Jayam Ravi: ಡಿವೋರ್ಸ್ ಸಿಗುವವರೆಗೂ ನಾನು ಸಿನಿಮಾಗಳಲ್ಲಿ ನಟಿಸಲ್ಲ: ಪ್ರೆಸ್ಮೀಟ್ನಲ್ಲೇ ಕಣ್ಣೀರಿಟ್ಟ ನಟ ಜಯಂ ರವಿ
ತಮಿಳು ಚಿತ್ರರಂಗದ ಖ್ಯಾತ ನಟ ರವಿ ಮೋಹನ್ (ಜಯಂ ರವಿ) ಶನಿವಾರ ಚೆನ್ನೈನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲೇ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ತಮ್ಮ ಪತ್ನಿ ಆರತಿ ಅವರಿಂದ ಅಧಿಕೃತವಾಗಿ ಡಿವೋರ್ಸ್ ಸಿಗುವವರೆಗೂ ತಾವು ಯಾವುದೇ ಸಿನಿಮಾಗಳಲ್ಲಿ ನಟಿಸುವುದಿಲ್ಲ, ನಿರ್ಮಾಣ ಅಥವಾ ನಿರ್ದೇಶನ ಮಾಡುವುದಿಲ್ಲ ಎಂದು ಘೋಷಿಸುವ ಮೂಲಕ ಇಡೀ ಚಿತ್ರರಂಗ ಬೆಚ್ಚಿಬೀಳುವಂತೆ ಮಾಡಿದ್ದಾರೆ.
ಮಕ್ಕಳನ್ನು ಭೇಟಿಯಾಗಲು ಬಿಡುತ್ತಿಲ್ಲ
"ಜನರು ಜಯಂ ರವಿ ತುಂಬಾ ಮೃದು ಸ್ವಭಾವದವನು ಅಂದುಕೊಂಡಿದ್ದಾರೆ. ಆದರೆ ಇನ್ಮುಂದೆ ಹಾಗಲ್ಲ. ಇಷ್ಟು ದಿನ ಸುಮ್ಮನಿದ್ದೆ, ಈಗ ಸಮಯ ಬಂದಿದೆ" ಎಂದು ಅವರು ಗುಡುಗಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಜಯಂ ರವಿ, ತಾವು ತೀವ್ರ ಮಾನಸಿಕ ಕಿರುಕುಳ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಟ್ರೋಲಿಂಗ್ ಎದುರಿಸುತ್ತಿರುವುದಾಗಿ ತಿಳಿಸಿದ್ದಾರೆ.

ಹೆತ್ತವರಿಗೆ ಇಷ್ಟವಿಲ್ಲದೆ ಮದುವೆಯಾಗಿದ್ದೆ
"ನನಗೆ ನನ್ನ ಮಕ್ಕಳನ್ನು ಭೇಟಿಯಾಗಲು ಬಿಡುತ್ತಿಲ್ಲ. ನನ್ನ ಮಕ್ಕಳ ಜೊತೆ ಬಾಡಿಗಾರ್ಡ್ಗಳನ್ನು ಕಳುಹಿಸಲಾಗುತ್ತಿದೆ. ಹೆತ್ತವರ ಇಚ್ಛೆಗೆ ವಿರುದ್ಧವಾಗಿ ನಾನು ಮದುವೆಯಾಗಿದ್ದೆ, ಅದಕ್ಕೆ ಈಗ ಬೆಲೆ ತೆರುತ್ತಿದ್ದೇನೆ. ಈ ಹಿಂದೆ ಕೈ ಮಣಿಕಟ್ಟು ಕೊಯ್ದುಕೊಂಡಿದ್ದರೂ ಮರುದಿನವೇ ಶೂಟಿಂಗ್ಗೆ ಹೋಗಿ ಕೆಲಸ ಮಾಡಿದ್ದೆ. ಆ ಮಟ್ಟಿಗಿನ ಬದ್ಧತೆ ನನಗಿತ್ತು. ಆದರೆ ಈಗಿನ ಪರಿಸ್ಥಿತಿಯಲ್ಲಿ ನನಗೆ ನಟನೆಯತ್ತ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಕೆಲವರು ಸ್ತ್ರೀವಾದದ ಹೆಸರಿನಲ್ಲಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.
ಮೂರನೇ ವ್ಯಕ್ತಿಯ ಹಸ್ತಕ್ಷೇಪ
ಜಯಂ ರವಿ ಹಾಗೂ ಆರತಿ ನಡುವಿನ ಕೌಟುಂಬಿಕ ಕಲಹ ಈಗ ಬೀದಿಗೆ ಬಂದಿದ್ದು, ಪರಸ್ಪರ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಜಯಂ ರವಿ ಅವರ ಪ್ರಕಾರ, ಚಿತ್ರರಂಗದಲ್ಲಿ ಇಷ್ಟೊಂದು ಯಶಸ್ಸು ಗಳಿಸಿದ್ದರೂ ಅವರಿಗೆ ಸ್ವಂತ ಬ್ಯಾಂಕ್ ಖಾತೆಯೂ ಇರಲಿಲ್ಲ ಮತ್ತು ಅವರ ಆರ್ಥಿಕ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಕಸಿದುಕೊಳ್ಳಲಾಗಿತ್ತು. ತಾವು ಕೇವಲ ಹಣ ತಂದುಕೊಡುವ ವ್ಯಕ್ತಿಯಾಗಿದ್ದೆ ಮತ್ತು ದೊಡ್ಡ ಮೊತ್ತದ ಸಾಲದ ಹೊರೆ ಹೊರಿಸಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.

ಇದೇ ವೇಳೆ ತಮ್ಮ ಸಂಸಾರದಲ್ಲಿ ಬಿರುಕು ಮೂಡಲು ಕಾರಣವಾದ ಒಬ್ಬ 'ಮೂರನೇ ವ್ಯಕ್ತಿ'ಯ ಬಗ್ಗೆ ಪ್ರಸ್ತಾಪಿಸಿದ ರವಿ, ಆಕೆಯನ್ನು "ಮೂರು ಅಕ್ಷರದ ನಟಿ" ಅಥವಾ "ಇಡ್ಲಿ ನಟಿ" ಎಂದು ಪರೋಕ್ಷವಾಗಿ ಕರೆದಿದ್ದಾರೆ. ಸದ್ಯ ಜಯಂ ರವಿ ಅವರ ಈ ಕಣ್ಣೀರಿನ ಪತ್ರಿಕಾಗೋಷ್ಠಿ ಮತ್ತು ನಟನೆಯಿಂದ ದೂರ ಸರಿಯುವ ನಿರ್ಧಾರ ಇಡೀ ಕಾಲಿವುಡ್ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.
ಗಾಯಕಿ ಕೆನಿಶಾ ಫ್ರಾನ್ಸಿಸ್ ಸ್ಪಷ್ಟನೆ
ಇತ್ತೀಚೆಗೆ ಗಾಯಕಿ ಮತ್ತು ಆಧ್ಯಾತ್ಮಿಕ ಥೆರಪಿಸ್ಟ್ ಕೆನಿಶಾ ಫ್ರಾನ್ಸಿಸ್ ಅವರೊಂದಿಗೆ ಜಯಂ ರವಿ ಆಪ್ತರಾಗಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಪ್ರತಿಕ್ರಿಯಿಸಿರುವ ಕೆನಿಶಾ, "ಆನ್ಲೈನ್ ಕಿರುಕುಳದಿಂದಾಗಿ ನಾನು ಚೆನ್ನೈ ತೊರೆಯುತ್ತಿದ್ದೇನೆ. ಜಯಂ ರವಿ ಅವರ ಕುಟುಂಬದ ಸಮಸ್ಯೆಗೆ ನಾನಂತೂ ಕಾರಣವಲ್ಲ, ಅದನ್ನು ನಿಭಾಯಿಸಲು ಅವರು ಶಕ್ತರಾಗಿದ್ದಾರೆ" ಎಂದು ಸ್ಪಷ್ಟಪಡಿಸಿದ್ದಾರೆ.













Click it and Unblock the Notifications