ಕಾರವಾರ; ಸಮುದ್ರದ ಆಗುಹೋಗು ತಿಳಿಸಲಿದೆ ಈ ಮುನ್ಸೂಚನಾ ಉಪಕರಣ
ಕಾರವಾರ, ಅಕ್ಟೋಬರ್ 30: ಸಮುದ್ರದ ಅಲೆಗಳು ಹಾಗೂ ಗಾಳಿ ವೇಗದ ಸಂಪೂರ್ಣ ಮಾಹಿತಿ ನೀಡುವ ಸುಧಾರಿತ ಸಾಗರ ಹವಾಮಾನ ಮುನ್ಸೂಚನಾ ಉಪಕರಣವನ್ನು ನಗರ ವ್ಯಾಪ್ತಿಯ ಅರಬ್ಬೀ ಸಮುದ್ರದಲ್ಲಿ ಅ.29ರ ಗುರುವಾರ ಸ್ಥಾಪನೆ ಮಾಡಲಾಗಿದೆ.
ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ಅಲೆಗಳ ಅಬ್ಬರ, ಗಾಳಿಯ ವೇಗದ ಮಾಹಿತಿ ಇರಬೇಕಾಗಿರುವುದು ಅತ್ಯಗತ್ಯ. ಇಲ್ಲವಾದಲ್ಲಿ ಹವಾಮಾನ ವೈಪರೀತ್ಯ ಉಂಟಾಗುವ ಸಂದರ್ಭ ಅವಘಡಗಳಿಗೆ ಕಾರಣವಾಗುತ್ತದೆ. ಹೀಗಾಗಿ ಮೀನುಗಾರರ ಸುರಕ್ಷತೆ ದೃಷ್ಟಿಯಿಂದ ಆಧುನಿಕ ತಂತ್ರಜ್ಞಾನದ ಈ ಯಂತ್ರವನ್ನು ಸಮುದ್ರದಲ್ಲಿ ಇಳಿಬಿಡಲಾಗಿದೆ. ಮೀನುಗಾರರಿಗೆ ಈ ಯಂತ್ರದಿಂದ ಅನುಕೂಲವಾಗಲಿದೆ.
ಕಾರವಾರ; ಅಪರೂಪಕ್ಕೆ ಬಲೆಗೆ ಬಿದ್ದ ರಾಶಿ ರಾಶಿ ಮೀನುಗಳು
ನೆದರ್ ಲ್ಯಾಂಡ್ನಲ್ಲಿ ತಯಾರಾಗಿರುವ ಒಂದು ಕೋಟಿ ಮೌಲ್ಯದ ಈ ಅತ್ಯಾಧುನಿಕ ಉಪಕರಣವನ್ನು ನಗರದ ಕಡಲ ಜೀವ ವಿಜ್ಞಾನ ಅಧ್ಯಯನ ಕೇಂದ್ರದ ವತಿಯಿಂದ ಸಮುದ್ರಕ್ಕೆ ಬಿಡಲಾಗಿದೆ. ಹೈದರಾಬಾದ್ನಲ್ಲಿರುವ ಸಮುದ್ರ ಮಾಹಿತಿ ಮತ್ತು ಸೇವೆಗಳ ರಾಷ್ಟ್ರೀಯ ಕೇಂದ್ರವು (ಇನ್ಕಾಯ್) ಈ ಉಪಕರಣವನ್ನು ಕಳುಹಿಸಿಕೊಟ್ಟಿದೆ. ಈ ಇನ್ಕಾಯ್ ಕೇಂದ್ರ ಭೂವಿಜ್ಞಾನ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದೆ.
ಸಮುದ್ರದಲ್ಲಿ ಏಳುವ ಅಲೆಗಳ ಎತ್ತರ, ಅವುಗಳ ದಿಕ್ಕು, ಅವಧಿ ಮತ್ತು ಅಪ್ಪಳಿಸುವ ವೇಗ, ಸಮುದ್ರದ ನೀರಿನ ಉಷ್ಣಾಂಶ, ಗಾಳಿ ಉಷ್ಣಾಂಶ, ಮುಂತಾದವುಗಳನ್ನು ಉಪಕರಣ ನಿರಂತವಾಗಿ ದಾಖಲಿಸುತ್ತದೆ. ಅಲ್ಲದೇ ಕಡಲಿನ ವಾತಾವರಣದ ಸಂಪೂರ್ಣ ಮಾಹಿತಿ ಮೀನುಗಾರರಿಗೆ ಲಭ್ಯವಾಗಲಿದ್ದು, ಅದನ್ನ ಲೈಟ್ ಹೌಸ್ ದ್ವೀಪದ ಬಳಿಯ ಅರಬ್ಬೀ ಸಮುದ್ರದಲ್ಲಿ ಸ್ಥಾಪನೆ ಮಾಡಲಾಗಿದೆ.
ಏನಿದು ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ?
ಈ ಉಪಕರಣ ಓಷಿಯನ್ ಸ್ಯಾಟ್ ಉಪಗ್ರಹದೊಂದಿದೆ ನಿರಂತರ ಸಂಪರ್ಕ ಹೊಂದಿರುತ್ತದೆ. ಉಪಗ್ರಹದಿಂದ ಹೈದರಾಬಾದ್ನಲ್ಲಿರುವ ಇನ್ಕಾಯ್ ಕಚೇರಿಗೆ ಮಾಹಿತಿ ರವಾನೆಯಾಗುತ್ತಿರುತ್ತದೆ. ಈಗಾಗಲೇ ಲೈಟ್ ಹೌಸ್ ಸಮೀಪ ಕಾರ್ಯನಿರ್ವಹಿಸುತ್ತಿದ್ದ ಕಡಿಮೆ ದಕ್ಷತೆಯ ಚಿಕ್ಕ ವೇವ್ ರೀಡರ್ ಯಂತ್ರವನ್ನು ಬದಲಿಸಿ ಈ ಅತ್ಯಾಧುನಿಕ ಯಂತ್ರವನ್ನು ಸಮುದ್ರದಾಳಕ್ಕೆ ಬಿಡಲಾಯಿತು.
Recommended Video
ಇನ್ಮುಂದೆ ಕಾರವಾರ, ಗೋವಾ ಮತ್ತು ಉಡುಪಿ ಸಮುದ್ರದಾಳದಲ್ಲಿ ಉಂಟಾಗುವ ವೈಪರೀತ್ಯದ ಪ್ರತೀ ಮಾಹಿತಿಯನ್ನೂ ಎರಡು ನಿಮಿಷಕ್ಕೊಮ್ಮೆ ಹೈದರಾಬಾದ್ಗೆ ಈ ಅತ್ಯಾಧುನಿಕ ಯಂತ್ರ ರವಾನಿಸಲಿದೆ. ಹೈದರಾಬಾದ್ನ ಮುಖ್ಯ ಕಚೇರಿಯಿಂದ ಮಳೆ ಮತ್ತು ಹವಾಮಾನ ವೈಪರೀತ್ಯದ ಎಲ್ಲಾ ಮಾಹಿತಿ ಮೀನುಗಾರರ ಮೊಬೈಲ್ ಫೋನ್ಗೇ ಸಂದೇಶ ರೂಪದಲ್ಲಿ ಸಿಗಲಿದ್ದು ಮೀನುಗಾರರು ಸಮುದ್ರದಾಳದ ವೈಪರೀತ್ಯವನ್ನು 4 ದಿನ ಮುಂಚಿತವಾಗಿಯೇ ಪಡೆಯಬಹುದಾಗಿದೆ ಎಂದು ಕಡಲಜೀವ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಜಗನ್ನಾಥ್ ರಾಥೋಡ್ ತಿಳಿಸಿದ್ದಾರೆ.