Get Updates
Get notified of breaking news, exclusive insights, and must-see stories!

ಸಿಬಿಐನಿಂದ ಆಸ್ತಿ ಮುಟ್ಟುಗೋಲು; ಖಡಕ್ ಪ್ರತಿಕ್ರಿಯೆ ಕೊಟ್ಟ ಜನಾರ್ದನ ರೆಡ್ಡಿ!

ರಾಯಚೂರು, ಜನವರಿ 06; "ಕಷ್ಟಪಟ್ಟು ದುಡಿದ ಗಂಡುಮಗ ನಾನು, ಅಡ್ಡಾದಿಡ್ಡಿ ಮಾಡಿದ ದುಡ್ಡು ಅಲ್ಲ. ನನ್ನ ಆಸ್ತಿ ಮುಟ್ಟುಗೋಲು ಹಾಕಲು ನೂರು ಜನ್ಮ ಹುಟ್ಟಿ ಬರಬೇಕು" ಎಂದು ಮಾಜಿ ಸಚಿವ, ಕಲ್ಯಾಣ ಪ್ರಗತಿ ರಾಜ್ಯ ಪಕ್ಷದ ಸ್ಥಾಪಕ ಜನಾರ್ದನ ರೆಡ್ಡಿ ಹೇಳಿದರು.

ಶುಕ್ರವಾರ ರಾಯಚೂರಿನಲ್ಲಿ ಮಾಧ್ಯಮಗಳ ಜೊತೆ ಜನಾರ್ದನ ರೆಡ್ಡಿ ಮಾತನಾಡಿದರು. ಸಿಬಿಐ ಜನಾರ್ದನ ರೆಡ್ಡಿ ಆಸ್ತಿ ಜಪ್ತಿ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿರುವ ಕುರಿತು ಪ್ರತಿಕ್ರಿಯೆ ನೀಡಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ನಾನು ಒಬ್ಬ ಸಾಮಾನ್ಯ ಪೊಲೀಸ್ ಕಾನ್ಸ್‌ಟೇಬಲ್ ಮಗ. ನನ್ನ ಆಸ್ತಿ ಮುಟ್ಟುಗೋಲು ಹಾಕಲು ನೂರು ಜನ್ಮ ಎತ್ತಿ ಬರಬೇಕು" ಎಂದು ಸವಾಲು ಎಸೆದರು.

CBI Moves High Court For Confiscation Of Property Janardhana Reddy Reaction

"ವಿಧಿಯಾಟದಿಂದ ನಾನು ಇಲ್ಲಿಯ ತನಕ ಬಂದಿದ್ದೇನೆ. ಕುತಂತ್ರದಿಂದ ನನ್ನನ್ನು ಜೈಲಿಗೆ ಕಳಿಸಿದರು. ಮೋಸ, ಕುತಂತ್ರ ಮಾಡುವವರನ್ನು ದೇವರು ಮೇಲಿನಿಂದ ನೋಡುತ್ತಿದ್ದಾನೆ" ಎಂದರು.

"ಮೋಸ, ಕುತಂತ್ರ ಮಾಡುವವರ ಬಗ್ಗೆ ನಾನು ಏನೂ ಹೇಳಲ್ಲ. ಎಲ್ಲಾ ದೇವರಿಗೆ ಬಿಟ್ಟಿದ್ದೇನೆ. ಚಿಕ್ಕಂದಿನಿಂದ ನಾನು ದೇವರನ್ನೇ ನಂಬಿದ್ದೇನೆ. ಒಂದು ದಿನ ನಾನು ಸುಳ್ಳು ಹೇಳಿದರೆ ಅಂದು ರಾತ್ರಿ ನನಗೆ ನಿದ್ದೆಯೇ ಬರುವುದಿಲ್ಲ" ಎಂದು ಜನಾರ್ದನ ರೆಡ್ಡಿ ಹೇಳಿದರು.

"ಕಲ್ಯಾಣ ಪ್ರಗತಿ ರಾಜ್ಯ ಪಕ್ಷದ ಸ್ಥಾಪನೆ ಮಾಡಿ ಏನು ಮಾಡುತ್ತಾನೆ ಎಂದು ಕೆಲವರು ಆಲೋಚನೆ ಮಾಡುತ್ತಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರಲು ಹಗಲು-ರಾತ್ರಿ ಕೆಲಸ ಮಾಡುತ್ತೇನೆ" ಎಂದು ಜನಾರ್ದನ ರೆಡ್ಡಿ ತಿಳಿಸಿದರು.

ಆಸ್ತಿ ಜಪ್ತಿಗೆ ಅರ್ಜಿ; ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಗಾಲಿ ಜನಾರ್ದನ ರೆಡ್ಡಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸದ್ಯ ಅವರು ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಆದರೆ ಅವರಿಗೆ ಸೇರಿದ ಆಸ್ತಿ ಜಪ್ತಿ ಮಾಡಲು ಸಿಬಿಐ ಮುಂದಾಗಿದೆ. ಇದಕ್ಕಾಗಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಹಾಕಿದೆ.

ಸಿಬಿಐ ತನ್ನ ಅರ್ಜಿಯಲ್ಲಿ ಜನಾರ್ದನ ರೆಡ್ಡಿಗೆ ಸೇರಿದ ಹೆಚ್ಚುವರಿ ಆಸ್ತಿಗಳ ಜಪ್ತಿಗೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಅನುಮತಿ ಕೋರಿ ಸಲ್ಲಿಸಿರುವ ಮನವಿಯನ್ನು ತುರ್ತಾಗಿ ಪರಿಗಣಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿದೆ. ಕರ್ನಾಟಕ ಹೈಕೋರ್ಟ್‌ನಲ್ಲಿ ಈ ಅರ್ಜಿಯ ವಿಚಾರಣೆಗೆ ಇನ್ನೂ ದಿನಾಂಕ ನಿಗದಿಯಾಗಬೇಕಿದೆ.

ಏನಿದು ಪ್ರಕರಣ?; ಓಬಳಾಪುರಂ ಮೈನಿಂಗ್‌ ಕಂಪನಿ ಲಿಮಿಟೆಡ್‌ ಮತ್ತು ಅಸೋಸಿಯೇಟೆಡ್‌ ಮೈನಿಂಗ್‌ ಕಂಪನಿ ಲಿಮಿಟೆಡ್‌ ಮೂಲಕ ಅಕ್ರಮ ಗಣಿಗಾರಿಕೆ ಮತ್ತು ಅದಿರು ಸಾಗಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ನಿರ್ದೇಶನದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿ ಜನಾರ್ದನ ರೆಡ್ಡಿ ಸೇರಿದಂತೆ ಹಲವರ ವಿರುದ್ಧ 2015ರಲ್ಲಿಆರೋಪ ಪಟ್ಟಿ ಸಲ್ಲಿಸಲಾಗಿದೆ.

ಅಕ್ರಮ ಗಣಗಾರಿಕೆಯಿಂದಾಗಿ ರಾಜ್ಯದ ಬೊಕ್ಕಸಕ್ಕೆ ರೆಡ್ಡಿ 198 ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ ಎಂದು ಸಿಬಿಐ ಅರ್ಜಿಯಲ್ಲಿ ವಿವರಿಸಲಾಗಿದೆ. 2015ರಲ್ಲಿ 65.05 ಕೋಟಿ ಮೌಲ್ಯದ ಆಸ್ತಿ ಜಪ್ತಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಕ್ಕೆ ಇಂಥದ್ದೇ ಮನವಿ ಮಾಡಲಾಗಿತ್ತು. ಇದಕ್ಕೆ ರಾಜ್ಯ ಸರ್ಕಾರ ಅನುಮತಿಸಿದ ಬಳಿಕ ಆ ಆಸ್ತಿಗಳ ಜಪ್ತಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಕೋರಿಕೆ ಸಲ್ಲಿಸಲಾಗಿತ್ತು.

ಆದರೆ ಜನಾರ್ದನ ರೆಡ್ಡಿ ಮತ್ತು ಇತರ ಆರೋಪಿಗಳ ವಿರುದ್ಧದ ಪ್ರಕರಣ ವಿಚಾರಣೆಗೆ ಬಾಕಿ ಇರುವ ನ್ಯಾಯಾಲಯದಲ್ಲಿ 2015ರಲ್ಲಿ ಜಪ್ತಿ ಆದೇಶ ಕೋರಿ ಸಲ್ಲಿಸಿದ್ದ ಮನವಿ ಬಾಕಿ ಉಳಿದಿತ್ತು. ನಿರಂತರವಾಗಿ ಮನವಿ ಮಾಡಿದ ಹಿನ್ನೆಲೆಯಲ್ಲಿ 2022ರ ಮಾರ್ಚ್‌ 29ರಂದು ವಿಶೇಷ ನ್ಯಾಯಾಲಯವು ಸಿಬಿಐನ ಆಸ್ತಿ ಜಪ್ತಿ ಕೋರಿಕೆಗೆ ಸಂಬಂಧಿಸಿದಂತೆ ದಾಖಲೆ ಸಲ್ಲಿಸುವಂತೆ ಮಾಜಿ ಸಚಿವ ರೆಡ್ಡಿಗೆ ಆದೇಶಿಸಿತ್ತು.

ಜನಾರ್ದನ ರೆಡ್ಡಿ ಕರ್ನೂಲ್‌, ಹೈದರಾಬಾದ್‌ ಮತ್ತು ರಂಗಾ ರೆಡ್ಡಿ ಜಿಲ್ಲೆಗಳಲ್ಲಿ ಗುರುತಿಸಲಾಗಿರುವ ಸುಮಾರು 19.14 ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿಗಳನ್ನು ಮಾರಾಟ ಮಾಡಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಕರ್ನಾಟಕ ಸರ್ಕಾರವು ಕ್ರಮಕೈಗೊಳ್ಳಲು ವಿಫಲವಾಗಿದೆ ಎಂದು ಸಿಬಿಐ ಅರ್ಜಿಯಲ್ಲಿ ಹೇಳಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+