ಶಿವಮೊಗ್ಗದಲ್ಲಿ 'ಸಾಹಿತ್ಯ ಗ್ರಾಮ' ಸ್ಥಾಪನೆ ಉದ್ದೇಶವಾದರೂ ಏನು?
ಕೋಟ್ಯಂತರ ರೂಪಾಯಿಗಳ ವೆಚ್ಚದ ಈ ಯೋಜನೆಯ ಉದ್ದೇಶ ಮತ್ತು ಸ್ವರೂಪಗಳಾದರೂ ಏನು ಎಂಬುದು ಈವರೆಗೆ ಶಿವಮೊಗ್ಗ ಜಿಲ್ಲೆಯ ನಾಗರಿಕರಿಗಾಗಲಿ, ಸಾಹಿತಿ ಬಳಗಕ್ಕಾಗಲೀ ತಿಳಿದಿಲ್ಲ. ಜಿಲ್ಲಾ ಸಾಹಿತ್ಯ ಪರಿಷತ್ ಅಂತೂ ತನಗೂ, ಸಾಹಿತ್ಯ ಮತ್ತು ಸಾಹಿತಿಗಳಿಗೂ ಸಂಬಂಧವೇ ಇಲ್ಲದಂತೆ ತನ್ನದೇ ಕೋಟೆ ಕಟ್ಟಿಕೊಂಡು, ಕೇವಲ ಔಪಚಾರಿಕ ಉತ್ಸವಗಳಲ್ಲಿ ತನ್ನ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗುತ್ತಿದೆ. ಕನ್ನಡ ಭಾಷೆ ಮತ್ತು ಸಾಹಿತ್ಯ ಎದುರಿಸುತ್ತಿರುವ ಸಮಕಾಲೀನ ಸವಾಲುಗಳಿಗೆ ಸ್ಪಂದಿಸುವ ಶಕ್ತಿಯನ್ನೇ ಅದು ಕಳೆದುಕೊಂಡಂತಿದೆ.
ಹಾಗಾಗಿ, ಜನತೆಯ ಹಣ ದೊಡ್ಡ ಪ್ರಮಾಣದಲ್ಲಿ ಹೂಡಿಕೆಯಾಗುತ್ತಿರುವ ಈ 'ಸಾಹಿತ್ಯ ಗ್ರಾಮ' ಯೋಜನೆಯ ಉದ್ದೇಶ ಮತ್ತು ಸ್ವರೂಪಗಳನ್ನು ಸರ್ಕಾರ ಮೊದಲು ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕಿದೆ. ಅಲ್ಲದೆ ಜಿಲ್ಲಾಡಳಿತವು ಕೂಡಲೇ ಜಿಲ್ಲೆಯ ಸಾಹಿತಿಗಳ ಮತ್ತು ಸಾಹಿತ್ಯಾಭಿಮಾನಿಗಳ ಸಭೆಯೊಂದನ್ನು ಕರೆದು, ಅದರಲ್ಲಿ ಈ ಯೋಜನೆಯ ಉದ್ದೇಶ ಸ್ವರೂಪಗಳನ್ನೂ ಮತ್ತು ಅದರ ವಿಶ್ವಾಸಾರ್ಹತೆ, ಸಾಧ್ಯಾಸಾಧ್ಯತೆಗಳನ್ನೂ ಚರ್ಚಿಸಬೇಕೆಂದು ನಾವು ಆಗ್ರಹಿಸುತ್ತೇವೆ.
ಹಾಗೆ, ಈ ಯೋಜನೆ ಎಲ್ಲರ ವಿಶ್ವಾಸಾರ್ಹತೆ ಗಳಿಸಿ ಕಾರ್ಯಗತ ಆಗುವುದೇ ಆದರೆ, ಅದು ಕೇವಲ ಜಿಲ್ಲಾ ಸಾಹಿತ್ಯ ಪರಿಷತ್ತಿನ ಸುಪರ್ದಿಯಲ್ಲಿ ನಡೆಯದೆ, ಜಿಲ್ಲೆಯ ಸಾಹಿತಿಗಳ ಮತ್ತು ಗಣ್ಯ ನಾಗರಿಕರ ಪ್ರತಿನಿಧಿಗಳು ಒಳಗೊಂಡ ಸಲಹಾ ಸಮಿತಿಯ ಸುಪರ್ದಿಯಲ್ಲಿ ನಡೆಯುವಂತೆ ವ್ಯವಸ್ಥೆ ಆಗಬೇಕೆಂದು ನಾವು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇವೆ.
- ಕಡಿದಾಳು ಶಾಮಣ್ಣ, ನಾ. ಡಿಸೋಜ, ಡಾ. ರಾಜೇಂದ್ರ ಚೆನ್ನಿ, ಡಾ. ಶ್ರೀಕಂಠ ಕೂಡಿಗೆ, ಡಾ.ತೀ.ನಂ.ಶಂಕರನಾರಾಯಣ, ಎಂ.ಬಿ. ನಟರಾಜ್, ಡಿ.ಎಸ್. ನಾಗಭೂಷಣ ಮತ್ತು ಇತರ 21 ಮಂದಿ, ಶಿವಮೊಗ್ಗ.