ಬೆಂಗಳೂರಲ್ಲಿ ಸಂಜೆಯೂ ಕಸ ಸಂಗ್ರಹಣೆಗೆ ಸೂಚನೆ:ಈಜೀಪುರ ಮೇಲ್ಸೇತುವೆ ಪೂರ್ಣಗೊಳಿಸಲು ಹೊಸ ಪ್ಲ್ಯಾನ್
ಬೆಂಗಳೂರು; ಬೆಂಗಳೂರಿನಲ್ಲಿ ತ್ಯಾಜ್ಯದ ಸಮಸ್ಯೆ ಉಲ್ಬಣವಾಗುತ್ತಿದೆ. ಕಸದ ಸಮರ್ಪಕ ವಿಲೇವಾರಿ ಆಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದ ಬೆನ್ನಲ್ಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹೊಸ ಪ್ಲ್ಯಾನ್ ಮಾಡಿಕೊಂಡಿದೆ. ಡೆಡ್ಲೈನ್ ಹತ್ತಿರ ಬರುತ್ತಿದ್ದಂತೆ ಈಜೀಪುರ ಮೇಲ್ಸೆತುವೆ ಕಾಮಗಾರಿಯ ಕೆಲಸ ಪೂರ್ಣಗೊಳಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಪರಿಶೀಲಿಸಿದರು. ನಗರದ ಯಲಚೇನಹಳ್ಳಿ ಪ್ರದೇಶದಲ್ಲಿ ಕಸದ ಸಮಸ್ಯೆ ಹೆಚ್ಚಿರುವ ಸ್ಥಳಗಳನ್ನು ಗುರುತಿಸಿ ಬೆಳಗ್ಗೆ ಮಾತ್ರವಲ್ಲದೇ ಸಂಜೆ ವೇಳೆಯಲ್ಲೂ ಆಟೋ, ಟಿಪ್ಪರ್ಗಳನ್ನು ಸ್ಥಳ ಕಳುಹಿಸಿ ಕಸ ಸಂಗ್ರಹಣೆ ನಡೆಸಬೇಕೆಂದು ಸೂಚಿಸಿದರು.

ಯಲಚೇನಹಳ್ಳಿ ಕೆರೆ ಸಮೀಪದ ಕಸ ವರ್ಗಾವಣೆ ಸ್ಥಳವಿದ್ದು, ಈ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕಡ್ಡಾಯವಾಗಿ ಕಾಪಾಡಬೇಕು. ರಸ್ತೆ ಬದಿಯಲ್ಲಿ ಕಸ ಬಿಸಾಡುವುದನ್ನು ಪರಿಣಾಮಕಾರಿಯಾಗಿ ತಡೆಯಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ನಾಗರಿಕರು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿ, ಕಸದ ಸಮಸ್ಯೆ ಉಂಟಾಗುವ ಪ್ರದೇಶಗಳು ಅಥವಾ ಆಟೋ ಟಿಪ್ಪರ್ಗಳು ಸಮಯಕ್ಕೆ ಬಾರದಿರುವ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ, ಪಾಲಿಕೆಯ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ತೆರಳಿ ಸಮಸ್ಯೆಯನ್ನು ಪರಿಹರಿಸಲಿದ್ದಾರೆ ಎಂದು ಹೇಳಿದರು.
ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಬೇಕಾದರೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಪಾಲಿಕೆ ಜೊತೆಗೆ ಸ್ಥಳೀಯ ನಾಗರಿಕರು ಕೈಜೋಡಿಸಿದರೆ ಮಾತ್ರ ಕಸದ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿವಾರಿಸಲು ಸಾಧ್ಯವೆಂದು ಕೋರಿದರು.
ಕಸದ ಚೆಲ್ಲದಂತೆ ಎಚ್ಚರಿಕೆ, ದಂಡ ಕ್ರಮ
ಕಸದ ಸಮಸ್ಯೆ ನಿವಾರಣೆಗಾಗಿ ನಿಯೋಜಿಸಲಾದ ಸ್ವಯಂಸೇವಕರು ರಸ್ತೆ ಬದಿಯಲ್ಲಿ ಕಸ ಬಿಸಾಡದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಯಾರಾದರೂ ರಸ್ತೆ ಬದಿಯಲ್ಲಿ ಕಸ ಎಸೆಯುತ್ತಿರುವುದು ಕಂಡುಬಂದರೆ ತಕ್ಷಣ ಪಾಲಿಕೆ ಸಿಬ್ಬಂದಿಗೆ ಮಾಹಿತಿ ನೀಡಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.
ಯಲಚೇನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳ ಕಸದ ಸಮಸ್ಯೆ ನಿವಾರಣೆಗೆ ಟ್ರಾನ್ಸ್ಫರ್ ಸ್ಟೇಷನ್ ನಿರ್ಮಾಣ ಅಗತ್ಯವಾಗಿದೆ. ಇದಕ್ಕಾಗಿ ಸೂಕ್ತ ಖಾಲಿ ಜಾಗವನ್ನು ಗುರುತಿಸಿ, ತ್ವರಿತಗತಿಯಲ್ಲಿ ಟ್ರಾನ್ಸ್ಫರ್ ಸ್ಟೇಷನ್ ನಿರ್ಮಾಣ ಕಾಮಗಾರಿ ಕೈಗೊಳ್ಳಬೇಕು.
ಈಜೀಪುರ ಮೇಲ್ಸೇತುವೆಗೆ ಪೂರ್ಣಕ್ಕೆ ಹೆಚ್ಚುವರಿ ಸಿಬ್ಬಂದಿ
ನಗರದಲ್ಲಿ ವರ್ಷಗಳಿಂದಲೂ ಕುಂಟುತ್ತ ಸಾಗಿರುವ ಈಜೀಪುರ ಮೇಲ್ಸೇತುವೆ ಕಾಮಗಾರಿಗೆ ವೇಗ ನೀಡುವ ನಿರಂತರ ಯತ್ನ ನಡೆಯುತ್ತಲೇ ಇದೆ. ಇದರ ಮುಂದುವರಿದ ಭಾಗವಾಗಿ ಕಾಮಗಾರಿಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ಕಾಮಗಾರಿ ತ್ವರಿತವಾಗಿ ಮುಗಿಸುವಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ತಿಳಿಸಿದೆ. ಪ್ರತಿದಿನ ಕನಿಷ್ಠ 40 ಸಿಬ್ಬಂದಿಯನ್ನು ನಿಯೋಜಿಸಿ, ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು. ಈ ಹಿಂದೆ ಇದೇ ಆಯುಕ್ತರು ಅಕ್ಟೋಬರ್ ಅಂತ್ಯದ ಹೊತ್ತಿಗೆ ಕಾಮಗಾರಿ ಮುಗಿಸಿ ಮೇಲ್ಸೇತುವೆಯನ್ನು ಲೋಕಾರ್ಪಣೆ ಮಾಡಲಾಗುವುದೆಂದು ತಿಳಿಸಿದ್ದರು.
ರಘುವನಹಳ್ಳಿಯ ಕೆ.ಎಸ್.ಐ.ಟಿ. ಕಾಲೇಜು ಸಮೀಪದ 80 ಅಡಿ ಅಗಲದ 4.5 ಕಿ.ಮೀ. ರಸ್ತೆಗೆ ಎಸ್.ಐ.ಪಿ(SIP) ಅನುದಾನದಡಿ ಡಾಂಬರೀಕರಣ ಹಾಗೂ ರಸ್ತೆ ಮಾರ್ಕಿಂಗ್ ಕಾಮಗಾರಿ ಪೂರ್ಣಗೊಂಡಿದೆ. ಈ ರಸ್ತೆಯ ಪಾದಚಾರಿ ಮಾರ್ಗವನ್ನೂ ಸಮಗ್ರವಾಗಿ ಅಭಿವೃದ್ಧಿಪಡಿಸಬೇಕಿದೆ.
ಜಿಬಿಎ ಮುಖ್ಯ ಆಯುಕ್ತರು ಮತ್ತು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ. ಕೃಷ್ಣಪ್ಪ ಅವರಿಗೆ ಪಾಲಿಕೆ ಆಯುಕ್ತರಾದ ಕೆ.ಎನ್. ರಮೇಶ್, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಸಿಇಒ ಕರೀಗೌಡ, ಸಿಒಒ ರಮಾಮಣಿ, ಮುಖ್ಯ ಅಭಿಯಂತರ ಬಸವರಾಜ್ ಕಬಾಡೆ, ರಾಜೇಶ್, ಡಾ. ರಾಘವೇಂದ್ರ ಪ್ರಸಾದ್ ಅವರು ಸ್ಥಳೀಯ ಸಮಸ್ಯೆ, ಕಸ ನಿರ್ವಹಣೆಯ ಕ್ರಮಗಳನ್ನು ಗಮನಕ್ಕೆ ತಂದರು.













Click it and Unblock the Notifications