Janardhana Reddy : ಜನಾರ್ದನ ರೆಡ್ಡಿ ಮರಳಿಗೂಡಿಗೆ, ನಾಳೆ ಬಿಜೆಪಿ ಮರುಸೇರ್ಪಡೆ!
ಬೆಂಗಳೂರು,ಮಾರ್ಚ್24: ಅಕ್ರಮ ಗಣಿಗಾರಿಕೆ ಆರೋಪದ ಹಿನ್ನಲೆಯಲ್ಲಿ ಬಿಜೆಪಿಯಿಂದ ಅಮಾನತುಗೊಂಡಿದ್ದ ಕೆಕೆಪಿಆರ್ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರು ನಾಳೆ ಮತ್ತೆ ಮಾತೃ ಪಕ್ಷ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.
ಹೌದು, ಜನಾರ್ದನ ರೆಡ್ಡಿ ಅವರು ಬಿಜೆಪಿ ಸೇರ್ಪಡೆ ಕುರಿತು ಖುದ್ದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಜೊತೆಗೆ ಚರ್ಚೆ ನಡೆಸಿದ್ದು, ಅಮಿತ್ ಶಾ ಅವರೇ ಹಸಿರುನಿಶಾನೆ ತೋರಿದ್ದು, ಯಾವುದೇ ಷರತ್ತುಗಳು ಇಲ್ಲದೆ ಪಕ್ಷದ ನಾಯಕತ್ವ ಮತ್ತು ಸಿದ್ದಾಂತಕ್ಕೆ ಬದ್ದವಾಗಿ ಪಕ್ಷ ಸೇರ್ಪಡೆಗೆ ಸಮ್ಮತಿಸಿದ್ದಾರೆ ಎಂದು ಹೇಳಲಾಗಿದೆ.

ಈ ಕುರಿತು ಜನಾರ್ದನ ರೆಡ್ಡಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಬಿಜೆಪಿ ಪಕ್ಷಕ್ಕಾಗಿ ಅತೀ ಚಿಕ್ಕ ವಯಸ್ಸಿನಿಂದಲೂ ಕೆಲಸ ಮಾಡಿದ್ದೇನೆ. ಮಧ್ಯೆದಲ್ಲಿ ಏನೆನ್ನೆಲ್ಲಾ ಆಯ್ತು ನಿಮಗೂ ಗೊತ್ತು. ನಾನು ಕೂಡ ತಾಯಿ ಸಮಾನ ಬಿಜೆಪಿ ಸೇರ್ಪಡೆಯಾಗೋದಕ್ಕೂ ಮುನ್ನ ಬೆಂಬಲಿಗರ ಜೊತೆ ಸಭೆ ಮಾಡಿದ್ದೇನೆ. ಪಕ್ಷದ ಬೆಂಬಲಿಗರು ಬಿಜೆಪಿ ಸೇರುವುದಕ್ಕೆ ಒಪ್ಪಿದ್ದಾರೆ. ನಾಳೆ( ಮಾರ್ಚ್ 25) ಬೆಳಗ್ಗೆ 11 ಗಂಟೆಗೆ ವಿಜಯೇಂದ್ರ, ರಾಧಾ ಮೋಹನ್ ದಾಸ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಲಿದ್ದೇನೆ ಎಂದು ಹೇಳಿದರು.
ಕಳೆದ ಹತ್ತು ವರ್ಷದಲ್ಲಿ ದೇಶಕ್ಕೆ ಒಳ್ಳೆಯ ಹೆಸರು ಬಂದಿದೆ. ಮೋದಿಯವರನ್ನ ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು, ಮತ್ತೆ ಪಕ್ಷಕ್ಕಾಗಿ ಕೆಲಸ ಮಾಡಬೇಕು. ರಷ್ಯಾ ಆಧ್ಯಕ್ಷ ಪುಟಿನ್ ಖುದ್ದು ಮೋದಿ ಬಗ್ಗೆ ಹೊಗಳಿದ್ದಾರೆ
ಮೋದಿಯನ್ನ ಪ್ರಧಾನಿ ಮಾಡಬೇಕು ಅನ್ನೋ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಜನಾರ್ದನ ರೆಡ್ಡಿ ಹೇಳಿದರು.
ಶ್ರೀರಾಮುಲು ಜೊತೆ ಭೇದಬಾವ ಇಲ್ಲ. ಪಕ್ಷ ಘೋಷಣೆ ಮಾಡುವ ಮುನ್ನ ಯಾರನ್ನೂ ಕರೆದಿಲ್ಲ. ಮತ್ತೆ ತಾಯಿ ಪಕ್ಷಕ್ಕೆ ಮರಳುತ್ತೇನೆ, ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ಇನ್ನೂ ಮಾತನಾಡೋದಿದೆ ನಾಳೆ ಮಾತನಾಡುತ್ತೆನೆ
ಶ್ರೀರಾಮುಲು ಚಿಕ್ಕ ಮಗುವಿನಿಂದಲೂ ಜೊತೆಗಿದ್ದವರು, ನಾನು ಕೆಆರ್ಪಿಪಿಪಕ್ಷ ಕಟ್ಟಿದಾಗ ಯಾರಿಗೂ ಪಕ್ಷಕ್ಕೆ ಬನ್ನಿ ಎಂದಿರಲಿಲ್ಲ, ನನ್ನ ಸ್ವಂತ ಸಹೋದರರಿಗೂ ಹೇಳಿರಲಿಲ್ಲ ಎಂದು ಹೇಳಿದರು.
ಜನಾರ್ಧನ ರೆಡ್ಡಿ ಪಕ್ಷ ಸೇರ್ಪಡೆಯಿಂದಾಗಿ ಬಳ್ಳಾರಿ, ಕೊಪ್ಪಳ, ರಾಯಚೂರು, ಗದಗ, ಹಾವೇರಿ ಜಿಲ್ಲೆಗಳಲ್ಲಿ ಬಿಜೆಪಿಗೆ ಆನೆ ಬಲ ಬಂದಂತಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬರಲು ಮುಂದಾಗಿದ್ದ ಜನಾರ್ಧನ ರೆಡ್ಡಿಗೆ ವರಿಷ್ಠರು ಹಸಿರುನಿಶಾನೆ ತೋರಲಿಲ್ಲ. ಅಕ್ರಮ ಗಣಿಗಾರಿಕೆ ಹಿನ್ನಲೆಯಲ್ಲಿ ಕಾಂಗ್ರೆಸ್ ಇದನ್ನೇ ಅಸ್ತ್ರ ಮಾಡಿಕೊಳ್ಳಬಹುದೆಂಬ ಕಾರಣಕ್ಕಾಗಿ ಹಿಂದೇಟು ಹಾಕಿದ್ದರು. ಇದೀಗ ಕಳೆದ ವಾರವಷ್ಟೇ ಅಮಿತ್ ಶಾ ಅವರನ್ನ ಭೇಟಿ ಮಾಡಿ ಚರ್ಚೆ ನಡೆಸಿರುವ ಜನಾರ್ದನ ರೆಡ್ಡಿ ಬಿಜೆಪಿ ಪಕ್ಷ ಸೇರ್ಪಡೆಗೆ ಮುಂದಾಗಿದ್ದಾರೆ.
ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಹಾಗೂ ಶಾಸಕ ಜನಾರ್ಧನ ರೆಡ್ಡಿ ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದ್ದರು. ಒಂದು ವೇಳೆ ಚುನಾವಣಾ ಪ್ರಚಾರದಲ್ಲಿ ಜನಾರ್ದನ ರೆಡ್ಡಿ ಪ್ರಕರಣವನ್ನು ಕಾಂಗ್ರೆಸ್ ನಾಯಕರು ಕೆದಕಿದರೆ ತಿರುಗೇಟು ನೀಡಲು ಬಿಜೆಪಿ ಸಜ್ಜಾಗಿದೆ ಎಂದು ತಿಳಿದುಬಂದಿದೆ. ಅಲ್ಲದೇ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದ ಬಳಿಕ ಜೈಲಿನಿಂದ ಆಚೆ ಬಂದ ನಂತರ ಸಕ್ರಿಯ ರಾಜಕಾರಣಕ್ಕೆ ಮರಳಿದ್ದರು. ಈಗಲೂ ಕೂಡ ಜನಾರ್ಧನ ರೆಡ್ಡಿ ತವರು ಜಿಲ್ಲೆ ಬಳ್ಳಾರಿ ಪ್ರವೇಶಕ್ಕೆ ನಿರ್ಬಂಧವಿದ್ದು, ಇದೀಗ ಮರಳಿ ಗೂಡು ಸೇರಲು ರೆಡಿಯಾಗಿದ್ದಾರೆ.












Click it and Unblock the Notifications