ಕೇಂದ್ರ ಬಜೆಟ್ ಬಗ್ಗೆ ಯಾವ ನಿರೀಕ್ಷೆ ಇಟ್ಟುಕೊಂಡಿಲ್ಲ; ಸಿದ್ದರಾಮಯ್ಯ
ಮೈಸೂರು, ಜನವರಿ 31; "ಕೇಂದ್ರ ಬಜೆಟ್ ಬಗ್ಗೆ ಯಾವ ನಿರೀಕ್ಷೆಯನ್ನು ಇಟ್ಟುಕೊಂಡಿಲ್ಲ. ದುಡ್ಡು ಎಲ್ಲಿದೆ ಅಭಿವೃದ್ಧಿ ಮಾಡೋಕೆ ಇವರಿಗೆ?" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಭಾನುವಾರ ಮೈಸೂರಿನಲ್ಲಿ ಮಾತನಾಡಿದ ಅವರು, "ಎಕನಾಮಿಕ್ ಸರ್ವೆಯಲ್ಲಿ ಸುಳ್ಳು ಹೇಳಿದ್ದಾರೆ. ಮೋದಿ ಸರ್ಕಾರದಲ್ಲಿ ಜಿಡಿಪಿ ಪಾತಾಳಕ್ಕೆ ಕುಸಿದಿದೆ. 2019-20ರಲ್ಲಿ ಕೊರೊನಾ ಇರಲಿಲ್ಲ, ಅವಾಗ 4.2 ಇತ್ತು. ಈಗ 2020-21 ರಲ್ಲಿ -7.7 ಇದೆ. ಜಿಡಿಪಿ ಬೆಳವಣಿಗೆ ನಕರಾತ್ಮಕವಾಗಿದೆ" ಎಂದು ದೂರಿದರು.
ಬಜೆಟ್ 2021 ನಿಖರ ಹಾಗೂ ನಿರಂತರ ಮಾಹಿತಿಗಾಗಿ 'ಡೈಲಿಹಂಟ್' ಫಾಲೋ ಮಾಡಿ
"ಜಿಡಿಪಿ 2021-22 ಕ್ಕೆ 11 ಆಗುತ್ತೆ ಅಂತ ಹೇಳಿದ್ದಾರೆ. ಶೇ 11 ಬೆಳೆಯುತ್ತೆ ಅಂದರೆ ಇಷ್ಟು ಪಾತಾಳಕ್ಕೆ ಯಾಕೆ ಕುಸಿಯಿತು?. ನಿರುದ್ಯೋಗ ಸಮಸ್ಯೆ ಅಂತೂ ತಾಂಡವಾಡುತ್ತಿದೆ. ನಗರ ಪ್ರದೇಶದಲ್ಲಿ ಶೇ 9.2, ಗ್ರಾಮೀಣ ಪ್ರದೇಶದಲ್ಲಿ ಶೇ 8.9 ನಿರುದ್ಯೋಗ ಸಮಸ್ಯೆ ಇದೆ" ಎಂದರು.
ಬಜೆಟ್ 2021: ವಿಪಕ್ಷ ನಾಯಕರ ಮನವೊಲಿಕೆಗೆ ಮುಂದಾದ ಕೇಂದ್ರ ಸರ್ಕಾರ
"ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಶೇ 2.9 ರಷ್ಟು ಮಾತ್ರ ನಿರುದ್ಯೋಗ ಸಮಸ್ಯೆ ಇತ್ತು. ದೇಶದಲ್ಲಿ 9.5ರಷ್ಟು ಪದವೀಧರರು, ತಾಂತ್ರಿಕ ವಿಭಾಗದ ವಿದ್ಯಾರ್ಥಿಗಳು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಕೃಷಿ ಹಾಗೂ ಕೈಗಾರಿಕೋದ್ಯಮಕ್ಕೆ ಹೆಚ್ಚು ಒತ್ತು ನೀಡದಿದ್ದರೆ ದೇಶ ಅಭಿವೃದ್ಧಿಯಾಗಲು ಸಾಧ್ಯವೇ ಇಲ್ಲ" ಎಂದು ಸಿದ್ದರಾಮಯ್ಯ ಹೇಳಿದರು.
ಇಂದಿನಿಂದ ಬಜೆಟ್ ಅಧಿವೇಶನ: ಈ ಬಾರಿಯ ಆರ್ಥಿಕ ಸಮೀಕ್ಷೆಯಲ್ಲಿ ಏನಿರಲಿದೆ?
ಹೊಂದಾಣಿಕೆ ಇಲ್ಲ; ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಹಿನ್ನಲೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, "ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ" ಎಂದು ಸ್ಪಷ್ಟಪಡಿಸಿದರು.
"ಜೆಡಿಎಸ್ ಅಲ್ಲದೇ ಯಾವ ಪಕ್ಷದ ಜೊತೆಯೂ ಹೊಂದಾಣಿಕೆ ಇಲ್ಲ. ಈ ಹಿಂದೆ ಸ್ಥಳೀಯರು ಮೈತ್ರಿ ಮಾಡಿಕೊಂಡಿದ್ದರು. ಆದರೆ, ಇದೀಗ ಯಾರ ಜೊತೆಯೂ ಮೈತ್ರಿ ಇಲ್ಲ" ಎಂದರು.