ಕರ್ನಾಟಕದಲ್ಲೂ ಸಿಬಿಐ ತನಿಖೆ: ಅರ್ಜಿದಾರ ಹಿರೇಮಠ ಹರ್ಷ
ಈ ಬಗ್ಗೆ ವರದಿ ಸಲ್ಲಿಸುವಂತೆ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ)ಗೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ಅದರಂತೆ ಸೆ. 23ರಂದು ವರದಿ ಸಲ್ಲಿಸಿದ ಸಮಿತಿ, ಅಕ್ರಮ ನಡೆದಿರುವ ದಾಖಲೆಗಳ ಸಮೇತ ಸಾಬೀತಾಗಿದೆ. ತಕ್ಷಣ ಸಿಬಿಐ ತನಿಖೆ ನಡೆಸುವಂತೆ ಸೂಚಿಸಬೇಕು ಎಂದು ಸಲಹೆ ನೀಡಿತ್ತು. ಸುಪ್ರೀಂಕೋರ್ಟ್ ಈ ಸಲಹೆಯನ್ನು ಅನುಮೋದಿಸಿರುವುದಕ್ಕೆ ಎಸ್.ಆರ್. ಹಿರೇಮಠ ಅವರು ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಮದ್ಯೆ, ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಎರಡು ಕಂಪನಿಗಳನ್ನು ತನಿಖೆಗೆ ಒಳಪಡಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶಿಸಿರುವ ಬಗ್ಗೆ ಸಿಬಿಐ ಇಂದು ತನ್ನ ಅಭಿಪ್ರಾಯವನ್ನು ಸುಪ್ರೀಂಕೋರ್ಟ್ ಗೆ ತಿಳಿಸಲಿದೆ.
ಸಿಇಸಿ ಹೇಳಿರುವಂತೆ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ಕಂಪನಿ ಅಸೋಸಿಯೇಟೆಡ್ ಮೈನಿಂಗ್ ಕಂಪನಿ ಜಿಲ್ಲೆಯ ಜೈಸಿಂಗ್ ಪುರ ಗ್ರಾಮದಲ್ಲಿದೆ. ಜನಾರ್ದನ ರೆಡ್ಡಿ ಮತ್ತು ಅವರ ಪತ್ನಿ ಅರುಣಾ ಲಕ್ಷ್ಮಿ ಇದರ ಮಾಲೀಕರು. ಎಎಂಸಿ ಕಂಪನಿಯು ಸರಣಿ ಅಕ್ರಮಗಳಲ್ಲಿ ಭಾಗಿಯಾಗಿದೆ.
ಇನ್ನು, ಎಸ್.ಎಂ ಜೈನ್ ಮಾಲೀಕತ್ವದ ಡೆಕ್ಕನ್ ಮೈನಿಂಗ್ ಸಿಂಡಿಕೇಟ್ ಗಣಿ ಕಂಪನಿಗಳು ಬಳ್ಳಾರಿಯಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ಎಸಗಿದೆ ಎನ್ನುತ್ತಿದೆ ಸಿಇಸಿ ವರದಿ. ಇದು ಜಿಲ್ಲೆಯ ದೋಣಿಮೈಲೈನಲ್ಲಿದೆ. ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ (ಎನ್ಎಂಡಿಡಿಸಿ) ಗುತ್ತಿಗೆ ಪ್ರದೇಶದ ಅತಿಕ್ರಮಣವಾಗಿದೆ.