ರಂಜಾನ್ ಮತ್ತು ಪಪ್ಪಾಯ; ಪಪ್ಪಾಯ ಬೆಳೆಗಾರರಿಗೆ ಕೆಲವು ಉಪಯುಕ್ತ ಟಿಪ್ಸ್
ಈ ವರ್ಷ ಮುಂಗಾರು ಮಳೆ ಉತ್ತಮವಾಗಿರುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ. ಲಾಕ್ ಡೌನ್ ನಿಂದ ಕಂಗಾಲಾಗಿದ್ದ ರೈತರು ಈಗಷ್ಟೇ ಎದ್ದು ಮೈಕೊಡವಿಕೊಳ್ಳುತ್ತಿದ್ದಾರೆ. ಹಾಗಾಗಿ ಎಂದಿನಂತೆ ಬೆಳೆ ಮಾಡುವರೋ ಅಥವಾ ಕಡಿಮೆ ಮಾಡುತ್ತಾರಾ ಕಾದು ನೋಡಬೇಕಿದೆ.
Recommended Video
ಲಾಕ್ ಡೌನ್ ಹೇರಿದ್ದ ಆರಂಭದ ದಿನಗಳಲ್ಲಿ (ಏಪ್ರಿಲ್ 3) ಮಧುಗಿರಿ ತಾಲ್ಲೂಕು ಕಾಳೇನಹಳ್ಳಿಯ ಪಪ್ಪಾಯ ಬೆಳೆಗಾರ ಐದು ಎಕರೆಯಲ್ಲಿ ಬೆಳೆದು ನಿಂತ ಪಪ್ಪಾಯ ಹಣ್ಣುಗಳನ್ನು ಕೇಳುವವರಿಲ್ಲವೆಂದು ನನ್ನ ಬಳಿ ಹೇಳಿಕೊಂಡಿದ್ದರು. ಆ ಬಗ್ಗೆ ನಾನು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದೆ. ಅದಾಗಿ ಸ್ವಲ್ಪ ದಿನಗಳಲ್ಲಿಯೇ ಆಂಗ್ಲ ಪತ್ರಿಕೆಯೊಂದು ಆ ಬಗ್ಗೆ ವರದಿ ಮಾಡಿತ್ತು. ನಂತರ ತೋಟಗಾರಿಕೆ ಇಲಾಖೆ ಮಧ್ಯಸ್ಥಿಕೆಯಿಂದ ಒಂದಿಷ್ಟು ಹಣ್ಣುಗಳು ಮಾರಾಟವಾದವೆನ್ನಿ.
ಲಾಭದಾಯಕ ಆಲೂಗಡ್ಡೆ ಬೇಸಾಯಕ್ಕೆ ರೈತರಿಗೆ ಸಲಹೆಗಳು
ಇದೀಗ ಎಂದಿನಂತೆ ಮುಂದಿನ ಮಳೆಗೆ (ಮುಂಗಾರು ಮಳೆಗೆ) ಪಪ್ಪಾಯ ಬೆಳೆಗಾರರಿಗೆ ಏನಾದರೂ ಟಿಪ್ಸ್ ನೀಡಬಹುದೇ ಎಂದು ಯೋಚಿಸುತ್ತಿದ್ದ ನನಗೆ ಕೃಷಿ ತಜ್ಞ ಎಂ.ಹರೀಶ್ ಎರಡು ವರ್ಷಗಳ ಹಿಂದೆ ತಮ್ಮ ತೋಟಕ್ಕೆ ಬಂದಿದ್ದ ಮುಸ್ಲಿಂ ಸಮುದಾಯದ ಹಣ್ಣು ವ್ಯಾಪಾರಿ, (ಹೆಸರು ಮರೆತಿದೆ) ಆತನಿಗೆ ಗೊತ್ತಿದ್ದ ಕನ್ನಡ ಉರ್ದು ಮಿಶ್ರ ಭಾಷೆಯಲ್ಲಿ "ರಮ್ಜಾನ್ ಆದ್ಮೇಲೆ ಒಂದು ತಿಂಗಳಿಗೆ ಪಪ್ಪಾಯ ಹಾಕಿ" ಎಂದನಂತೆ. ಆ ವ್ಯಾಪಾರಿ ಅಂದು ಹೇಳಿದ ಒಗಟನ್ನು ಇಂದು ಬಿಡಿಸಿದೆವು.
ಪಪ್ಪಾಯ ಬೆಳೆಗಾರರಿಗೆ ವ್ಯಾಪಾರಿಯ ಉಪಯುಕ್ತ ಮಾಹಿತಿ
ಪಪ್ಪಾಯ ಏಳರಿಂದ ಏಳೂವರೆ ತಿಂಗಳಿಗೆ ಫಸಲು ನೀಡುತ್ತದೆ. ಅಲ್ಲಿಂದ ಪ್ರತಿ ವಾರಕ್ಕೊಮ್ಮೆ ಎರಡು ತಿಂಗಳು ಕಟಾವು ಮಾಡಬಹುದು. ನಂತರ ಫಸಲು ಸ್ವಲ್ಪ ಕಡಿಮೆಯಾಗುತ್ತದೆ, ಅಲ್ಲಿಂದ ಮುಂದಿನ ಎರಡು ತಿಂಗಳ ಕಾಲ ಪ್ರತಿ 15 ದಿನಕ್ಕೆ ಕಟಾವು ಮಾಡಬಹುದು. ಅಷ್ಟರಲ್ಲಿ ನಿಮ್ಮ ಬೆಳೆಯ ಅವಧಿ ಹನ್ನೊಂದು ತಿಂಗಳು ಹದಿನೈದು ದಿವಸಕ್ಕೆ ಬಂದಿರುತ್ತದೆ. ಅಲ್ಲಿಂದಾಚೆಗೆ ಮುಂದಿನ ಎರಡು ತಿಂಗಳು ಅತ್ಯುತ್ತಮ ಇಳುವರಿ ನಿರೀಕ್ಷಿಸಬಹುದು. ಇದು ಪಪ್ಪಾಯ ಹಣ್ಣು ಫಸಲು ನೀಡುವ ಕ್ರಮ. (ಇಳುವರಿಯ ಪ್ರಮಾಣ ಗುಣಮಟ್ಟ ಮುಂತಾದವು ಬೆಳೆ ನಿರ್ವಹಣಾ ಕ್ರಮಗಳ ಮೇಲೆ ಅವಲಂಬಿತವಾಗಿರುತ್ತದೆ).
ಹಣ್ಣಿನ ವ್ಯಾಪಾರಿಯ ಹಿಂದಿನ ಎಕನಾಮಿಕ್ಸ್
ರಂಜಾನ್ ಹಬ್ಬವಾದ ಒಂದು ತಿಂಗಳಿಗೆ ಪಪ್ಪಾಯ ನಾಟಿ ಮಾಡಿ ಎಂದು ಹೇಳಿದ್ದ ಹಣ್ಣಿನ ವ್ಯಾಪಾರಿಯ ಹಿಂದಿನ ಎಕನಾಮಿಕ್ಸ್ ಇಂದು ನಮ್ಮ ಕಣ್ತೆರೆಸಿತು. ಈ ಹಬ್ಬದ ಸಮಯದಲ್ಲಿ ಪಪ್ಪಾಯಿ ಹಣ್ಣಿಗೆ ಬಹಳ ಬೇಡಿಕೆ ಇರುತ್ತದೆ. ಅದೇ ಸಂದರ್ಭಕ್ಕೆ ಫಸಲು ಬರುವ ಹಾಗೆ ಬೆಳೆ ಯೋಜಿಸಿದರೆ ಬೆಳೆದವರಿಗೂ ಲಾಭ. ಹಣ್ಣು ತಿನ್ನುವವರಿಗೂ ಖುಷಿ. ಹಾಗಾಗಿ ರಂಜಾನ್ ಆದ ಒಂದು ತಿಂಗಳಿಗೆ ಪಪ್ಪಾಯ ನಾಟಿ ಮಾಡಿ ಎಂದು ಆ ಹಣ್ಣಿನ ವ್ಯಾಪಾರಿ ಹೇಳಿ ಹೋಗಿದ್ದರು.
ಹಾಸನ; ರೈತರಿಂದ ಆಲೂಗಡ್ಡೆ ಬಿತ್ತನೆ ಬೀಜ ಖರೀದಿ ಆರಂಭ
ಪಪ್ಪಾಯ ಬೆಳೆಗಾರರು ಗಮನಿಸಿ
ಉತ್ತಮ ಗುಣಮಟ್ಟದ ತಳಿಗಳಾದ ಸೋಲೋ ಪಪ್ಪಾಯ, ಕೂರ್ಗ್ ಹನಿ ಡ್ಯೂ, ರೆಡ್ ಲೇಡಿ 786, ವಾಷಿಂಗ್ಟನ್, ಸೂರ್ಯ, ಕೊ-1, ಕೊ-2 ಮುಂತಾದವನ್ನು ನಾಟಿಗೆ ಬಳಸಬಹುದು. ಅಥವಾ ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರ ಅಥವಾ ಕೃಷಿ ವಿಶ್ವವಿದ್ಯಾಲಯಗಳ ಶಿಫಾರಸ್ಸಿನಂತೆ ಸಸಿಗಳನ್ನು ಕೊಳ್ಳಿ. ಬೀಜ ನಾಟಿ ಮಾಡುವುದಕ್ಕಿಂತ ನರ್ಸರಿಗಳಿಂದ ಉತ್ತಮ ಗುಣಮಟ್ಟದ ಸಸಿಗಳನ್ನು ಕೊಳ್ಳುವುದು ಉತ್ತಮ. ಸಾಲಿನಿಂದ ಸಾಲಿಗೆ 8 ಅಡಿ, ಗಿಡದಿಂದ ಗಿಡಕ್ಕೆ 6 ರಿಂದ 8 ಅಡಿ ಅಂತರವಿರಬೇಕು. ಎರಡು ಅಡಿ ಆಳ, ಉದ್ದ ಮತ್ತು ಅಗಲದ ಗುಂಡಿ ಮಾಡಿಕೊಳ್ಳಬೇಕು. ತಜ್ಞರ ಶಿಫಾರಸ್ಸಿನಂತೆ ಪೋಷಕಾಂಶಗಳನ್ನು ಕೊಡಬೇಕು.
ರೋಗಗಳ ನಿರ್ವಹಣೆಗೆ ಸಲಹೆ ಪಡೆಯಿರಿ
ಮೊದಲ ಆರು ತಿಂಗಳು ಅಂತರ ಬೆಳೆಯಾಗಿ ತರಕಾರಿ ಮತ್ತು ದ್ವಿದಳ ಧಾನ್ಯ ಬೆಳೆಗಳನ್ನು ಮಾಡಿಕೊಳ್ಳಬಹುದು. ಪಪ್ಪಾಯಿಗೆ ಸಾಮಾನ್ಯವಾಗಿ ಬರುವ ಬುಡಕೊಳೆ ರೋಗ, ಚಿಬ್ಬು ರೋಗ ಮತ್ತು ನಂಜು ರೋಗ (ಮೊಜಾಯಿಕ್ ಮತ್ತು ಉಂಗುರಚುಕ್ಕೆ ರೋಗ) ಗಳನ್ನು ನಿರ್ವಹಣೆ ಮಾಡಲು ತಜ್ಞರ ಸಲಹೆ ಪಡೆಯಿರಿ. ಪೋಷಕಾಂಶಗಳ ನಿರ್ವಹಣೆ, ಅದರಲ್ಲೂ ಲಘುಪೋಷಕಾಂಷಗಳ ನಿರ್ವಹಣೆ ಬಗ್ಗೆ ಧ್ಯಾನವಿರಲಿ. ಇಷ್ಟಾದರೆ ಪಪ್ಪಾಯ ಬೆಳೆ ನಿಮ್ಮ ಕೈಬಿಡುವುದಿಲ್ಲ. PLAN YOUR CROP PREDICTING MARKET DEMAND...