Gautam Adani: ಬಿಹಾರದಲ್ಲಿ ಗ್ರಾಮೀಣ ಆರೋಗ್ಯ ಸುಧಾರಣೆಗೆ ಗೌತಮ್ ಅದಾನಿ ಭರ್ಜರಿ ಕೊಡುಗೆ
Gautam Adani: ಬಿಲಿಯನೇರ್ ಉದ್ಯಮಿ ಮತ್ತು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು ಭಾನುವಾರ ಬಿಹಾರದಲ್ಲಿ ಮಹತ್ವಾಕಾಂಕ್ಷೆಯ ಗ್ರಾಮೀಣ ದೃಷ್ಟಿ ಆರೈಕೆ ಯೋಜನೆಯ ಶಂಕುಸ್ಥಾಪನಾ ಸಮಾರಂಭಕ್ಕೆ ನೇತೃತ್ವ ವಹಿಸಲಿದ್ದಾರೆ. ಉತ್ತರ ಮತ್ತು ಮಧ್ಯ ಭಾರತದ ಹಿಂದುಳಿದ ಪ್ರದೇಶಗಳಲ್ಲಿ ಕೈಗೆಟುಕುವ ದರದ ಆರೋಗ್ಯ ಸೇವೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಇದು ಒಂದು ಮಹತ್ವದ ಹೆಜ್ಜೆಯಾಗಿದೆ.
ಈ ಕಾರ್ಯಕ್ರಮವು ಪಟ್ನಾದಿಂದ ಸುಮಾರು 70 ಕಿಲೋ ಮೀಟರ್ ದೂರದಲ್ಲಿರುವ ಮಸ್ತಿಚಕ್ನಲ್ಲಿ ನಡೆಯಲಿದ್ದು, ಅದಾನಿ ಗ್ರೂಪ್ನ ಅದಾನಿ ಫೌಂಡೇಶನ್ ಹಾಗೂ ಅಖಂಡ್ ಜ್ಯೋತಿ ಕಣ್ಣಿನ ಆಸ್ಪತ್ರೆ ಜಂಟಿಯಾಗಿ ಆಯೋಜಿಸುತ್ತಿವೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳನ್ನು ಗುರಿಯಾಗಿಸಿಕೊಂಡು ದೃಷ್ಟಿ ಆರೈಕೆ, ಆರೋಗ್ಯ ಸೇವೆಗಳ ವಿಸ್ತರಣೆ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳ ಸಮಗ್ರ ವ್ಯವಸ್ಥೆಯನ್ನು ನಿರ್ಮಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಆಯೋಜಕರ ಪ್ರಕಾರ, ಈ ಮಹತ್ವಾಕಾಂಕ್ಷೆಯ ವಿಸ್ತರಣಾ ಯೋಜನೆಯು ಗ್ರಾಮೀಣ ಆರೋಗ್ಯ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ ಕೈಗೆಟುಕುವ ಕಣ್ಣಿನ ಚಿಕಿತ್ಸೆಗಳು ಮತ್ತು ಆರೋಗ್ಯ ಸೇವೆಗಳು ಪ್ರತಿಯೊಬ್ಬರಿಗೂ ತಲುಪುವಂತೆ ಮಾಡುವ ನಿರೀಕ್ಷೆಯಿದೆ. ಯೋಜನೆ ಪೂರ್ಣಗೊಂಡ ನಂತರ ಮಸ್ತಿಚಕ್ನಲ್ಲಿ ನಿರ್ಮಾಣವಾಗಲಿರುವ ಈ ವ್ಯವಸ್ಥೆಯು ವಿಶ್ವದ ಅತಿದೊಡ್ಡ ಗ್ರಾಮೀಣ ದೃಷ್ಟಿ ಆರೈಕೆ ಜಾಲಗಳಲ್ಲಿ ಒಂದಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಅಲ್ಲದೆ ಈ ಕಾರ್ಯಕ್ರಮವು ಹಿಂದಿ ಭಾಷಾಭಿವೃದ್ಧಿ ಪ್ರದೇಶಗಳಲ್ಲಿ ಆರೋಗ್ಯ ಸೇವಾ ಕೌಶಲ್ಯಾಭಿವೃದ್ಧಿ ಮತ್ತು ಆರೋಗ್ಯ ಜಾಗೃತಿ ವಿಸ್ತರಣೆಗೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ಕೋಟ್ಯಾಂತರ ಆರ್ಥಿಕವಾಗಿ ಹಿಂದುಳಿದ ಜನರಿಗೆ ಪ್ರಯೋಜನವಾಗುವ ಸಾಧ್ಯತೆಯಿದೆ.
ಈ ಮಹತ್ವದ ಯೋಜನೆಯೂ ಗೌತಮ್ ಅದಾನಿ ಅವರ "ಸೇವೆಯೇ ಸಾಧನೆ" (ಸೇವೆಯೇ ಪರಮ ಧರ್ಮ) ಎಂಬ ತತ್ವವನ್ನು ಪ್ರತಿಬಿಂಬಿಸುತ್ತದೆ. ಈ ತತ್ವವು ಇತ್ತೀಚಿನ ವರ್ಷಗಳಲ್ಲಿ ಭಾರತದಾದ್ಯಂತ ಅದಾನಿ ಗ್ರೂಪ್ನ ಸಾಮಾಜಿಕ ಮತ್ತು ದತ್ತಿ ಕಾರ್ಯಗಳಿಗೆ ಒಂದು ನಿರ್ದಿಷ್ಟ ರೂಪ ನೀಡುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಅದಾನಿ ಕುಟುಂಬವು ಆರೋಗ್ಯ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ ಹಲವಾರು ಬೃಹತ್ ಯೋಜನೆಗಳನ್ನು ಘೋಷಿಸಿದೆ. 2022ರಲ್ಲಿ ಗೌತಮ್ ಅದಾನಿ ಅವರ 60ನೇ ಜನ್ಮದಿನದ ಅಂಗವಾಗಿ ದೇಶಾದ್ಯಂತದ ಸಾಮಾಜಿಕ ಚಟುವಟಿಕೆಗಳಿಗಾಗಿ ₹60,000 ಕೋಟಿ ದೇಣಿಗೆ ನೀಡುವುದಾಗಿ ಪ್ರತಿಜ್ಞೆ ಮಾಡಿತ್ತು. ಕಳೆದ ವರ್ಷ ಜೀತ್ ಅದಾನಿ ಅವರ ವಿವಾಹದ ಸಂದರ್ಭದಲ್ಲಿ ಇದೇ ರೀತಿಯ ಕ್ಷೇತ್ರಗಳ ಮೇಲೆ ಗಮನಹರಿಸಲು ಹೆಚ್ಚುವರಿ ₹10,000 ಕೋಟಿ ರೂಪಾಯಿಗಳ ಬದ್ಧತೆಯನ್ನು ಕೂಡ ಘೋಷಿಸಲಾಗಿತ್ತು.
ಅದಾನಿ ಗ್ರೂಪ್ ಈಗಾಗಲೇ ಹಲವಾರು ಸಮಾಜ ಸೇವೆಯ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ 2025ರಲ್ಲಿ ಪ್ರಯಾಗ್ರಾಜ್ನಲ್ಲಿ ನಡೆದ ಮಹಾಕುಂಭ ಮೇಳದ ಸಂದರ್ಭದಲ್ಲಿ ಸುಮಾರು 50 ಲಕ್ಷ ಭಕ್ತಾದಿಗಳಿಗೆ ನೆರವು ನೀಡಿರುವುದು ಹಾಗೂ ಒಡಿಶಾದ ಜಗನ್ನಾಥ ರಥಯಾತ್ರೆಯ ವೇಳೆ ಉಚಿತ ಊಟ ಮತ್ತು ಉಪಹಾರ ವಿತರಿಸಿದ ಕಾರ್ಯಕ್ರಮಗಳು ಸೇರಿವೆ.
2005ರಲ್ಲಿ ಬಿಹಾರದ ಗ್ರಾಮೀಣ ಭಾಗದಲ್ಲಿ ಕೇವಲ 30 ಹಾಸಿಗೆಗಳ ಸೌಲಭ್ಯದೊಂದಿಗೆ ಆರಂಭವಾದ ಅಖಂಡ ಜ್ಯೋತಿ ಕಣ್ಣಿನ ಆಸ್ಪತ್ರೆಯು ಇಂದು ಭಾರತದ ಪ್ರಮುಖ ನೇತ್ರ ಚಿಕಿತ್ಸಾ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿದೆ. ವರದಿಗಳ ಪ್ರಕಾರ ಈ ಆಸ್ಪತ್ರೆಯು ಕಳೆದ ಹಲವು ವರ್ಷಗಳಲ್ಲಿ 14 ಲಕ್ಷಕ್ಕೂ ಹೆಚ್ಚು ದೃಷ್ಟಿ ಮರುಕಳಿಸುವ ಶಸ್ತ್ರಚಿಕಿತ್ಸೆಗಳನ್ನು ಮತ್ತು ಲಕ್ಷಾಂತರ ಜನರಿಗೆ ಕಣ್ಣಿನ ತಪಾಸಣೆಗಳನ್ನು ನಡೆಸಿದೆ.
ಮುಂಬರುವ ಈ ಮಹತ್ವದ ಹೊಸ ಯೋಜನೆಯೂ 2024ರಲ್ಲಿ ಪ್ರಾರಂಭಿಸಲಾದ ಅದಾನಿ ಫೌಂಡೇಶನ್ನ "ವಿಷನ್ ಕೇರ್' ಕಾರ್ಯಕ್ರಮದ ಮುಂದುವರಿದ ಭಾಗವಾಗಿದೆ. ಈ ಯೋಜನೆಯಡಿ ಇದುವರೆಗೆ ಗ್ರಾಮೀಣ ಪ್ರದೇಶಗಳು ಮತ್ತು ಶಾಲಾ ತಪಾಸಣಾ ಶಿಬಿರಗಳ ಮೂಲಕ 11 ರಾಜ್ಯಗಳಲ್ಲಿ ಸುಮಾರು 1.93 ಲಕ್ಷ ಕಣ್ಣಿನ ತಪಾಸಣೆಗಳನ್ನು ನಡೆಸಲಾಗಿದೆ. ಅಲ್ಲದೆ ಸುಮಾರು 59,000 ಫಲಾನುಭವಿಗಳಿಗೆ ವೈದ್ಯರ ಸಲಹೆಯ ಮೇರೆಗೆ ಕನ್ನಡಕಗಳನ್ನು ಉಚಿತವಾಗಿ ವಿತರಿಸಲಾಗಿದೆ.
ಈ ಕಾರ್ಯಕ್ರಮವು ಆರೋಗ್ಯ ತಜ್ಞರು, ಕೈಗಾರಿಕಾ ವಲಯದ ಪ್ರಮುಖರ ಗಮನ ಸೆಳೆಯುವ ನಿರೀಕ್ಷೆಯಿದೆ. ಇದರೊಂದಿಗೆ ಅದಾನಿ ಗ್ರೂಪ್ನ ದೀರ್ಘಕಾಲೀನ ಅಭಿವೃದ್ಧಿ ಮತ್ತು ಸಮುದಾಯ ಸೇವಾ ಯೋಜನೆಗಳಲ್ಲಿ ಬಿಹಾರ ರಾಜ್ಯದ ಮಹತ್ವ ಹೆಚ್ಚುತ್ತಿರುವುದನ್ನೂ ಇದು ಮತ್ತೊಮ್ಮೆ ಎತ್ತಿ ತೋರಿಸುತ್ತದೆ.












Click it and Unblock the Notifications