ಬಾದಾಮಿ ಸ್ಪರ್ಧೆ ವಿಚಾರದ ಪ್ರಶ್ನೆಗೆ ಮಾಧ್ಯಮದವರಿಗೆ ಸಿಎಂ ತಿರುಗೇಟು
ಮೈಸೂರು, ಏಪ್ರಿಲ್ 19 : ಬಾದಾಮಿಯಲ್ಲಿ ಸ್ಪರ್ಧಿಸುತ್ತೀರಾ ಎಂದು ಅದೆಷ್ಟು ಬಾರಿ ಕೇಳುತ್ತೀರ್ರೀ ? ಡೌಟ್ ಇರೋದು ನಮಗಲ್ಲ, ನಿಮಗೆ ಎಂದು ಮಾಧ್ಯಮದವರ ವಿರುದ್ಧವೇ ಸಿಎಂ ಸಿದ್ದು ಇಂದು ಗರಂ ಆದರು.
'ಬಾದಾಮಿ'ಗೆ ಹಠ ಹಿಡಿದ ಸಿದ್ದರಾಮಯ್ಯ, ಬೇಸ್ತು ಬಿತ್ತೇ ಹೈಕಮಾಂಡ್?
ಮೈಸೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿಎಂ, ನಾನು ಸ್ಪರ್ಧಿಸಬೇಕೆ ಬೇಡವೇ ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ನಾನು ಹೈಕಮಾಂಡ್ ಅಲ್ಲ, ನಾನು ಈ ರಾಜ್ಯದ ಮುಖ್ಯಮಂತ್ರಿ ಅಷ್ಟೆ. ಬಾದಾಮಿ ವಿಚಾರದಲ್ಲಿ ಗೊಂದಲ ಇರೋದು ನಿಮಗೆ ನಮಗಲ್ಲ ಎಂದು ಕಿಡಿಕಾರಿದರು.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಏಳು ಶಾಸಕರಿಗೆ ಟಿಕೆಟ್ ನಿರಾಕರಣೆ ವಿಚಾರಕ್ಕೆ ಸಂಬಂಧಿಸಿದಂತೆ, ಹೈಕಮಾಂಡ್ ಈ ಬಗ್ಗೆ ಪರಿಶೀಲನೆ ನಡೆಸುತ್ತದೆ. ಜಗಳೂರು ಕ್ಷೇತ್ರಕ್ಕೆ ರಾಜೇಶ್ ಗೆ ಟಿಕೆಟ್ ಕೊಡಲು ನಿರ್ಧಾರವಾಗಿದೆ. ಉಳಿದ ಶಾಸಕರ ವಿಚಾರ ರಾಹುಲ್ ಗಾಂಧಿ ತೀರ್ಮಾನಿಸುತ್ತಾರೆ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ ಎಂದರು. ಏಪ್ರಿಲ್ 24 ರಿಂದ ರಾಜ್ಯ ಪ್ರವಾಸ ಆರಂಭಿಸುವೆ. ಈ ತನಕ ಎಲ್ಲೆಲ್ಲಿಗೆ ಹೋಗಿಲ್ಲವೋ ಅಂತಹ ಕಡೆಗಳಿಗೆ ಹೋಗುವೆ. ಎಲ್ಲಿ ಪ್ರಬಲ ಸ್ಪರ್ಧೆ ಇದೆಯೋ ಅಲ್ಲಿಗೂ ಹೋಗುವೆ ಎಂದರು.
ಗಾಯಿತ್ರಿ ಶಾಂತೇಗೌಡರಿಗೆ ಟಿಕೆಟ್ ನೀಡುವಂತೆ ಕೇಳಲು ಬಂದಿದ್ದ ಅವರ ಬೆಂಬಲಿಗರನ್ನು ಸಿಎಂ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ಟಿಕೆಟ್ ಆಕಾಂಕ್ಷಿಯಾಗಿದ್ದ ಗಾಯಿತ್ರಿ ಶಾಂತೇಗೌಡರಿಗೆ ಟಿಕೆಟ್ ತಪ್ಪಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಪ್ರಚಾರದಲ್ಲಿದ್ದಾಗ ಸಿಎಂ ಸಿದ್ದರಾಮಯ್ಯರಿಗೆ ಗಾಯತ್ರಿ ಶಾಂತೇಗೌಡರಿಗೆ ಟಿಕೆಟ್ ನೀಡುವಂತೆ ಬೆಂಬಲಿಗರು ಮನವಿ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ನಿಮ್ಮನ್ನ ಗಾಯಿತ್ರಿನೇ ಕಳುಹಿಸಿದ್ದಾ? ಅವರಿಗೆ ಮೊದಲೇ ಕೇಳಿದೆ. ಆಕೆ ಟಿಕೆಟ್ ಬೇಡ ಅಂದ್ಲು, ನಾನೇನ್ ಮಾಡೋಕ್ ಆಗುತ್ತೇ ಅದಕ್ಕೆ ಬೇರೆಯವರಿಗೆ ಕೊಟ್ಟೆ ಎಂದರು.