Ration: ಈ ಪಡಿತರ ಚೀಟಿದಾರರಿಗೆ ಕೇಂದ್ರದಿಂದ ಮಹತ್ವದ ಮಾಹಿತಿ
Ration: ಪಡಿತರ ವಿತರಣೆ ಸಂಬಂಧಪಟ್ಟಂತೆ ಸರ್ಕಾರವು ಆಗಾಗ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಲಿರುತ್ತದೆ. ಇದೀಗ ಎಎವೈ ರೇಷನ್ ಕಾರ್ಡುದಾರರಿಗೆ ಅನುಕೂಲವಂತೆ ಕೇಂದ್ರ ಸರ್ಕಾರ ಮಹತ್ವದ ಯೋಜನೆ ಜಾರಿ ಮಾಡಲು ಮುಂದಾಗಿದೆ. ಹಾಗಾದ್ರೆ ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ದೇಶದ ಅತ್ಯಂತ ಬಡ ಕುಟುಂಬಗಳ ಆಹಾರ ಭದ್ರತೆಯನ್ನು ಖಾತರಿಪಡಿಸುವ ಸಲುವಾಗಿ ಕೇಂದ್ರ ಸರ್ಕಾರವು ಮಹತ್ವದ ತೀರ್ಮಾನ ಕೈಗೊಳ್ಳಲು ಮುಂದಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013ಕ್ಕೆ ತಿದ್ದುಪಡಿ ತರಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಸ್ತಾಪ ಸಲ್ಲಿಸಿದೆ. ಇದರ ಅನ್ವಯ ಅಂತ್ಯೋದಯ ಅನ್ನ ಯೋಜನೆ (AAY) ಪಡಿತರ ಚೀಟಿದಾರರಿಗೆ ನೀಡಲಾಗುವ ಆಹಾರ ಧಾನ್ಯಗಳ ವಿತರಣಾ ಕ್ರಮದಲ್ಲಿ ಪ್ರಮುಖ ಬದಲಾವಣೆಗಳು ಜಾರಿಗೆ ಬರುವ ಸಾಧ್ಯತೆ ಇದೆ.

ಪ್ರಸ್ತುತ ಇರುವ ನಿಯಮ ಏನು?
ಪ್ರಸ್ತುತ ಜಾರಿಯಲ್ಲಿರುವ ನಿಯಮಗಳ ಪ್ರಕಾರ, ಅಂತ್ಯೋದಯ ಪಡಿತರ ಚೀಟಿ (AAY Card) ಹೊಂದಿರುವ ಪ್ರತಿ ಬಡ ಕುಟುಂಬಕ್ಕೂ ಮಾಸಿಕ ಕಡ್ಡಾಯವಾಗಿ 35 ಕೆ.ಜಿ. ಪಡಿತರ ನೀಡಲಾಗುತ್ತದೆ. ಇದರಲ್ಲಿ ಆ ಕುಟುಂಬದಲ್ಲಿ ಎಷ್ಟು ಜನ ಸದಸ್ಯರಿದ್ದಾರೆ ಎಂಬುದು ಲೆಕ್ಕಕ್ಕೆ ಬರುವುದಿಲ್ಲ. ಕೇವಲ ಒಬ್ಬರೇ ಇರುವ ಕುಟುಂಬಕ್ಕೂ 35 ಕೆಜಿ ಸಿಗುತ್ತದೆ ಮತ್ತು 6-7 ಸದಸ್ಯರಿರುವ ದೊಡ್ಡ ಕುಟುಂಬಕ್ಕೂ ಅಷ್ಟೇ ಪ್ರಮಾಣದ ರೇಷನ್ ವಿತರಣೆ ಮಾಡಲಾಗುತ್ತದೆ.
ಹೊಸ ನಿಯಮದಲ್ಲಿ ಏನಿದೆ?
ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ಸಿದ್ಧಪಡಿಸಿರುವ ರಾಷ್ಟ್ರೀಯ ಆಹಾರ ಭದ್ರತಾ (ತಿದ್ದುಪಡಿ) ಕರಡು ಮಸೂದೆ, 2026ರ ಪ್ರಕಾರ, ಇನ್ಮುಂದೆ ಕುಟುಂಬದ ಆಧಾರದ ಬದಲು ಸದಸ್ಯರ ಸಂಖ್ಯೆಯ ಆಧಾರದ ಮೇಲೆ ಪಡಿತರ ನೀಡಲು ಉದ್ದೇಶಿಸಲಾಗಿದೆ. ಹೊಸ ನಿಯಮದ ಪ್ರಕಾರ ಅಂತ್ಯೋದಯ ಕಾರ್ಡ್ನಲ್ಲಿರುವ ಪ್ರತಿ ಸದಸ್ಯನಿಗೆ ತಿಂಗಳಿಗೆ 7 ಕೆ.ಜಿ. ಅಕ್ಕಿಯನ್ನು ವಿತರಿಸಲು ಪ್ರಸ್ತಾಪಿಸಲಾಗಿದೆ.
ಒಬ್ಬ ಸದಸ್ಯನಿಗೆ 7 ಕೆಜಿಯಂತೆ ಹಂಚಿಕೆ ಮಾಡಿದರೂ, ಒಂದು ಇಡೀ ಕುಟುಂಬಕ್ಕೆ ಸಿಗುವ ಒಟ್ಟು ಪಡಿತರ ಪ್ರಮಾಣವು ಗರಿಷ್ಠ 35 ಕೆಜಿಗೆ ಸೀಮಿತವಾಗಿರುತ್ತದೆ. ಹೊಸ ನಿಯಮದಂತೆ 3 ಸದಸ್ಯರಿರುವ ಕುಟುಂಬಕ್ಕೆ ತಲಾ 7 ಕೆಜಿಯಂತೆ ಒಟ್ಟು 21 ಕೆಜಿ ಪಡಿತರ ಸಿಗಲಿದೆ.
5 ಸದಸ್ಯರಿರುವ ಕುಟುಂಬಕ್ಕೆ ತಲಾ 7 ಕೆಜಿಯಂತೆ ಗರಿಷ್ಠ ಮಿತಿಯಾದ 35 ಕೆಜಿ ಪಡಿತರ ಸಿಗಲಿದೆ. 6 ಅಥವಾ ಅದಕ್ಕಿಂತ ಹೆಚ್ಚು ಸದಸ್ಯರಿರುವ ಕುಟುಂಬಕ್ಕೆ ತಲಾ ಲೆಕ್ಕದಲ್ಲಿ ಹೆಚ್ಚು ಬರಬೇಕಾಗಿದ್ದರೂ, ಗರಿಷ್ಠ ಮಿತಿ ಇರುವುದರಿಂದ ಇಂತಹ ದೊಡ್ಡ ಕುಟುಂಬಗಳಿಗೂ 35 ಕೆ.ಜಿ. ಆಹಾರ ಧಾನ್ಯ ಸಿಗಲಿದೆ.
ಈ ಬದಲಾವಣೆ ಹಿಂದಿನ ಉದ್ದೇಶವೇನು?
ಸದ್ಯದ ವ್ಯವಸ್ಥೆಯಲ್ಲಿ ಸಣ್ಣ ಕುಟುಂಬಗಳಿಗೆ ಹೆಚ್ಚಿನ ಪಡಿತರ ಮತ್ತು ದೊಡ್ಡ ಕುಟುಂಬಗಳಿಗೆ ತಲಾವಾರು ಕಡಿಮೆ ಪಡಿತರ ಸಿಗುತ್ತಿದೆ. ಆದ್ದರಿಂದ ಆಹಾರ ಧಾನ್ಯ ವಿತರಣೆಯಲ್ಲಿ ಅಸಮಾನತೆ ಉಂಟಾಗುತ್ತಿದೆ ಎಂದು ಸರ್ಕಾರ ಭಾವಿಸಿದ್ದು, ಈ ತಾರತಮ್ಯವನ್ನು ನಿವಾರಿಸಿ ಆಹಾರ ಧಾನ್ಯಗಳ ಹಂಚಿಕೆಯನ್ನು ಸೂಕ್ತ ರೀತಿಯಲ್ಲಿ ಮತ್ತು ಪಡಿತರ ಸಬ್ಸಿಡಿಯನ್ನು ಅಗತ್ಯ ಇರುವವರಿಗೆ ಸರಿಯಾಗಿ ತಲುಪಿಸುವುದು ಕೇಂದ್ರ ಸರ್ಕಾರದ ಮುಖ್ಯ ಉದ್ದೇಶವಾಗಿದೆ.
ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ
ಕೇಂದ್ರ ಆಹಾರ ಸಚಿವಾಲಯವು ಈ ಪ್ರಸ್ತಾಪಿತ ರಾಷ್ಟ್ರೀಯ ಆಹಾರ ಭದ್ರತಾ ತಿದ್ದುಪಡಿ ಮಸೂದೆ 2026ಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು, ತಜ್ಞರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತಿದೆ. ಸಾರ್ವಜನಿಕರು ತಮ್ಮ ಅನಿಸಿಕೆಗಳನ್ನು ಸಲ್ಲಿಸಲು ಜುಲೈ 13ರ ವರೆಗೆ ಕಾಲಾವಕಾಶ ನೀಡಲಾಗಿದೆ. ತದನಂತರ ಈ ನಿಯಮ ಅಧಿಕೃತವಾಗಿ ಜಾರಿಗೆ ಬರುವ ಕುರಿತು ಅಂತಿಮ ನಿರ್ಧಾರ ಹೊರಬೀಳಲಿದೆ ಎನ್ನಲಾಗುತ್ತಿದೆ.












Click it and Unblock the Notifications