ಅಕ್ರಮ ಗಣಿಗಾರಿಕೆ ಪ್ರಕರಣ: ಇಂದು ಸಿಬಿಐ ನ್ಯಾಯಾಲಯದಲ್ಲಿ ಜನಾರ್ಧನ ರೆಡ್ಡಿ ವಿಚಾರಣೆ
ಬಳ್ಳಾರಿ, ನವೆಂಬರ್, 09: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪಾಲುದಾರಿಕೆಯ ಓಬಳಾಪುರಂ ಮೈನಿಂಗ್ ಕಂಪನಿಯ ಅಕ್ರಮ ಗಣಿಗಾರಿಕೆ ಆರೋಪ ಕುರಿತಾದ ವಿಚಾರಣೆ ನಡೆಯಲಿದೆ. ಬುಧವಾರ (ನವೆಂಬರ್ 9) ಹೈದ್ರಾಬಾದ್ನ ಸಿಬಿಐ ನ್ಯಾಯಾಲಯದಲ್ಲಿ ರೆಡ್ಡಿ ಅವರು ವಿಚಾರಣೆಗೆ ಹಾಜರಾಗಲಿದ್ದಾರೆ.
ಬಳ್ಳಾರಿಯಲ್ಲಿ 20 ಸಾಕ್ಷಿಗಳಿದ್ದು, ಒಬ್ಬರ ನಂತರ ಒಬ್ಬರ ವಿಚಾರಣೆಯನ್ನು ಸಿಬಿಐ ಕೋರ್ಟ್ ನಡೆಸಲಿದೆ. ಈ ಸಂಬಂಧ ನಗರದ ಗಣಿ ಉದ್ಯಮಿ ಟಪಾಲ್ ಗಣೇಶ್ ಸಹೋದರ ಟಪಾಲ್ ಏಕಾಂಬರಂ ಅವರಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಅಲ್ಲದೇ ಓಬಳಾಪುರಂ ಕಂಪನಿ ನಡೆಸಿದ ಅಕ್ರಮ ಗಣಿಗಾರಿಕೆಯ ಕುರಿತಾದ ಸಾಕ್ಷ್ಯಗಳನ್ನು ಒದಗಿಸುವಂತೆ ಸೂಚಿಸಿದೆ. ಜನಾರ್ದನ ರೆಡ್ಡಿ ಮೇಲಿನ ಅಕ್ರಮ ಗಣಿಗಾರಿಕೆಯ ಆರೋಪ ಕುರಿತಾದ ಪ್ರಕರಣ ವಿಳಂಬವಾಗುತ್ತಿದ್ದು, ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ತೀವ್ರಗೊಳಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹೈದ್ರಾಬಾದ್ ಸಿಬಿಐ ಕೋರ್ಟ್ನಲ್ಲಿ ವಿಚಾರಣೆ
ಪ್ರಕರಣ ಸಂಬಂಧ ಕಚೇರಿ, ಜೈಲಿಗೆ ಅಲೆದು ಒಂದೂವರೆ ವರ್ಷದ ಹಿಂದೆಯಷ್ಟೇ ನ್ಯಾಯಾಲಯದಿಂದ ವಿನಾಯಿತಿಯನ್ನು ಪಡೆದಿದ್ದು, ಅವರು ತಮ್ಮ ಹುಟ್ಟೂರು ಬಳ್ಳಾರಿಯಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ ತಮ್ಮ ಮೇಲಿರುವ ಅಕ್ರಮ ಗಣಿಗಾರಿಕೆ ಪ್ರಕರಣವನ್ನು ನಿರಂತರವಾಗಿ ವಿಚಾರಣೆ ನಡೆಸಲಾಗಿತ್ತು. ಈ ಮೂಲಕ ಪ್ರಕರಣಗಳನ್ನು ಇತ್ಯರ್ಥ ಮಾಡಬೇಕು ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ ರೆಡ್ಡಿಗೆ ಬಿಸಿ ತುಪ್ಪ ಆಗಿದೆ ಎಂದು ಹೇಳಬಹುದು.

ಇತ್ತೀಚೆಗೆ ನ್ಯಾಯಾಲಯ ಆದೇಶವೊಂದನ್ನು ಹೊರಡಿಸಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಮತ್ತು ಇತರರ ಅಕ್ರಮ ಗಣಿಗಾರಿಕೆ ಬಗ್ಗೆ ನಿರಂತರವಾಗಿ ವಿಚಾರಣೆ ನಡೆಸಲು ತಿಳಿಸಿತ್ತು. ಆರು ತಿಂಗಳ ಅವಧಿಯಲ್ಲಿ ವಿಚಾರಣೆಯನ್ನು ಪೂರ್ಣಗೊಳಿಸುವಂತೆಯೂ ಸೂಚಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರಕರಣಗಳ ಪ್ರಮುಖ ಆರೋಪಿ ಆಗಿರುವ ಜನಾರ್ಧನ ರೆಡ್ಡಿ ಬಳ್ಳಾರಿಯಲ್ಲಿ ಇರಬಾರದು ಎಂದು ಆದೇಶ ನೀಡಿದ್ದರು. ಆದೇಶದ ಪ್ರಕಾರ ಜನಾರ್ಧನ ರೆಡ್ಡಿ ಸೋಮವಾರ ಬಳ್ಳಾರಿಯನ್ನು ತೊರೆದಿದ್ದಾರೆ ಎನ್ನಲಾಗಿದೆ.












Click it and Unblock the Notifications