ದೇವೇಗೌಡರು ಮನೆಗೆ ಬಂದಾಗ ಅವರ ಕಾರಿನ ಬಾಗಿಲು ತೆಗೆಯುತ್ತೇನೆ: ಮೋದಿ
Recommended Video

ಉಡುಪಿ, ಮೇ 01: ಉಡುಪಿಯಲ್ಲಿ ಬಿಜೆಪಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಅವರನ್ನು ಹಾಡಿ ಹೊಗಳಿದರು.
ನರೇಂದ್ರ ಮೋದಿ ಅವರು ಹೀಗೆ ಏಕಾ ಏಕಿ ದೇವೇಗೌಡ ಅವರನ್ನು ಇನ್ನಿಲ್ಲದಂತೆ ಹೊಗಳಿರುವುದು ಹಲವು ರಾಜಕೀಯ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯ ವಾಸನೆಯನ್ನು ಮೋದಿ ಅವರ ಹೊಗಳಿಕೆಯಲ್ಲಿ ಸುಲಭದಲ್ಲಿ ಗುರುತಿಸಬಹುದು.
'ಮಣ್ಣಿನ ಮಗ ದೇವೇಗೌಡ ಅವರು ಈ ರಾಷ್ಟ್ರಕ್ಕೆ ನೀಡಿರುವ ಕೊಡುಗೆ ದೊಡ್ಡದು, ಅವರು ದೆಹಲಿಗೆ ಬಂದಾಗಲೆಲ್ಲಾ ಅವರು ನನ್ನ ಭೇಟಿ ಆಗಬೇಕು ಎಂದು ಕೊಂಡಾಗೆಲ್ಲಾ ನಾನು ಅವರನ್ನು ಭೇಟಿ ಆಗಿದ್ದೇನೆ ಎಂದು ಮೋದಿ ಹೇಳಿದ್ದಾರೆ. ಮೋದಿ ದೇವೇಗೌಡ ಅವರ ಹೆಸರು ಹೇಳುತ್ತಿದ್ದಂತೆ ನೆರೆದಿದ್ದ ಜನರು ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದ್ದು ವಿಶೇಷ.

'ಕಾರಿನ ಬಾಗಿಲು ತೆರೆಯುತ್ತೇನೆ'
'ದೇವೇಗೌಡ ಅವರು ನನ್ನ ಮನೆಗೆ ಬಂದಾಗ ನಾನು ಬಾಗಿಲಿನ ಬಳಿಯೇ ಕಾದಿದ್ದು ಅವರ ಕಾರಿನ ಬಾಗಿಲು ತೆಗೆದು ಅವರನ್ನು ಬರಮಾಡಿಕೊಂಡಿದ್ದೇನೆ, ವಾಪಾಸ್ಸು ಹೋಗುವಾಗ ನಾನೇ ತೆರಳಿ ಅವರನ್ನು ಕಾರಿನಿ ಕೂರಿಸಿ ವಿದಾಯ ಹೇಳಿದ್ದೇನೆ' ಎಂದ ಮೋದಿ ತಮಗೆ ದೇವೇಗೌಡರ ಮೇಲಿರುವ ಗೌರವನ್ನು ಸಾರಿ ಹೇಳಿದ್ದಾರೆ. ಆದರೆ ಚುನಾವಣೆಯ ಹೊಸ್ತಿಲಲ್ಲಿ ನಿಂತು ಇದನ್ನೆಲ್ಲಾ ನೆನೆಪಿಸಿಕೊಂಡಿರುವುದು ಅದೂ ಬಿಜೆಪಿ ಪ್ರಚಾರ ಸಭೆಯಲ್ಲಿ ಉಲ್ಲೆಖಿಸಿರುವುದು ಭಾರಿ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಕಾಂಗ್ರೆಸ್ಸಿಗರ ದೇವೇಗೌಡರನ್ನು ನಿಂದಿಸುತ್ತಾರೆ
'ರಾಷ್ಟ್ರಕ್ಕಾಗಿ ಇಷ್ಟು ವರ್ಷ ದುಡಿದ, ಇನ್ನೂ ದುಡಿಯುತ್ತಲೇ ಇರುವ ಮಹಾನ್ ಚೇತನ ದೇವೇಗೌಡ ಅವರನ್ನು ಇನ್ನೂ ರಾಜಕೀಯ ಜೀವನ ಅರಳದ ಕಾಂಗ್ರೆಸ್ಸಿಗರು ನಿಂದಿಸುತ್ತಿದ್ದಾರೆ, ಅವರಿಗೆ ಈಗ ದೇವೇಗೌಡರ ಬೆಲೆ ಅರ್ಥವಾಗುವುದಿಲ್ಲ ಮುಂದೆ ಅರ್ಥವಾಗುತ್ತದೆ' ಎಂದು ಮೋದಿ ಹೇಳಿದರು. ಮೋದಿ ಅವರ ಈ ಮಾತುಗಳು ಕಾಂಗ್ರೆಸ್ ಮತ್ತು ಜೆಡಿಎಸ್ನ ಸಖ್ಯವನ್ನು ದೂರಮಾಡಲೆಂದೇ ಆಡಿರುವ ಸಾಧ್ಯತೆಯೂ ಇದೆ. 'ನಾನು ನಿಮ್ಮನ್ನು ಗೌರವಿಸುತ್ತಿದ್ದೇನೆ, ಅವರು ತೆಗಳುತ್ತಿದ್ದಾರೆ' ಎಂಬರ್ಥವನ್ನು ಮೋದಿ ಅವರ ಈ ಮಾತುಗಳು ಧ್ವನಿಸುತ್ತಿರುವುದು ಸ್ಪಷ್ಟ.
ಚಿತ್ರಗಳಲ್ಲಿ ನೋಡಿ: ಕರ್ನಾಟಕದಲ್ಲಿ ಶುರುವಾಯ್ತು ಮೋದಿ ಮೋಡಿ

ಜೆಡಿಎಸ್ ಪರ ಬಜೆಪಿಗೆ ಮೃದು ಧೋರಣೆ
ಚುನಾವಣೆ ಸಮೀಪದಲ್ಲಿದ್ದಾಗ ಮೋದಿ ಅವರು ಇದ್ದಕ್ಕಿಂದ್ದಂತೆ, ಅದೂ ಬಿಜೆಪಿ ಪ್ರಚಾರ ಸಭೆಯಲ್ಲಿ ದೇವೇಗೌಡ ಅವರನ್ನು ಹೊಗಳಲು ರಾಜಕೀಯ ಕಾರಣವಲ್ಲದೆ ಮತ್ತೇನು ಇಲ್ಲ ಎಂದೇ ಮೋದಿ ಅವರ ಹೊಗಳಿಕೆಯನ್ನು ಅರ್ಥೈಸಲಾಗುತ್ತಿದೆ. ಬಿಜೆಪಿಗೆ ಬಹುಮತ ಬಾರದ ಸಮಯದಲ್ಲಿ ಜೆಡಿಎಸ್ನೊಂದಿಗೆ ಮೈತ್ರಿ ಸಾಧಿಸಿಕೊಳ್ಳುವ ಇರಾದೆ ಬಿಜೆಪಿಗಿದ್ದು ಅದಕ್ಕಾಗಿ ಜೆಡಿಎಸ್ ಎಡೆಗೆ ಮೃದು ಧೋರಣೆ ತೋರುತ್ತಿದೆ ಅದರ ಭಾಗವಾಗಿಯೇ ಇಂದು ದೇವೇಗೌಡ ಅವರನ್ನು ಮೋದಿ ಹೊಗಳಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಹಿಂದೆ ದೇವೇಗೌಡರನ್ನು ಹಿಯಾಳಿಸಿದ್ದರು ಮೋದಿ
ಈ ಹಿಂದೆ ಲೋಕಸಭೆ ಚುನಾವಣೆ ಸಮಯದಲ್ಲಿ ಮೋದಿ ಅವರು ದೇವೇಗೌಡ ಅವರನ್ನು 'ಗುಜರಾತ್ಗೆ ಬನ್ನಿ ನಾನು ನಿಮ್ಮನ್ನು ಸಾಕುತ್ತೇನೆ' ಎಂದು ಹೇಳಿದ್ದರು ಇದು ಜೆಡಿಎಸ್ ಸಿಟ್ಟಿಗೆ ಕಾರಣವಾಗಿತ್ತು, ಆದರೆ ಈಗ ಮಾತ್ರ ಭೇಷರತ್ ದೇವೇಗೌಡ ಅವರನ್ನು ಹೊಗಳಿರುವುದರ ಹಿಂದೆ ಇರುವುದು ಕೇವಲ ರಾಜಕೀಯ ಎಂಬುದು ಸುಲಭವಾಗಿ ಊಹಿಸಬಹುದಾದ ವಿಷಯ.

ಶಾ ಸೂಚನೆಯಂತೆ ದೊಡ್ಡ ಗೌಡರ ಹೊಗಳಿದ ಮೋದಿ?
ಈಗಾಗಲೇ ಅಮಿತ್ ಶಾ ಮತ್ತು ಕುಮಾರಸ್ವಾಮಿ ಅವರುಗಳು ಮೈತ್ರಿ ಬಗ್ಗೆ ಒಂದು ಹಂತದ ಮಾತುಕತೆ ಮಾಡಿಕೊಂಡಿದ್ದಾರೆ ಎಂಬ ಊಹಾಪೋಹ ಹರಿದಾಡುತ್ತಿದ್ದು, ಇದೀಗ ನರೇಂದ್ರ ಮೋದಿ ಅವರು ಸಹ ದೇವೇಗೌಡ ಅವರನ್ನು ಬಿಜೆಪಿ ಪ್ರಚಾರ ಸಮಾವೇಶದಲ್ಲಿ ಹೊಗಳಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕುಮಾರಸ್ವಾಮಿ ಹಾಗೂ ಅಮಿತ್ ಶಾ ಬೇಡಿಕೆ ಮೇರೆಗೆ ಮೋದಿ ಅವರು ದೇವೇಗೌಡ ಅವರನ್ನು ಹೊಗಳಿದರೆ ಎಂಬ ಅನುಮಾನವೂ ಸುಳಿದಾಡುತ್ತಿದೆ.

'ಕುಮಾರಸ್ವಾಮಿಯನ್ನೂ ಹೋಗಲು ಬಿಡಲ್ಲ'
ಆದರೆ ಮೊನ್ನೆಯಷ್ಟೆ ದೇವೇಗೌಡ ಅವರು ಎನ್ಡಿಟಿವಿಗೆ ನೀಡಿರುವ ಸಂದರ್ಶನದಲ್ಲಿ 'ಕುಮಾರಸ್ವಾಮಿ ಬಿಜೆಪಿಗೆ ಬೆಂಬಲ ನೀಡಿದರೆ ಆತನನ್ನು ಕುಟುಂಬದಿಂದ ಬಹಿಷ್ಕಾರ ಹಾಕುತ್ತೇವೆ' ಎಂದಿದ್ದರು. ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿದ್ದರು. ಆದರೆ ಈಗ ಮೋದಿ ಅವರು ಹೊಗಳಿರುವುದು ನೋಡಿದರೆ ಮೈತ್ರಿ ಬಹಳ ಕುತೂಹಲ ಕೆರಳಿಸಿದೆ. ಮೋದಿ ಅವರ ಹೊಗಳಿಕೆ ಬಗ್ಗೆ ದೊಡ್ಡ ಗೌಡ್ರು ಏನಂತಾರೋ ಕಾದು ನೋಡಬೇಕಿದೆ.












Click it and Unblock the Notifications