ಡಿಕೆಶಿ ಮಾವನ ಮನೆಯಲ್ಲಿ 3ನೇ ದಿನವೂ ಮುಂದುವರಿದ ಐಟಿ ದಾಳಿ
ಮೈಸೂರು, ಆಗಸ್ಟ್ 4: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಮಾವ ತಿಮ್ಮಯ್ಯ ಅವರ ಮೈಸೂರು ನಿವಾಸದಲ್ಲಿ ಮೂರನೇ ದಿನವೂ ಐಟಿ ಅಧಿಕಾರಿಗಳು ಶೋಧ ಮುಂದುವರೆಸಿದ್ದಾರೆ. ಇದರಿಂದ ತಿಮ್ಮಯ್ಯ ಅವರ ನಿವಾಸದಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಇಲ್ಲದಂತಾಗಿದೆ.
ಐಟಿ ಅಧಿಕಾರಿಗಳು ತಿಮ್ಮಯ್ಯಗೆ ಸೇರಿದ ಎಲ್ಲಾ ವ್ಯವಹಾರಗಳನ್ನು ಸ್ಥಗಿತಗೊಳಿಸಿದ ಹಿನ್ನೆಲೆ ಕಳೆದ ಮೂರು ದಿನಗಳಿಂದ ಜೆ.ಪಿ.ನಗರದಲ್ಲಿರುವ ಸೀಗೆಪುಡಿ ಕಾರ್ಖಾನೆಯನ್ನು ಸಹ ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಕಾರ್ಖಾನೆಯಲ್ಲಿ ಸೀಗೆಪುಡಿ ತಯಾರಿಕೆ ಹಾಗೂ ಕಾರ್ಖಾನೆಯ ಎಲ್ಲ ಚಟುವಟಿಕೆಗಳು ಬಂದ್ ಆಗಿದೆ. ಕಳೆದ ಮೂರು ದಿನಗಳಿಂದ ಸೀಗೆಪುಡಿ ಕಾರ್ಖಾನೆಯನ್ನು ಸ್ಥಗಿತಗೊಳಿಸಲಾಗಿದೆ. ಐಟಿ ಅನುಮತಿ ಇಲ್ಲದೇ ಸೀಗೆಪುಡಿ ತಯಾರಿಕೆ ಕಾರ್ಖಾನೆ ಪ್ರವೇಶಿಸುವಂತಿಲ್ಲ. ಆ.2 ರಂದು ತಿಮ್ಮಯ್ಯ ಅವರನ್ನು ಐಟಿ ಅಧಿಕಾರಿಗಳು ಸೀಗೆಪುಡಿ ಕಾರ್ಖಾನೆಗೆ ಕರೆದುಕೊಂಡು ಹೋಗಿದ್ದರು.
ಹನ್ನೊಂದು ವರ್ಷದಿಂದ ಡಿಕೆಶಿ ಮೇಲಿತ್ತು ಆದಾಯ ತೆರಿಗೆ ತೂಗುಗತ್ತಿ
ಐಟಿ ಅಧಿಕಾರಿಗಳು ನಿನ್ನೆ ರಾತ್ರಿ 10.30ಕ್ಕೆ ದಾಖಲೆ ಪರಿಶೀಲನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಡಿಕೆಶಿ ಮಾವ ತಿಮ್ಮಯ್ಯ ನಿವಾಸದಿಂದ 6 ಅಧಿಕಾರಿಗಳು ತೆರಳಿದ್ದರು. ಆದರೆ ತಿಮ್ಮಯ್ಯ ನಿವಾಸದಲ್ಲೇ ಓರ್ವ ಐಟಿ ಅಧಿಕಾರಿ, ಓರ್ವ ಪುರುಷ ಪೊಲೀಸ್ ಸಿಬ್ಬಂದಿ, ಓರ್ವ ಮಹಿಳಾ ಪೊಲೀಸ್ ಸಿಬ್ಬಂದಿ ಮನೆಯಲ್ಲೇ ವಾಸ್ತವ್ಯ ಹೂಡಿದ್ದರು. ಮನೆಯ ಹೊರಗೆ ಇಬ್ಬರು ಬೀಟ್ ಪೊಲೀಸರು ಕಾವಲಿದ್ದರು.
ಇಂದು ಬೆಳಿಗ್ಗೆ ಓರ್ವ ಐಟಿ ಅಧಿಕಾರಿ ತಿಮ್ಮಯ್ಯ ನಿವಾಸಕ್ಕೆ ಬಂದಿದ್ದು, ಐಟಿ ಶೋಧ ಮುಂದುವರೆಸಿದ್ದಾರೆ.