ಏನಿದು ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ?
ಬೆಂಗಳೂರು, ಸೆಪ್ಟೆಂಬರ್ 10: ಭಾರತದ ಮೀನುಗಾರಿಕೆ ವಲಯದ ಸುಸ್ಥಿರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಘೋಷಣೆ ಮಾಡಿದೆ. ಸುಮಾರು 20,050 ಕೋಟಿ ರೂ. ಅಂದಾಜು ಹೂಡಿಕೆಯ ಮಹತ್ವಾಕಾಂಕ್ಷಿ ಯೋಜನೆ ಇದು.
2019ರ ಜುಲೈ 5ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್ವೈ) ಘೋಷಣೆ ಮಾಡಿದ್ದರು. ಆತ್ಮ ನಿರ್ಭರ ಭಾರತ ಪ್ಯಾಕೇಜ್ ಅಡಿಯಲ್ಲಿ 2020-21 ರಿಂದ 2024-25ರ ಆರ್ಥಿಕ ವರ್ಷದ ನಡುವೆ 5 ವರ್ಷಗಳಲ್ಲಿ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಯೋಜನೆ ಜಾರಿಯಾಗಲಿದೆ.
ಮೀನು ಉತ್ಪಾದನೆಯನ್ನು 2024-25ರ ಹೊತ್ತಿಗೆ ಹೆಚ್ಚುವರಿಯಾಗಿ 70 ಲಕ್ಷ ಟನ್ ಹೆಚ್ಚಳ ಮಾಡುವ, 2024-25ರ ಹೊತ್ತಿಗೆ ಮೀನುಗಾರಿಕೆಯ ರಫ್ತಿನ ಗಳಿಕೆಯನ್ನು 1,00,000 ಕೋಟಿ ರೂ.ಗಳಿಗೆ ಹೆಚ್ಚಿಸುವ, ಮೀನುಗಾರರ ಮತ್ತು ಮೀನುಕೃಷಿಕರ ಆದಾಯವನ್ನು ದುಪ್ಪಟ್ಟು ಮಾಡುವ ಹಲವು ಉಪ ಕ್ರಮಗಳನ್ನು ಯೋಜನೆ ಹೊಂದಿದೆ.

ಕೊಯ್ಲು ನಂತರದ ನಷ್ಟವನ್ನು ಶೇ. 20-25ರಿಂದ ಶೇ.10ಕ್ಕೆ ತಗ್ಗಿಸುವ ಮತ್ತು ಹೆಚ್ಚುವರಿಯಾಗಿ 55 ಲಕ್ಷ ನೇರ ಮತ್ತು ಪರೋಕ್ಷ ಲಾಭದಾಯಕ ಉದ್ಯೋಗಾವಕಾಶವನ್ನು ಮೀನುಗಾರಿಕೆ ಮತ್ತು ಅದರ ಪೂರಕ ಚಟುವಟಿಕೆ ವಲಯದಲ್ಲಿ ಸೃಷ್ಟಿಸುವ ಗುರಿ ಹೊದಲಾಗಿದೆ.
ಈ ಯೋಜನೆಯಿಂದಾಗಿ ಸುಮಾರು 2 ಮಿಲಿಯನ್ ಜನರಿಗೆ ಸಹಾಯಕವಾಗಲಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಯೋಜನೆ ಮುಖ್ಯ ಉದ್ದೇಶ. ಇದರಿಂದಾಗಿ ದೇಶದಲ್ಲಿ ಆಹಾರ ಸಂಸ್ಕರಣೆ ಉದ್ಯಮಕ್ಕೂ ಸಹಕಾರಿಯಾಗಲಿದೆ.
ಜಿಡಿಪಿ, ಉದ್ಯೋಗ ಮತ್ತು ಹೂಡಿಕೆಯನ್ನು ಇದು ಹೆಚ್ಚಳ ಮಾಡಲಿದೆ. ಯೋಜನೆ ಅನ್ವಯ ಕೃಷಿ ವಲಯದ ನಿರುಪಯುಕ್ತ ವಸ್ತುಗಳನ್ನು ಮೀನುಗಾರಿಕೆಯಲ್ಲಿ ಬಳಕೆ ಮಾಡುವುದರಿಂದ ಕೃಷಿ ತ್ಯಾಜ್ಯ ಕಡಿಮೆಯಾಗಲಿದೆ.

ಈ ಯೋಜನೆಯಿಂದ ರೈತರಿಗೂ ಸಹಾಯಕವಾಗಲಿದ್ದು, ಅವರ ಆದಾಯ ಸಹ ಏರಿಕೆಯಾಗಲಿದೆ. ಯೋಜನೆಯಡಿ ಮೊದಲ ಹಂತದಲ್ಲಿ ಮೀನುಗಾರಿಕೆ ಇಲಾಖೆ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ123 ಕೋಟಿ ಮೌಲ್ಯದ ಪ್ರಸ್ತಾಪಗಳಿಗೆ ಅನುಮೋದನೆ ನೀಡಿದೆ.
ಕಳೆದ ವರ್ಷ ಕೇಂದ್ರ ಸರ್ಕಾರ ಮೀನುಗಾರಿಕೆ ಮತ್ತು ಜಲಚರ ಸಾಕಣೆ ಅಭಿವೃದ್ಧಿ ನಿಧಿ (ಎಫ್ಐಡಿಎಫ್)ಗಾಗಿ 7,522 ಕೋಟಿ ರೂ. ನೀಡಿದೆ. ಇದನ್ನು ಯೋಜನೆಗೆ ಬಳಕೆ ಮಾಡಲಾಗುತ್ತದೆ.
ಈ ಯೋಜನೆಯಡಿ ಬಿಹಾರದಲ್ಲಿ ಕೇಂದ್ರ ಪಾಲಿನ 535 ಕೋಟಿ ರೂ. ಜೊತೆ ಒಟ್ಟು 1390 ಕೋಟಿ ರೂ. ಹೂಡಿಕೆಗೆ ಅವಕಾಶ ನೀಡಲಾಗಿದೆ. 3 ಲಕ್ಷ ಟನ್ ಹೆಚ್ಚುವರಿ ಮೀನು ಉತ್ಪಾದನೆ ಗುರಿಯನ್ನು ಹೊಂದಲಾಗಿದೆ.
ಬಿಹಾರ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಜಲಚರ ಸಾಕಣೆಗಾಗಿ ಕೊಳ, ಫಿನ್ ಫಿಶ್ ಮೊಟ್ಟೆ ಕೇಂದ್ರಗಳು, ಜಲಚರ ಸಾಕಣೆಗಾಗಿ ಹೊಸ ಕೊಳಗಳ ನಿರ್ಮಾಣ, ಅಲಂಕಾರಿಕ ಮೀನು ಸಾಕಣೆ ಘಟಕಗಳು, ಶೈತ್ಯೀಕರಣ ವಾಹನಗಳು, ಐಸ್ ಬಾಕ್ಸ್ ನೊಂದಿಗೆ ಮೋಟಾರು ಸೈಕಲ್, ಐಸ್ ಬಾಕ್ಸ್ ನೊಂದಿಗೆ ತ್ರಿಚಕ್ರವಾಹನ ಸೇರಿದಂತೆ ವಿವಿಧ ಉಪಕ್ರಮಗಳು ಇದರಲ್ಲಿ ಸೇರಿವೆ.
ಈ ಯೋಜನೆಯಡಿ ಸಿಗುವ ಸೌಲಭ್ಯಗಳಿಂದ ಮೀನು ಕೃಷಿಕರಿಗೆ ಸಕಾಲದಲ್ಲಿ ಕೈಗೆಟಕುವ ದರದಲ್ಲಿ ಗುಣಮಟ್ಟದ ಮೀನು ಮೊಟ್ಟೆ, ಲಭ್ಯತೆಯ ಖಾತ್ರಿಯೊಂದಿಗೆ ಮೀನು ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಿಸಲು ಸಹಾಯ ಸಿಗಲಿದೆ. ಜಲ ಹಾಗೂ ಮಣ್ಣು ಪರೀಕ್ಷೆ ಸೌಲಭ್ಯ ಸಹ ಇರಲಿದೆ.












Click it and Unblock the Notifications