ಹೆಚ್ಚುವರಿ ಎಸ್ಪಿ ವಿಜಯಕುಮಾರ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನೂ ಚಾಕು ಇರಿತವಾಗಿದೆ ಎಂಬ ಗಾಳಿ ಸುದ್ದಿ ಕೂಡ ಹಬ್ಬಿತ್ತು. ಆದರೆ ಪೊಲೀಸ್ ಅಧಿಕಾರಿಗಳು ವದಂತಿ ಎಂದು ಖಚಿತಪಡಿಸಿದ್ದಾರೆ. ಆದರೆ ಕಲ್ಲು ತೂರಾಟ ಮಾಡಿದ ಆರೋಪದ ಮೇಲೆ ಸುಮಾರು 300ಕ್ಕೂ ಹೆಚ್ಚು ಮಂದಿ ಮೇಲೆ ಎಫ್ಐಆರ್ ದಾಖಲಾಗಿದೆ.
ಘಟನೆ ಬಗ್ಗೆ ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಟ್ವೀಟ್ ಮಾಡಿದ್ದು, ''ರಾಣೇಬೆನ್ನೂರು ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಗಲಾಟೆಯಾಗಿ ಯುವಕರಿಗೆ ಚೂರಿ ಇರಿತವಾಗಿರುವ ಸುದ್ದಿ ಇರುವ ವಿಡಿಯೋ ವೈರಲ್ ಆಗಿದ್ದು, ಸದರಿ ಸುದ್ದಿಯು ಸುಳ್ಳು ಸುದ್ದಿಯಾಗಿರುತ್ತದೆ. ರಾಣೆಬೆನ್ನೂರಿನಲ್ಲಿ ಚೂರಿ ಇರಿತದ ಯಾವುದೇ ಘಟನೆಗಳು ವರದಿಯಾಗಿರುವುದಿಲ್ಲ. ಸಾರ್ವಜನಿಕರು ಶಾಂತ ರೀತಿಯಿಂದ ವರ್ತಿಸಲು ಈ ಮೂಲಕ ಕೋರಲಾಗಿದೆ'' ಎಂದು ಮನವಿ ಮಾಡಿದ್ದಾರೆ.
ಹಿಂದೂ ಸಂಘಟನೆಯಿಂದ ಪ್ರತಿಭಟನೆ
ತಡರಾತ್ರಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಅನ್ಯಕೋಮಿನ ಯುವಕರು ಗಲಾಟೆ ಮಾಡಿದ ಹಿನ್ನೆಲೆ ಆಕ್ರೋಶಗೊಂಡ ಹಿಂದೂ ಯುವಕರು ರಾಣೆಬೆನ್ನೂರು ನಗರದ ದರ್ಗಾದ ಸರ್ಕಲ್ ಬಳಿ ತಡರಾತ್ರಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದರ್ಗಾ ಸರ್ಕಲ್ನಲ್ಲಿ ಹೆಚ್ಚಿನ ಜನರು ಸೇರುತ್ತಿದ್ದ ಹಿನ್ನೆಲೆ ಪೊಲೀಸರು ಲಾಠಿ ಚಾರ್ಜ್ ಮಾಡಿ ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ.