Breaking : ಅಗ್ನಿಪಥ್, ಆ.25ಕ್ಕೆ ದೆಹಲಿ ಕೋರ್ಟ್ನಿಂದ ವಿಚಾರಣೆ
ನವದೆಹಲಿ, ಜುಲೈ 20: ಅಗ್ನಿಪಥ್ ಯೋಜನೆಗೆ ಸಂಬಂಧಿಸಿರುವ ಎಲ್ಲಾ ಅರ್ಜಿಗಳ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಆಗಸ್ಟ್ 25ಕ್ಕೆ ವಿಚಾರಣೆ ನಡೆಸುವುದಾಗಿ ಬುಧವಾರ ತಿಳಿಸಿದೆ. ಅಗ್ನಿಪಥ್ ಯೋಜನೆಗೆ ಸಂಬಂಧಿಸಿದ ವಿವಿಧ ಅರ್ಜಿಗಳನ್ನು ಮಂಗಳವಾರ ಸುಪ್ರೀಂಕೋರ್ಟ್ ದೆಹಲಿ ಹೈಕೋರ್ಟ್ಗೆ ವರ್ಗಾಯಿಸಿದೆ.
ಸುಪ್ರೀಂಕೋರ್ಟ್ ವರ್ಗಾಯಿಸಿರುವ ಅಗ್ನಿಪಥ್ ಯೋಜನೆಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ನಾವು ಆಗಸ್ಟ್ 25, 2022 ರಂದು ಪರಿಶೀಲಿಸುತ್ತೇವೆ ಎಂದು ನ್ಯಾಯಮೂರ್ತಿ ಸತೀಶ್ ಚಂದರ್ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಅವರ ಪೀಠ ತಿಳಿಸಿದೆ.
ವಿವಿಧ ಹೈಕೋರ್ಟ್ಗಳಲ್ಲಿ ಬಾಕಿ ಉಳಿದಿರುವ ಅಗ್ನಿಪಥ ಯೋಜನೆಯನ್ನು ಪ್ರಶ್ನಿಸಿರುವ ಇತರ ಅರ್ಜಿಗಳಿಗೆ ಸಂಬಂಧಿಸಿದಂತೆ, ಸಂಬಂಧಪಟ್ಟ ಹೈಕೋರ್ಟ್ಗಳು ಅರ್ಜಿದಾರರಿಗೆ ತಮ್ಮ ಅರ್ಜಿಗಳನ್ನು ದೆಹಲಿ ಹೈಕೋರ್ಟ್ಗೆ ವರ್ಗಾಯಿಸಲು ಅಥವಾ ಅವರ ಅರ್ಜಿಗಳನ್ನು ಅಲ್ಲಿಯೆ ಬಾಕಿ ಇರಿಸಲು ಅರ್ಜಿದಾರರಿಗೆ ಆಯ್ಕೆಯ ಸ್ವಾತಂತ್ರ್ಯ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಈ ವಿಷಯವನ್ನು ಕೈಗೆತ್ತಿಕೊಂಡು ತ್ವರಿತವಾಗಿ ವಿಚಾರಣೆ ಮಾಡುವಂತೆ ಸುಪ್ರೀಂಕೋರ್ಟ್ ದೆಹಲಿ ಹೈಕೋರ್ಟ್ಗೆ ಮನವಿ ಮಾಡಿದೆ. ದೆಹಲಿ, ಕೇರಳ, ಪಂಜಾಬ್ ಮತ್ತು ಹರ್ಯಾಣ, ಪಾಟ್ನಾ ಮತ್ತು ಉತ್ತರಾಖಂಡದ ಹೈಕೋರ್ಟ್ಗಳು ಅಗ್ನಿಪಥ್ ಯೋಜನೆಗೆ ಸಂಬಂಧಿಸಿದ ವಿಷಯಗಳ ವಿಚಾರಣೆ ನಡೆಸುತ್ತಿವೆ.
ರಕ್ಷಣಾ ಪಡೆಗಳಿಗೆ ನಡೆಸುವ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಸಲ್ಲಿಸಲಾದ ಅರ್ಜಿಗಳಲ್ಲಿ ಸರ್ಕಾರದ ವಾದವನ್ನು ಆಲಿಸುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ನಲ್ಲಿ ಕೇವಿಯಟ್ ಅರ್ಜಿಯನ್ನು ಸಲ್ಲಿಸಿತ್ತು.
ಯೋಜನೆಯನ್ನು ಮರುಪರಿಶೀಲಿಸುವಂತೆ ಕೇಂದ್ರಕ್ಕೆ ನಿರ್ದೇಶನಗಳನ್ನು ನೀಡುವಂತೆ ವಕೀಲ ಹರ್ಷ್ ಅಜಯ್ ಸಿಂಗ್ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಅಡ್ವೊಕೇಟ್ ಎಂಎಲ್ ಶರ್ಮಾ ಅವರು ಯೋಜನೆಗೆ ಕೇಂದ್ರದ ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿ, ಈ ಯೋಜನೆಯು "ಕಾನೂನುಬಾಹಿರ ಮತ್ತು ಅಸಾಂವಿಧಾನಿಕ" ಎಂದು ಕರೆದಿದ್ದಾರೆ.
Recommended Video
ಜೂನ್ 14 ರಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಮೂರು ಸೇನಾಪಡೆಗಳ ಮುಖ್ಯಸ್ಥರ ಸಮ್ಮುಖದಲ್ಲಿ ಅಗ್ನಿಪಥ್ ಯೋಜನೆಯನ್ನು ಘೋಷಿಸಿದರು. 17.5 ವರ್ಷದಿಂದ 21 ವರ್ಷದೊಳಗಿನ ಯುವಕರು ಸಶಸ್ತ್ರ ಸೇವೆಗಳಿಗೆ ಸೇರಲು ಅವಕಾಶ ನೀಡಲಾಗಿತ್ತು. ನಾಲ್ಕು ವರ್ಷಗಳಿಗೆ ಮಾತ್ರ ಸೇವೆ ಮಾಡಲು ಅವಕಾಶವಿದ್ದು ನಂತರ ಇವರಲ್ಲಿ ಶೇಕಡಾ 25 ಸೈನಿಕರನ್ನು 15 ವರ್ಷಗಳವರೆಗೆ ಉಳಿಸಿಕೊಳ್ಳಲು ಅವಕಾಶ ಒದಗಿಸಲಾಗುತ್ತದೆ. ಆದರೆ ಯೋಜನೆ ವಿರೋಧಿಸಿ ಬಿಹಾರ, ಉತ್ತರ ಪ್ರದೇಶ, ತೆಲಂಗಾಣ, ಹರ್ಯಾಣ, ಉತ್ತರಾಖಂಡ, ಪಶ್ಚಿಮ ಬಂಗಾಳ ಮತ್ತು ವಿವಿಧ ರಾಜ್ಯಗಳಲ್ಲಿ ರಾಷ್ಟ್ರವ್ಯಾಪಿ ಭಾರಿ ಪ್ರತಿಭಟನೆ ನಡೆಯುತ್ತಿದ್ದಂತೆ ವಯೋಮಿತಿಯನ್ನು 23 ವರ್ಷಗಳವರೆಗೆ ವಿಸ್ತರಿಸಿತು.