ಸೇನೆ ಮೇಲೆ ದಾಳಿಗೆ ಅಮೆರಿಕದ ಬುಲೆಟ್ ಬಳಸಿದ್ದ ಉಗ್ರರು!
ಶ್ರೀನಗರ: ಕಣಿವೆ ರಾಜ್ಯದ ಪೂಂಚ್ ಜಿಲ್ಲೆಯಲ್ಲಿ ಭಾರತೀಯ ಸೇನಾ ವಾಹನದ ಮೇಲೆ ಭೀಕರ ದಾಳಿ ನಡೆಸಿ, 5 ಯೋಧರ ಸಾವಿಗೆ ಕಾರಣವಾದ ಉಗ್ರರ ಬೇಟೆಗೆ ಸರ್ಚಿಂಗ್ ಮುಂದುವರಿದಿದೆ. ಈ ಹೊತ್ತಲ್ಲೇ ಬೆಚ್ಚಿಬೀಳಿಸುವ ಮಾಹಿತಿ ಸಿಕ್ಕಿದ್ದು, ಭಾರತೀಯ ಸೇನಾ ವಾಹನದ ಮೇಲೆ ದಾಳಿ ಮಾಡಲು ಉಗ್ರರು ಅಮೆರಿಕದಲ್ಲಿ ತಯಾರಾಗಿದ್ದ ಬುಲೆಟ್ಸ್ ಬಳಸಿರುವ ವಿಚಾರ ಬಯಲಾಗಿದೆ.
ಲಷ್ಕರ್-ಎ-ತೈಬಾ ಅಥವಾ ಜೈಷ್-ಎ-ಮೊಹಮದ್ ಉಗ್ರ ಸಂಘಟನೆಗಳು ದಾಳಿ ನಡೆಸಿವೆ ಎನ್ನಲಾಗಿದೆ. ಉಗ್ರರ ಕೈಗೆ ಅಮೆರಿಕದ ಗುಂಡುಗಳು ಸಿಕ್ಕಿದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಮೂಲಗಳ ಪ್ರಕಾರ ಅಫ್ಘಾನಿಸ್ತಾನ ಬಿಟ್ಟು ಹೋಗುವಾಗ ಅಮೆರಿಕ ಸೇನಾ ಪಡೆ ಉಳಿಸಿದ್ದ ಬುಲೆಟ್ಗಳು ಪಾಪಿ ಪಾಕಿಸ್ತಾನದ ಉಗ್ರರ ಕೈಗೆ ಸಿಕ್ಕಿವೆ ಎನ್ನಲಾಗುತ್ತಿದೆ. ತಾಲಿಬಾನಿಗಳ ಪಾಲಾಗಿರುವ ಅಮೆರಿಕದ ಗುಂಡುಗಳು ಹಾಗೂ ಶಸ್ತ್ರಾಸ್ತ್ರ ಇದೀಗ ಪಾಕಿಸ್ತಾನಿ ಉಗ್ರರನ್ನು ತಲುಪಿವೆ ಎಂಬ ಮಾಹಿತಿ ಸಂಚಲನ ಸೃಷ್ಟಿಸಿದೆ. ಭವಿಷ್ಯದಲ್ಲಿ ಇದರಿಂದ ದೊಡ್ಡ ಆಪತ್ತು ಎದುರಾಗುವ ಚಿಂತೆ ಶುರುವಾಗಿದೆ.

ಕಾಡಿನ ಮೂಲೆ ಮೂಲೆಯಲ್ಲೂ ಸರ್ಚಿಂಗ್
ಭಾರತೀಯ ಸೇನಾ ವಾಹನದ ಮೇಲೆ ದಾಳಿ ಮಾಡಿ 5 ಯೋಧರ ಸಾವಿಗೆ ಕಾರಣವಾಗಿರುವ ಉಗ್ರರು ಪಾಕಿಸ್ತಾನಿ ನೆಲದ ಭಯೋತ್ಪಾದಕರು ಎಂದು ಹೇಳಲಾಗುತ್ತಿದೆ. ಮತ್ತೊಂದು ಕಡೆ ದಾಳಿ ನಡೆಸಿದ ಬಳಿಕ ಸುತ್ತಮುತ್ತಲ ದಟ್ಟ ಅರಣ್ಯದಲ್ಲಿ ಉಗ್ರರು ಅಡಗಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಕಾಡಿನ ಮೂಲೆ ಮೂಲೆಯಲ್ಲೂ ಹುಡುಕಾಟ ನಡೆಯುತ್ತಿದೆ. ಡ್ರೋನ್ ಸೇರಿದಂತೆ ಹೆಲಿಕಾಪ್ಟರ್ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಉಗ್ರರ ಬೇಟೆಗೆ ಬಲೆ ಹೆಣೆಯಲಾಗಿದೆ. ಸ್ಥಳೀಯರ ನೆರವು ಉಗ್ರರಿಗೆ ಸಿಕ್ಕಿದೆಯಾ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಉಗ್ರರ ಹೆಣ ಬೀಳುವುದು ಪಕ್ಕಾ!
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಾರತೀಯ ಸೇನಾ ವಾಹನದ ಮೇಲೆ ಭೀಕರ ದಾಳಿ ನಡೆಸಿ, 5 ಯೋಧರ ಸಾವಿಗೆ ಕಾರಣವಾಗಿರುವ ಉಗ್ರರ ಹೆಣ ಬೀಳಿಸಲು ಸೇನೆ ಪಣತೊಟ್ಟಿದೆ. ಈ ಬಗ್ಗೆ ನಿನ್ನೆಯಷ್ಟೇ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಉಗ್ರರಿಗೆ ಖಡಕ್ ಸಂದೇಶ ರವಾನಿಸಿದ್ದರು. ಸೇನಾ ವಾಹನಕ್ಕೆ ಬೆಂಕಿ ಬಿದ್ದಾಗ ಜೀವ ಉಳಿಸಿಕೊಂಡು, ಚಿಕಿತ್ಸೆ ಪಡೆಯುತ್ತಿರುವ ಯೋಧನ ಯೋಗಕ್ಷೇಮ ವಿಚಾರಿಸಿ ಮಾಹಿತಿ ಪಡೆದ ನಂತರ ಎಚ್ಚರಿಕೆ ನೀಡಿದ್ದರು ಲೆಫ್ಟಿನೆಂಟ್ ಜನರಲ್. ಈ ಎಲ್ಲಾ ಬೆಳವಣಿಗೆ ನೋಡುತ್ತಿದ್ದರೆ ಉಗ್ರರಿಗೆ ಈ ಬಾರಿ ತಕ್ಕಪಾಠ ಕಲಿಸುವುದ ಪಕ್ಕಾ ಆಗಿದೆ.
ಶಂಕಿತ ಉಗ್ರರ ವಿಚಾರಣೆ
ಇನ್ನು ಐವರು ಸೈನಿಕರು ಹುತಾತ್ಮರಾದ ಘಟನೆಗೆ ಸಂಬಂಧಿಸಿದಂತೆ ಇದುವರೆಗೂ 12 ಶಂಕಿತ ಉಗ್ರರನ್ನ ಬಂಧಿಸಿ ವಿಚಾರಣೆ ನಡೆಸಲಾಗಿದೆ. ಪಾಕಿಸ್ತಾನದ ಬೆಂಬಲದಿಂದಲೇ ದಾಳಿ ನಡೆಸಲಾಗಿದೆ ಎಂಬುದು ಕೂಡ ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಹೀಗಾಗಿ ಗಡಿ ಭಾಗದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಮತ್ತಷ್ಟು ಉಗ್ರರು ಒಳನುಸುಳಿ ಬಂದಿರುವ ಸಾಧ್ಯತೆ ಕೂಡ ಇದ್ದು, ಸೇನಾ ವಾಹನದ ಮೇಲೆ ದಾಳಿ ನಡೆದ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮತ್ತೊಂದು ಕಡೆ ಕೇಂದ್ರ ಸರ್ಕಾರ ಕೂಡ ಈ ಘಟನೆಯನ್ನ ಗಂಭೀರವಾಗಿ ಪರಿಗಣಿಸಿದ್ದು, ಸೇನಾ ಕಾರ್ಯಾಚರಣೆ ಮುಂದುವರಿದಿದೆ.

ಪುಲ್ವಾಮಾ ದಾಳಿಯ ಭೀಕರತೆ
4 ವರ್ಷಗಳ ಹಿಂದೆ ನಡೆದಿದ್ದ ಪುಲ್ವಾಮಾ ದಾಳಿ ಕೂಡ ಉಗ್ರರ ಇಂತಹದ್ದೇ ಭೀಕರ ಕೃತ್ಯಗಳಿಗೆ ಸಾಕ್ಷಿಯಾಗಿತ್ತು. ಫೆಬ್ರವರಿ 14, 2019ರಂದು ಭಾರತೀಯ ಸೇನಾ ವಾಹನದ ಮೇಲೆ ದಾಳಿ ನಡೆದ ಪರಿಣಾಮ 40 ಯೋಧರು ಹುತಾತ್ಮರಾಗಿದ್ದರು. ಜೊತೆಗೆ ಪದೇಪದೆ ಕಣಿವೆ ರಾಜ್ಯದಲ್ಲಿ ಭಾರತೀಯ ಸೇನೆಯನ್ನೇ ಗುರಿಯಾಗಿಸಿಕೊಂಡು ಉಗ್ರರು ಅಟ್ಯಾಕ್ ಮಾಡುತ್ತಿದ್ಧಾರೆ. ಸುತ್ತಮುತ್ತಲ ಪ್ರದೇಶಗಳಲ್ಲಿ ತಪಾಸಣೆ ತೀವ್ರಗೊಂಡಿದೆ. ಘಟನೆ ನಡೆದ ಪ್ರದೇಶದ ಸಮೀಪದಲ್ಲೇ ಉಗ್ರರು ಅಡಗಿರುವ ಸಾಧ್ಯತೆ ಇದೆ.












Click it and Unblock the Notifications