Karnataka Rains: ಹವಾಮಾನ ವೈಪರೀತ್ಯ, ಉತ್ತರ ಕರ್ನಾಟಕಕ್ಕೆ ಮುಂದಿನ 5ದಿನ ಭಾರೀ ಮಳೆ: ಐಎಂಡಿ
ಬೆಂಗಳೂರು: ಮುಂಗಾರು ಮಳೆ ಆರಂಭವಾಗುವ ಕೆಲವು ದಿನಗಳ ಮೊದಲೇ ಕರ್ನಾಟಕದಾದ್ಯಂತ ಮಳೆ ಆರ್ಭಟ ಜೋರಾಗಿದೆ. ಅದರಲ್ಲೂ ಉತ್ತರ ಕರ್ನಾಟಕ, ಕರಾವಳಿ ಮತ್ತು ದಕ್ಷಿಣ ಒಳನಾಡು ಸೇರಿದಂತೆ ಮೂರು ಭಾಗಗಳಲ್ಲಿ ಕನಿಷ್ಠ 110 ಮಿಲಿ ಮೀಟರ್ ನಿಂದ 200 ಮಿಲಿ ಮೀಟರ್ಗೂ ಅಧಿಕ ಮಳೆ ಆಗುವ ಸಂಭವವಿದೆ. ಕೆಲವು ಜಿಲ್ಲೆಗಳಿಗೆ "ರೆಡ್ ಅಲರ್ಟ್" ಮತ್ತು ಹಲವು ಜಿಲ್ಲೆಗಳಿಗೆ "ಆರೆಂಜ್ ಅಲರ್ಟ್' ಘೋಷಿಸಲಾಗಿದೆ. ಮುಂದಿನ 5 ರಿಂದ 7 ದಿನ ಉತ್ತರ ಕರ್ನಾಟಕದಾದ್ಯಂತ ಬಿರುಗಾಳಿ ಮಳೆ ಅಬ್ಬರಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸಮುದ್ರ ಮಟ್ಟದಲ್ಲಿ ಹಲವು ಕಡೆಗಳಲ್ಲಿ ವಾಯುಭಾರ ಕುಸಿತ ಏರ್ಪಟ್ಟಿದೆ. ಕಳೆದ ಸುಮಾರು ಮೂರು ವಾರಗಳಿಂದಲೂ ಬಂಗಾಳಕೊಲ್ಲಿ, ಅರಬ್ಬಿ ಸಮುದ್ರ, ಅಂಡಮಾನ್ ಸೇರಿದಂತೆ ಸಮುದ್ರ ಮಟ್ಟದಲ್ಲಿ ಭಾರೀ ಬದಲಾವಣೆಗಳು ಆಗಿವೆ. ಈ ಕಾರಣದಿಂದ ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಗಂಟೆಗೆ ಸುಮಾರು 50 ಕಿಮೀ ಗಾಳಿ ಸಹಿತ ಭಾರೀ ಮಳೆ ಸಾಧ್ಯತೆ ಇದೆ.

ಕರಾವಳಿಗೆ ರೆಡ್ ಅಲರ್ಟ್
ಕರಾವಳಿ ಕರ್ನಾಟಕ ದಕ್ಷಿಣ ಕನ್ನಡ, ಉಡುಪಿ ಈ ಎರಡು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಜೂನ್ 3, 8 ಮತ್ತು 9ರಂದು ಗರಿಷ್ಠ 200 ಮಿಲಿ ಮೀಟರ್ಗಿಂತಲೂ ಅತ್ಯಧಿಕ ಮಳೆ ಆಗಲಿದೆ. ಹೀಗಾಗಿ ಆಯಾ ದಿನ 'ರೆಡ್ ಅಲರ್ಟ್' ನೀಡಲಾಗಿದೆ. ಇಲ್ಲಿಗೆ ಗಂಟೆಗೆ ಗಾಳಿಯ ವೇಗ 40 ಕಿ.ಮೀ ಇರಲಿದೆ. ಉಳಿದಂತೆ ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಗೆ ಆಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಉತ್ತರ ಕರ್ನಾಟಕದ ಒಣಹವೆ ಮುಕ್ತಿ, ಬಿರುಗಾಳಿ ಮಳೆ, ಆರೆಂಜ್ ಅಲರ್ಟ್
ಮುಂದಿನ ಐದು ದಿನ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಗೂ ಬಿರುಗಾಳಿ ಸಹಿತ ಭಾರೀ ಮಳೆ ಆಗಲಿದೆ. ಧಾರವಾಡ, ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು,ಬಾಗಲಕೋಟೆ, ವಿಜಯಪುರ, ಹಾವೇರಿ, ಗದಗ ಜಿಲ್ಲೆಗಳಿಗೆ ಜೂನ್ 6ರವರೆಗೆ ಬಿರುಗಾಳಿ ಸಹಿತ ಧಾರಾಕಾರ ಮಳೆ ಆಗಲಿದ್ದು ಐಎಂಡಿ ಆರೆಂಜ್ ಅಲರ್ಟ್ ನೀಡಿದೆ. ಇಲ್ಲಿ ಗಂಟೆಗೆ 50-60 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಅಂದಾಜಿಸಲಾಗಿದೆ. ಈವರೆಗೆ ಒಣಹವೆ, ಅಧಿಕ ತಾಪಮಾನದಿಂದ ಸುಸ್ತಾಗಿದ್ದ ಜನರಿಗೆ ಮುಕ್ತ ದೊರೆಯಲಿದೆ.
5 ದಿನ ದಕ್ಷಿಣ ಭಾಗದ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್'
ಇನ್ನೂ ಮಲೆನಾಡು ಜಿಲ್ಲೆಗಳನ್ನು ಒಳಗೊಂಡಂತೆ ದಕ್ಷಿಣ ಒಳನಾಡು ಭಾಗದಲ್ಲಿ 60 ಮಿಲಿ ಮೀಟರ್ ನಿಂದ 115 ಮಿಲಿ ಮೀಟರ್ವರೆಗೆ ಸಾಧಾರಣದಿಂದ ಭಾರೀ ಮಳೆ ನಿರೀಕ್ಷೆ ಇದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಮತ್ತು ವಿಜಯನಗರ ಒಳಗೊಂಡು ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಬಿರುಗಾಳಿ ಸಹಿತ ವ್ಯಾಪಕ ಮಳೆ ಆಗಲಿದ್ದು 5 ದಿನ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ತಜ್ಞರು ಬುಧವಾರ ತಿಳಿಸಿದ್ದಾರೆ.
ಹವಾಮಾನ ವೈಪರೀತ್ಯಗಳ ತೀವ್ರತೆ, ಮುಂಗಾರು ಜೂ.5ಕ್ಕೆ ಆಗಮನ
ಆಗ್ನೆಯ ಬಂಗಾಳ ಕೊಲ್ಲಿಯಲ್ಲಿ, ಕೇರಳದ ದಕ್ಷಿಣ ಕರಾವಳಿಯ ಆಗ್ನೆಯ ಅರಬ್ಬಿ ಸಮುದ್ರದ ಮೇಲೆ ವಾಯುಭಾರ ಕುಸಿತ ಉಂಟಾಗಿದೆ. ಪೂರ್ವಮಧ್ಯ ಅರಬ್ಬಿ ಸಮುದ್ರ ಮತ್ತು ಪಕ್ಕದ ಕರಾವಳಿ ಕರ್ನಾಟಕದ ಮೇಲೆ ಸರಾಸರಿ ಸಮುದ್ರ ಮಟ್ಟದಿಂದ ಕ್ರಮವಾಗಿ 3.1 ಮತ್ತು 4.5 ಕಿ.ಮೀ ನಡುವೆ ಟ್ರಫ್ ಉಂಟಾಗಿದೆ.
ಇನ್ನೂ ಉತ್ತರ ಪ್ರದೇಶದ ಮೇಲಿನ ಸುಳಿಗಾಳಿಯಿಂದ ಮಧ್ಯಪ್ರದೇಶ, ವಿದರ್ಭ, ತೆಲಂಗಾಣ ಮತ್ತು ರಾಯಲಸೀಮಾದ ಮೂಲಕ ಉತ್ತರ ತಮಿಳುನಾಡಿನವರೆಗೆ 1.5 ಕಿ.ಮೀ ಎತ್ತರದಲ್ಲಿ ಸುಳಿಗಾಳಿ ಬೀಸಿದೆ. ಅಂಡಮಾನ್ ಸಮುದ್ರ ಮತ್ತು ಛತ್ತೀಸ್ಗಢದ ಮೇಲೆ ವಾಯು ಸುಳಿಗಾಳಿಯು ಬರೋಬ್ಬರಿ 3.1 ಮತ್ತು 7.6 ಕಿ.ಮೀ ಎತ್ತರದಲ್ಲಿ ಕೇಂದ್ರೀಕರಿಸಿದೆ. ಈ ಎಲ್ಲ ಹವಾಮಾನ ಬದಲಾವಣೆಗಳು ಮುಂಗಾರು ಆಗಮನಕ್ಕೆ ಪೂರಕವಾಗಿದೆ. ಜೂನ್ 5ರಂದು ಮುಂಗಾರು ಆಗಮಿಸಲಿದೆ. ಅದಕ್ಕು ಮುನ್ನವೇ ಮಳೆ ರಾಜ್ಯವನ್ನು ವ್ಯಾಪಿಸಿದೆ.














Click it and Unblock the Notifications