ಕಾರವಾರ; ಅಪರೂಪಕ್ಕೆ ಬಲೆಗೆ ಬಿದ್ದ ರಾಶಿ ರಾಶಿ ಮೀನುಗಳು
ಕಾರವಾರ, ಅಕ್ಟೋಬರ್ 15: ಕಳೆದ ಕೆಲವು ದಿನಗಳಿಂದ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ಅರಬ್ಬಿ ಸಮುದ್ರ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯ ಜೊತೆಗೆ ಗಾಳಿಯೂ ಹೆಚ್ಚಾಗಿ ಬೀಸುತ್ತಿರುವುದು ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಮಾಡಿದೆ.
ಹವಾಮಾನ ಇಲಾಖೆ ಕೂಡ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಇದರ ಆಧಾರದ ಮೇಲೆ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಮೀನುಗಾರರು ಕಡಲಿಗೆ ಇಳಿಯದಂತೆ ಸೂಚನೆ ನೀಡಿದ್ದು, ಕಳೆದ ಹಲವು ದಿನಗಳಿಂದ ಮೀನುಗಾರರು ಕಡಲಿಗೆ ಇಳಿಯುತ್ತಿಲ್ಲ. ಹೀಗಾಗಿ ಮತ್ಸ್ಯ ಶಿಕಾರಿ ಸ್ವಲ್ಪ ಕಡಿಮೆ ಪ್ರಮಾಣದಲ್ಲಾಗಿತ್ತು.
ಆದರೆ, ಕಾರವಾರದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ತೆರಳಿದ ಮೀನುಗಾರರಿಗೆ ಗುರುವಾರ ಭರ್ಜರಿ ಮೀನಿನ ಶಿಕಾರಿಯಾಗಿದೆ. ಕಾರವಾರ ನಗರದ ರವೀಂದ್ರನಾಥ ಕಡಲತೀರದ ಒಂದು ಭಾಗದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ಏಂಡಿ ಬಲೆ ಹಾಕಿದ್ದ ಮೀನುಗಾರರು ಭರ್ಜರಿ ಮೀನಿನ ಬೇಟೆಯಾಡಿದ್ದಾರೆ. ಕಡಲ ತೀರದುದ್ದಕ್ಕೂ ಮೀನಿನ ರಾಶಿ ರಾಶಿ ಕಂಡು ಬಂದಿದ್ದು, ಅಪರೂಪಕ್ಕೆ ಇಷ್ಟೊಂದು ಪ್ರಮಾಣದಲ್ಲಿ ಮೀನು ಸಿಕ್ಕಿದ್ದಕ್ಕೆ ಮೀನುಗಾರರು ಸಖತ್ ಖುಷಿಯಾಗಿದ್ದಾರೆ.

ಬಲೆ ತುಂಬಾ ಮೀನು ತುಂಬಿದ್ದ ಕಾರಣ ಸಮುದ್ರದಿಂದ ಬಲೆ ಎಳೆದು ತರಲು ಮೀನುಗಾರರು ಹರಸಾಹಸ ಪಟ್ಟರು. ಮೀನುಗಾರರು ಬಲೆಯಿಂದ ಮೀನನ್ನು ಬೇಪರ್ಡಿಸುವಲ್ಲಿ ತಲ್ಲೀನರಾಗಿದ್ದರೆ, ಸ್ಥಳೀಯರು, ಮೀನು ಮಾರಾಟ ಮಹಿಳೆಯರು ಸ್ಥಳಕ್ಕಾಗಮಿಸಿ ಮೀನುಗಳನ್ನು ಆಯ್ದುಕೊಂಡರು. ದುಬಾರಿ ದರದ ಮೀನುಗಳು ಅಧಿಕವಾಗಿ ಬಲೆಗೆ ಬಿದ್ದಿದ್ದು, ಕಾರವಾರದ ಜನ ನೇರವಾಗಿ ಕಡಲ ತೀರಕ್ಕೆ ಬಂದು ಮೀನು ಖರೀದಿಸಿದರು.












Click it and Unblock the Notifications