'ಲೋಕ ಕಂಟಕ' ಭಾರದ್ವಾಜ್ ಗೆ ಯಡಿಯೂರಪ್ಪ ಆವಾಜ್
'ನ್ಯಾ. ಬನ್ನೂರುಮಠರ ಹೆಸರನ್ನು ಶಿಫಾರಸು ಮಾಡಿರುವ ಮುಖ್ಯಮಂತ್ರಿ ಸದಾನಂದ ಗೌಡ ನೇತೃತ್ವದ ಉನ್ನತಮಟ್ಟದ ಸಮಿತಿಗೆ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ಅನೇಕ ಬಾರಿ ಮಂಗಳಾರತಿ ಎತ್ತಿ ವಾಪಸ್ ಕಳಿಸಿದ್ದಾರೆ. ಇದು ನ್ಯಾಯಸಮ್ಮತವಲ್ಲ. ರಾಜ್ಯಪಾಲರು ತಮ್ಮ ಜವಾಬ್ದಾರಿ ಎಷ್ಟಿದೆಯೋ ಅಷ್ಟು ನಿರ್ವಹಿಸಲಿ. ಇಲ್ಲವಾದರೆ...' ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಇಲ್ಲವಾದರೆ ಏನಪಾ ಮಾಡ್ತಾರೆ ಯಡಿಯೂರಪ್ಪ ಅಂದರೆ ಭಾರದ್ವಾಜರು ಈ ಹಿಂದೆ ನಡೆಸಿರುವ ಅಕ್ರಮಗಳನ್ನೆಲ್ಲ ಡಂಗುರ ಹೊಡೆದು ಬಹಿರಂಗಪಡಿಸುತ್ತಾರಂತೆ. ಮಾಹಿತಿ ಹಕ್ಕು ಅಸ್ತ್ರ ಬಳಸಿ, ಅವರು (ಭಾರದ್ವಾಜರು) ಎಲ್ಲೆಲ್ಲಿ, ಎಷ್ಟೆಲ್ಲ ನಿವೇಶನಗಳನ್ನು ಅಕ್ರಮವಾಗಿ ಸಂಪಾದಿಸಿದ್ದಾರೆ ಎಂಬುದನ್ನು ಬಟಾಬಯಲು ಮಾಡ್ತಾರಂತೆ.
ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟ ಜಾಗದಲ್ಲಿ ನ್ಯಾ. ಬನ್ನೂರುಮಠರು ಮನೆ ಕಟ್ಟಿದ್ದಾರೆ ಎಂಬ ಕಾರಣಕ್ಕೆ ಅವರು ಲೋಕಾಯುಕ್ತ ಪೀಠಕ್ಕೆ ಅರ್ಹರಲ್ಲ ಎನ್ನುವುದಾದರೆ ಭಾರದ್ವಾಜರೂ ರಾಜ್ಯಪಾಲ ಹುದ್ದೆಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಖಡಾಖಂಡಿತವಾಗಿ ತಿಳಿಸಿದ್ದಾರೆ. ಭಾರದ್ವಾಜರ ವಿರುದ್ಧವೂ ಎಫ್ಐಆರ್ ದಾಖಲಾಗಿದೆ. ಅವರೂ ಮನೆಗೆ ಹೋಗಲಿ ಎಂದು ಯಡಿಯೂರಪ್ಪ ಕಠಿಣ ಶಬ್ದಗಳಲ್ಲಿ ಹೇಳಿದ್ದಾರೆ.