ಯಡ್ಡಿ, ಆಚಾರ್ಯ, ಧನಂಜಯ್ ಮನೆ ಹೋಗ್ರಿ ಸಾಕು
ಇದರ ಸುಳಿವು ತಿಳಿದ ಬಿಜೆಪಿ ನಾಯಕರು, ದಯವಿಟ್ಟು ಅಕ್ರಮ ಗಣಿಗಾರಿಕೆ ವರದಿಯಲ್ಲಿ ನಮ್ಮ ಹೆಸರು ಸೇರಿಸಬೇಡಿ ಎಂದು ಲೋಕಾಯುಕ್ತರ ಮೇಲೆ ಒತ್ತಡ ಹೇರಿದ್ದಾರೆ. ಕೂಡಲೇ ಯಡಿಯೂರಪ್ಪ ಸೇರಿದಂತೆ ಆರೋಪ ಹೊತ್ತಿರುವ ನಾಯಕರು ರಾಜೀನಾಮೆ ನೀಡಿ ಮನೆಗೆ ಹೋಗುವುದು ಕ್ಷೇಮ ಎಂದು ವಿಪಕ್ಷಗಳು ಗುಡುಗಿವೆ.
ಡೀಲ್ ಕುದುರಿಸಲು ಹೋಗಿದ್ದ ಸಚಿವ ವಿಎಸ್ ಆಚಾರ್ಯ, ದೆಹಲಿ ಪ್ರತಿನಿಧಿ ಧನಂಜಯ್ ಕುಮಾರ್, ಎಜಿ ಕೊಡ್ಗಿ ಅವರ ಮೇಲೆ ಇಂಡಿಯನ್ ಪೆನಲ್ ಕೋಡ್ 107, 108ರ ಅನ್ವಯ ಭ್ರಷ್ಟರನ್ನು ಮಟ್ಟ ಹಾಕುವ ಸಂಸ್ಥೆಯ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಬಂಧಿಸಬೇಕು. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಹೇಳಿದ್ದಾರೆ.
ಬಿಜೆಪಿ ನಾಯಕರ ಹೀನ ನಡವಳಿಕೆಯಿಂದ, ಯಡಿಯೂರಪ್ಪ ಅವರ ಅಸಲಿ ಬಣ್ಣ ಬಯಲಾಗಿದೆ. ತಮ್ಮ ಮೇಲೆ ಬಿಜೆಪಿ ನಾಯಕರು ಒತ್ತಡ ಹೇರಲು ಮುಂದಾಗಿದ್ದಾರೆ ಎಂದು ಲೋಕಾಯುಕ್ತರೇ ಹೇಳಿದ ಮೇಲೆ, ಯಡಿಯೂರಪ್ಪ ಆರೋಪಿಯಲ್ಲ, ಅಪರಾಧಿಯಾಗಿದ್ದಾರೆ. ಭ್ರಷ್ಟ ಬಿಜೆಪಿ ನಾಯಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.