ಜಾರ್ಖಂಡ್ ಸಿಎಂ ಹೇಮಂತ್ ಸೋರೆನ್ಗೆ ಸುಪ್ರೀಂಕೋರ್ಟ್ನಿಂದ ಗುಡ್ ನ್ಯೂಸ್!
ನವದೆಹಲಿ, ನವೆಂಬರ್ 07: ಜಾರ್ಖಂಡ್ ಹೈಕೋರ್ಟ್ ಆದೇಶದ ವಿರುದ್ಧ ಜಾರ್ಖಂಡ್ ಸಿಎಂ ಹೇಮಂತ್ ಸೋರೆನ್ ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ಪುರಸ್ಕರಿಸಿದೆ.
ಜಾರ್ಖಂಡ್ ಹೈಕೋರ್ಟ್ನ ಜೂನ್ 3ರ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತು. ಗಣಿ ಗುತ್ತಿಗೆ ವಿಚಾರದಲ್ಲಿ ಸೊರೆನ್ ವಿರುದ್ಧ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಈ ಹಿಂದೆ ತಡೆಯಾಜ್ಞೆ ನೀಡಿತ್ತು. ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ಜಾರ್ಖಂಡ್ ಸರ್ಕಾರ ಮತ್ತು ಹೇಮಂತ್ ಸೋರೆನ್ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಿದೆ.
ಗಣಿಗಾರಿಕೆ ಪ್ರಕರಣ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ಗೆ ಸಮನ್ಸ್
ಈ ಎರಡು ಪ್ರತ್ಯೇಕ ಅರ್ಜಿಯನ್ನು ವಿಚಾರಣೆ ನಡೆಸುವುದಕ್ಕೆ ಸಮ್ಮತಿಸಿದ ನ್ಯಾಯಮೂರ್ತಿ ಯುಯು ಲಲಿತ್, ಎಸ್ ಆರ್ ಭಟ್ ಮತ್ತು ಸುಧಾಂಶು ಧುಲಿಯಾ ನೇತೃತ್ವದ ಪೀಠವು ಆಗಸ್ಟ್ 17ಕ್ಕೆ ತನ್ನ ತೀರ್ಪನ್ನು ಕಾಯ್ದಿರಿಸಿದೆ. ಸುಪ್ರೀಂ ಕೋರ್ಟ್ ಆದೇಶವು ಹೊರ ಬೀಳುತ್ತಿದ್ದಂತೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಸತ್ಯ ಮೇವ ಜಯತೇ ಎಂದು ಟ್ವೀಟ್ ಮಾಡಿದ್ದಾರೆ.
ವಾದ-ಪ್ರತಿವಾದದ ವೈಖರಿ ಯಾವ ರೀತಿಯಿತ್ತು?:
ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಎಲ್ಲಾ ದಾಖಲೆಗಳನ್ನು ಸಲ್ಲಿಸುವ ಮೊದಲೇ ಹೈಕೋರ್ಟ್ ನಿರ್ಧಾರದ ಬಗ್ಗೆ ಉಲ್ಲೇಖಿಸಿದ್ದರು. ಸೋರೆನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹ್ಟಗಿ, ಪಿಐಎಲ್ ಅರ್ಜಿದಾರರ ರುಜುವಾತು ಪತ್ರಗಳನ್ನು ಪ್ರಶ್ನಿಸಿದ್ದರು. ಇದರ ಮಧ್ಯೆ ಜಾರಿ ನಿರ್ದೇಶನಾಲಯದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು, ತಾಂತ್ರಿಕ ಕಾರಣ ನೀಡಿ ಕ್ರಿಮಿನಲ್ ಅರ್ಜಿಗಳನ್ನು ತಿರಸ್ಕರಿಸಬಾರದು ಎಂದಿದ್ದರು.
ಸೋರೆನ್ ವಿರುದ್ಧ ಅಧಿಕಾರ ದುರುಪಯೋಗ ಆರೋಪ:
ಜಾರ್ಖಂಡ್ ಮುಖ್ಯಮಂತ್ರಿ ಆಗಿ ಹೇಮಂತ್ ಸೋರೆನ್ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಭ್ರಷ್ಟಾಚಾರ ಮತ್ತು ಸ್ವಂತ ಹಿತಾಸಕ್ತಿ ಸಾಧಿಸಿಕೊಳ್ಳುವುದಕ್ಕಾಗಿ ಗಣಿಗಾರಿಕೆ ಗುತ್ತಿಗೆಯನ್ನು ನೀಡಿದ್ದಾರೆ ಎಂದು ಕಳೆದ ಫೆಬ್ರವರಿ ತಿಂಗಳಿನಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ರಘುಬರ್ ದಾಸ್ ಆರೋಪಿಸಿದ್ದರು. ಅಲ್ಲದೇ ಹೇಮಂತ್ ಸೋರೆನ್ ಪ್ರಜಾಪ್ರತಿನಿಧಿ ಕಾಯ್ದೆಯ ನಿಬಂಧನೆಗಳ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಮೇ ತಿಂಗಳಿನಲ್ಲಿ ಸೋರೆನ್ಗೆ ನೋಟಿಸ್:
ಹೇಮಂತ್ ಸೋರೆನ್ ಗಣಿಗಾರಿಕೆ ಮತ್ತು ಪರಿಸರ ಖಾತೆ ಸಚಿವರಾಗಿದ್ದ ಸಂದರ್ಭದಲ್ಲಿ ತಮ್ಮ ಅಧಿಕಾರವನ್ನು ಬಳಸಿಕೊಂಡು ಗಣಿಗಾರಿಕೆ ಗುತ್ತಿಗೆಯನ್ನು ನೀಡಿದ್ದಾರೆ ಎಂಬುದು ಸಾಕಷ್ಟು ವಿವಾದ ಸೃಷ್ಟಿಸಿತ್ತು. ಈ ವಿವಾದವನ್ನು ಗಮನದಲ್ಲಿಟ್ಟುಕೊಂಡು, ಚುನಾವಣಾ ಆಯೋಗವು ಮೇ ತಿಂಗಳಲ್ಲಿ ಸೋರೆನ್ಗೆ ನೋಟಿಸ್ ಜಾರಿಗೊಳಿಸಿತ್ತು. ಈ ಗುತ್ತಿಗೆ ನೀಡುವ ಸಂದರ್ಭದಲ್ಲಿ 1951ರ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 9A ಅನ್ನು ಉಲ್ಲಂಘಿನೆ ಮಾಡಲಾಗಿದೆ. ಇದು ಸರ್ಕಾರಿ ಒಪ್ಪಂದಗಳು ಮತ್ತು ಇತ್ಯಾದಿ ವ್ಯವಹಾರಗಳ ಅನರ್ಹತೆ ಬಗ್ಗೆ ಚುನಾವಣಾ ಆಯೋಗವು ತಿಳಿಸಿತ್ತು. ಈ ವಿಷಯ ಇನ್ನೂ ಚುನಾವಣಾ ಸಮಿತಿಯಲ್ಲಿ ಬಾಕಿ ಇದೆ.
ನಕಲಿ ಕಂಪನಿಗಳ ವಹಿವಾಟಿನ ಬಗ್ಗೆ ಉಲ್ಲೇಖ:
ಜಾರ್ಖಂಡ್ ಹೈಕೋರ್ಟ್ನ ಮುಂದೆ ಸಲ್ಲಿಸಲಾದ ಅರ್ಜಿಯಲ್ಲಿ ಗಣಿಗಾರಿಕೆ ಗುತ್ತಿಗೆಯ ಅನುದಾನದಲ್ಲಿನ ಅಕ್ರಮಗಳ ಬಗ್ಗೆ ಪ್ರಶ್ನಿಸಲಾಗಿತ್ತು. ಇದರ ಜೊತೆಗೆ ಮುಖ್ಯಮಂತ್ರಿಯ ಕುಟುಂಬ ಸದಸ್ಯರು ಮತ್ತು ಸಹಚರರೊಂದಿಗೆ ನಂಟು ಹೊಂದಿರುವ ಕೆಲವು ನಕಲಿ ಕಂಪನಿಗಳ ವಹಿವಾಟಿನ ಬಗ್ಗೆ ತನಿಖೆ ನಡೆಸುವಂತೆ ಕೋರಿದ್ದವು.