ದೇವಾಲಯದಲ್ಲಿ ದನದ ರುಂಡ : ಪ್ರತಿಭಟನೆ
ಮಂಗಳೂರು, ಆ. 20 : ನಗರದ ಪುರಾಣ ಪ್ರಸಿದ್ದ ಶರವು ಶ್ರೀ ಮಹಾಗಣಪತಿ ದೇವಾಲಯದಲ್ಲಿ ಕಿಡಿಗೇಡಿಗಳು ಶನಿವಾರ (ಆ 15) ದನದ ರುಂಡ ಎಸೆದು ಅಪವಿತ್ರಗೊಳಿಸಿದ ಘಟನೆಯಲ್ಲಿ ಇದುವರೆಗೆ ಯಾರನ್ನೂ ಬಂಧಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿರುವ ಹಿನ್ನಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಭಾರಿ ಪ್ರತಿಭಟನೆ ನಡೆಸಿದರು.
ಗೋಮಾತೆಯ ರುಂಡ ಎಸೆಯುವ ಮೂಲಕ ಹಿಂದೂಗಳ ಭಾವನೆ ಕೆರಳಿಸುವ ಕೃತ್ಯ ನಡೆದಿದೆ. ಎಲ್ಲ ಧಾರ್ಮಿಕ ಸ್ಥಳಗಳನ್ನು ರಕ್ಷಿಸುವ ಹೊಣೆ ಪೋಲಿಸ್ ಇಲಾಖೆಯದ್ದು. ಅವರಿಗೆ ಅದು ಸಾಧ್ಯವಾಗದಿದ್ದರೆ ಅದರ ಹೊಣೆಯನ್ನು ನಾವೇ ನಿರ್ವಹಿಸುತ್ತೇವೆ ಎಂದು ವಿ ಎಚ್ ಪಿ ವಿಭಾಗೀಯ ಅಧ್ಯಕ್ಷ ಪ್ರೊ.ಪುರಾಣಿಕ್ ಪೊಲೀಸ್ ಇಲಾಖೆಯ ಮೇಲೆ ಕಿಡಿಕಾರಿದ್ದಾರೆ.
ಕಿಡಿಗೇಡಿಗಳನ್ನು ಎರಡು ದಿನದೊಳಗೆ ಬಂಧಿಸುತ್ತೇವೆ ಎಂದು ಎಸ್ ಪಿ ಮಾತು ಕೊಟ್ಟಿದ್ದರು. ಆದರೆ ಈ ವರೆಗೆ ಯಾರನ್ನು ಬಂಧಿಸಲು ಅವರಿಂದ ಸಾಧ್ಯವಾಗಲಿಲ್ಲ. ಚರ್ಚ್ ದಾಳಿ ನಡೆದಾಗ ರಾಷ್ಟ್ರಮಟ್ಟದಲ್ಲಿ ಪ್ರಕರಣವನ್ನು ವೈಭವೀಕರಿಸಲಾಯಿತು. ಆದರೆ, ಹಿಂದೂಗಳ ಭಾವನೆಗೆ ಧಕ್ಕೆ ಬಂದಾಗ ಯಾರೂ ಇದನ್ನು ಕೇಳುವವರೇ ಇಲ್ಲ ಎಂದು ಪುರಾಣಿಕ್ ಖೇದ ವ್ಯಕ್ತಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)