ಬೆಂಗಳೂರು ಬೆಳಗಾವಿ ನಡುವೆ ಹೈ ಸ್ಪೀಡ್ ರೈಲು
ಕೇಂದ್ರ ರೈಲ್ವೇ ಸಚಿವ ದಿನೇಶ್ ತ್ರಿವೇದಿ ಅವರು ಹೈ ಸ್ಪೀಡ್ ರೈಲುಮಾರ್ಗಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಕಾರವಾರದ ಸಂಸದ ಅನಂತ ಕುಮಾರ್ ಹೆಗ್ಡೆ ಹೇಳಿದ್ದಾರೆ.
ಪ್ರಸ್ತಾವಿತ ಯೋಜನೆ ಅನುಷ್ಠಾನಗೊಂಡರೆ ಬೆಂಗಳೂರಿನಿಂದ ಹೊರಟು ಕೇವಲ 5 ರಿಂದ 6 ತಾಸುಗಳಲ್ಲಿ ಬೆಳಗಾವಿಯನ್ನು ತಲುಪಬಹುದಾಗಿದೆ. ಸದ್ಯ 14 ತಾಸುಗಳಿಗೂ ಅಧಿಕ ಕಾಲ ಪ್ರಯಾಣ ಮಾಡಬೇಕಾಗಿದೆ.
ಪಿಪಿಪಿ ಯೋಜನೆಯಾಗಿ ಇದನ್ನು ಕಾರ್ಯರೂಪಕ್ಕೆ ತರಲು ಕೇಂದ್ರ ಸಚಿವರು ಇಚ್ಛಿಸಿದ್ದಾರೆ. ಈ ಬಗ್ಗೆ ಸೆ. 20 ರಂದು ಬೆಂಗಳೂರಿನಲ್ಲಿ ಕರ್ನಾಟಕ ಸರ್ಕಾರದ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ಸಂಸದ ಅನಂತ್ ಹೆಗ್ಡೆ ಹೇಳಿದರು.
ಕೇಂದ್ರ ರೈಲ್ವೇ ಸಚಿವಾಲಯ ಯೋಜನೆಗೆ ಒಪ್ಪಿಗೆ ಸೂಚಿಸಿದ ನಂತರ ರೈಲ್ವೇ ಅಧಿಕಾರಿಗಳಿಂದ ಸರ್ವೇ ಕಾರ್ಯ ನಡೆಸಲಾಗುವುದು. ನಂತರ ರೈಲ್ವೇ ಬೋರ್ಡ್ ಒಪ್ಪಿಗೆ ಪಡೆದ ಮೇಲೆ ರೈಲ್ ವಿಕಾಸ್ ನಿಗಮ ಲಿ(RVNL) ಗೆ ಯೋಜನೆ ಹಸ್ತಾಂತರಗೊಳ್ಳಲಿದೆ.
ಲಭ್ಯವಿರುವ ಸಮೀಕ್ಷೆ ವರದಿ ಆಧಾರಿಸಿ ಆರ್ ವಿ ಎನ್ ಎಲ್ ಟೆಂಡರ್ ಕರೆಯುತ್ತಾರೆ. ಯೋಜನೆ ಅನುಷ್ಠಾನಕ್ಕೆ ಕನಿಷ್ಠವೆಂದರೂ ಒಂದು ವರ್ಷ ಕಾಯಬೇಕಿದೆ ಎಂದು ಯೋಜನಾ ವ್ಯವಸ್ಥಾಪಕ ಅಲೋಕ್ ತಿವಾರಿ ಹೇಳಿದ್ದಾರೆ.