ಅಂದು ಹೊಗಳಿ, ಇಂದು ದೇವೇಗೌಡರನ್ನು ತೆಗಳಿದ ಮೋದಿ

ಗಂಗಾವತಿ, ಏಪ್ರಿಲ್ 12 : ಒಂದು ವರ್ಷದ ಸಮಯದಲ್ಲಿ ರಾಜಕೀಯ ಸಮೀಕರಣಗಳು, ಲೆಕ್ಕಾಚಾರಗಳು, ಬಾಂಧವ್ಯಗಳು ಬದಲಾಗಿವೆ. ಅಂದು ಬೇಕಾಗಿದ್ದವರು ಇಂದು ಬೇಡವಾಗಿದ್ದಾರೆ. ಅಂದು ವಾಚಾಮಗೋಚರವಾಗಿ ಹೊಗಳಿಸಿಕೊಂಡವರು ಇಂದು ತೀವ್ರ ತೆಗಳಿಕೆಗೆ ಆಹಾರವಾಗಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕರ್ನಾಟಕ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಹೆಚ್ಚೂಕಡಿಮೆ ಹತ್ತಿರವಾಗಿದ್ದ ಜಾತ್ಯತೀತ ಜನತಾದಳ ಇಂದು, ಕಾಂಗ್ರೆಸ್ಸಿನೊಂದಿಗೆ ಮೈತ್ರಿ ಮಾಡಿಕೊಂಡ ನಂತರ, ಬದ್ಧವೈರಿಯಾಗಿದೆ. ಚುನಾವಣಾಂಗಣ ಹರಿತ ಮಾತುಗಳ ಚಕಮಕಿಗೆ ಕಾರಣವಾಗುತ್ತಿದೆ.

ಹೆಚ್ಚೂಕಡಿಮೆ ಒಂದು ವರ್ಷದ ಹಿಂದೆ, ಕರ್ನಾಟಕ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ, ಮೇ 1ರಂದು ಉಡುಪಿಯಲ್ಲಿ ಭರ್ಜರಿ ಭಾಷಣ ಮಾಡಿದ್ದ ನರೇಂದ್ರ ಮೋದಿಯವರು ಜಾತ್ಯತೀತ ಜನತಾದಳದ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಅವರನ್ನು ಅವರೇ ಬೆಚ್ಚಿಬೀಳುವಂತೆ ಹೊಗಳಿದ್ದರು.

ಆದರೆ, ಕರ್ನಾಟಕದಲ್ಲಿ ಮತದಾನಕ್ಕೆ ಇನ್ನು ಆರೇ ದಿನಗಳಿರುವಾಗ, ಕೊಪ್ಪಳದ ಗಂಗಾವತಿಯಲ್ಲಿ ಭಾಷಣ ಮಾಡುತ್ತಿದ್ದ ನರೇಂದ್ರ ಮೋದಿಯವರು, ಸನ್ಮಾನ್ಯ ದೇವೇಗೌಡ ಮತ್ತು ಅವರ ಇಬ್ಬರು ಮಕ್ಕಳಾದ ಎಚ್ ಡಿ ರೇವಣ್ಣ ಮತ್ತು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಜಾಣತನದಿಂದಲೇ ಗೌಡರನ್ನು ಮೋದಿ ಹೊಗಳಿದ್ದರು

ಜಾಣತನದಿಂದಲೇ ಗೌಡರನ್ನು ಮೋದಿ ಹೊಗಳಿದ್ದರು

ಆ ಹೊಗಳಿಕೆ ಅಂದು ಅನಿವಾರ್ಯವಾಗಿತ್ತು. ನೂರಾಹದಿಮೂರು ಅಂಕಿಸಂಖ್ಯೆಯ ಬೆನ್ನತ್ತಿದ್ದ ಯಡಿಯೂರಪ್ಪ ನೇತೃತ್ವದ ಬಿಜೆಪಿಗೆ, ಬಹುಮತ ದೊರೆಯದಿರುವ ಆತಂಕ ಕಾಡಲು ಆರಂಭಿಸಿತ್ತು. ಚುನಾವಣಾ ಪ್ರಚಾರದ ಕಡೆಯ ಹಂತದಲ್ಲಿ ನರೇಂದ್ರ ಮೋದಿಯವರು ಆಗ ಬಿರುಗಾಳಿಯ ಪ್ರಚಾರ ಕೈಗೊಂಡಿದ್ದರಿಂದ ಬಿಜೆಪಿ 104 ಸ್ಥಾನಕ್ಕೆ ಬಂದು ನಿಂತಿತ್ತು. ಈ ಲೆಕ್ಕಾಚಾರದ ಒಂದು ಲೆಕ್ಕ ಸಿಕ್ಕಿದ್ದ ನರೇಂದ್ರ ಮೋದಿಯವರು ಜಾಣತನದಿಂದಲೇ ಅವದು ದೇವೇಗೌಡರನ್ನು ಅವರೇ ನಿಬ್ಬೆರಗಾಗುವಂತೆ ಹೊಗಳಿದ್ದರು. ಈ ಹೊಗಳಿಕೆಯ ಹಿಂದೆ ಅಮಿತ್ ಶಾ ಅವರ ಲೆಕ್ಕಾಚಾರವೂ ಇತ್ತು ಎಂಬುದು ಗೊತ್ತಿರುವ ಸಂಗತಿ.

ಅಂದು ಮೋದಿಯವರು ಹೇಳಿದ್ದೇನು?

ಅಂದು ಮೋದಿಯವರು ಹೇಳಿದ್ದೇನು?

ದೇಶದ ಮಣ್ಣಿನ ಮಗ, ಮಾಜಿ ಪ್ರಧಾನಿ ದೇವೇಗೌಡ ಅವರು ದೇಶಕ್ಕೆ ನೀಡಿದ ಕಾಣಿಕೆ ಅಪಾರ. ಅವರು ನವದೆಹಲಿಗೆ ನನ್ನನ್ನು ಭೇಟಿಯಾಗಲು ಬಂದಾಗಲೆಲ್ಲ ಅವರ ಕಾರಿನ ದ್ವಾರವನ್ನು ನಾನೇ ತೆರೆದು ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳುತ್ತಿದ್ದೆ. ಅವರನ್ನು ವಾಪಸ್ ಮನೆಗೆ ಕಳಿಸುವಾಗ ಕೂಡ ನಾನೇ ಅವರ ಕಾರಿನ ಬಾಗಿಲು ತೆಗೆದು, ಅವರನ್ನು ಕೂರಿಸಿ ಬೀಳ್ಕೊಡುತ್ತಿದ್ದೆ. ಅವರ ಮೇಲಿನ ಅಪಾರ ಗೌರವದಿಂದ ಇದನ್ನು ಮಾಡುತ್ತಿದ್ದೆ. ರಾಷ್ಟ್ರಕ್ಕಾಗಿ ಇಷ್ಟು ವರ್ಷ ದುಡಿದ ಮಹಾನ್ ಚೇತನ ದೇವೇಗೌಡರನ್ನು ರಾಜಕೀಯದಲ್ಲಿ ಇನ್ನೂ ಅರಳದ ಕಾಂಗ್ರೆಸ್ಸಿಗರು ತೆಗಳುತ್ತಿದ್ದಾರೆ. ಗೌಡರ ಬೆಲೆ ಈಗ ಕಾಂಗ್ರೆಸ್ಸಿಗೆ ಅರ್ಥವಾಗುವುದಿಲ್ಲ ಎಂದು ಮೋದಿಯವರು ಉಡುಪಿಯಲ್ಲಿ ದೇವೇಗೌಡರನ್ನು ಹೊಗಳಿದ್ದರು.

ರಾಜ್ಯದ ಕೀಲಿಕೈ ಎಚ್ಡಿಕೆ ಕೈಗೆ ಸಿದ್ದು ಇಟ್ಟಿದ್ದರು

ರಾಜ್ಯದ ಕೀಲಿಕೈ ಎಚ್ಡಿಕೆ ಕೈಗೆ ಸಿದ್ದು ಇಟ್ಟಿದ್ದರು

ಆಗಿನ ಸನ್ನಿವೇಶ ಕೂಡ ಅದೇ ರೀತಿಯಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರೆಲ್ಲ, ತಾವೇ ಸರಕಾರ ರಚಿಸುವ ಉತ್ಸಾಹದಿಂದ ಜೆಡಿಎಸ್ ನಾಯಕರ ಮೇಲೆ ಟೀಕಾ ಪ್ರಹಾರ ಮಾಡುತ್ತಿದ್ದರು. ಕುಮಾರಸ್ವಾಮಿಯವರು ಅವರಪ್ಪನಾಣೆಗೆ ಮತ್ತೆ ಮುಖ್ಯಮಂತ್ರಿ ಆಗಲ್ಲ ಎಂದು ಸಿದ್ದರಾಮಯ್ಯ ಹಲವಾರು ಬಾರಿ ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ್ದರು. ಆ ಸಮಯದಲ್ಲಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನಡುವಿನ ದ್ವೇಷವೂ ತಾರಕಕ್ಕೇರಿತ್ತು. ಆದರೆ, ಮುಂದೆ ನಡೆದಿದ್ದು ಇತಿಹಾಸ. ಹಾಗೆ ಟೀಕಿಸಿದ್ದ ಸಿದ್ದರಾಮಯ್ಯನವರೇ ಕುಮಾರಸ್ವಾಮಿಗೆ ಕರ್ನಾಟಕ ರಾಜ್ಯದ ಕೀಲಿಕೈ ಕೊಟ್ಟು ಹೆಗಲ ಮೇಲೆ ಕೈಹಾಕಿದ್ದರು. ಇದಪ್ಪ ರಾಜಕೀಯ ಅಂದ್ರೆ.

ಕರ್ನಾಟಕದ ಲೋಕಸಭಾ ಸದಸ್ಯರಲ್ಲಿ ಯಾರು ಎಷ್ಟು ಓದಿದ್ದಾರೆ?

'ಮೈತ್ರಿ ಧರ್ಮ' ಪಾಲನೆಯಲ್ಲಿ ಜೆಡಿಎಸ್

'ಮೈತ್ರಿ ಧರ್ಮ' ಪಾಲನೆಯಲ್ಲಿ ಜೆಡಿಎಸ್

ಆದರೆ, ಇಂದು ರಾಜಕೀಯ ಸನ್ನಿವೇಶಗಳು ಬದಲಾಗಿವೆ. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು 'ಮೈತ್ರಿ ಧರ್ಮ' ಪಾಲನೆಯಲ್ಲಿ ತೊಡಗಿರುವ ಜೆಡಿಎಸ್ ಪಕ್ಷ ಭಾರತೀಯ ಜನತಾ ಪಕ್ಷವನ್ನು ಹೀನಾಯವಾಗಿ ಟೀಕಿಸುತ್ತಿದೆ. ಇಪ್ಪತ್ತೊಂದು ಕ್ಷೇತ್ರಗಳನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಟ್ಟು, ಉಡುಪಿ-ಚಿಕ್ಕಮಗಳೂರು, ಹಾಸನ, ತುಮಕೂರು, ಮಂಡ್ಯ, ವಿಜಯಪುರ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಈ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಸ್ಪರ್ಧಿಸುತ್ತಿರುವ ಜಾತ್ಯತೀತ ಜನತಾದಳಕ್ಕೆ ಲೋಕಸಭೆ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ದೇವೇಗೌಡರು ತಮ್ಮಿಬ್ಬರು ಮೊಮ್ಮಕ್ಕಳನ್ನು ಕಣಕ್ಕೆ ಇಳಿಸಿದ್ದು, ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿ ಬಿದ್ದಿದ್ದಾರೆ.

ಜೆಡಿಎಸ್ ಸಂಸದರು ಏನು ವಿದ್ಯಾರ್ಹತೆ ಪಡೆದಿದ್ದಾರೆ?

ಮೋದಿ ಮತ್ತೆ ಪ್ರಧಾನಿಯಾದರೆ ಸನ್ಯಾಸ

ಮೋದಿ ಮತ್ತೆ ಪ್ರಧಾನಿಯಾದರೆ ಸನ್ಯಾಸ

ಇದೇ ಸಮಯದಲ್ಲಿ, ಕೈಯಲ್ಲಿ ಸದಾ ಮಂತ್ರಿಸಿದ ನಿಂಬೆಹಣ್ಣು ಇಟ್ಟುಕೊಂಡೇ ಓಡಾಡುವ, ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರು, "ಬೇಕಿದ್ದರೆ ಡೈರಿಯಲ್ಲಿ ಬರೆದಿಟ್ಟುಕೊಳ್ಳಿ, ಒಂದು ವೇಳೆ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾದರೆ ನಾನು ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ" ಎಂದು ಭೀಷ್ಮರಂತೆ ಭೀಷಣ ಪ್ರತಿಜ್ಞೆ ಮಾಡಿದ್ದಾರೆ. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿ ಆಗುತ್ತಾರಾ, ತಮ್ಮ ಈ ಮಾತನ್ನು ರೇವಣ್ಣ ಉಳಿಸಿಕೊಳ್ಳುತ್ತಾರಾ ಎಂಬುದು ತಿಳಿಯಲು ಮೇ 23ರವರೆಗೆ ಕರ್ನಾಟಕದ ಜನರು, ಎಲ್ಲಕ್ಕಿಂತ ಹೆಚ್ಚಾಗಿ ಹೊಳೆನರಸೀಪುರದ ಮತದಾರರು ಕಾತುರದಿಂದ ಕಾಯುತ್ತಿರುತ್ತಾರೆ. ಹಿಂದೆ ದೇವೇಗೌಡರು ಕೂಡ ಇದೇ ರೀತಿ ಪ್ರತಿಜ್ಞೆ ಮಾಡಿದ್ದರು. ಆದರೆ, ಅವರು ರಾಜಕೀಯ ನಿವೃತ್ತಿ ಪಡೆದಿದ್ದಾರೆಯೆ? ತುಮಕೂರು ಕ್ಷೇತ್ರದಿಂದ 85 ವರ್ಷದ ದೇವೇಗೌಡರು ಮತ್ತೆ ಲೋಕಕದನಕ್ಕಿಳಿದಿದ್ದಾರೆ.

ಉತ್ತರ ಕೊಡುತ್ತಾರಾ ಕರ್ನಾಟಕದ ಜನರು?

ಉತ್ತರ ಕೊಡುತ್ತಾರಾ ಕರ್ನಾಟಕದ ಜನರು?

ಅಂದು ಹೊಗಳಿದರೂ ಪ್ರಯೋಜನವಾಗದಿದ್ದಾಗ, ಇಂದು ತೆಗಳಿದಾಗ ಸುಮ್ಮನೆ ಬಿಡಲಾಗುತ್ತದೆಯಾ? ಗಂಗಾವತಿಯ ಬಿರುಬಿಸಿಲಿನಲ್ಲಿ ನೆರೆದಿದ್ದ ಲಕ್ಷಾಂತರ ಜನರೆದಿರು, ರೇವಣ್ಣ ಅವರ ಪ್ರತಿಜ್ಞೆ, ದೇವೇಗೌಡರು ಹಿಂದೆ ಮಾಡಿದ ಪ್ರತಿಜ್ಞೆ, ಕುಮಾರಸ್ವಾಮಿ ಅವರು ಭಾರತೀಯ ಸೈನಿಕರಿಗೆ ಸಂಬಂಧಿದಂತೆ ಆಡಿದ ವಿವಾದಾತ್ಮಕ ಮಾತುಗಳಿಗೆ ಪ್ರತಿಯಾಗಿ ಸರಿಯಾಗಿ ತಿರುಗೇಟು ನೀಡಿದ್ದಾರೆ ನರೇಂದ್ರ ಮೋದಿ. ಅಂದು, ಮೋದಿ ಪ್ರಧಾನಿಯಾದರೆ ನಿವೃತ್ತನಾಗುತ್ತೇನೆಂದು ಹೇಳಿದ್ದ ಗೌಡರು ಇಂದು ಮೊಮ್ಮಕ್ಕಳೊಂದಿಗೆ ಮತ್ತೆ ಚುನಾವಣೆಗೆ ನಿಂತಿದ್ದಾರೆ. ಇಂಥವರ ಮಾತನ್ನು ನೀವು ನಂಬುತ್ತೀರಾ? ಎಂದು ಪ್ರಶ್ನಿಸಿರುವ ಮೋದಿ, ಎರಡು ಹೊತ್ತು ಊಟಕ್ಕಾಗಿ ಸೈನಿಕರು ಸೈನ್ಯ ಸೇರುತ್ತಾರೆ ಎಂದು ಹೇಳಿ ಕುಮಾರಸ್ವಾಮಿ ಸೈನಿಕರಿಗೆ ಅವಮಾನ ಮಾಡಿಲ್ಲವೆ? ಎಂದು ಪ್ರಶ್ನಿಸಿದ್ದಾರೆ. ಉತ್ತರ ಕೊಡಬೇಕಾಗಿರುವವರು ಕರ್ನಾಟಕದ ಜನತೆ.

ಸಂಗಣ್ಣ ಕರಡಿ ವರ್ಸಸ್ ರಾಘವೇಂದ್ರ ಹಿತ್ನಾಳ್

ಸಂಗಣ್ಣ ಕರಡಿ ವರ್ಸಸ್ ರಾಘವೇಂದ್ರ ಹಿತ್ನಾಳ್

ಕರ್ನಾಟಕದ ರೈಸ್ ಬೌಲ್ ಎಂದೇ ಖ್ಯಾತಿ ಪಡೆದಿರುವ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹಿಂದಿನಿಂದಲೂ ಜಿಲ್ಲಾಜಿದ್ದಿ ಇದ್ದದ್ದೇ. ಈ ಬಾರಿ ಭಾರತೀಯ ಜನತಾ ಪಕ್ಷದಿಂದ ಮತ್ತೆ ಸಂಗಣ್ಣ ಕರಡಿ ಅವರು ಸ್ಪರ್ಧೆಗಿಳಿದಿದ್ದರೆ, ಬದ್ಧವೈರಿ ಕಾಂಗ್ರೆಸ್ ನಿಂದ ಬಸವರಾಜ್ ಹಿತ್ನಾಳ್ ಅವರ ಮಗ ರಾಘವೇಂದ್ರ ಹಿತ್ನಾಳ್ ಅವರು ನಾಲ್ಕು ಬಾರಿ ಗೆದ್ದಿರುವ ಸಂಗಣ್ಣ ಕರಡಿಗೆ ಸವಾಲು ಹಾಕಿದ್ದಾರೆ. ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಮೂರನೇ ಹಂತದಲ್ಲಿ ಏಪ್ರಿಲ್ 23ರಂದು ಮತದಾನ ನಡೆಯಲಿದೆ. 2013ರ ವಿಧಾನಸಭೆ ಚುನಾವಣೆಯಲ್ಲಿ ರಾಘವೇಂದ್ರ ಅವರು ಸಂಗಣ್ಣ ಕರಡಿ ಅವರನ್ನೇ ಸೋಲಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+