ಕರಾಚಿ ಪ್ರಾಜೆಕ್ಟ್ ರೆಡಿ: ಭಟ್ಕಳ ಸಿಡಿಸಿದ ಮತ್ತೊಂದು ಬಾಂಬ್
ನವದೆಹಲಿ, ಸೆ.4: 'ಕರಾಚಿ ಪ್ರಾಜೆಕ್ಟ್' ಹೆಸರಿನಲ್ಲಿ ದೇಶದ ನೂರಾರು ಕಡೆ ಸ್ಫೋಟ ಮಾಡಿ ಅಶಾಂತಿ, ಅರಾಜಕತೆ, ಭಯೋತ್ಪಾದನೆ ಹಬ್ಬಿಸಲು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ 30 ಮಂದಿ ಉಗ್ರರು ಸಜ್ಜಾಗಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ಬಂಧಿತ ಉಗ್ರ ಯಾಸಿನ್ ಭಟ್ಕಳ ಬಹಿರಂಗ ಪಡಿಸಿದ್ದಾನೆ.
ವಿಚಾರಣೆ ಸಂದರ್ಭದಲ್ಲಿ ಯಾಸಿನ್ ಈ ಸ್ಫೋಟಕ ಮಾಹಿತಿ ಬಗ್ಗೆ ಬಾಯ್ಬಿಟ್ಟಿದ್ದಾನೆ ಎಂದು ಬೇಹುಗಾರಿಕಾ ಮೂಲಗಳು ತಿಳಿಸಿವೆ. ನೂರಾರು ಕಡೆ ದಾಳಿ ಮಾಡುವಷ್ಟು ನಮ್ಮ ಬಳಿ ಸ್ಫೋಟಕಗಳಿವೆ. ಇಂತಹ ದಾಳಿಗಳನ್ನು ನಡೆಸಲೆಂದೇ ಇಂಡಿಯನ್ ಮುಜಾಹಿದ್ದೀನ್ ಉಗ್ರರು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಮಾಹಿತಿ ನೀಡಿದ್ದಾನೆ.

ಎಲ್ಲಾ 30 ಮಂದಿ ಉಗ್ರರು ಈಗಾಗಲೇ ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ಸಂಚಾರ ಮಾಡುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಯಾಸಿನ್ ಹೊರಹಾಕಿದ್ದಾನೆ ಎನ್ನಲಾಗಿದೆ.
ಏನಿದು Karachi Project?:
ಕರಾಚಿ ಪ್ರಾಜೆಕ್ಟ್ ಎಂದರೆ ಭಾರತದ ಜನತೆಯಲ್ಲಿ ಅಗಾಧ ಭಯ, ಆತಂಕವನ್ನು ಉಂಟು ಮಾಡುವುದೇ ಕರಾಚಿ ಪ್ರಾಜೆಕ್ಟಿನ ಮುಖ್ಯ ಉದ್ದೇಶ. ಹೆಚ್ಚು ಆಕ್ರಮಣಕಾರಿಯಿಂದ ದಾಳಿ ಮಾಡಿ ಭಾರತೀಯರ ಮನಸ್ಸಿನಲ್ಲಿ ಅತಿಯಾದ ಭಯ ಮತ್ತು ಸಾವು-ನೋವು ಉಂಟು ಮಾಡಬೇಕು ಎಂಬುದೇ ಮುಖ್ಯ ಧ್ಯೇಯ. ಗಮನಾರ್ಹವೆಂದರೆ 2003 ರಲ್ಲೇ ಪಾಕಿಸ್ತಾನದ ISI ಸಂಘಟನೆ ಕರಾಚಿ ಪ್ರಾಜೆಕ್ಟಿಗೆ ಜನ್ಮ ನೀಡಿತ್ತು.
ಆದರೆ, ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಇದನ್ನು 5 ವರ್ಷಗಳ ಬಳಿಕ ಅದನ್ನು ತನ್ನ ಕಾರ್ಯಾಚರಣೆಯನ್ನಾಗಿಸಿಕೊಂಡಿತು ಎಂದೂ ಯಾಸಿನ್ ತಿಳಿಸಿದ್ದಾನೆ.
ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ನೇತೃತ್ವವನ್ನು ನನ್ನ ಸೋದರರಾದ ರಿಯಾಜ್ ಮತ್ತು ಇಕ್ಬಾಲ್ ಭಟ್ಕಳ್ ಅವರು 2008ರ ತನಕ ವಹಿಸಿಕೊಂಡಿದ್ದರು. ನಾನು ಆಗ ತಾನೆ ಐಎಂ ಸಂಘಟನೆಗೆ ಸೇರಿಕೊಂಡಿದ್ದಾಗ ಅಂದರೆ, ಮೊಟ್ಟ ಮೊದಲ ಬಾರಿಗೆ ಕರಾಚಿ ಪ್ರಾಜೆಕ್ಟ್ ಎಂಬ ವಿಚಾರ ನನ್ನ ಕಿವಿಗೆ ಬಿದ್ದಿದ್ದು 2008ರಲ್ಲಿ ಎಂದೂ NIA ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಈ Karachi Projectಗೆ ಹಣಕಾಸು ಸಹಾಯವನ್ನು ಅಧಿಕೃತವಾಗಿ ಪಾಕಿಸ್ತಾನವೇ IM ಸಂಘಟನೆಗೆ ಮಾಡಿದೆ.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ಪರಮೋಚ್ಚ ನಾಯಕ ಎಲ್.ಕೆ.ಅಡ್ವಾಣಿ ಸೇರಿದಂತೆ 10 ಮಂದಿ ಪ್ರಮುಖ ರಾಜಕೀಯ ನಾಯಕರನ್ನು ಗುರಿಯಾಗಿಟ್ಟುಕೊಂಡು ಅವರ ಮೇಲೆ ದಾಳಿ ನಡೆಸಲು ಯೋಚನೆ ಮಾಡಲಾಗಿತ್ತು ಎಂಬ ಮಾಹಿತಿ ಕೂಡ ಬೆಳಕಿಗೆ ಬಂದಿದೆ ಎನ್ನಲಾಗಿದೆ.












Click it and Unblock the Notifications